ಭಾವೈಕ್ಯತೆಯ ಕೊಂಡಿ ಇಬ್ರಾಹಿಂ ಸುತಾರ್
ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರಿದ ದೇಶ. ಈ ದೇಶದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌಧ, ಜೈನ, ಪಾರ್ಸಿ ಇನ್ನೂ ಅನೇಕ ಧರ್ಮಗಳು ನೆಲೆಸಿವೆ. ಇಂತಹ ದೇಶದಲ್ಲಿ ಭಾವೈಕ್ಯತೆಯ ಸಾರವನ್ನು ಸರಾಲು ಸಂತ ಕಬೀರರು, ಶಿಶುನಾಳ ಶರೀಪರು ಹೀಗೆ ಹಲವಾರು ಪುಣ್ಯ ಜೀವಿಗಳು ಆಗಿ ಹೋಗಿದ್ದಾರೆ. ಇಂತವರ ಸಾಲಿಗೆ ಕನ್ನಡದ ಕಬೀರ ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಕೂಡ ಸೇರುತ್ತಾರೆ. ಇಬ್ರಾಹಿಂ ಸುತಾರ ಅವರು ತಮ್ಮ ಭಾವೈಕ್ಯತೆಯ ತತ್ವಪದ, ಭಜನೆ, ಪ್ರವಚನ ಮತ್ತು ಸಮಾಜ ಸೇವೆ ಮುಖಾಂತರ ಮನೆ ಮಾತಾದವರು.
ಇಬ್ರಾಹಿಂ ಎನ್. ಸುತಾರ್ ಅವರು ಮೇ 10, 1940 ರಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಮುಸ್ಲಿಂ ಧರ್ಮದ ಬಡತನ ಮನೆಯಲ್ಲಿ ಜನಿಸಿದರು. ಇವರ ತಂದೆ ಮಹಾಲಿಂಗಪುರದ ನಬಿಸಾಹೇಬ್, ತಾಯಿ ಅಮೀನಾಬಿ. ಇವರ ಮನೆ ಆರ್ಥಿಕವಾಗಿ ಸದೃಢರಾಗಿಲ್ಲದಿದ್ದರಿಂದ ಇವರು ಮೂರನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದರು.
ಇವರು ಮುಂದೆ ನೇಕಾರ ವೃತ್ತಿ ಮೈಗೂಡಿಸಿಕೊಂಡು ತಮ್ಮ ಧರ್ಮದ ಪದ್ಧತಿಗಳನ್ನು ಮತ್ತು ಆಚರಣೆಗಳನ್ನು ಪಾಲಿಸುತ್ತಾ ನಡೆದರು. ದಿನಕ್ಕೆ 5 ಬಾರಿ ಮಸೀದಿಯಲ್ಲಿ ನಮಾಜು, ಕುರಾನ್ ಅಧ್ಯಯನ ಮಾಡಿದರು. ಹೀಗೆ ತಮ್ಮ ಧರ್ಮದ ಆಚಾರ-ವಿಚಾರಗಳನ್ನು ಅನುಸರಿಸುತ್ತಾ ಸಾಗುವಾಗ ಹಿಂದು ಧರ್ಮದ ಆಚಾರ-ವಿಚಾರ, ಪದ್ಧತಿಗಳ ಕಡೆಗೆ ಒಲವು ಹೆಚ್ಚಾಯಿತು.
ನಂತರ ದಿನಗಳಲ್ಲಿ ಇವರು ಮಹಾಲಿಂಗಪುರದ ಭಜನಾ ಮಂಡಳಿಗೆ ಸೇರಿಕೊಂಡರು, ಅಲ್ಲಿ ಇವರು ತತ್ವ ಪದಗಳು (ತತ್ವಶಾಸ್ತ್ರದ ಕವನಗಳು), ವಚನಗಳು ಮತ್ತು ಮಹಾನ್ ಸಂತರ ಪುಸ್ತಕಗಳನ್ನು ಓದಿಕೊಂಡರು. ಮುಂದೆ ಇವರು ಹಿಂದೂ ಮತ್ತು ಮುಸ್ಲಿಂರನ್ನು ಒಳಗೊಂಡ ಏಳು ಜನ ಸ್ನೇಹಿತರ ತಂಡವೊಂದನ್ನು ಕಟ್ಟಿಕೊಂಡರು. ಈ ತಂಡಕ್ಕೆ ‘ಭಾವೈಕ್ಯ ಜಾನಪದ ಸಂಗೀತ ಮೇಳ’ (ಸಾಮರಸ್ಯಕ್ಕಾಗಿ ಜಾನಪದ ಸಂಗೀತ ಬ್ಯಾಂಡ್) ಅಂತ ಹೆಸರಿಟ್ಟರು. ಈ ತಂಡದ ಮೂಲಕ ಇವರು ಬಾಗಲಕೋಟೆ ಜಿಲ್ಲೆಯಾದ್ಯಂತ ತತ್ವಪದ ಸಾರುತ್ತಾ ನಡೆದರು.
ಇವರ ತತ್ವಪದಗಳನ್ನು ಕೇಳಲು ಅನೇಕ ಜನರು ಸೇರುತ್ತಿದ್ದರು. ಇವರ ತತ್ವ ಪದಗಳು ನಾಡಿನಾದ್ಯಂತ ಪ್ರಸಿದ್ಧಿ ಪಡೆದವು. ಮುಂದೆ ಇವರಿಗೆ ಕರ್ನಾಟಕದ ವಿವಿಧ ಭಾಗಗಳಿಂದ ಆಹ್ವಾನಗಳು ಬಂದವು ಅಲ್ಲಿ ತಮ್ಮ ತತ್ವಪದಗಳ ಮುಖಾಂತರ ಜನರಿಗೆ ಭಾವೈಕ್ಯತೆಯ ಸಂದೇಶ ಸಾರಿದರು. ಇವರು ಭಗವದ್ಗೀತೆ, ಬೈಬಲ್, ಅಧ್ಯಯನ ಮಾಡಿದರು. ಹಾಗೇ ನಿಜಗುಣ ಶಿವಯೋಗಿಗಳು ಬರೆದಂತಹ ಅನುಭವಸಾರ, ಜ್ಞಾನ ಪ್ರತಿಪಾಧನ ಸ್ಥಳ ಮಾತ್ರ, ಪರಮಾನುಬೋದೆ, ಪರಾಮರ್ಥಗೀತೆಗಳನ್ನು ಅಧ್ಯಯನ ಮಾಡಿ ನಿಜಗುಣರ ಶಾಸ್ತ್ರವನ್ನು ಜೊತೆಗೆ ಶರಣರ ವಚನಗಳನ್ನು ತಿಳಿದುಕೊಂಡು ನಾಡಿನ ಮುಮುಕ್ಷುಗಳಿಗೆ ಉಣಬಡಿಸಿದರು.
1970 ರಲ್ಲಿ ಅವರು ಸಾಮರಸ್ಯ ಜಾನಪದ ಸಂಗೀತ ಮೇಳವನ್ನು (ಕಲಾವಿದರ ತಂಡ) ಕಟ್ಟಿಕೊಂಡು ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ದೆಹಲಿ, ಗೋವಾ, ಒಡಿಶಾ ಮತ್ತು ರಾಜಸ್ಥಾನದಲ್ಲಿ ಭಕ್ತಿ ಗೀತೆಗಳನ್ನು, ತತ್ವ ಪದಗಳನ್ನು ಇಬ್ರಾಹಿಂ ಸುತಾರ್ ಮತ್ತು ಅವರ ತಂಡದ ಸದಸ್ಯರು ಹಾಡುವ ಮುಖಾಂತರ ಜನರಿಗೆ ಭಾವೈಕ್ಯದ ಸಾರವನ್ನು ಸಾರಲು ಪ್ರಾರಂಭಿಸಿದರು. ಅಲ್ಲದೇ ಅವರು ನೂರಾರು ಕವನಗಳನ್ನು ಬರೆದಿದ್ದಾರೆ ಮತ್ತು ಧ್ವನಿ ಸಂಕಲನಗಳನ್ನು ಬಿಡುಗಡೆ ಮಾಡಿದ್ದಾರೆ.
ಇವರು ಪ್ರತಿ ವರ್ಷ ಮಳೆಗಾಲದಲ್ಲಿ, ಅಂದರೆ ಶ್ರಾವಣ ಮಾಸದಲ್ಲಿ ‘ಶ್ರಾವಣಕೊಂದು ಸಮಾಜ ಸೇವೆ’ (ಪ್ರತಿ ಶ್ರಾವಣ ಮಾಸಕ್ಕೆ ಸಾಮಾಜಿಕ ಕಾರ್ಯ) ಎಂಬ ತಿಂಗಳ ಅವಧಿಯ ಪ್ರವಚನ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ.
ಭಾವೈಕ್ಯತೆಯ ಸಾರವನ್ನು ಸಾರುವ ಜೊತೆಗೆ ಸಮಾಜ ಸೇವಾ ಕಾರ್ಯದಲ್ಲಿ ಕೂಡ ತೊಡಗಿಸಿಕೊಂಡಿದ್ದರು. ಇವರು ತಮ್ಮ ಪ್ರದರ್ಶನಗಳಲ್ಲಿ ಸಂಗ್ರಹಿಸಿದ ಹಣವನ್ನು ಬಳಸಿ ಯೋಗ ಸೆಷನ್ಗಳು, ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸಿದರು, ಹಳ್ಳಿಗಳಲ್ಲಿ ನೀರಿನ ಟ್ಯಾಂಕ್ಗಳನ್ನು ಸ್ಥಾಪಿಸಿದರು ಮತ್ತು ಸರ್ಕಾರಿ ಶಾಲೆಗಳಿಗೆ ತರಗತಿ ಕೊಠಡಿಗಳನ್ನು ನಿರ್ಮಿಸಿಕೊಟ್ಟರು.
1988ರಲ್ಲಿ ಅಥಣಿ ತಾಲೂಕಿನ ಶೇಗುಣಶಿ ಗ್ರಾಮಸ್ಥರ ಸಹಕಾರದಿಂದ 9 ಕಿ.ಮೀ ರಸ್ತೆಯನ್ನು ಒಂದು ವಾರದ ಅವಧಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಬಡವರಿಗೆ ಶಾಲೆಗಳು ಮತ್ತು ಮದುವೆ ಮಂಟಪಗಳನ್ನು ಮತ್ತು ಭಕ್ತರಿಗೆ ವಸತಿಗೃಹಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1992 ರಿಂದ, ಅವರು ‘ದೇವದಾಸಿ’ ಪದ್ಧತಿಯಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಲು ಮತ್ತು ಡಿ-ಅಡಿಕ್ಷನ್ ಡ್ರೈವ್ಗಳನ್ನು ಮುನ್ನಡೆಸುವಲ್ಲಿ ತೊಡಗಿಸಿಕೊಂಡರು.
ಸುತಾರ್ ಅವರ ಜನರಲ್ಲಿ ಭಾವೈಕ್ಯತೆ ಮೂಡಿಸುವ ಕಾರ್ಯಕ್ಕೆ ಮತ್ತು ಸಮಾಮುಕಿ ಕಾರ್ಯಕ್ಕೆ ರಾಜ್ಯ ಸರಕಾರವು 1995ರಲ್ಲಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿದೆ. ಅಲ್ಲದೇ 2018ರಲ್ಲಿ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಗುರುವಿನ ಸೇವಾ ಸದಾ ಮಾಡುವವರಿಗೆ, ಅರಿವಿನ ಮಾತುಗಳಾಡುವವರಿಗೆ, ಅರಿಗಳನ್ನಾರನ್ನು ದೂಡುವವರಿಗೆ ಶರಣರ ಸಂಗದೊಳಗೆ ಕೂಡುವವರಿಗೆ, ಮನೆಯೊಳಗಿದ್ದರು ಮುಕುತಿ ||
ಪೂಜ್ಯ ಶ್ರೀ ಇಬ್ರಾಹಿಂ ಸುತಾರ್ ಅವರು ಇಂದು ನಮ್ಮನ್ನು ದೈಹಿಕವಾಗಿ ಅಗಲಿರಬಹುದು, ಆದರೆ ಅವರ ವಾಣಿ, ಅವರ ಚಿಂತನೆ ನಾಡಿನ ಮುಮುಕ್ಷಗಳ ಎದೆಯಲ್ಲಿ ಸದಾ ನಂದಾ ದೀಪದಂತೆ ಬೆಳಗುತ್ತಿರುತ್ತದೆ.








