ಪಶ್ಚಿಮ ಬಂಗಾಳ ಜನಾಂಗೀಯ ವಿವಾದಕ್ಕೆ ಕಾರಣವಾಯಿತು ಪಠ್ಯದಲ್ಲಿದ್ದ ಕಪ್ಪು ಮನುಷ್ಯನ ಚಿತ್ರ
ಕೊಲ್ಕತ್ತಾ, ಜೂನ್ 15: ಇತ್ತೀಚೆಗಷ್ಟೇ ಅಮೆರಿಕದಲ್ಲಿ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯನ ಹತ್ಯೆಯಿಂದ ಜನಾಂಗೀಯ ಘರ್ಷಣೆಗೆ ಅಮೆರಿಕ ಅಕ್ಷರಶಃ ಹೊತ್ತಿ ಉರಿಯಿತು. ಇದೀಗ ಪಶ್ಚಿಮ ಬಂಗಾಳದ ಶಾಲೆಯೊಂದು ಪಠ್ಯಪುಸ್ತಕದಲ್ಲಿ ಸೂಚಿಸಿದ ಚಿತ್ರದಿಂದ ಜನಾಂಗೀಯ ತಾರತಮ್ಯದ ಆರೋಪಕ್ಕೆ ಗುರಿಯಾಗಿದೆ.
ಪಶ್ಚಿಮ ಬಂಗಾಳದ ಬುರ್ದ್ವಾನ್ ಮುನ್ಸಿಪಲ್ ಬಾಲಕಿಯರ ಶಾಲೆಯ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಇಂಗ್ಲೀಷ್ ಪಠ್ಯ ಪುಸ್ತಕದಲ್ಲಿ ‘ಕೊಳಕು’ ಎಂಬ ಪದವನ್ನು ಸೂಚಿಸಲು ಕಪ್ಪು ಚರ್ಮದ ಮನುಷ್ಯನ ಚಿತ್ರವನ್ನು ತೋರಿಸಲಾಗಿದೆ. ಕಪ್ಪು ವರ್ಣೀಯ ಮನುಷ್ಯನ ಚಿತ್ರವನ್ನು ಬಳಸಿಕೊಳ್ಳುವ ಮೂಲಕ ಪಶ್ಚಿಮ ಬಂಗಾಳದ ಈ ಶಾಲೆಯು ಇದೀಗ ಜನಾಂಗೀಯ ತಾರತಮ್ಯದ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡಿದೆ.
ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ‘ಎಬಿಸಿ ಸ್ಟಡಿ’ ಎಂಬ
ಇಂಗ್ಲೀಷ್ ಪುಸ್ತಕದಲ್ಲಿ ‘ಯು’ ಎಂಬ ಅಕ್ಷರದಿಂದ ಪ್ರಾರಂಭವಾಗುವ ಪದಕ್ಕೆ ಅಗ್ಲೀ ಎಂದು ಉದಾಹರಣೆ ನೀಡಿದ್ದು, ಆ ಪದವನ್ನು ಸೂಚಿಸಲು ಕಪ್ಪು ಬಣ್ಣದ ಮನುಷ್ಯನ ಚಿತ್ರವನ್ನು ಬಳಸಿಕೊಳ್ಳಲಾಗಿದೆ.
ಕೋಲ್ಕತ್ತಾದ ಬಂಗಬಾಸಿ ಸಂಜೆ ಕಾಲೇಜಿನ ಪ್ರಾಧ್ಯಾಪಕರಾದ ಸುದೀಪ್ ಮಜುಂದರ್ ಅವರು ತಮ್ಮ ಮಗಳ ಪಠ್ಯ ಪುಸ್ತಕವನ್ನು ಗಮನಿಸುವಾಗ ಅದರಲ್ಲಿದ್ದ ಈ ಆಕ್ಷೇಪಾರ್ಹ ಚಿತ್ರಣ ಅವರ ಅರಿವೆಗೆ ಬಂದಿದೆ. ಆ ಕೂಡಲೇ ರಾಮಕೃಷ್ಣ ಪಲ್ಲಿ ಜಿಲ್ಲೆಯ ನಿವಾಸಿಯಾದ ಸುದೀಪ್ ಮಜುಂದರ್ ಜಿಲ್ಲಾ ಶಾಲಾ ಇನ್ಸ್ ಪೆಕ್ಟರ್ (ಪ್ರಾಥಮಿಕ, ಪೂರ್ವ ಬುರ್ದ್ವಾನ್) ಸ್ವಪನ್ ಕುಮಾರ್ ದತ್ತಾ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಶಾಲಾ ಇನ್ಸ್ ಪೆಕ್ಟರ್ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸುದೀಪ್ ಮಜುಂದರ್ ಅವರಿಗೆ ಭರವಸೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಧ್ಯಾಪಕ ಸುದೀಪ್ ಮಜುಂದರ್ ನಾನು ನನ್ನ ಮಗಳಿಗೆ ಪಾಠ ಕಲಿಸುವಾಗ ಅದರಲ್ಲಿ ‘ಕೊಳಕು’ ಎಂಬ ಪದಕ್ಕೆ ನೀಡಲಾಗಿದ್ದ ಚಿತ್ರಣವನ್ನು ನೋಡಿ ಆಘಾತವಾಯಿತು. ಇದು ಯಾವ ರೀತಿಯ ಶಿಕ್ಷಣ. ಆದ್ದರಿಂದ ತಕ್ಷಣವೇ ನಾನು ಶಾಲಾ ಇನ್ಸ್ಪೆಕ್ಟರ್ರನ್ನು ಸಂಪರ್ಕಿಸಿ ಈ ಬಗ್ಗೆ ಅವರ ಗಮನ ಸೆಳೆದು, ಕ್ರಮ ಕೈಗೊಳ್ಳುವಂತೆ ತಿಳಿಸಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಪಾರ್ಥ ಚಟರ್ಜಿಯವರು ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಾಲಾ ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಈ ಪುಸ್ತಕವು ಶಿಕ್ಷಣ ಇಲಾಖೆಯಿಂದ ಉಲ್ಲೇಖಿಸಲ್ಪಟ್ಟ ಪಠ್ಯದ ಭಾಗವಲ್ಲ ಎಂದು ಹೇಳಿದ್ದಾರೆ. ಎಳೆಯ ವಯಸ್ಸಿನ ಮಕ್ಕಳ ಮನಸ್ಸಿನಲ್ಲಿ ಪೂರ್ವಾಗ್ರಹವನ್ನು ಉಂಟು ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದಿರುವ ಶಿಕ್ಷಣ ಸಚಿವರು ಇಬ್ಬರು ಶಾಲಾ ಅಧಿಕಾರಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು. ವಿದ್ಯಾರ್ಥಿಗಳ ಪೊಷಕರು ಆ ಪುಸ್ತಗಳನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.