ಕೆಳದಿ ಸೈನ್ಯದ ಧ್ವಜ, ಪಟ್ಟಾಭಿಷೇಕದ ವಿಧಿವಿಧಾನಗಳು; ಎತ್ತ ಹೋಯಿತು ಕೆಳದಿ ನಾಯಕರ ರತ್ನ ಖಚಿತ ಸಿಂಹಾಸನ (ಭದ್ರಾಸನ)?
ಭಾರತದಲ್ಲಿ ಆಳ್ವಿಕೆ ಮಾಡಿದ ಹಲವಾರು ರಾಜಮನೆತನದಲ್ಲಿ ಹೊಸ ರಾಜನ ಪಟ್ಟಾಭಿಷೇಕ ಅತ್ಯಂತ ಪ್ರಮುಖವಾದ ಆಚರಣೆಯಾಗಿದ್ದು ಅದಕ್ಕೆ ಅದರದೇ ಆದ ವಿಧಿವಿಧಾನಗಳು ಇರುತ್ತಿತ್ತು. ರಾಜ್ಯದಿಂದ ರಾಜ್ಯಕ್ಕೆ ಈ ಆಚರಣೆಯಲ್ಲಿ ಕೆಲವು ವಿಭಿನ್ನತೆಯನ್ನು ಕಾಣಬಹುದು. ಕೆಳದಿಯ ಬಸವರಾಜ ನಾಯಕರು ಸಂಕಲಿಸಿದ ಸಂಸ್ಕೃತ ಭಾಷೆಯ ‘ಶ್ರೀಶಿವತತ್ತ್ವರತ್ನಾಕರ’ ಎಂಬ ಗ್ರಂಥದಿಂದ ಬಿದನೂರಿನಲ್ಲಿ ನಡೆಯುತ್ತಿದ್ದ ಪಟ್ಟಾಭಿಷೇಕದ ಸಂಪ್ರದಾಯ ಮತ್ತು ರಾಜಸಿಂಹಾಸನದ ಬಗ್ಗೆ ತಿಳಿದು ಕೊಳ್ಳಬಹುದು.
ಮೊಟ್ಟಮೊದಲಿಗೆ “ಪಟ್ಟಾ” ಎಂಬ ಪದವು ಮೂಲತಃ ಸಂಸ್ಕೃತ ಭಾಷೆಯ ಪದವಾಗಿದ್ದು ಇದಕ್ಕೆ ಹಲವಾರು ಅರ್ಥಗಳಿವೆ ಉದಾಹರಣೆಗೆ ಸಿಂಹಾಸನ, ಕಿರೀಟ, ಪೇಟ, ಮುಂಡಾಸು, ಕಡೈಕಲ್ಲು (ರುಬ್ಬುವ ಕಲ್ಲು), ರಾಜ ಶಾಸನ, ಕತ್ತಿ, ಗುರಾಣಿ, ಹಿರಿಯ ರಾಣಿ, ರೇಷ್ಮೆ ಬಟ್ಟೆ, ಜಾಗದ ಮಾಲಿಕತ್ವ ನೀಡುವ ದಾಖಲೆ. ಸರಳ ಭಾಷೆಯಲ್ಲಿ ಹೇಳಬೇಕು ಅಂದರೆ ‘ಪಟ್ಟಾಭಿಷೇಕ’ ರಾಜನಿಗೆ ರಾಜ್ಯದ ಜವಾಬ್ದಾರಿ ಹೊರಿಸುವ ಒಂದು ಮಹತ್ವದ ಸಮಾರಂಭ.
‘
ಶ್ರೀಶಿವತತ್ತ್ವರತ್ನಾಕರ’ ದಲ್ಲಿ ಕೆಳದಿ ಬಸವರಾಜ ನಾಯಕರು ಹೇಳಿರುವ ಪ್ರಕಾರ ಬಿದನೂರಿನ ಅರಮನೆಯ ರಾಜ ಮಂದಿರದ ‘ಭದ್ರ ಚಾವಡಿ’ ಯಲ್ಲಿ ಇದ್ದ ರತ್ನ ಖಚಿತ ರಾಜ ಸಿಂಹಾಸನಕ್ಕೆ ‘ಭದ್ರಾಸನ’ ಎಂದು ಕರೆಯುತ್ತಿದ್ದರು. ರಾಜಮಂದಿರ ಅಥವಾ ಆಸ್ಥಾನದಲ್ಲಿ ಸಿಂಹಾಸನವನ್ನು ಆಸ್ಥಾನ ಮಂಟಪದಲ್ಲಿ ರತ್ನವೇದಿಕೆಯ ಮೇಲೆ ಸ್ಥಾಪಿಸಲಾಗಿತ್ತು. ಬಿದನೂರಿನ ಸಿಂಹಾಸನವನ್ನು ಏರಲು ಚಿತ್ತಾರಗಳನ್ನು ಹೊಂದಿದ ಚಿನ್ನದ ಪಾವಟಿಗೆಗಳು ಇದ್ದವು. ಈ ಸಿಂಹಾಸನದಲ್ಲಿ ಎಂಟು ಸ್ಫಟಿಕದಿಂದ ಮಾಡಲ್ಪಟ ಸಿಂಹಗಳು ರಾರಾಜಿಸಿದರೆ (ಅಷ್ಟದಿಕ್ಕು) ಇನ್ನೊಂದು ಕಡೆ ಸುಂದರವಾದ ಚಿತ್ತಾರಗಳನ್ನು ಹೊಂದಿದ ರತ್ನ ಕಂಬಗಳಿಂದ ರತ್ನ ಖಚಿತ ‘ಭದ್ರಾಸನ’ ಸಿಂಹಾಸನವು ಶೋಭಿಸುತ್ತಿತ್ತು.
ರಾಜನ ಪಟ್ಟಾಭಿಷೇಕವನ್ನು ಶುಭ ಮುಹೂರ್ತದಲ್ಲಿ ನೆರವೇರಿಸುತ್ತಿದ್ದು ಅಂದು ಸಿಂಹಾಸನದ ಮುಂದೆ ಅನೇಕ ಚಿನ್ನದ ಕಲಶಗಳಲ್ಲಿ ಗಂಗಾಜಲ, ನೂರಾರು ಗಿಡಮೂಲಿಕೆ, ರತ್ನ, ಚಿನ್ನ, ಚಿಗುರುಗಳನ್ನೂ ಹಾಕಿ ಇಡುತ್ತಿದ್ದರು. ರಾಜ ಹೊಸ ಆಭರಣ, ಬಿಳಿ ಹಾರ ಮತ್ತು ಹೊಸ ವಸ್ತ್ರಗಳನ್ನು (ಬಿಳಿ ರೇಷ್ಮೆ) ಧರಿಸಿ ಶುಭಯೋಗದ ಮುಹೂರ್ತದಲ್ಲಿ ಭದ್ರಾಸನದಲ್ಲಿ ಪೂರ್ವದಿಕ್ಕಿಗೆ ಅಭಿಮುಖವಾಗಿ ವಿರಾಜಮಾನರಾಗುತ್ತಿದ್ದರು. ರಾಜಗುರುಗಳು ಮಂತ್ರೋಪಚಾರವಾಗಿ ರಾಜನಿಗೆ ಅಭಿಷೇಕ ಮಾಡಿ, ಶಂಖ ಹಾಗೂ ಬೇರೆ ವಾದ್ಯಗಳ ದ್ವನಿಯ ಜೊತೆಗೆ ಮಂಗಳಾರತಿಯನ್ನು ನೆರವೇರಿಸಿ ರತ್ನ ಖಚಿತ ಮುಂಡಾಸನ್ನು ರಾಜನ ತಲೆಗೆ ಪಟ್ಟಾ ಕಟ್ಟುತ್ತಿದ್ದರು. ಇದಾದ ನಂತರದಲ್ಲಿ ರಾಜನಿಗೆ ಪಟ್ಟದ ಕತ್ತಿ, ಪಟ್ಟದ ಕುದುರೆ, ಪಟ್ಟದ ಆನೆ, ಚಿನ್ನದ ರಾಜದಂಡ, ರಾಜ ಮುದ್ರೆ, ಕಡೈಕಲ್ಲು, ಚಿನ್ನದ ಚಾಮರ, ಚಿನ್ನದ ಛತ್ರಿ, ಧ್ವಜ ಮತ್ತು ಬಿರುದನ್ನು ನೀಡಲಾಗುತ್ತಿತ್ತು. ರಾಜನಿಗೆ ಮದುವೆ ಆದ ಪಕ್ಷದಲ್ಲಿ ಅಂದು ರಾಜಗುರುಗಳು ಆಸ್ಥಾನದಲ್ಲಿ ಪಟ್ಟದ ರಾಣಿಯ ಹೆಸರನ್ನು ಸಹಾ ಘೋಷಿಸುತ್ತಿದ್ದರು.
ಹಿಂದಿನ ಕಾಲದಲ್ಲಿ ಎಲ್ಲಾ ರಾಜ್ಯಗಳಿಗೆ ತನ್ನದೇ ಆದ ರಾಜ ಲಾಂಛನ ಮತ್ತು ಧ್ವಜ ಇರುತ್ತಿತ್ತು. ಬಿದನೂರಿನ ರಾಜರು ಎಲ್ಲೇ ಹೋದರು ಅವರ ಧ್ವಜ ಅವರ ಜೊತೆಗೆ ಸಾಗುತ್ತಿತ್ತು. ಶ್ರೀಶಿವ ತತ್ತ್ವರತ್ನಾಕರದಲ್ಲಿ ಬಿದನೂರಿನ ಧ್ವಜಕ್ಕೆ ಸಂಬಂಧಿಸಿದ ಒಂದು ಅದ್ಭುತವಾದ ಶ್ಲೋಕ ಈ ಕೆಳಗಿದೆ.
“ಧ್ವಜಂ ಕೃತ್ವಾ ತು ದಂಡೇನ ವೇಣುವೈಕಂಕತೇನ ಚ
ಪಾಲಾಶೇನಾಥವಾ ಬದ್ಧ್ವಾ ಘಂಟಾಕಿಂಕಿಣಿಶೋಭಿತಮ್
ವೈನತೇಯಂ ಸ್ವಸ್ತಿಕಂ ಚ ಕುಲಿಶಂ ಚ ಲಿಖೇತ್ಪಟೇ
ಸಂಪೂಜ್ಯ ವಿಧಿವನ್ಮಂತ್ರೈರ್ಗಂಧಪುಷ್ಪಾಕ್ಷಾತಾದಿಭಿಃ”
ಈ ಮೇಲ್ಕಂಡ ಸಂಸ್ಕೃತ ಶ್ಲೋಕದ ತಾತ್ಪರ್ಯ ಏನೆಂದರೆ – ಧ್ವಜದ ಬಟ್ಟೆಯಲ್ಲಿ ವೈನತೇಯ, ಸ್ವಸ್ತಿಕ ಮತ್ತು ವಜ್ರಮುಷ್ಠಿಯುಧವನ್ನು ಚಿತ್ರಿಸಿರಬೇಕು ಮತ್ತು ಅದರ ದಂಡವು ಬಿದಿರಿನಿಂದ, ಮುತ್ತುಗದಿಂದ ಅಥವಾ ಹುಳಿಬೇಲದಿಂದ ಮಾಡಿದ್ದಾಗಿರಬೇಕು. ಈ ಧ್ವಜಕ್ಕೆ ಘಂಟೆ ಮತ್ತು ಕಿರುಗಂಟೆಗಳಿಂದ ಅಲಂಕರಿಸಿ
ಮಂತ್ರಪೂರ್ವಕವಾಗಿ ಗಂಧ, ಪುಷ್ಪ, ಅಕ್ಷತೆ ಮುಂತಾದುವುಗಳಿಂದ ಅದನ್ನು ಅರ್ಚನೆ ಮಾಡಬೇಕು. ಇನ್ನೂ ಡಚ್ ದೇಶದಲ್ಲಿ ಇರುವ ‘Vereenigde Oostindische Compagnie archives’ ದಾಖಲೆಯ ಪ್ರಕಾರ ಇಕ್ಕೇರಿ ನಾಯಕರ ರಾಜ ಲಾಂಛನ ‘ಗಂಡ ಭೇರುಂಡ’ ಆಗಿತ್ತು. ಆದರೆ ವೈನತೇಯ ಪದ ಸಹಜವಾಗಿ ಕೆಲವರಲ್ಲಿ ಸಂಶಯ ಉಂಟುಮಾಡಬಹುದು ಏಕೆಂದರೆ ವೈನತೇಯ ಅಂದರೆ ಗರುಡ ವೈಷ್ಣವ ಚಿನ್ಹೆಯಾಗಿದ್ದು ವೀರಶೈವ ಕೆಳದಿ ನಾಯಕರ ಧ್ವಜದಲ್ಲಿ ಹೇಗೆ ಕಾಣಿಸಿಕೊಂಡಿತು ಎಂದು. ಅಂದಿನ ಕಾಲಮಾನದಲ್ಲಿ ನಮ್ಮ ಮಲೆನಾಡಿನಲ್ಲಿ ಗಂಡ ಭೇರುಂಡ ಮತ್ತು ಗರುಡ ಎರಡಕ್ಕೂ ‘ವೈನತೇಯ’ ಎಂದು ಕರೆಯುತ್ತಿದ್ದರು ಹಾಗಾದರೆ ಶ್ರೀಶಿವತತ್ತ್ವರತ್ನಾಕರದಲ್ಲಿ ಪ್ರಸ್ತಾಪಿಸಿದ ‘ವೈನತೇಯ’ ಗಂಡ ಭೇರುಂಡ ಅಥವಾ ಗರುಡನೋ ಎಂದು ನಿರ್ಧರಿಸಲು ಇದೇ ಗ್ರಂಥದಲ್ಲಿ ಇರುವ ಇನ್ನೊಂದು ಶ್ಲೋಕ ನೆರವು ನೀಡುತ್ತದೆ,
“ವಿಭವಾಃ ಪದ್ಮನಾಭಾದ್ಯಾ ಏತಸ್ಮಾತ್ಸಕೃದುದ್ಗತಾಃ
ಕ್ಷೀರಾರ್ಣವಾದಿಸ್ಥಾನೇಷು ಪ್ರಾಕೃತೇಷ್ವಪಿ ತೇ ಸ್ಥಿತಾಃ
ವಿಶ್ವಕ್ ಸೇನಖಗೇಂದ್ರಾದ್ಯಾಃ ಪರಿವಾರಾ ಇಮೇ ಹರೇಃ
ಇತ್ಥಂ ಹಿ ಭಗವಾನರ್ಥಂ ಸಪ್ರಪಂಚೋ ನಿರೂಪಿತಃ”
ಇದರ ಅರ್ಥ ಪದ್ಮನಾಭನೇ ಮುಂತಾದ ವಿಭವರೂಪಗಳು ಕ್ಷೀರಸಾಗರಾದಿ ಪ್ರಕೃತಿಗಳಲ್ಲಿ ನೆಲೆಸಿವೆ. ವಿಶ್ವಕ್ಸೇನ, ಗರುಡ ಮುಂತಾದ ಪರಿವಾರ ದೇವತೆಗಳೂ ಇವೆ. ಹೀಗೆ ಹರಿಯ ಪ್ರಪಂಚ ನಿರೂಪಿತವಾಗಿದೆ. ಇದರಿಂದ ಗೊತ್ತಾಗುವ ಅಂಶ ಏನೆಂದರೆ ಶ್ರೀಶಿವತತ್ತ್ವರತ್ನಕಾರದಲ್ಲಿ ಪ್ರಸ್ತಾಪಿಸಿದ ವೈನತೇಯ ಅಂದರೆ ಗಂಡ ಭೇರುಂಡ ಮತ್ತು
ಖಗೇಂದ್ರ ಅಂದರೆ ಗರುಡ ಎಂದು. ಗಂಡ ಭೇರುಂಡ ವಿಷ್ಣುವಿನ ಅವತಾರವಾದರೆ, ಸ್ವಸ್ತಿಕ ಹಿಂದುತ್ವದ ಸಂಕೇತ ಮತ್ತು ವಜ್ರಮುಷ್ಠಿಯುಧ ಬಿದನೂರಿನ ನಾಯಕರು ವೀರಶೈವ ಮಲ್ಲರು ಎಂದು ಹೇಳುತ್ತದೆ. ಇನ್ನೂ ಇದಕ್ಕೆ ಪುಷ್ಠಿ ನೀಡುವಂತೆ ಮಲೆನಾಡಿನ ಹಲವಾರು ಕೆಳದಿ ಕಾಲದ ಸ್ಮಾರಕಗಳಲ್ಲಿ ಗಂಡ ಭೇರುಂಡ ಮತ್ತು ವಜ್ರಯುದ್ಧದ ಶಿಲ್ಪಗಳನ್ನು ನಾವು ಗಮನಿಸಬಹುದು. ಗಂಡ ಭೇರುಂಡ ಕೆಳದಿಗಿಂತ ಮುಂಚೆಯೇ ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರದ ಶ್ರೀ ಅಚ್ಯುತದೇವರಾಯರು ಉಪಯೋಗಿಸಿದ್ದು ‘ಗಂಡ ಭೇರುಂಡ’ ಒಂದು ಪ್ರತಿಷ್ಠೆ ಮತ್ತು
ಪ್ರಾಬಲ್ಯದ ಸಂಕೇತವಾಗಿತ್ತು. ಇನ್ನೂ ಕೆಳದಿಗೆ ಸಂಭಂದಿಸಿದಂತೆ ರಾಜ ಎಲ್ಲೇ ಹೋದರು ಅವನಿಗಿಂತ ಮುಂಚೆಯೇ ಮೂರು ಆಶ್ವರೂಢ ಸೈನಿಕರು ಈ ಧ್ವಜವನ್ನು ಹಾರಿಸುತ್ತ ಹೋಗುತ್ತಿದ್ದರು, ತದನಂತರ ರಾಜನ ಮಾರ್ಗದಲ್ಲಿ ಯಾರು ಅಡ್ಡ ಬರುವ ಹಾಗೆ ಇರಲಿಲ್ಲ.
ಇನ್ನೂ ಯುದ್ಧದ ಸಮಯದಲ್ಲಿ ಈ ಧ್ವಜ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುವ ರೀತಿಯಲ್ಲಿ ಹಾರುತ್ತಿತ್ತು. ಮೊಘಲ್ ಚಕ್ರವರ್ತಿ ಔರಂಗಜೇಬನ ಸೈನ್ಯವನ್ನು ರಾಣಿ ಚೆನ್ನಮ್ಮಾಜಿ ಸೋಲಿಸಿದಾಗ ಇದೇ ಕೆಳದಿ ಧ್ವಜ ಅಂದು ಮಲೆನಾಡಿನಲ್ಲಿ ಎಷ್ಟು ಎತ್ತರಕ್ಕೆ ಹಾರಿತು ಅಂದರೆ ಇದರ ಕಂಪನ ದೆಹಲಿಯವರೆಗೂ ಕೇಳಿಸಿತು. ೧೬ ರಿಂದ ೧೮ ನೇ ಶತಮಾನದ ವರೆಗೂ ಕರ್ನಾಟಕ ಪಶ್ಚಿಮ ಘಟ್ಟ, ಕಾರವಾರದಿಂದ ಕೇರಳದ ನೀಲೇಶ್ವರದ ವರೆಗೂ, ಭಾರತದ ಪಶ್ಚಿಮ ಸಮುದ್ರದಲ್ಲಿ ಮತ್ತು ಅಸಂಖ್ಯಾತ ಯುದ್ಧಗಳಲ್ಲಿ ರಾರಾಜಿಸಿದ ನಮ್ಮ ಬಿದನೂರಿನ ಧ್ವಜ ಇಂದು ಯಾರಿಗೂ ತಿಳಿದಿಲ್ಲ. ಅದೇ ರೀತಿ ಹೈದರ್ ಬಿದನೂರನ್ನು ವಶಪಡಿಸಿಕೊಂಡ ನಂತರದಲ್ಲಿ ಬಿದನೂರಿನ ರತ್ನಖಚಿತ ‘ಭದ್ರಾಸನ’ ಸಿಂಹಾಸನ ಏನಾಯಿತು ಎಂದು ಇಂದಿಗೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಕೆಳದಿಯ ಅಮೂಲ್ಯ ಸಿಂಹಾಸನವನ್ನು ರಾಣಿ ವೀರಮ್ಮಾಜೀ ಎಲ್ಲಾದರೂ ಬಚ್ಚಿ ಇಟ್ಟಳಾ? ಅಥವಾ ಹೈದರ್ ಅದನ್ನು ಬೇರ್ಪಡಿಸಿ ಮೈಸೂರಿಗೆ ತೆಗೆದುಕೊಂಡು ಹೋದನೇ ಎಂದು ತಿಳಿಯಲು ಬಿದನೂರಿನ ಇತಿಹಾಸವನ್ನು ಮತ್ತೊಮ್ಮೆ ಕೆದಕಿ, ಸಂಶೋಧನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಮರೆತು ಹೋದ ನಮ್ಮ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಹಾರಿದ ಕೆಳದಿ (ಇಕ್ಕೇರಿ) ನಾಯಕರ ಧ್ವಜವನ್ನು ನೆನಪಿಸಿಕೊಳ್ಳುತ್ತ ಕೆಳದಿ ನಾಯಕರ ಅಪಾರ ಕೊಡುಗೆಯನ್ನು ಸ್ಮರಿಸೋಣ.
ವಿ.ಸೂ: ನಾವು ನೀಡಿದ ಕೆಳದಿಯ ಧ್ವಜದ ವರ್ಣನೆಗೆ ಅನುಗುಣವಾಗಿ ಧ್ವಜವನ್ನು ಸಿದ್ಧಪಡಿಸಿದವರು ಸಾಗರದ ರಘು ವಡೆಯರ್
ಲೇಖನ:- ಅಜಯ್ ಶರ್ಮಾ ಮತ್ತು ಪ್ರದೀಪ್ ಹೊದಲ








