ವೈಕುಂಠ ಏಕಾದಶಿ ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ದಿನವಾಗಿದೆ. ಈ ದಿನ ಶ್ರೀಹರಿ ನಾರಾಯಣನು ವೈಕುಂಠ ದ್ವಾರವನ್ನು ತೆರೆದು ತನ್ನ ದರ್ಶನವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಈ ಏಕಾದಶಿ ವ್ರತವು ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಸೂಕ್ತ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ವಿಷ್ಣು ದೇವನನ್ನು ಪೂಜಿಸುವ ಮೂಲಕ ಜನ್ಮ ಜನ್ಮಗಳ ಪಾಪಗಳನ್ನು ತೊಡೆದು ಹಾಕಬಹುದು. ಉಪವಾಸ, ಪೂಜೆ, ದಾನದಂತಹ ಪುಣ್ಯ ಕಾರ್ಯಗಳು ಜನನ – ಮರಣ ಚಕ್ರದಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತವೆ.
ವೈಕುಂಠ ಏಕಾದಶಿಯ ಇತಿಹಾಸವನ್ನು ಪುರಾಣಗಳಲ್ಲಿ ವಿವರಿಸಲಾಗಿದೆ. ದಂತಕಥೆಯ ಪ್ರಕಾರ, ಸುಕೇತುಮಾನ ಎಂಬ ರಾಜನು ಮಕ್ಕಳಿಲ್ಲದ ಚಿಂತೆಯಲ್ಲಿ ತನ್ನ ರಾಜ್ಯವನ್ನು ತ್ಯಜಿಸಿ ಕಾಡಿಗೆ ಹೋಗುತ್ತಾನೆ. ಅಲ್ಲಿ ಋಷಿಗಳನ್ನು ಭೇಟಿಯಾಗಿ ತನ್ನ ಸಮಸ್ಯೆಗಳನ್ನು ಹೇಳಿದನು. ಋಷಿಗಳು ಅವನಿಗೆ ವೈಕುಂಠ ಏಕಾದಶಿ ವ್ರತವನ್ನು ಮಾಡುವಂತೆ ಸಲಹೆ ನೀಡಿದರು. ರಾಜನು ಈ ವ್ರತವನ್ನು ಮಾಡಿದ್ದು, ನಂತರ ಅವನಿಗೆ ಸಂತಾನ ಭಾಗ್ಯ ದೊರೆಯಿತು ಮತ್ತು ಅವನು ಮೋಕ್ಷವನ್ನು ಹೊಂದಿದನು.
ಪೂಜೆಯ ವಿಧಾನ
ವೈಕುಂಠ ಏಕಾದಶಿ ದಿನದಂದು ವಿಷ್ಣು ಭಕ್ತರು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುದ್ಧರಾಗಿ ಹೊಸ ಹಾಗೂ ಶುದ್ಧವಾದ ಬಟ್ಟೆಯನ್ನು ಧರಿಸುತ್ತಾರೆ. ದೇವರ ಕೋಣೆಯಲ್ಲಿ ವಿಷ್ಣು ದೇವನ ಫೋಟೋ ಅಥವಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ, ವಿಷ್ಣುವಿಗೆ ಅಭಿಷೇಕವನ್ನು ಮಾಡಿ, ಹೂವುಗಳಿಂದ ಅಲಂಕಾರ ಮಾಡಿ, ತುಳಸಿಯೊಂದಿಗೆ ಸಿಹಿಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ದೀಪ, ಧೂಪವನ್ನು ಬೆಳಗಿ ಆರತಿಯನ್ನು ಮಾಡಿ, ವಿಷ್ಣು ಮಂತ್ರಗಳನ್ನು ಪಠಿಸುತ್ತಾರೆ.
ವೈಕುಂಠ ಏಕಾದಶಿ 2025ರ ಶುಭ ಮುಹೂರ್ತ
– ವೈಕುಂಠ ಏಕಾದಶಿ ತಿಥಿ ಪ್ರಾರಂಭ: 2025ರ ಜನವರಿ 9ರಂದು ಮಧ್ಯಾಹ್ನ 12:22 ರಿಂದ
– ವೈಕುಂಠ ಏಕಾದಶಿ ತಿಥಿ ಮುಕ್ತಾಯ: 2025ರ ಜನವರಿ 10 ರಂದು ಬೆಳಗ್ಗೆ 10:19ರವರೆಗೆ
– ಪಾರಣ ಸಮಯ: 2025ರ ಜನವರಿ 11 ರಂದು ಬೆಳಗ್ಗೆ 7:14 ರಿಂದ 8:21ರವರೆಗೆ.
ಪೂಜೆ ಪ್ರಯೋಜನಗಳು
ವೈಕುಂಠ ಏಕಾದಶಿಯು ಆತ್ಮಸಾಕ್ಷಾತ್ಕಾರ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಆತ್ಮ ಮತ್ತು ಮನಸ್ಸನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಜನನ ಮತ್ತು ಮರಣದ ಚಕ್ರದಿಂದ ಮುಕ್ತಿಯನ್ನು ಸಾಧಿಸುವ ದಿನ ಇದಾಗಿದೆ. ಅದೃಷ್ಟ, ಸಂಪತ್ತು ಮತ್ತು ಯಶಸ್ಸಿನಂತಹ ಭೌತಿಕ ಲಾಭಗಳು ದೊರೆಯುತ್ತವೆ.








