ಸದಾಶಿವ ಸಾಗರ.. ಕೆಳದಿಯ ಹಿರಿಯ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕನ ಸ್ಮರಣಾರ್ಥ ಕಟ್ಟಿಸಿದ ಬೃಹತ್ ಸರೋವರವಿದು. ಬರೋಬ್ಬರಿ 450 ವರ್ಷಗಳ ಸಾಗರಕ್ಕೆ ಇರುವಷ್ಟೇ ಸುದೀರ್ಘ ಇತಿಹಾಸ, ಸದಾಶಿವ ಸಾಗರ ಮಹಾಕೆರೆಗೂ ಇದೆ. ಕ್ರಮೇಣ “ಜಂಬಗಾರು ಸಾಗರ ಸದಾಶಿವ” ಎನ್ನುವ ಕೊಂಡಿ ಕಳಚಿಕೊಂಡು, ಸಾಗರವಾಗಿ ಉಳಿದಿದ್ದು ಬಹುತೇಕರಿಗೆ ಗೊತ್ತಿರುವ ಸಂಗತಿ. ಆದರೆ ಬಹಳಷ್ಟು ಜನರಿಗೆ ಗೊತ್ತಿಲ್ಲದ ಸದಾಶಿವ ಸಾಗರದ ಇತಿಹಾಸ, ಒತ್ತುವರಿ ಕರ್ಮಕಾಂಡ, ಕೆರೆ ಉಳಿಸಿ ಹೋರಾಟ ಮತ್ತು ವಾಸ್ತವ ಸ್ಥಿತಿಯ ಘೋರ ಸತ್ಯಗಳು ಬೇರೆಯೇ ಇವೆ.
ನನಗಿನ್ನೂ ನೆನಪಿದೆ, ನನ್ನ ಬಾಲ್ಯದ ದಿನಗಳಲ್ಲಿ ಗಣಪತಿ ಕೆರೆಯ ಎರಡೂ ಬದಿಯ ಮಳೆಗಾಲದಲ್ಲಿ ತುಂಬಿ ಹರಿಯುತ್ತಿತ್ತು. ತ್ಯಾಗರ್ತಿಯಿಂದ ಸಾಗರಕ್ಕೆ ಬರುವಾಗಲೆಲ್ಲಾ ಗಣಪತಿ ಕೆರೆಯ ಜಲವೈಭವ ನೋಡುವುದೇ ಪರಮಾನಂದ. ಆದರೀಗ ಅದೇ ಗಣಪತಿ ಕೆರೆ ತನ್ನೊಡಲಲ್ಲಿ ಕಲ್ಮಶಗಳನ್ನು ಹೊತ್ತು, ಜೊಂಡು ಹುಲ್ಲು ಬೆಳೆಸಿಕೊಂಡು ಕೃಶವಾಗಿ ನಿಂತಿರುವುದನ್ನು ಕಂಡಾಗ ಸಂಕಟವಾಗುತ್ತದೆ. ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಎರಡೂ ಮಗ್ಗುಲಲ್ಲಿ ವರ್ಷವಿಡೀ ತುಂಬಿಕೊಂಡಿರುತ್ತಿತ್ತು. ಕೆಲವೇ ವರ್ಷಗಳಲ್ಲಿ ಒಂದು ಮಗ್ಗುಲನ್ನು ನುಂಗಿ ನೀರುಕುಡಿಯಿತು ಸಾಗರದ ಆಡಳಿತ. ಈಗ ಇರುವ ಪ್ರಮುಖ ಕೆರೆ ಜಾಗವೂ ಹಂತಹಂತವೂ ಉಳ್ಳವರ ಹೊಟ್ಟೆ ಸೇರಿ ಸದಾಶಿವ ಸಾಗರ ಯಾನೆ ಗಣಪತಿ ಕೆರೆ ನಾಶವಾಗಿ ಇತಿಹಾಸ ಸೇರುವ ಅಪಾಯದಲ್ಲಿದೆ. ಸಂಬಂಧಪಟ್ಟ ನಗರಸಭೆ ಆಡಳಿತ ಕಣ್ಣಿಗೆ ಪಟ್ಟಿಕೊಂಡು ತೂಕಡಿಸುತ್ತಾ ಕೂತಿದ್ದರೆ, ಶಾಸಕರು ಕೆರೆಯ ದಡದಲ್ಲಿ (ಕೆರೆಯ ಬಫರ್ ಜೋನ್ ನಲ್ಲೇ) ಮಣ್ಣು ತುಂಬಿ ಎತ್ತರದ ಧ್ವಜ ನೆಡುವುದರಲ್ಲಿ ಬ್ಯುಸಿ ಇದ್ದಾರೆ. ದುಡ್ಡಿದ್ದವರ, ಒತ್ತುವರಿ ಮಾಡಿಕೊಂಡವರ ಪ್ರಭಾವದಿಂದ “ಗಣಪತಿ ಕೆರೆ ಉಳಿಸಿ” ಹೋರಾಟದ ಧ್ವನಿ ಅರಣ್ಯ ರೋದನವಾಗುತ್ತಿದೆ.
ಸಾಗರ ನಗರಕ್ಕೂ ಮತ್ತು ಸದಾಶಿವ ಸಾಗರ ಎನ್ನುವ ಒಂದು ಕಾಲದ ಮಹಾಸರೋವರಕ್ಕೂ ಭವ್ಯವಾದ ಮತ್ತು ದೀರ್ಘವಾದ ಚಾರಿತ್ರಿಕ ಹಿನ್ನೆಲೆಯಿದೆ. ಹೊಸನಗರ ಮತ್ತು ಸಾಗರದ ಮಧ್ಯೆ ಇಕ್ಕೇರಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡ ಕೆಳದಿಯ ನಾಯಕರು ಸಾಗರ ನಗರದ ಮತ್ತು ಸದಾಶಿವ ಸಾಗರದ ಕೆರೆಯ ನಿರ್ಮಾಣ ಮಾಡಿದವರು. ಕೆಳದಿಯ ಹಿರಿಯ ವೆಂಕಟಪ್ಪ ನಾಯಕ, ಚೆನ್ನಬಸವನಾಯಕ, ಶಿಸ್ತಿನ ಶಿವಪ್ಪನಾಯಕ, ರಾಣಿ ಚೆನ್ನಮ್ಮ ಇವರೆಲ್ಲಾ ಈ ಕೆರೆಯ ನಿಗಾ ನೋಡಿಕೊಂಡೇ ಬಂದವರು. ‘ನೂರಾರು ಎಕರೆ ವಿಸ್ತೀರ್ಣದಲ್ಲಿ ಸಮುದ್ರದಂತೆ ಕಾಣುತ್ತಿದ್ದ ಕೆರೆಯಾಗಿತ್ತು ಸದಾಶಿವ ಸಾಗರ’ ಎನ್ನುವ ಚಾರಿತ್ರಿಕ ಉಲ್ಲೇಖ ಕೆಳದಿ ಇತಿಹಾಸ ಬರೆದಿರುವ ಗುಂಡಾ ಜೋಯಿಸರು ಮತ್ತು ವೆಂಕಟೇಶ ಜೋಯಿಸರ ಪುಸ್ತಕದಲ್ಲಿ ಕಾಣಸಿಗುತ್ತದೆ.
ಒಂದು ಮೂಲದ ಇತಿಹಾಸದ ಪ್ರಕಾರ ಆದಿಲ್ ಶಾಹಿಗಳ ಸೈನ್ಯ ಕೆಳದಿಗೆ ಬಂದಾಗ ಸಾಗರದಲ್ಲೊಂದು ತುಕಡಿಯನ್ನು ಇಟ್ಟಿದ್ದನಂತೆ ಸೇನಾಪತಿ ರಣದುಲ್ಲಾ ಖಾನ್. ಆ ಸೈನ್ಯ ತನ್ನ ಪ್ರಾರ್ಥನೆಗಾಗಿ ಸದಾಶಿವ ಸಾಗರದ ಕೆರೆಯ ದಂಡೆಯ ಮೇಲಿದ್ದ ಗಣಪತಿ ದೇವಾಲಯಕ್ಕೆ ಹೊಂದಿಕೊಂಡಂತೆ ಮಸೀದಿ ಕಟ್ಟಿಸಿತು. ಕಾಲಾನಂತರವೂ ಮಸೀದಿ ಮತ್ತು ಗಣಪತಿ ದೇವಸ್ಥಾನ ಎರಡೂ ಒಂದೇ ಅಡ್ಡ ಗೋಡೆಯ ಆ ಕಡೆ, ಈ ಕಡೆ ಇದ್ದು ಸಾಮರಸ್ಯ ಸಾರುತ್ತಿವೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಸದಾಶಿವ ಸಾಗರ ಮಹಾಕೆರೆಯ ಒತ್ತುವರಿಯಾಗಲು ಶುರುವಾಗಿದ್ದೇ ಆ ಕಾಲದಿಂದ. ಕೆರೆಯ ಒಂದಷ್ಟು ಭಾಗವನ್ನು ಆಕ್ರಮಿಸಿಕೊಂಡಿದ್ದ ರಣದುಲ್ಲಾ ಖಾನನ ಸೈನ್ಯದ ಒಂದು ತುಕಡಿ ಆ ಕೆರೆಯನ್ನು ತನ್ನ ಕಾವಲು ನೆಲೆ ಮಾಡಿಕೊಂಡಿತು. ಮತ್ತೊಂದು ಒತ್ತುವರಿ ಭಾಗದಲ್ಲಿ ಮಸೀದಿ ನಿರ್ಮಾಣವಾಯಿತು. ಕಾಲ ಮುಂದುವರೆದ ಹಾಗೇ ಸದಾಶಿವ ಸಾಗರ ಕೆರೆ ಗಣಪತಿ ಕೆರೆಯಾಗಿ ಬದಲಾಯಿತು. ಜೊತೆಗೇ ಕೊಂಚ ಕೊಂಚವೇ ಒತ್ತುವರಿಯಾಗತೊಡಗಿತು.
ಸದಾಶಿವ ಸಾಗರ ಅಥವಾ ಗಣಪತಿ ಕೆರೆಯ ಭೌಗೋಳಿಕ ಮತ್ತು ಗುರುತ್ವ ಮಹತ್ವವೂ ಇಲ್ಲಿ ಕುತೂಹಲಕಾರಿಯಾಗಿದೆ. ಅತ್ಯಂತ ಮುಂದಾಲೋಚನೆಯಿಂದ ಮತ್ತು ದೂರದೃಷ್ಟಿಯಿಂದ ಕಟ್ಟಿಸಿದ ಕೆರೆಯಿದು. ಆನೆಸೊಂಡಿಲು ಕೆರೆಯಿಂದ, ಬಂಗಾರಮ್ಮನ ಕೆರೆಗೆ, ನಂತರ ಯೋಗೇಶ್ವರ ಕೆರೆಗೆ ಬಳಿಕ ಕ್ರಮವಾಗಿ ಹುಣಸೇಕಟ್ಟೆ ಕೆರೆ, ದೊಣ್ಣೆ ಕೆಂಚನ ಕೆರೆ ಕಂಬಳಿಕೊಪ್ಪ ಕೆರೆಗಳ ಸಂಪರ್ಕದ ನಂತರ ಕೊನೆಯದಾಗಿ ಗಣಪತಿ ಕೆರೆಗೆ ನೀರು ಹರಿದು ಬರುತ್ತಿತ್ತು. ಗ್ರಾವಿಟೇಷನಲ್ ಫೋರ್ಸ್ ಅಥವಾ ಗುರುತ್ವ ಶಕ್ತಿಯ ಹರಿವಿನ ಮೂಲಕವೇ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಕಲ್ಪಿಸಿ, ಕುಡಿಯುವ ನೀರಿನ ಅಭಾವವಾಗದಂತೆ ನಿರ್ಮಾಣ ಮಾಡಲಾಗಿತ್ತು. ಇಲ್ಲಿ ಆನೆ ಸೊಂಡಿಲು ಕೆರೆ, ಬಂಗಾರಮ್ಮನ ಕೆರೆ ಮತ್ತು ಯೋಗೀಶ್ವರ ಕೆರೆಗಳನ್ನು ಜಲದ ಕಣ್ಣು ಎಂದು ಪರಿಗಣಿಸಿದರೆ ಉಳಿದ ಕೆರೆಗಳನ್ನು ಶೇಖರಣಾ ಸಾಮರ್ಥ್ಯದ ಕೆರೆಯಾಗಿ ನಿರ್ಮಿಸಲಾಗಿತ್ತು. ಗಣಪತಿ ಕೆರೆಯೂ ಅತ್ಯಂತ ದೊಡ್ಡ ಜಲದ ಕಣ್ಣೇ ಆಗಿತ್ತು. ಈ ಸಾಲಿನಲ್ಲಿ ಅನೇಕ ಕೆರೆಗಳು ಮತ್ತು ಅವುಗಳ ಜಲದ ಕಣ್ಣು ಪೂರ್ತಿಯಾಗಿ ಒತ್ತುವರಿಯಾಗಿ ಮುಚ್ಚಿಹೋಗಿವೆ. (ಇವುಗಳಲ್ಲಿ ಆನೆಸೊಂಡಿಲು ಕೆರೆ ಮತ್ತು ಚಿಪ್ಪಳಿಯ ಕೆರೆಗಳನ್ನು ಜೀವಜಲ ಕಾರ್ಯಪಡೆಯ ಹೋರಾಟಗಾರ ಅಖಿಲೇಶ್ ಚಿಪ್ಳಿಯವರ ನಿರಂತರ ಹೋರಾಟ ಮತ್ತು ಪ್ರಯತ್ನದ ಫಲವಾಗಿ ಹೂಳೆತ್ತಿ ಜಲದ ಕಣ್ಣು ತೆರೆಸಿದ್ದು ಸದ್ಯದ ಆಶಾದಾಯಕ ಬೆಳವಣಿಗೆ)
1952ರಲ್ಲಿ ಬೆಂಗಳೂರು ಹೊನ್ನಾವರ ಹೆದ್ದಾರಿಯಾದಾಗ ಗಣಪತಿ ಕೆರೆಯನ್ನು ಮಧ್ಯೆ ಇಬ್ಭಾಗ ಮಾಡಲಾಯ್ತು. ಆಗ ಯಾರಾದರೂ ಬುದ್ಧಿವಂತ ಎಂಜಿನಿಯರ್ ಕೊಂಚ ಸಮಯ ಪ್ರಜ್ಞೆ ತೋರಿದ್ದರೆ ಇಲ್ಲೊಂದು ಸೇತುವೆ ನಿರ್ಮಾಣ ಮಾಡಿ ಕೆರೆಯ ವಿಸ್ತಾರವನ್ನು ಉಳಿಸಿಕೊಳ್ಳಬಹುದಿತ್ತು. ಅದಾದ ನಂತರ ಗಣಪತಿ ಕೆರೆಗೆ ನಿಜವಾದ ಕಂಟಕ ಎದುರಾಗಿದ್ದು 1999ರಲ್ಲಿ, ಆಗ ಶಾಸಕರಾಗಿದ್ದವರು ಕಾಗೋಡು ತಿಮ್ಮಪ್ಪ, ಸಾಗರ ಪುರಸಭೆಯ ಅಧ್ಯಕ್ಷರಾಗಿದ್ದವರು ತಿ.ನ ಶ್ರೀನಿವಾಸ್. ರಾಷ್ಟ್ರೀಯ ಹೆದ್ದಾರಿಯ ಎಡಬದಿಯ ಜಾಗದಲ್ಲಿ ಸಾಗರದ ತ್ಯಾಜ್ಯಗಳನ್ನು ಸುರಿಯುವಿಕೆ ಶುರುವಾಯ್ತು. ಮೊದಮೊದಲು ಇದಕ್ಕೆ ಭಾರೀ ವಿರೋಧ ವ್ಯಕ್ತವಾದಾಗ ತಾತ್ಕಾಲಿಕವಾಗಿ ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ ಎಂದು ಪುರಸಭೆ ಹೇಳಿಕೊಂಡಿತಾದ್ರೂ ಕ್ರಮೇಣ ಕೆರೆಯ ಈ ಭಾಗ ಸಂಪೂರ್ಣವಾಗಿ ಕಾಣೆಯಾಗುವ ತನಕ ಸಾಗರದ ಆಡಳಿತ ಎಚ್ಚೆತ್ತುಕೊಳ್ಳಲೇ ಇಲ್ಲ. ಕಾಗೋಡು ತಿಮ್ಮಪ್ಪನವರೂ ಈ ಬಗ್ಗೆ ಮುತುವರ್ಜಿ ತೋರದ ಕಾರಣ ಒಂದು ಭಾಗದ ಕೆರೆ ಸಂಪೂರ್ಣ ಪಾರ್ಶ್ವವಾಯು ಪೀಡಿತವಾಯ್ತು. ಗಣಪತಿ ಕೆರೆಯ ಜಲದ ಕಣ್ಣು ಶಾಶ್ವತವಾಗಿ ಮುಚ್ಚಿಹೋಯ್ತು. ಜೊತೆಗೆ ಗಣಪತಿ ಕೆರೆಗೆ ಇದ್ದ ಕಂಬಳಿಕೊಪ್ಪ ಕೆರೆಯ ಸಂಪರ್ಕವೂ ತಪ್ಪಿ ಹೋಯಿತು. ಆ ಜಾಗದಲ್ಲಿ ಸಂತೇ ಮೈದಾನವಾಗಿದೆ ಈಗ.
2000ನೇ ಇಸವಿಯಿಂದ ಈವರೆಗೆ ಗಣಪತಿ ಕೆರೆ ವ್ಯಾಪಕವಾಗಿ ಒತ್ತುವರಿಯಾಗಿದೆ. ಪ್ರಭಾವಿ ಶ್ರೀಮಂತರು ಕೆರೆಯ ಮೇಲೆ ಮಣ್ಣು ತುಂಬಿ, ಲೇಕ್ ವ್ಯೂ ಹೋಟೆಲ್, ಲಾಡ್ಜ್ ಬಾರ್ ಎಂಡ್ ರೆಸ್ಟೋರೆಂಟ್ ನಿರ್ಮಿಸಿದ್ದಾರೆ. ಕೆರೆಯ ಜಾಗದಲ್ಲೇ ಪ್ರಜ್ವಲ್ ಮೋಟಾರ್ಸ್ ಹೋಂಡಾ ಶೋ ರೂಮ್ ನಿರ್ಮಾಣವಾಯಿತು. ಕೆರೆಯ ಬಫರ್ ಜೋನ್ ನಲ್ಲಿ ಸಾಗರದ ಸಿರಿವಂತರು ಸೈಟುಗಳನ್ನು ನಿರ್ಮಿಸಿ ಮನೆ ಕಟ್ಟಿಕೊಂಡರು. ಅತ್ತ ಕಡೆ ಮಸೀದಿಯಿಂದ ಇತ್ತ ಕಡೆ ರಾಘವೇಂದ್ರ ಸ್ವಾಮಿ ಮಠದಿಂದ ತ್ಯಾಜ್ಯ ನೀರು ಕೆರೆಯ ಒಡಲು ಸೇರತೊಡಗಿತು. ಈಗಂತೂ ಸಾಗರದ ದೊಡ್ಡ ಡ್ರೈನೇಜ್ ಕಾಲುವೆ ಗಣಪತಿ ಕೆರೆಯ ಹೊಟ್ಟೆಗೆ ನುಗ್ಗಿದೆ. ಇದೆಲ್ಲದಕ್ಕಿಂತ ಆತಂಕಕಾರಿ ಸಂಗತಿ ಎಂದರೆ ಈಗಿರುವ 24 ಚಿಲ್ಲರೆ ಎಕರೆ ವಿಸ್ತೀರ್ಣದ ಗಣಪತಿ ಕೆರೆಗೆ ಮಣ್ಣು ತುಂಬಿ 2 ಎಕರೆ ಸುತ್ತಳತೆಯಲ್ಲಿ ವಾಕಿಂಗ್ ಪಾಥ್ ಮಾಡುತ್ತಾರಂತೆ. ಜೊತೆಗೆ ಬೋಟಿಂಗ್ ನಡೆಸುವ ಯೋಜನೆಯೂ ಇದೆ. ಪ್ರಾಯೋಗಿಕವಾಗಿ ಗಣಪತಿ ಜಾತ್ರೆಯ ಸಂದರ್ಭದಲ್ಲಿ ಬೋಟಿಂಗ್ ನಡೆಸಿ ಶಾಸಕರಾದ ಹಾಲಪ್ಪನವರು ಮತ್ತು ಮಾಜಿ ಶಾಸಕರಾದ ತಿಮ್ಮಪ್ಪನವರೂ ದೋಣಿವಿಹಾರ ನಡೆಸಿದ್ದಾರೆ. ಈಗ ಹೊಸ ಬೆಳವಣಿಗೆ ಸಾಗರದ ಜನರಲ್ಲಿ ದೇಶಪ್ರೇಮ ಉಕ್ಕಿಸಲು 160 ಅಡಿ ಎತ್ತರದ ತ್ರಿವರ್ಣ ಧ್ವಜ ಸ್ಥಂಭವನ್ನೂ ನೆಡಲಾಗಿದೆ. ಸಾಗರದ ಶಾಸಕರು ಗಣಪತಿ ಕೆರೆ ಅಂಗಳದ ಜಾಗದಲ್ಲಿರುವ ಜಮೀನು ಖರೀದಿ ಮಾಡಿದ್ದಾರೆ ಎನ್ನುವ ಗುಸುಗುಸು ಕೇಳಿ ಬಂದಿದೆ. ಒಂದು ಕಡೆ ಕಲುಷಿತ ತ್ಯಾಜ್ಯ ನೀರು, ಮತ್ತೊಂದು ಕಡೆ ಹೂಳು ಮಗದೊಂದು ಕಡೆ ಒತ್ತುವರಿಗಳಿಂದ ಬಸವಳಿದಿರುವ ಗಣಪತಿ ಕೆರೆ ಕೊನೆಯ ದಿನಗಳನ್ನು ಎಣಿಸುವ ವೃದ್ಧ ಮಹಾಮಹಿಮ ಭೀಷ್ಮನಂತೆ ಸೋತು ಮಲಗಿದೆ.
ಗಣಪತಿ ಕೆರೆ ಸಾಗರದ ಪಾಲಿನ ಸಾಂಸ್ಕೃತಿಕ, ಚಾರಿತ್ರಿಕ ವೈಭವ; ಸಾಗರದ ಇತಿಹಾಸ ಹಾಗೂ ನಾಗರೀಕತೆ ಬೆಳೆದು ಬಂದ ಕಾಲಕ್ಕೆ ಜೀವಂತ ಸಾಕ್ಷಿ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸಾಗರ ಜಂಬಗಾರಿನ ನಿಜವಾದ ಅಸ್ಮಿತೆ ಸದಾಶಿವ ಸಾಗರ ಕೆರೆ. ಈ ಕೆರೆಯನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕು. ಕೆರೆಯ ಕಲ್ಮಶ ಶುದ್ಧಿಯಾಗಬೇಕು. ಜೊಂಡುಹುಲ್ಲು ಹೂಳುಗಳನ್ನೆತ್ತಿ ಜಲದ ಕಣ್ಣು ತೆರೆಸಬೇಕು. ಒತ್ತುವರಿ ತೆರವುಗೊಳಿಸಿ, ಉಳಿದ ಆರೂ ಕೆರೆಗಳೊಂದಿಗೆ ಸಂಪರ್ಕ ಕಲ್ಪಿಸಬೇಕು ಎನ್ನುವುದು ಸಾಗರದ ಜೀವಜಲ ಕಾರ್ಯಪಡೆಯ ಸಂಕಲ್ಪ ಮತ್ತು ಹೋರಾಟ. ಆದರೆ ಸಾಗರದ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆ ಮೊದಲಿನಿಂದಲೂ ಈ ಹೋರಾಟವನ್ನು ತುಳಿಯುತ್ತಲೇ ಬಂದಿದೆ. ಅಖಿಲೇಶ್ ಚಿಪ್ಳಿಯಂತಹ ಕೆಲವು ಪ್ರಕೃತಿ ಮತ್ತು ಪರಿಸರ ಹೋರಾಟಗಾರರು ಛಲ ಬಿಡದೆ ಅವಿರತ ಹೋರಾಟ ನಡೆಸುತ್ತಲೇ ಇದ್ದಾರೆ. ಇವರ ಹೋರಾಟಕ್ಕೆ ಭವಿಷ್ಯದಲ್ಲಿ ಜಯ ಸಿಕ್ಕಿದ್ದೇ ಆದರೆ, ಸದಾಶಿವ ಸಾಗರ ಅಥವಾ ಗಣಪತಿ ಕೆರೆಯ ಭವ್ಯತೆ ಮತ್ತೆ ಮೆರಗು ಕಟ್ಟಿಕೊಳ್ಳುತ್ತದೆ, ಈ ಸಾಲಿನ ಏಳೂ ಕೆರೆಗಳ ಅಭಿವೃದ್ಧಿಯಾಗುತ್ತದೆ. ಇಷ್ಟಾದರೆ ಸಾಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಪ್ಪುತ್ತದೆ. ಶರಾವತಿಯಿಂದ ನೀರು ಕೊಳವೆ ಮಾರ್ಗದಲ್ಲಿ ಸಾಗರಕ್ಕೆ ಹರಿಸಬೇಕಾದ ಕರ್ಮ ತಪ್ಪುತ್ತದೆ. ಸಾಗರದ ಅಸ್ಮಿತೆ ಉಳಿದಂತಾಗುತ್ತದೆ. ಸಾಗರದ ಶಾಸಕರಾದ ಹರತಾಳು ಹಾಲಪ್ಪನವರು, ಹಿರಿಯ ಸಮಾಜವಾದಿ ಕಾಗೋಡು ತಿಮ್ಮಪ್ಪನವರು ಮತ್ತು ನಗರಸಭೆಯ ಆಡಳಿತ ಈಗಲಾದರೂ ಎಚ್ಚೆತ್ತುಕೊಂಡು ಕೈಜೋಡಿಸಬೇಕಷ್ಟೆ. ಹಾಗಾಗಲಿ ಎಂದು ಆಶಿಸೋಣ.
-ವಿಭಾ (ವಿಶ್ವಾಸ್ ಭಾರದ್ವಾಜ್)
ಮಾಹಿತಿ ಕೃಪೆ: ಅಖಿಲೇಶ್ ಚಿಪ್ಳಿ, ಹೆಚ್.ಬಿ ರಾಘವೇಂದ್ರ, ಅಜಯ್ ಕುಮಾರ್ ಶರ್ಮಾ








