ಬೆಂಗಳೂರು : ಮೋದಿ, ಶಾ ಇಬ್ಬರಿಂದಲೇ ದೇಶ ಹಾಳಾಗುತ್ತಿದೆ. ಅವರಿಬ್ಬರಿಗೆ ಅದ್ಯಾರು ಸಲಹೆ ಕೊಡ್ತಾರೋ ಗೊತ್ತಿಲ್ಲ. ಅವರು ಮಾಡೋ ಎಲ್ಲವೂ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದೆ, ಇಂತಹ ಏರಿಕೆಯನ್ನು ನಾವು ಊಹಿಸಿರಲಿಲ್ಲ. ಮೋದಿ ಕಾಲದಲ್ಲಿ ಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ. ಬೆಲೆ ಏರಿಕೆಯಿಂದ ರೈತರು, ಬಡವರಿಗೂ ತೊಂದರೆಯಾಗಿದೆ ಎಂದು ದೂರಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಬ್ಯಾರಲ್ 130 ಡಾಲರ್ ಇತ್ತು. ವಿಶ್ವ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆಯಿತ್ತು. ಆದರೂ ನಾವು 50/60ಕ್ಕೆ ಲೀಟರ್ ನೀಡುತ್ತಿದ್ದೆವು. ಆದರೆ, ಇಂದು 30 ಡಾಲರ್ ಬ್ಯಾರಲ್ ಬೆಲೆಯಿದೆ. ಆದರೂ ಕೇಂದ್ರ 80 ರೂ. ಲೀಟರ್ ಏರಿಸಿದೆ. 20 ರೂ.ಗೆ ಸಿಗಬೇಕಾದ ಪೆಟ್ರೋಲ್ 80 ರೂ. ಮಾಡಿದ್ದಾರೆ ಎಂದು ಕಿಡಿಕಾರಿದ ಖರ್ಗೆ ಕೇಂದ್ರ ಸರ್ಕಾರ ಸಾಮಾನ್ಯರ ಪರ ಇದ್ಯಾ..? ಪ್ರಶ್ನಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಬೆಂಕಿಕಾರಿದ ಕಾಂಗ್ರೆಸ್ ನಾಯಕ, ಮೋದಿ, ಶಾ ಇಬ್ಬರಿಂದಲೇ ದೇಶ ಹಾಳಾಗುತ್ತಿದೆ. ಅವರಿಬ್ಬರಿಗೆ ಅದ್ಯಾರು ಸಲಹೆ ಕೊಡ್ತಾರೋ ಗೊತ್ತಿಲ್ಲ. ಅವರು ಮಾಡೋ ಎಲ್ಲವೂ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.







