ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪತಿ ಕೂಡ ನೇಣಿಗೆ ಶರಣಾಗಿದ್ದಾನೆ Saaksha Tv
ಮಡಿಕೇರಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನ ಪೋನ್ನಂಪೇಟೆ ತಾಲೂಕಿನ ಬಿರುನಾಣಿಯಲ್ಲಿ ನಡೆದಿದೆ.
ಯುವರಾಜ್ (25) ಮತ್ತು ಪತ್ನಿ ಶಿಲ್ಪಾ (22) ಮೃತ ದಂಪತಿ. ದಂಪತಿ ಕೊಡಗಿನ ಪೋನ್ನಂಪೇಟೆ ತಾಲೂಕಿನ ಬಿರುನಾಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಯುವರಾಜ್ ಅವರು ವನ್ಯಜೀವಿ ವಿಭಾಗದ ವ್ಯಾಪ್ತಿಯ ಅರಣ್ಯ ಇಲಾಖೆಯ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಶಿವಮೊಗ್ಗ ಮೂಲದ ಇವರು ಕಳೆದ 10 ತಿಂಗಳ ಹಿಂದೆ ಮದುವೆಯಾಗಿದ್ದರು. ಬಿರುನಾಣಿಯ ಸಿ.ಸತ್ಯ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಕರ್ತವ್ಯ ಮುಗಿಸಿ ಸಂಜೆ ಮನೆಗೆ ಬಂದಾಗ ಪತ್ನಿ ವೇಲ್ನಿಂದ ಬಾತ್ರೂಮ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಇದನ್ನು ನೋಡಿದ ಯುವರಾಜ ಮನೆ ಮಾಲೀಕ ಸತ್ಯ ಅವರನ್ನು ಕರೆದು ಮೃತದೇಹವನ್ನು ಇಬ್ಬರು ಸೇರಿ ಇಳಿಸಿದ್ದಾರೆ. ನಂತರ ಸಂಬಂಧಿಕರಿಗೆ ದೂರವಾಣಿ ಕರೆಮಾಡಿ ವಿಷಯವನ್ನು ಯುವರಾಜ್ ತಿಳಿಸಿದ್ದಾನೆ. ಕೆಲವು ನಿಮಷಗಳ ನಂತರ ಯುವರಾಜ್ ಸಹ ಬಾತ್ ರೂಮ್ಗೆ ಹೋಗಿ ಪತ್ನಿ ನೇಣು ಬಿಗಿದು ಕೊಂಡಿದ್ದ ವೇಲ್ನಿಂದ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕೊಡಗು ವನ್ಯಜೀವಿ ಎ.ಸಿ.ಎಫ್. ದಯಾನಂದ್, ಶ್ರೀಮಂಗಲ ಆರ್ಎಫ್ಓ ವೀರೇಂದ್ರ ಮರಿಬಸಣ್ಣವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.









