ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಹತ್ಯೆಗೆ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿ ಸುಖಾನನ್ನು ನವಿ ಮುಂಬಯಿ ಪೊಲೀಸರು ಹರಿಯಾಣದ (Hariyana) ಪಾಣಿಪತ್ ನಿಂದ ಬಂಧಿಸಿದ್ದಾರೆ ಎನ್ನಲಾಗಿದೆ.
ಜೂನ್ 1 ರಂದು ಪನ್ವೇಲ್ ನಲ್ಲಿ ಸಲ್ಮಾನ್ ಖಾನ್ ಅವರ ಕಾರಿನ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಾಲ್ವರನ್ನು ನವಿ ಮುಂಬಯಿ ಪೊಲೀಸರು ಬಂಧಿಸಿದ್ದರು. ಇದಕ್ಕೂ ಮುನ್ನ ಏಪ್ರಿಲ್ನಲ್ಲಿ ಮುಂಬೈನ ಬಾಂದ್ರಾದಲ್ಲಿರುವ ನಟನ ಮನೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ಬಂಧಿತ ಆರೋಪಿ ಹರಿಯಾಣ ಮೂಲದ ವ್ಯಕ್ತಿಯಾಗಿದ್ದು ಆತನನ್ನು ನವಿ ಮುಂಬಯಿಗೆ ಕರೆತರಲಾಗಿತ್ತು.
ಆರೋಪಿಗಾಗಿ ಕಳೆದ 3 ತಿಂಗಳಿನಿಂದ ಹುಡುಕಾಟ ನಡೆದಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ತನ್ನನ್ನು ಮತ್ತು ಕುಟುಂಬ ಸದಸ್ಯರನ್ನು ಕೊಲ್ಲುವ ಉದ್ದೇಶದಿಂದ ತನ್ನ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸಲ್ಮಾನ್ ಖಾನ್ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಲಾರೆನ್ಸ್ ಬಿಷ್ಣೋಯ್, ಅನ್ಮೋಲ್ ಬಿಷ್ಣೋಯ್, ಸಂಪತ್ ನೆಹ್ರಾ, ಗೋಲ್ಡಿ ಬ್ರಾರ್ ಸೇರಿದಂತೆ 17ಕ್ಕೂ ಹೆಚ್ಚು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.