ಮಹೇಂದ್ರ ಸಿಂಗ್ ಧೋನಿಯ ಮೇಲೆ ಗಂಭೀರ್ ಸಿಟ್ಟು ಇನ್ನೂ ಕಮ್ಮಿಯಾಗಿಲ್ವಾ ?
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಟೀಮ್ ಇಂಡಿಯಾದ ಆರಂಭಿಕ ಆಟಗಾರ ಗೌತಮ್ ಗಂಭೀರ್ ನಡುವಿನ ಸಂಬಂಧ ಅಷ್ಟಕ್ಕಷ್ಟೇ.. ವಿಚಾರಗಳು ಅಥವಾ ವಿಷ್ಯಯಗಳು ಏನೇ ಇರಲಿ ಸದಾ ನೇರ ಮತ್ತು ಖಡಕ್ ಮಾತಿನಿಂದಲೇ ಹೇಳುವುದು ಗಂಭೀರ್ ಅವರ ಜಾಯಮಾನ.
ಈ ಹಿಂದೆ ಧೋನಿ ನಾಯಕತ್ವದ ಯಶಸ್ಸಿಗೆ ಪ್ರಮುಖ ಕಾರಣ ಸೌರವ್ ಗಂಗೂಲಿ ಎಂದಿದ್ದ ಗಂಭೀರ್, ಈಗ ಟೀಮ್ ಇಂಡಿಯಾಗೆ ಧೋನಿಯ ಕೊಡುಗೆ ಏನು ಇಲ್ಲ ಎಂಬಂತೆ ಹೇಳಿಕೆಯನ್ನು ನೀಡಿದ್ದಾರೆ. ಹೌದು, ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾದಲ್ಲಿ ಹಲವಾರು ಪ್ರತಿಭಾವಂತ ಆಟಗಾರರ ಪ್ರತಿಭೆ ಬೆಳಕಿಗೆ ಬಂದಿತ್ತು. ಆದ್ರೆ ಗಂಗೂಲಿಯಂತೆ ಧೋನಿ ಆಟಗಾರರನ್ನು ಬೆಳೆಸಲಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
ಗಂಗೂಲಿ ನಾಯಕತ್ವದಲ್ಲಿ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ಖಾನ್ ನಂತಹ ಆಟಗಾರರನ್ನು ಬೆಳಕಿಗೆ ಬಂದಿದ್ದರು. ಅಲ್ಲದೆ ಇವರೆಲ್ಲಾ ವಿಶ್ವದ ಶ್ರೇಷ್ಠ ಆಟಗಾರರಾಗಿ ಹೊರಹೊಮ್ಮಿದ್ದರು. ಹೀಗಾಗಿಯೇ ಧೋನಿಗೆ 2011ರ ವಿಶ್ವಕಪ್ ಗೆಲ್ಲಲು ಸಾಧ್ಯವಾಯ್ತು. ನಂಬರ್ ವನ್ ಟೆಸ್ಟ್ ತಂಡವಾಗಿ ಹೊರಹೊಮ್ಮಲು ಸಾಧ್ಯವಾಯ್ತು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಆದ್ರೆ ಧೋನಿ ತನ್ನ ನಾಯಕತ್ವವನ್ನು ವಿರಾಟ್ ಕೊಹ್ಲಿಗೆ ಬಿಟ್ಟುಕೊಟ್ಟಾಗ ಹೇಳಿಕೊಳ್ಳುವಂತಹ ವಿಶ್ವ ಶ್ರೇಷ್ಠ ಆಟಗಾರರನ್ನು ಕೊಡುಗೆಯಾಗಿ ನೀಡಲಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರಿತ್ ಬೂಮ್ರಾ ಅವರನ್ನು ಬಿಟ್ರೆ ತಂಡದಲ್ಲಿ ಹೇಳಿಕೊಳ್ಳುವಂತ ಶ್ರೇಷ್ಠ ಆಟಗಾರರಿಲ್ಲ ಎಂಬುದು ಗಂಭೀರ್ ಅವರ ಅಭಿಮತವಾಗಿದೆ.
ಒಟ್ಟಿನಲ್ಲಿ ಗೌತಮ್ ಗಂಭೀರ್ ಧೋನಿಯನ್ನು ಯಶಸ್ವಿ ನಾಯಕ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಧೋನಿ ಒಬ್ಬ ಅದೃಷ್ಟವಂತ ನಾಯಕ ಅಂತ ಹೇಳಿರೋದು. ಯಾಕಂದ್ರೆ ಧೋನಿ ತಂಡದಲ್ಲಿ ಗಂಗೂಲಿ ಬೆಳೆಸಿರುವಂತಹ ಆಟಗಾರರು ಇದ್ರು. ಹಾಗಾಗಿ ಅವರಿಗೆ ತಂಡವನ್ನು ಮುನ್ನಡೆಸುವುದು ಕಷ್ಟವಾಗಲಿಲ್ಲ. ಆದ್ರೆ ಧೋನಿ ವಿರಾಟ್ ಕೊಹ್ಲಿಗೆ ನಾಯಕತ್ವ ಪಟ್ಟವನ್ನು ಹಸ್ತಾಂತರ ಮಾಡುವಾಗ ಅಪ್ರತಿಮ ಆಟಗಾರರನ್ನು ಬೆಳೆಸಿಲ್ಲ ಎಂಬುದು ಗಂಭೀರ್ ಅವರ ಆರೋಪವಾಗಿದೆ. ಇಲ್ಲಿ ಗಂಭೀರ್ ಧೋನಿ ವಿರುದ್ಧ ನೇರವಾಗಿ ಆರೋಪ ಮಾಡುತ್ತಿಲ್ಲ. ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ತನ್ನ ಮಾತಿನಿಂದಲೇ ಜರೆಯುತ್ತಿದ್ದಾರೆ.
ಇದಕ್ಕೆ ಕಾರಣವೂ ಇದೆ. 2013ರ ನಂತರ ಧೋನಿ ಗಂಭೀರ್, ಸೆಹ್ವಾಗ್ ಮತ್ತು ಸಚಿನ್ ಮೇಲೆ ಧೋನಿ ಹೆಚ್ಚಿನ ಒಲವು ತೋರಿಸುತ್ತಿರಲಿಲ್ಲ. ತಂಡದಲ್ಲಿ ರೋಟೇಷನ್ ಪಾಲಿಸಿಯನ್ನು ಜಾರಿಗೆ ತಂದಿದ್ದರು. ಅಲ್ಲದೆ ಫೀಲ್ಡಿಂಗ್ ಕಡೆಗೂ ಹೆಚ್ಚಿನ ಗಮನ ಹರಿಸುತ್ತಿದ್ದರು. ಇದ್ರಿಂದ ಗಂಭೀರ್ ಮತ್ತು ಸೆಹ್ವಾಗ್ ಟೀಮ್ ಇಂಡಿಯಾದಿಂದ ದೂರವೇ ಉಳಿದಿದ್ದರು. ಸಚಿನ್ ಆ ನಂತರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. 2013ರಲ್ಲಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಟೀಮ್ ಇಂಡಿಯಾದ ಆರಂಭಿಕ ಸ್ಥಾನವನ್ನು ಕಸಿದುಕೊಂಡ ನಂತರ ಸೆಹ್ವಾಗ್ ಮತ್ತು ಗಂಭೀರ್ಗೆ ಟೀಮ್ ಇಂಡಿಯಾದ ಬಾಗಿಲು ಕೂಡ ಮುಚ್ಚಿತ್ತು. ಇದು ಗಂಭೀರ್ ಸಿಟ್ಟು, ನಿರಾಸೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿಯೇ ಧೋನಿಯನ್ನು ಕಂಡ್ರೆ ಗಂಭೀರ್ಗೆ ಅಷ್ಟಕ್ಕಷ್ಟೇ. ಅದಕ್ಕಾಗಿಯೇ ಗಂಭೀರ್ ಹೇಳುತ್ತಿರುವುದು, ಅಂಕಿ ಅಂಶಗಳಲ್ಲಿ ಮಾತ್ರ ಧೋನಿ ಯಶಸ್ವಿ ನಾಯಕ ಅಂತ.