ನರೇಂದ್ರ ಮೋದಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸಂಸತ್ ಅಧಿವೇಶನ ಆರಂಭವಾಗಿದೆ. ಆದರೆ, ಅಭಿವೃದ್ಧಿ ಚರ್ಚೆಗಿಂತ ರಾಜದಂಡ ಚರ್ಚೆಯ ವಸ್ತುವಾಗುತ್ತಿದೆ. ಹಾಗಾದರೆ ಏನಿದು ರಾಜದಂಡ? ವಿಪಕ್ಷಗಳು ಯಾಕೆ ವಿರೋಧಿಸುತ್ತಿವೆ?
ಸಂಸತ್ ಅಧಿವೇಶದಲ್ಲಿ ಸದ್ಯ ರಾಜದಂಡ `ಸೆಂಗೋಲ್’ ಬಗ್ಗೆ ಸಮಾಜವಾದಿ ಪಕ್ಷ ಸೇರಿದಂತೆ ಕೆಲವು ವಿಪಕ್ಷಗಳು ಪ್ರಶ್ನೆಯನ್ನೆತ್ತಿದ್ದು ಪ್ರಜಾಪ್ರಭುತ್ವದಲ್ಲಿ ಇದರ ಅಗತ್ಯವೇನು ಎಂದು ಪ್ರಶ್ನಿಸಿವೆ. ಆದರೆ, ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಬಿಜೆಪಿ ತಿರುಗೇಟು ನೀಡಿದೆ. ಪ್ರತಿಪಕ್ಷಗಳು ಭಾರತೀಯ ಸಂಸ್ಕೃತಿಯ ಮೇಲೆ ಅಗೌರವ ತೋರುತ್ತಿವೆ ಎಂದು ಕಿಡಿಕಾರಿದೆ. ಆದರೂ ವಿಪಕ್ಷಗಳು ಮಾತ್ರ ಇದನ್ನು ಪ್ರಶ್ನೆ ಮಾಡುತ್ತಲೇ ಇವೆ.
ಹಾಗದರೆ ಏನಿದು ರಾಜದಂಡ ಅಂದ್ರೆ, ತಮಿಳುನಾಡಿನಿಂದ ತಂದಿರುವ 5 ಅಡಿ ಉದ್ದದ ಚಿನ್ನದ ಲೇಪನ ಇರುವ ಸೆಂಗೋಲ್ ಅನ್ನು ತಂದು ಪ್ರಧಾನಿ ಮೋದಿ ಅವರು ಅದನ್ನು ಲೋಕಸಭೆಯ ಸ್ಪೀಕರ್ ಮುಂದುಗಡೆ ಸ್ಥಾಪಿಸಿದ್ದಾರೆ. ಈ ವಿಚಾರವಾಗಿಯೇ ಸಮಾಜವಾದಿ ಪಕ್ಷದ ಸಂಸದ ಆರ್ ಕೆ ಚೌಧರಿ ಅವರು ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ. ಸೆಂಗೋಲ್ ಸ್ಥಳದಲ್ಲಿ ಭಾರತದ ಸಂವಿಧಾನವನ್ನು ಇಡಿ. ಅದು ಬಿಟ್ಟು ಇದೇಕೆ ರಾಜದಂಡ ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿ ರಾಜ ಇಲ್ಲ ಸಂವಿಧಾನ ಇದೆ ಎಂದು ಹೇಳಿದ್ದಾರೆ.
ಸಂವಿಧಾನದ ಅಂಗೀಕಾರವು ದೇಶದಲ್ಲಿ ಪ್ರಜಾಪ್ರಭುತ್ವದ ಆರಂಭವನ್ನು ಗುರುತಿಸಿದೆ. ಸಂವಿಧಾನವು ಅದರ ಸಂಕೇತವಾಗಿದೆ. ಬಿಜೆಪಿ ಸರ್ಕಾರ ತನ್ನ ಕೊನೆಯ ಅವಧಿಯಲ್ಲಿ ಸ್ಪೀಕರ್ ಕುರ್ಚಿಯ ಪಕ್ಕದಲ್ಲಿ ‘ಸೆಂಗೋಲ್’ ಅನ್ನು ಇಟ್ಟಿತು.. ಸೆಂಗೋಲ್ ಎಂಬುದು ತಮಿಳು ಪದವಾಗಿದ್ದು, ಇದರ ಅರ್ಥ ರಾಜದಂಡ. ರಾಜದಂಡ ಎಂದರೆ ರಾಜನ ಕೈಯ್ಯಲ್ಲಿರುವ ದಂಡ ಎಂದೂ ಅರ್ಥ. ರಾಜಕಾಲದ ನಂತರ ನಾವು ಸ್ವತಂತ್ರರಾಗಿದ್ದೇವೆ. ಈಗ, ಅರ್ಹ ಮತದಾರರಾಗಿರುವ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ಈ ದೇಶವನ್ನು ನಡೆಸಲು ಸರ್ಕಾರವನ್ನು ಆಯ್ಕೆ ಮಾಡುತ್ತಾರೆ. ಹಾಗಾದರೆ ದೇಶವು ಸಂವಿಧಾನದಿಂದ ನಡೆಸಲ್ಪಡುತ್ತದೆಯೇ ಅಥವಾ ರಾಜನ ಕೋಲಿನಿಂದ ನಡೆಸಲ್ಪಡುತ್ತದೆಯೇ? ಎಂದು ಪ್ರಶ್ನಿಸಿ, ರಾಜದಂಡ ನಮಗೆ ಬೇಕಿಲ್ಲ ಎಂದು ಹೇಳಿದ್ದಾರೆ.
ಈಗಾಗಲೇ ಹಲವಾರು ನಾಯಕರು “ಪ್ರಜಾಪ್ರಭುತ್ವವನ್ನು ಉಳಿಸಲು” ಸಂವಿಧಾನದ ಪ್ರತಿಯನ್ನು ‘ಸೆಂಗೋಲ್’ ಅನ್ನು ಬದಲಿಸಬೇಕೆಂದು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ 37 ಸೀಟುಗಳನ್ನು ಗೆದ್ದಿರುವ ಸಮಾಜವಾದಿ ಪಕ್ಷವು ಇದೀಗ ಲೋಕಸಭೆಯಲ್ಲಿ 3ನೇ ಅತಿದೊಡ್ಡ ಪಕ್ಷವಾಗಿದೆ. ಎಸ್ಪಿ ಪಕ್ಷದ ಸಂಸದ ಆರ್ ಕೆ ಚೌಧರಿ ಹೇಳಿಕೆಯನ್ನು ಅಖಿಲೇಶ್ ಯಾದವ್ ಕೂಡ ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಸೆಂಗೋಲ್ ಲೋಕಸಭೆಯಲ್ಲಿ ಭಾರೀ ಸದ್ದು ಮಾಡುವ ಸುದ್ದಿ ಮಾಡುತ್ತಿದೆ.
ಸೆಂಗೋಲ್’ ಅನ್ನು ನೂತನ ಸಂಸತ್ತಿನಲ್ಲಿ ಅಳವಡಿಸಿದಾಗ ಪ್ರಧಾನಿ ಮೋದಿ ಅವರು ಅದಕ್ಕೆ ನಮಸ್ಕರಿಸಿದ್ದರು. ಆದರೆ ಈ ಬಾರಿ ಪ್ರಮಾಣ ವಚನ ಸ್ವೀಕರಿಸುವಾಗ ನಮಸ್ಕರಿಸುವುದನ್ನು ಮರೆತಿದ್ದರು. ಅದಕ್ಕಾಗಿಯೇ ದೇಶಕ್ಕೆ ಸಂವಿಧಾನವೇ ಹೊರತು, ರಾಜದಂಡವಲ್ಲ. ಕೈಯಲ್ಲಿ ಅದನ್ನು ಹಿಡಿದುಕೊಂಡು ಶಿಕ್ಷೆ ನೀಡಲು ದೇಶವನ್ನು ರಾಜ ಆಳುತ್ತಿಲ್ಲ. ಸಂವಿಧಾನ ಆಳುತ್ತಿದೆ. ಸಂವಿಧಾನದ ನಿಯಮದಂತೆ ನಾವೆಲ್ಲ ಇದ್ದೇವೆ. ಹೀಗಾಗಿ ಸಂವಿಧಾನ ಇಡಬೇಕೆ ಹೊರತು, ರಾಜದಂಡವನ್ನಲ್ಲ ಎಂದು ವಿಪಕ್ಷಗಳ ನಾಯಕರು ಒತ್ತಾಯಿಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಸಂಸದ ಮಾಣಿಕಮ್ ಟಾಗೋರ್, ಈ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಸೆಂಗೋಲ್ ರಾಜಪ್ರಭುತ್ವದ ಸಂಕೇತವಾಗಿದ್ದು ಆ ಕಾಲ ಯಾವತ್ತೋ ಮುಗದಿದೆ. ನಾವೀಗ ಜನರ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸಂಭ್ರಮಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಪುತ್ರಿಯಾಗಿರುವ ಆರ್ ಜೆಡಿ ಸಂಸದೆ ಮಿಸಾ ಭಾರತಿ ಕೂಡ ಈ ಪ್ರಸ್ತಾಪವನ್ನು ಯಾರು ಇಟ್ಟಿದ್ದರೂ ನಾನವರನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ. ಸಮಾಜವಾದಿ ಪಕ್ಷದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಹಿಂದೆ ರಾಮಚರಿತ ಮಾನಸದ ಬಗ್ಗೆ ಅವಮಾನಕಾರಿ ಹೇಳಿಕೆಯನ್ನು ನೀಡಿದ್ದ ಸಮಾಜವಾದಿ ಪಕ್ಷವು ಇದೀಗ ಸೆಂಗೋಲ್ ಅನ್ನು ಟೀಕಿಸಿದೆ. ಇದು ಭಾರತೀಯ ಅದರಲ್ಲೂ ತಮಿಳುನಾಡು ಸಂಸ್ಕೃತಿಯ ಭಾಗವಾಗಿದೆ. ಈ ಹೇಳಿಕೆ ಬಗ್ಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ಸ್ಪಷ್ಟನೆ ನೀಡಹೇಕು ಎಂದು ಒತ್ತಾಯಿಸಿದೆ. ರಾಜನಿಲ್ಲದಿದ್ದರೂ ರಾಜದಂಡ ಸಂಸತ್ ನಲ್ಲಿ ಉಳಿಯುತ್ತದೆಯೋ? ಅಥವಾ ಸಂವಿಧಾನ ಸಂಸತ್ ಆವರಿಸುತ್ತದೆಯೋ ಕಾಯ್ದು ನೋಡಬೇಕಿದೆ.