ಬೆಂಗಳೂರು: ಕೊರೊನಾ ಸೋಂಕಿತರ ಪಾಲಿಗೆ ರಾಜಧಾನಿ ಬೆಂಗಳೂರು ನರಕ ದರ್ಶನ ಮಾಡಿಸುತ್ತಿದೆ. ಪ್ರತಿದಿನ ಒಬ್ಬರಲ್ಲ ಒಬ್ಬರು ಚಿಕಿತ್ಸೆ ಸಿಗದೆ ನರಳಿ ನರಳಿ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಬೆಂಗಳೂರಿನ ವಿ.ವಿ ಪುರಂನಲ್ಲಿ ನಡೆದ ಮತ್ತೊಂದು ಘಟನೆ ಬಿಬಿಎಂಪಿ ಹಾಗೂ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ. ನಮ್ಮ ಮನೆಯ ಮೂವರಿಗೆ ಕೊರೊನಾ ಪಾಸಿಟಿವ್ ಬಂದಿದೆ, ಬೇಗ ಬನ್ನಿ ಎಂದು ಕಳೆದ ನಾಲ್ಕು ದಿನಗಳಿಂದ ಬಿಬಿಎಂಪಿ, ಆಸ್ಪತ್ರೆಗಳಿಗೆ, ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡಿದರೆ ಯಾರೂ ತಲೆ ಹಾಕಿ ಹಾಕಿರಲಿಲ್ಲ.
ಆದರೆ, ಕಳೆದ ರಾತ್ರಿ ಕೊರೊನಾದಿಂದ ವೃದ್ಧೆಯೊಬ್ಬರು ನರಳಿ ನರಳಿ ಸತ್ತ ಮೇಲೆ ಬಂದು ಹೆಣ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ನಡೆದಿದ್ದು ಇಷ್ಟು..!
ಬೆಂಗಳೂರಿನ ವಿವಿಪುರಂನ ಮನೆಯಲ್ಲಿ ವೃದ್ಧೆ, ಆಕೆಯ ಮಗ, ಸೊಸೆ ವಾಸವಿದ್ದರು. ಮನೆಯಲ್ಲಿದ್ದ ಮೂವರಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಕಳೆದ ಮಂಗಳವಾರದಿಂದ ತಮಗೆ ಕೊರೊನಾ ಪಾಸಿಟಿವ್ ಬಂದಿದೆ. ಕೂಡಲೇ ಬನ್ನಿ, ನಮ್ಮನ್ನು ಆಸ್ಪತ್ರೆಗೆ ದಾಖಲಿಸಿ ಎಂದು ಬಿಬಿಎಂಪಿ, ಆಪ್ತಮಿತ್ರ ಸಹಾಯವಾಣಿ, 104 ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ.
ಆದರೆ, ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ನೆಪ ಹೇಳಿ ಕಳೆದ ನಾಲ್ಕು ದಿನಗಳಿಂದ ಈಗ ಬರುತ್ತೇವೆ, ಆ ಮೇಲೆ ಬರುತ್ತೇವೆ ಎಂದು ಬಿಬಿಎಂಪಿ ಸಿಬ್ಬಂದಿ ಸತಾಯಿಸಿದ್ದಾರೆ. ಆದರೆ, ನಿನ್ನೆ ವೃದ್ಧೆಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ರಾತ್ರಿ ಹೊತ್ತಿಗೆ ಮೃತಪಟ್ಟಿದ್ದಾರೆ.
ವೃದ್ಧೆ ಮೃತಪಟ್ಟ ನಂತರ ಬಂದ ಬಿಬಿಎಂಪಿ ಸಿಬ್ಬಂದಿ ಹೆಣವನ್ನು ತೆಗೆದುಕೊಂಡು ಅಂತ್ಯ ಸಂಸ್ಕಾರ ನಡೆಸಿದ್ದಾರೆ. ತಾಯಿ ಸತ್ತ ಮೇಲೆ ಮಗನನ್ನು ಹಜ್ ಭವನಕ್ಕೆ ಹಾಗೂ ಗರ್ಭಿಣಿಯಾಗಿರುವ ಸೊಸೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕೊರೊನಾ ಸೋಂಕಿತರಿಗೆ ಯಾವುದೇ ತೊಂದರೆ ಆಗಲು ಬಿಡಲ್ಲ ಎಂದು ಹೇಳುತ್ತಿರುವ ಸರ್ಕಾರ ಹಾಗೂ ಬಿಬಿಎಂಪಿ ನಿರ್ಲಕ್ಯದಿಂದ ತಮ್ಮ ತಾಯಿಯನ್ನು ಕಳೆದುಕೊಳ್ಳಬೇಕಾಯಿತು. ಮೊದಲೇ ಬಂದಿದ್ದರೆ ನಮ್ಮ ತಾಯಿಯ ಜೀವ ಉಳಿಯುತ್ತಿತ್ತು ಎಂದು ಮೃತಳ ಪುತ್ರ ಕಣ್ಣೀರು ಹಾಕಿದ್ದಾರೆ.








