ಮಡಿಕೇರಿ: ವಿದ್ಯಾರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಹಬ್ಬಕ್ಕೆಂದು ಊರಿಗೆ ಬಂದು ರಜೆ ಮುಗಿಸಿ ಮರಳಿ ಹೋದ ಮಗ ಒಂದು ತಿಂಗಳು ಕಳೆದರೂ ಸಿಕ್ಕಿಲ್ಲ ಎಂದು ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ಜಿಲ್ಲೆಯ ಗೋಣಿಕೋಪ್ಪದಿಂದ ದಕ್ಷಿಣ ಕನ್ನಡ ಕಾಲೇಜೊಂದರಲ್ಲಿ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಯನ್ನು ಸೇರಿಸಲಾಗಿತ್ತು.
ದೀಕ್ಷಿತ್ (17) ನಾಪತ್ತೆಯಾದ ಬಾಲಕ. ಆದರೆ, ಕಳೆದ ದೀಪಾವಳಿ ರಜೆಗೆಂದು ಕಾಲೇಜಿನಿಂದ ಆಗಮಿಸಿದ್ದ. ಮಗ ತಾಯಿಯೊಂದಿಗೆ ದೀಪಾವಳಿ ಹಬ್ಬ ಖುಷಿ ಖುಷಿಯಿಂದಲೇ ಆಚರಿಸಿ ಸಂಭ್ರಮಿಸಿದ್ದ. ದೀಪಾವಳಿ ರಜೆ ಮುಗಿಯುತ್ತಿದ್ದಂತೆಯೇ ಎಂದಿನಂತೆ ಕಾಲೇಜಿನ ಹಾಸ್ಟೆಲ್ಗೆ ತೆರಳಲು ಮಗ ಅಣಿಯಾಗಿದ್ದ ಹೆತ್ತ ತಾಯಿ ತನ್ನ ಮಗನಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ತುಂಬಿ ಬಸ್ ನಿಲ್ದಾಣದವರೆಗೂ ಬಂದು ಬಿಟ್ಟಿದ್ದರು. ಆದರೆ, ಆನಂತರ ಆತ ಹಾಸ್ಟೆಲ್ ಗೆ ಬಂದಿಲ್ಲ ಎನ್ನುವುದು ಗೊತ್ತಾಗಿದೆ. ಹೀಗಾಗಿ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.








