ಹೈದರಾಬಾದ್: ಲಡಾನ್ನ ಗ್ಯಾಲ್ವನ್ ಕಣಿವೆಯಲ್ಲಿ ನಿನ್ನೆ ಭಾರತ ಮತ್ತು ಚೀನಾ ಸೇನೆ ನಡುವೆ ನಡೆದ ಘರ್ಷಣೆಯಲ್ಲಿ ಧೀರ ಯೋಧ ಕರ್ನಲ್ ಸಂತೋಷ್ ಬಾಬು ಹುತಾತ್ಮರಾಗಿದ್ದಾರೆ. ಕರ್ನಲ್ ಸಂತೋಷ್ ಬಾಬು ಸದಾ ಪಾದರಸದಂತಿದ್ದ ಸೇನಾನಿ. ಸೇನೆಗೆ ಸೇರಿದ ಕೆಲವೇ ವರ್ಷಗಳಲ್ಲಿ 16ನೇ ಬಿಹಾರ ರೆಜಿಮೆಂಟ್ನ ಮುಖ್ಯಸ್ಥನಾಗಿ ನೇಮಕೊಂಡಿದ್ದರು. ಸಂತೋಷ್ಬಾಬು ಅವರಲ್ಲಿದ್ದ ಛಲ ಹಾಗೂ ಧೈರ್ಯವೇ ಅವರನ್ನು ಕಳೆದ ವರ್ಷದ ಡಿಸೆಂಬರ್ನಲ್ಲಿ 16ನೇ ಬಿಹಾರ ರೆಜಿಮೆಂಟ್ನ ಮುಖ್ಯಸ್ಥನ ಸ್ಥಾನಕ್ಕೆ ಕರೆದೊಯ್ದಿತ್ತು.
2004ರಲ್ಲಿ ಭಾರತೀಯ ಸೇನೆ ಸೇರಿದ ಸಂತೋಷ್ ಬಾಬು ಮೂಲತ ತೆಲ್ಲಂಗಾಣದವರು. ತೆಲ್ಲಂಗಾಣದ ಸೂರ್ಯಪೇಟೆಯಲ್ಲಿ ಜನಿಸಿದ ಸಂತೋಷ್ ಬಾಬು, ಉಪೇಂದ್ರ ಹಾಗೂ ಮಂಜುಳ ದಂಪತಿಯ ಒಬ್ಬನೇ ಮಗ. ಒಬ್ಬನೇ ಮಗನಾದ ಕಾರಣ ಸಂತೋಷ್ಬಾಬು ಸೇನೆಗೆ ಸೇರಲು ಹೆತ್ತವರು ವಿರೋಧ ಮಾಡಿರಲಿಲ್ಲ. ಸೇನೆಗೆ ಸೇರುತ್ತೇನೆ ಎಂದು ಸಂತೊಷ್ ಹೇಳಿದಾಗಿ ತಂದೆ ಉಪೇಂದ್ರ ಅವರು ಮಗನನ್ನು ಹುರಿದುಂಬಿಸಿ ದೇಶ ಸೇವೆಗೆ ಸಂತೋಷದಿಂದಲೇ ಕಳಿಸುವೆ ಎಂದು ಹೇಳುತ್ತಿದ್ದರಂತೆ. ಇದಕ್ಕೆ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದು ಇದೆಯಂತೆ.
37 ವರ್ಷದ ಸಂತೋಷ್ ಬಾಬುಗೆ ಇಬ್ಬರು ಮಕ್ಕಳು. 9 ವರ್ಷದ ಮಗಳು ಅಭಿಘ್ನಾ, ನಾಲ್ಕಯ ವರ್ಷದ ಮಗ ಅನಿರುದ್. ಪತ್ನಿ ಸಂತೋಷಿ ಜತೆ ನೆಮ್ಮದಿಯ ಜೀವನ ಸಾಗಿಸುತ್ತಿರುವಾಗಲೇ ಚೀನಾ ಸೇನೆಯ ರೂಪದಲ್ಲಿ ಬಂದ ವಿಧಿಯ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ.
ಬಾಲ್ಯದಲ್ಲೇ ಸೇನೆ ಸೇರಲು ಸಂತೋಷ್ಬಾಬು ತವಕ
ಸೂರ್ಯಪೇಟೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಸಂತೋಷ್ಬಾಬು, ವಿಜಿಯಾನಗರದ ಜಿಲ್ಲೆಯ ಸೈನಿಕ ಶಾಲೆಯಲ್ಲಿ ದ್ವಿತೀಯ ಪಿಯುಸಿವರೆಗೂ ಶಿಕ್ಷಣ ಮುಗಿಸಿದ್ದರು. ಸಂತೋಷ್ ಬಾಬು ಓದಿನಲ್ಲಿ ಸದಾ ಚುರುಕು. ಡಿಗ್ರಿಯನ್ನು ಪುಣೆಯ ರಾಷ್ಟ್ರೀಯ ಸೇನಾ ಅಕಾಡೆವಿ ಹಾಗೂ ಡೆಹ್ರಾಡೂನ್ನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಪೂರ್ಣಗೊಳಿಸಿದರು. ಡಿಗ್ರಿ ಮುಗಿಯುತ್ತಿದ್ದಂತೆ 16ನೇ ಬಿಹಾರ ರೆಜಿಮೆಂಟ್ಗೆ ಆಯ್ಕೆಯಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ನಿಯೋಜನೆಗೊಂಡಿದ್ದರು. ಜಮ್ಮು ಕಾಶ್ಮೀರದ ಹಲವು ಸ್ಥಳಗಳಲ್ಲಿ ಕೆಲಸ ಮಾಡಿದ್ದ ಸಂತೋಷ್ಬಾಬು, ಅತಿ ಹೆಚ್ಚು ದಿನಗಳನ್ನು ಗಡಿಯಲ್ಲೇ ಕಳೆದಿದ್ದರಂತೆ. ಸೇವೆಯಲ್ಲಿ ಸಂತೀಷ್ ಬಾಬು ಅವರಿಗಿದ್ದ ಬದ್ಧತೆ, ಶಿಸ್ತು ಹಾಗೂ ಧೈರ್ಯಶಾಲಿ ಗುಣಗಳೇ ಅವರನ್ನು 16-ಬಿಹಾರ ರೆಜಿಮೆಂಟ್ನ ಮುಖ್ಯಸ್ಥರೆಂಬ ಎತ್ತರದ ಸ್ಥಾನಕ್ಕೆ ಕರೆದೊಯ್ದಿತ್ತು.
ಹೈದರಾಬಾದ್ಗೆ ಟ್ರಾನ್ಸ್ಫರ್ ಆಗಿತ್ತು
2019ರ ಡಿಸೆಂಬರ್ನಲ್ಲಿ ಸಂತೋಷ್ ಬಾಬು ಅವರನ್ನು 16ನೇ ಬಿಹಾರ ರೆಜಿಮೆಂಟ್ನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿತ್ತು. ಹೈದರಾಬಾದ್ಗೆ ಬರಬೇಕು ಎಂಬುದು ಸಂತೋಷ್ ಬಾಬು ಅವರ ಬಹುದಿನದ ಬಯಕೆಯಾಗಿತ್ತು. ಫೆಬ್ರವರಿಯಲ್ಲಿ ಸಂತೋಷ್ ಬಾಬು ಅವರನ್ನು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಹುದ್ದೆಗೆ ಬಡ್ತಿ ನೀಡಿ ಹೈದರಾಬಾದ್ಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಮುಗಿಯುವ ಹೊತ್ತಿಗಾಗಲೇ ಕೊರೊನಾದಿಂದಾಗಿ ದೇಶಾದ್ಯಂತ ಲಾಕ್ಡಾನ್ ಆಯ್ತು. ಹೀಗಾಗಿ ಸಂತೋಷ್ ಬಾಬು ಲಡಾಕ್ನಲ್ಲೇ 16ನೇ ಬಿಹಾರ ರೆಜಿಮೆಂಟ್ನ ಮುಖ್ಯಸ್ಥರಾಗಿ ಸೇನೆಯನ್ನು ಮುನ್ನಡೆಸಿದ್ದರು.
ಹಿಂದಿನ ರಾತ್ರಿ ಫೋನ್ ಮಾಡಿದ್ದರು ಸಂತೋಷ್
ಸೋಮವಾರವಷ್ಟೇ ಸಂತೋಷ್ಬಾಬು ಸಹೋದರಿ ಹಾಗೂ ಬಾವನಿಗೆ ಫೋನ್ ಮಾಡಿ ಮದುವೆ ವಾರ್ಷಿಕೋತ್ಸವದ ಶುಭಾಷಯ ತಿಳಿಸಿದ್ದರು. ಭಾನುವಾರ ರಾತ್ರಿ ತಂದೆ ಹಾಗೂ ತಾಯಿಗೆ ಫೋನ್ ಮಾಡಿದ್ದ ಸಂತೋಷ್ ಲಡಾಕ್ನ ಗಾಲ್ವನ್ ಗಡಿಯಲ್ಲಿ ಉದ್ವಿಘ್ನತೆಯ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಇದು ಸೂಕ್ಷ್ಮ ವಿಚಾರವಾಗಿದ್ದರಿಂದ ಹೆಚ್ಚಿನ ವಿಷಯ ಹೇಳಲು ನಿರಾಕರಿಸಿದ್ದರಂತೆ. ಕೊನೆಗೆ ಮಗನೇ ಹುಷಾರು ಎಂದು ತಂದೆ ಉಪೇಂದ್ರ ತಿಳಿಸಿದ್ದರು. ಅದೇ ಕೊನೆ.
ಮಂಗಳವಾರ ಮಧ್ಯಾಹ್ನ ಗಡಿಯಲ್ಲಿ ಗಲಾಟೆ ನಡೆಯುತ್ತಿದೆ ಎಂದು ಟಿವಿಯಲ್ಲಿ ಸುದ್ದಿ ನೋಡಿದೆವು. ಯಾರ ಹೆಸರೂ ಬಾರಲಿಲ್ಲವಾದ ಕಾರಣ ಸುಮ್ಮನಾದೆವು. ಸಂಜೆ ಹೊತ್ತಿಗೆ ಸೇನೆಯಿಂದ ದೂರವಾಣಿ ಕರೆ ಬಂತು. ನಿಮ್ಮ ಮಗ ಹುತಾತ್ಮರಾಗಿದ್ದಾರೆ ಎಂದು ಹೇಳಿದಾಗ ಶಾಕ್ ಆಯಿತು. ಈ ವಿಚಾರವನ್ನು ನಾವು ನಂಬಲು ಆಗಲೇ ಇಲ್ಲ. ಪರಾಕ್ರಮಿಯಾಗಿದ್ದ ಸಂತೋಷ್, ಕಳೆದ 15 ವರ್ಷಗಳಲ್ಲಿ ಎಂದೂ ಹಿಂದೆ ಬಿದ್ದವರಲ್ಲ. ಅವನ ಸಾಹಸ ಪ್ರವೃತ್ತಿಯಿಂದಾಗಿಯೇ ಮನೆಯ ತುಂಬೆಲ್ಲಾ ಪ್ರಶಸ್ತಿ, ಪಾರಿತೋಷಕಗಳು ತುಂಬಿ ಹೋಗಿವೆ ಎನ್ನುತ್ತಲೇ ತಂದೆ ಉಪೇಂದ್ರ ಕಣ್ಣೀರಿಟ್ಟಿದ್ದಾರೆ.