ನನ್ನ ಮೇಲಿನ ಪ್ರೀತಿಯಿಂದ ಮಗನ ಮದುವೆಗೆ ಹೆಚ್ಚು ಜನರು ಸೇರಿದ್ದರು – ಪಿಟಿ ಪರಮೇಶ್ವರ್ ನಾಯ್ಕ್
ದಾವಣಗೆರೆ, ಜೂನ್ 15: ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಅವರು ನಾನು ನನ್ನ ಮಗನ ವಿವಾಹಕ್ಕೆ ಆದಷ್ಟು ಕಡಿಮೆ ಜನ ಬನ್ನಿ ಎಂದು ವೀಡಿಯೋ ಮುಖಾಂತರ ಮನವಿ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಆದರೂ ನನ್ನ ಮೇಲಿನ ಪ್ರೀತಿಯಿಂದ ಮಗನ ಮದುವೆಯಲ್ಲಿ ಬಹಳಷ್ಟು ಜನ ಸೇರಿದರು ಎಂದು ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ತಮ್ಮ ಮಗನ ಮದುವೆಯಲ್ಲಿ ಕಾನೂನು ಉಲ್ಲಂಘನೆಗೆ ಸಂಬಂಧಿಸಿ ಮಾತನಾಡಿದ ಮಾಜಿ ಸಚಿವ ಪಿಟಿ ಪರಮೇಶ್ವರ್ ನಾಯ್ಕ್ ಬಂದವರೆಲ್ಲರಿಗೂ ಮಾಸ್ಕ್ ಸ್ಯಾನಿಟೈಜರ್ ನೀಡಿ ಥರ್ಮಲ್ ಸ್ಕಾನಿಂಗ್ ಮಾಡಲು ಹೇಳಿದ್ದೆ. ಆದರೆ ನಾವು ಎಣಿಸಿದಕ್ಕಿಂತ ಬಹಳಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಸೇರಿದ ಕಾರಣ ಅದು ಸಾಧ್ಯವಾಗಿಲ್ಲ. ಕೊರೋನಾ ಸಂಕಷ್ಟದ ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬಾರದೆಂದು ಮನವಿ ಮಾಡಿದ್ದೆ. ಆದರೂ ಬಂದಿದ್ದಾರೆ. ಬಂದವರನ್ನು ಹೋಗಿ ಎನ್ನಲು ಸಾಧ್ಯವೇ? ಅವರನ್ನು ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇಲ್ಲದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ನನಗೆ ಕೂಡ ಪೊಲೀಸರು ನೋಟಿಸ್ ನೀಡಿದ್ದಾರೆ. ಯಾರ ಬಗ್ಗೆಯೂ ನಾನು ಏನನ್ನೂ ಹೇಳಲು ಬಯಸುವುದಿಲ್ಲ, ಹಾಗೆಯೇ ಯಾರ ಬಗ್ಗೆಯೂ ಆರೋಪವನ್ನು ಮಾಡುವುದಿಲ್ಲ ಎಂದು ಮಾಜಿ ಸಚಿವ, ಪಿ.ಟಿ.ಪರಮೇಶ್ವರ್ ನಾಯ್ಕ್ ಹೇಳಿದರು.
ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರ ಪುತ್ರ ಅವಿನಾಶ್ ಮದುವೆ ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರದಲ್ಲಿ ಅದ್ದೂರಿಯಾಗಿ ನಡೆದಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಇಲ್ಲದೇ ನೂರಾರು ಜನರು ಭಾಗಿಯಾಗಿದ್ದರು. ಅಷ್ಟೇ ಅಲ್ಲ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ಮುಖಂಡರು ಕೂಡಾ ವಿವಾಹಕ್ಕೆ ಆಗಮಿಸಿ ನೂತನ ವಧುವರರಿಗೆ ಶುಭಾಶಯ ಕೋರಿದ್ದರು.
ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ವಿವಾಹ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಜನರು ಭಾಗವಹಿಸಬಾರದು ಎಂಬ ನಿಯಮವಿದ್ದರೂ ಮಾಜಿ ಸಚಿವ .ಟಿ.ಪರಮೇಶ್ವರ ನಾಯ್ಕ್ ಅವರ ಮಗನ ಮದುವೆಯಲ್ಲಿ ನಿಯಮ ಉಲ್ಲಂಘಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.