ಭೂ ಖಂಡಾಂತರ ಚಲನೆಯೂ; ಹಿಮಾಲಯವೆಂಬ ಹಿರಿಯಜ್ಜನ ಜನನವೂ’
(The continental drift and the birth of Himalayas) :
ಭಾರತದ ಹಿಮಾಚ್ಛಾದಿತ ಹಿಮಶಿಖರಗಳನ್ನೊಳಗೊಂಡ ಭವ್ಯ ಹಿಮಾಲಯಗಳು ಭಾರತದ ಮುಕುಟಮಣಿಗಳೆಂದು ಶಾಸ್ತ್ರ ಪುರಾಣಗಳಲ್ಲಿ ಹೆಸರು ಪಡೆದಿವೆ. ಹಿಮಾಲಯಗಳು ವೇದ ಪುರಾಣಗಳಲ್ಲಿ ತಮ್ಮದೇ ಹಿನ್ನೆಲೆ ಹೊಂದಿವೆಯಾದರೂ ಈ ಹಿಮಾಲಯಗಳ ವಾಸ್ತವತೆಯ ಕುರಿತಾದ ಕೆಲ ಅಂಶಗಳು ಅದಕ್ಕು ಅಚ್ಚರಿಯೆನಿಸುವಷ್ಟು ಕೌತುಕವಾಗಿವೆ. ಹಿಮಾಲಯಗಳು ಹುಟ್ಟು ಹೇಗಾಯ್ತು? ಅವುಗಳು ದೈವನಿರ್ಮಿತವೆ? ಯಾವಾಗ ಅವುಗಳ ಸೃಷ್ಟಿಯಾಯ್ತು? ಎಂಬ ಪ್ರಶ್ನೆಗಳಿಗೆ ಆಧುನಿಕ ಭೂವಿಜ್ಞಾನ ಸ್ವಾರಸ್ಯಕರ ವಿವರಣೆಗಳನ್ನ ಕೊಡುತ್ತದೆ.
ಈಗ ನಮಗೆ ಕಾಣುವ ಹಿಮಾಲಯಗಳು ಇಂದಿನ ರೂಪಕ್ಕೆ ಬಂದು ಈಗ್ಗೆ ಎರಡು ಕೋಟಿ ವರ್ಷಗಳಾಗಿವೆ ಎಂದು ಭೂ ತಜ್ಞರು ವಾದಿಸುತ್ತಾರೆ. ಇದು ಭೂ ಪಲ್ಲಟ ಅಥವಾ ಭೂ ಖಂಡಾಂತರ ಚಲನೆಯ ಸಿದ್ಧಾಂತದಿಂದ ಸಾಬೀತಾಗಿರುವ ಸಂಗತಿ. ನಿಮಗೆಲ್ಲ ನಮ್ಮ ಭೂ ಖಂಡವು ಮುಕ್ಕಾಲು ಪಾಲು ನೀರಿನಿಂದಲೂ, ಕಾಲು ಭಾಗ ಭೂಪ್ರದೇಶದಿಂದಲೂ ಕೂಡಿದೆ ಎಂಬುದು ಗೊತ್ತಿದೆ. ಇವತ್ತು ಭೂಮಿಯ ಮೇಲೆ ಏಳು ಖಂಡಗಳನ್ನ, ಅಸಂಖ್ಯಾತ ರಾಷ್ಟ್ರಗಳನ್ನ, ದ್ವೀಪಗಳನ್ನ, ಬೆಟ್ಟಗಳನ್ನ, ಕಾಡುಗಳನ್ನ ಹಾಗೂ ಹಿಮಚ್ಛಾದಿತ ಥಂಡ್ರಾ ಪ್ರದೇಶಗಳನ್ನ ವರ್ಗೀಕರಿಸಿ ಪ್ರತ್ಯೇಕಿಸಿದ್ದಾರೆ. ಆದರೆ ಭೂಮಿಯು ಇದೇ ಸ್ವರೂಪದಲ್ಲೇ ಮೊದಲಿಂದಲೂ ಇತ್ತೆ ಎಂಬ ಪ್ರಶ್ನೆ ಸರಿಸುಮಾರು ಹದಿನೈದನೇ ಶತಮಾನದಿಂದಲೂ ಕಾಡುತ್ತಿದ್ದ ಪ್ರಶ್ನೆಯಾಗಿತ್ತು.
ಭೂಮಿಯ ಭೂ ಖಂಡಗಳು ನೀರಿನ ಹರಿವಿನೊಂದಿಗೆ ತಾವೂ ಸಹ ಚಲಿಸುತ್ತಾ ಕೆಲವೊಮ್ಮೆ ಸವೆಯುತ್ತಾ ತಮ್ಮ ಸ್ಥಾನದಿಂದ ಕಾಲಕ್ರಮೇಣ ಪಲ್ಲಟಗೊಂಡಿವೆ ಎಂಬುದು ಆಗಿನ ಕೆಲ ವಿದ್ವಾಂಸರ ಸಂಶಯವಾಗಿತ್ತು. ಸಂಪ್ರದಾಯವಾದಿಗಳ ಪ್ರಾಬಲ್ಯವಿದ್ದುದರಿಂದ ಆಗ ಇಂಥ ಹೊಸ ಚಿಂತನೆಗಳಿಗೆ ಆಸ್ಪದವಿರಲಿಲ್ಲ. ಅಂತಿಮವಾಗಿ 1912ರಲ್ಲಿ ಆಲ್ಫ್ರೆಡ್ ವೇಗ್ನರ್ ಎಂಬ ಭೂ ತಜ್ಞ ಇದೇ ದಿಕ್ಕಲ್ಲಿ ಚಿಂತಿಸಿ. ವಿಶ್ವ ಪರ್ಯಟನೆ ಮಾಡಿ ಈ ಸಿದ್ಧಾಂತವನ್ನ ಸ್ಪಷ್ಟೀಕರಿಸಿದ. ಅವನ ಪ್ರಕಾರ ಮಿಲಿಯಾಂತರ ವರ್ಷಗಳಲ್ಲಿ ಭೂಮಿ ತನ್ನ ಭೂ ಪ್ರದೇಶದ ರೂಪ ರಚನೆಯಲ್ಲಿ ಮಹತ್ತರ ಬದಲಾವಣೆ ಕಂಡು ಇಂದು ಈ ರೂಪಕ್ಕೆ ಬಂದು ನಿಂತಿದೆ ಹಾಗೂ ಇದು ಇನ್ನು ಮುಂದಕ್ಕು ಸಹ ಮುಂದುವರಿದು ಭೂಮಿ ತನ್ನ ಮುಂದಿನ ಮಿಲಿಯಾಂತರ ವರ್ಷಗಳಲ್ಲಿ ಇನ್ನಷ್ಟು ಬದಲಾಗುತ್ತಾ ಹೋಗಲಿದೆ ಎಂದು ವಾದಿಸಿದ. ಇವನ ಈ ವಾದವೇ ‘ಭೂ ಖಂಡಾಂತರ ಚಲನಾ ಸಿದ್ಧಾಂತ’ (Continental drift theory)
ಈ ಸಿದ್ಧಾಂತದ ಪ್ರಕಾರ ಸುಮಾರು 250 ಮಿಲಿಯನ್ ವರ್ಷಗಳ ಹಿಂದೆ ಭೂಮಿಯ ನಡುವೆ ಈಗಿನ ಎಲ್ಲಾ ಖಂಡಗಳೂ ಜಂಟಿಯಾಗಿದ್ದು ಒಂದು ದೊಡ್ಡ ಭೂಖಂಡ ಮಾತ್ರವಿತ್ತು. ತದನಂತರದ ನೀರಿನ ಹರಿವು ಹಾಗೂ ಸಾಗರಗಳ ಕೊರೆಯುವಿಕೆಯಿಂದ ಈ ಬೃಹತ್ ಭೂಖಂಡವು ಮೆಲ್ಲನೆ ಛಿದ್ರವಾಗುತ್ತಾ ಬಂದು ಖಂಡಗಳು ಬೇರ್ಪಟ್ಟವು. ಅಧ್ಯಯನಗಳ ಪ್ರಕಾರ ಭೂಮಿಯ ಆಯಸ್ಸು ನಾಲ್ಕು ಬಿಲಿಯನ್ ವರ್ಷಗಳು. ಆಗ ಆರಂಭದಲ್ಲಿ ಭೂಮಿ ಒಂದು ದೊಡ್ಡ ಕಲ್ಲಿನ ಉಂಡೆಯಾಗಿತ್ತು. ಅನಿಲಗಳ ವರ್ತನೆ ಹಾಗೂ ಹವಾಮಾನ ವೈಪರೀತ್ಯದಿಂದ ಭೂ ಮಧ್ಯದ ಬಿಸಿ ಲಾವಾದ ಒತ್ತಡದಿಂದ ಈ ಉಂಡೆ ಸಿಡಿದು ಚೂರು ಚೂರಾಗಿ ಅಲ್ಲಲ್ಲಿ ತಗ್ಗು ಗುಂಡಿಗಳು ಉಂಟಾದವು.
ಕಾರ್ಮೋಡಗಳು ದಟ್ಟೈಸಿ ದಟ್ಟವಾದ ಮಳೆ ಸುರಿದು ಆ ಗುಂಡಿಗಳು ನೀರಿನಿಂದ ತುಂಬಿಕೊಂಡವು. ಮಿಲಿಯಾಂತರ ವರ್ಷಗಳಲ್ಲಿ ಭೂಮಿಯ ಮೇಲೆ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿ ಸಾಗರ ಸಮುದ್ರಗಳ ಸೃಷ್ಟಿಯಾಗಿ ಅವುಗಳಿಂದ ಪಾಚಿ ಮುಂತಾದ ಜಲಚರಗಳೂ ಹಾಗೂ ಬಯಲಲ್ಲಿ ಹಸಿರೂ ನಿರ್ಮಾಣವಾಯ್ತು. ಜೀವಜಾಲ ಹರಡಿದಂತೆ ಈಗ್ಗೆ 400 ಮಿಲಿಯನ್ ವರ್ಷಗಳಿಂದ ಭೂಮಿಯಲ್ಲಿ ಖಂಡಾಂತರ ಚಲನೆ ಅಂದರೆ ನೀರು ಹಾಗೂ ಜ್ವಾಲಾಮುಖಿಯ ಒತ್ತಡದಿಂದ ಭೂ ಖಂಡಗಳ ಚಲನೆ ಹಾಗೂ ಸವೆತ ಎರಡೂ ಉಂಟಾಗಿ ಈಗಿನ ಆಫ್ರಿಕಾ, ಉತ್ತರ ಹಾಗೂ ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ, ಅಂಟಾರ್ಟಿಕಾ, ಏಷ್ಯಾ ಮುಂತಾದ ಭೂಭಾಗಗಳು ನಿರ್ದಿಷ್ಟ ಮಾರ್ಗದಲ್ಲಿ ನಿರ್ದಿಷ್ಟ ವೇಗದಲ್ಲಿ ಚದುರಿ ಪ್ರತ್ಯೇಕಗೊಂಡವು.
ಇಲ್ಲಿಂದ ಐನೂರು ಮಿಲಿಯನ್ ವರ್ಷಗಳ ಹಿಂದೆ ಇದ್ದ ಒಂದೇ ಬೃಹತ್ ಭೂಖಂಡವನ್ನ ಗೊಂಡ್ವಾನಾ ಖಂಡವೆಂದೂ, ಅದರ ನಂತರದ ಭೂ ಖಂಡವನ್ನ ಪ್ಯಾಂಗೇ ಖಂಡವೆಂದೂ, ಅದರ ನಂತರದ ಭೂ ಖಂಡಗಳ ಸಮೂಹವನ್ನ ಲಾರೇಶಿಯಾ ಎಂದೂ, ಅದರ ಬಳಿಕದ ಭೂಖಂಡದ ಸಮಯವನ್ನ ಜುರಾಸಿಕ್ ಯುಗವೆಂದೂ ಕರೆಯಲಾಗಿದೆ.
ಜುರಾಸಿಕ್ ಎಂದರೆ ನೂರು ಮಿಲಿಯನ್ ವರ್ಷಗಳ ಹಿಂದೆ ದೈತ್ಯ ಉರಗಗಳು ಇದ್ದ ಕಾಲ. ಉಲ್ಕೆಯ ದಾಳಿಯಿಂದ ಈ ಉರಗಗಳ ನಾಮಾವಶೇಷದ ಬಳಿಕ ಪುನಃ ಭೂ ಖಂಡವು ಅನೇಕ ಹಿಮ ಹಾಗೂ ಉಷ್ಣಯುಗಗಳನ್ನ ನಿರಂತರವಾಗಿ ಎದುರಿಸಿ ಪ್ರಸಕ್ತ ಈಗಿನ ರೂಪಕ್ಕೆ ಬಂದಿದೆ. ಜುರಾಸಿಕ್ ಯುಗದಲ್ಲಿ ಭಾರತ ಭೂ ಖಂಡವು ಆಸ್ಟ್ರೇಲಿಯಾಗೆ ಅಂಟಿಕೊಂಡೇ ಇತ್ತು ಎಂದರೆ ನೀವು ನಂಬಲೆಬೇಕು ! ಈ ಆಸ್ಟ್ರೇಲಿಯಾ ಭಾಗಕ್ಕೇ ಅಂಟಿಕೊಂಡಿದ್ದ ಈ ಭೂಭಾಗವನ್ನ ದಕ್ಷಿಣದಿಂದ ಮುನ್ನುಗ್ಗಿ ಹರಿದು ಬಂದು ಸಾಗರದ ನೀರು ಸೀಳಿ ಅದನ್ನ ಎರಡು ಭಾಗ ಮಾಡಿದವು. ಒಂದು ಭಾಗವು ಪೂರ್ವದ ಕೆಳಕ್ಕೆ ಸಾಗುತ್ತಾ ಅಲ್ಲಿದ್ದ ಸಣ್ಣ ಪುಟ್ಟ ದ್ವೀಪಸಮುಚ್ಛಯಗಳನ್ನ ಸೇರಿಸಿಕೊಂಡು ಈಗಿನ ಆಸ್ಟ್ರೇಲಿಯಾ ಆಗಿದೆ.
ಇನ್ನು ಭಾರತವು ಕೆಳಗಿನ ನೀರಿನ ತಳ್ಳುವಿಕೆಯಿಂದ ಮೇಲೆಮೇಲಕ್ಕೆ ಸಾಗುತ್ತಾ ಬಂದು ಏಷ್ಯಾದ ರಾಷ್ಟ್ರವಾಗಿ ಚೀನಾ ಹಾಗೂ ರಷ್ಯಾಗಳ ಭೂ ಭಾಗದತ್ತ ಒತ್ತುಕೊಂಡಿತು. ಇಲ್ಲಿ ಒಂದು ಅಚ್ಚರಿ ನಡೆಯಿತು. ಮೇಲಿನ ಯುರೇಷಿಯಾದ ಭೂಭಾಗವು ದಕ್ಷಿಣಕ್ಕು ಹಾಗೂ ಭರತ ಖಂಡವು ಮೇಲಕ್ಕು ಪರಸ್ಪರ ಡಿಕ್ಕಿ ಹೊಡೆದು ಘರ್ಷಣೆ ಏರ್ಪಟ್ಟಾಗ ಈಗಿನ ಹಿಮಾಲಯ ಇರುವ ಜಾಗದಲ್ಲಿ ಕೆಳಗಿದ್ದ ಭೂ ಪ್ರದೇಶ ಮೇಲಕ್ಕೆ ಏರುತ್ತಾ ಬಂತು. ಅದರ ಫಲವೆ ಹಿಮಾಲಯಗಳ ಜನನ. ಹೀಗೆ ಲಕ್ಷಾಂತರ ವರ್ಷಗಳಲ್ಲಿ ಏರುತ್ತಾ ಬೆಳೆದು ಬಂದು ಈ ಥಂಡ್ರಾ ಪ್ರದೇಶವೇ ಈಗಿನ ಹಿಮಾಲಯ ಆಗಿದೆ ಎನ್ನುತ್ತವೆ ಆಧುನಿಕ ಭೂ ತಜ್ಞರ ವರದಿಗಳು.
ಈಗಲು ಸಹ ಭಾರತವು ಮೇಲಕ್ಕೆ ಒತ್ತುತ್ತಲೆ ಇದೆ. ಪ್ರತೀ ವರ್ಷ ಹಿಮಾಲಯಗಳು ಎರಡಿಂಚು ಎತ್ತರಕ್ಕೆ ಬೆಳೆಯುತ್ತಿರುವುದೇ ಇದಕ್ಕೆ ಸಾಕ್ಷಿ. ಇನ್ನೊಂದು ಅಚ್ಚರಿದಾಯಕ ಅಂಶವೆಂದರೆ, ಭರತ ಖಂಡದ ದಕ್ಷಿಣದ ಈಗಿನ ಚಾಮುಂಡಿ ಬೆಟ್ಟವು ನೈಸರ್ಗಿಕವಾಗಿ ಹಿಮಾಲಯಗಳಿಗಿಂತ ಸಾಕಷ್ಟು ವರ್ಷ ಹಳೆಯದು. ಅಧ್ಯಯನಗಳ ಪ್ರಕಾರ ಚಾಮುಂಡಿ ಬೆಟ್ಟಗಳ ಕಲ್ಲುಗಳ ಕಾರ್ಬನ್ ಡೇಟಿಂಗ್ ವಿಧಾನದ ಪರೀಕ್ಷಾ ವರದಿಗಳು ಚಾಮುಂಡಿ ಬೆಟ್ಟವು ಸುಮಾರು 85 ಕೋಟಿ ವರ್ಷಗಳಷ್ಟು ಹಳೆಯದ್ದೆಂದು ಧೃಡ ಪಡಿಸಿವೆ. ಅಂದರೆ ಹಿಮಾಲಯಗಳಿಗಿಂತಲು 83 ಕೋಟಿ ವರ್ಷಗಳಷ್ಟು ಅವು ಹಿರಿಯವು.
ಭೂಮಿ ಇಷ್ಟೆಲ್ಲ ಸ್ವರೂಪ ತಾಳಲು ಕೋಟಿಗಟ್ಟಲೆ ವರ್ಷಗಳ ಸಮಯಾವಕಾಶ ಬೇಕೆಂಬುದು ತಜ್ಞರ ಅಭಿಪ್ರಾಯ. ಇನ್ನು ಮುಂದಕ್ಕು ಸಹ ಭೂಮಿಯ ರಚನೆ ಬದಲಾಗುತ್ತಾ ಹೋಗಲಿದೆ. ಭೂ ಖಂಡಾಂತರ ಚಲನೆಯ ಸಿದ್ಧಾಂತವು ಇಂದು ಜಾಗತಿಕ ಮಟ್ಟದಲ್ಲಿ ಒಪ್ಪಿತವಾದ ಹಾಗೂ ಧೃಡೀಕರಿಸಲ್ಪಟ್ಟ ವಾದ. ಇಂಥ ಅಚ್ಚರಿದಾಯಕ ಸತ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸಿ ಭೂಮಿಯ ಸಂರಕ್ಷಣೆಯ ಅರಿವನ್ನ ಜನರಲ್ಲಿ ಸಾಧಿಸುವುದು ಪ್ರತಿಯೊಬ್ಬ ವಿದ್ಯಾವಂತನ ಕರ್ತವ್ಯ.
ಸಂಗ್ರಹ ಲೇಖನ:-
-ಇಂದೂದರ್ ಒಡೆಯರ್ ಚಿತ್ರದುರ್ಗ
(ಡುಗ್ಗು)








