ಮಾರ್ಚ್ 18, 2012. ಅಂದು ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಕಾದಾಟ ನಡೆಸುತ್ತಿತ್ತು. ಅಚ್ಚರಿ ಏನೆಂದ್ರೆ ಅದು ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಕೊನೆಯ ಏಕದಿನ ಪಂದ್ಯವಾಗಿರೋದು. ಬಹುಶಃ ಅದು ತನ್ನ ಕೊನೆಯ ಏಕದಿನ ಪಂದ್ಯ ಅಂತ ಸಚಿನ್ಗೂ ಗೊತ್ತಿರಲಿಲ್ಲವೋ ಏನೋ. ಆದ್ರೆ ಆ ಪಂದ್ಯದಲ್ಲಿ ಯಾರು ಊಹೆ ಮಾಡದಂತಹ ಅದ್ಭುತವಾದ ಇನಿಂಗ್ಸ್ ಒಂದು ಹೊರಬಂತು. ಆ ಇನಿಂಗ್ಸ್ ನೋಡಿ ಇಡೀ ಕ್ರಿಕೆಟ್ ಜಗತ್ತೇ ಅಚ್ಚರಿಗೊಂಡಿತ್ತು. ಗಾಡ್ ಆಫ್ ಕ್ರಿಕೆಟ್ ತನ್ನ ಕೆಲಸ ಮುಗಿಸಿ ವಿಶ್ರಾಂತಿಗೆ ಹೊರಡುವ ಸಮಯದಲ್ಲೇ ಟೀಮ್ ಇಂಡಿಯಾದಲ್ಲಿ ಮತ್ತೊಬ್ಬ ಚೇಸಿಂಗ್ ಗಾಡ್ ಉದಯವಾಯ್ತು.
ಹೌದು, ಟೀಮ್ ಇಂಡಿಯಾದ ಚೇಸಿಂಗ್ ಗಾಡ್ ಮತ್ಯಾರು ಅಲ್ಲ ವಿರಾಟ್ ಕೊಹ್ಲಿ. ಆಗ ವಿರಾಟ್ ಕೋಹ್ಲಿಗೆ ಕೇವಲ 23 ವರ್ಷ. ಆದ್ರೆ ಪಾಕ್ ವಿರುದ್ಧ ಆಡಿದ ರೀತಿಗೆ ಕ್ರಿಕೆಟ್ ಪಂಡಿತರೇ ತಲೆದೂಗಿದ್ದರು. ಆ ಮಹೋನ್ನತ ಇನಿಂಗ್ಸ್ ವಿರಾಟ್ ಕೊಹ್ಲಿಯವರ ಅವಿಸ್ಮರಣೀಯ ಇನಿಂಗ್ಸ್ಗಳಲ್ಲಿ ಒಂದಾಗಿದೆ. ಯಾಕಂದ್ರೆ ಆ ಪಂದ್ಯದಲ್ಲಿ ಪಾಕ್ ನೀಡಿದ್ದ ಟಾರ್ಗೆಟ್ ಬರೋಬ್ಬರಿ 330 ರನ್. ಗೆಲ್ಲಲು ಕಠಿಣ ಎಂಬಂತಿದ್ದ ಪಂದ್ಯವನ್ನು ಇನ್ನೂ 13 ಎಸೆತಗಳು ಬಾಕಿ ಇರುವಂತೆ ಭಾರತಕ್ಕೆ ಜಯ ತಂದುಕೊಟ್ಟಿರುವುದು ವಿರಾಟ್ ಕೊಹ್ಲಿ. ಆ ಪಂದ್ಯದಲ್ಲಿ ವಿರಾಟ್ ದಾಖಲಿಸಿದ್ದ ರನ್ ಕೇವಲ 183…! ಆದೂ ಅಲ್ಲದೆ ನಾಲ್ಕು ಪಂದ್ಯಗಳಲ್ಲಿ ವಿರಾಟ್ ಮೂರು ಶತಕಗಳನ್ನು ಸಿಡಿಸಿದ್ದರು.
ಆರ್. ಅಶ್ವಿನ್ ಜೊತೆಗಿನ ಇನ್ಸ್ಟಾಗ್ರಾಂ ಲೈವ್ ಕಾರ್ಯಕ್ರಮದಲ್ಲಿ ವಿರಾಟ್ ಆ ಪಂದ್ಯವನ್ನು ನೆನಪಿಸಿಕೊಂಡ್ರು. ಹಾಗೇ ಪಂದ್ಯದಲ್ಲಿ ತಾನು ಯಾವ ರೀತಿ ಆಡಿದ್ದೆ. ಪಾಕ್ ಬೌಲರ್ಗಳನ್ನು ಹೇಗೆ ಎದುರಿಸಿದ್ದೆ. ಅದ್ರಲ್ಲೂ ದೂಸ್ರಾ ಸ್ಪೇಷಲಿಸ್ಟ್ ಸಾಯಿದ್ ಅಜ್ಮಲ್ ಅವರನ್ನು ಯಾವ ರೀತಿ ಗಲಿಬಿಲಿಗೊಳಿಸಿದ್ದೆ, ಮಹೇಂದ್ರ ಸಿಂಗ್ ಯಾಕೆ ಸಿಟ್ಟು ಮಾಡಿಕೊಂಡಿದ್ದರು ಎಂಬುದರ ಬಗ್ಗೆ ಆರ್. ಅಶ್ವಿನ್ ಬಳಿ ಹೇಳಿಕೊಂಡಿದ್ದಾರೆ.
2002ರಲ್ಲಿ ಇಂಗ್ಲೆಂಡ್ ವಿರುದ್ಧ 326 ರನ್ಗಳ ಸವಾಲನ್ನು ಬೆನ್ನಟ್ಟಿರುವ ದಾಖಲೆ ಇತ್ತು. ಆದ್ರೆ ಆ ಪಂದ್ಯದಲ್ಲಿ ರೋಹಿತ್ ಶರ್ಮಾ (68) ಹಾಗೂ ಸಚಿನ್ (52) ರನ್ ಗಳಿಸಿದ್ದರು. ರೋಹಿತ್ ಔಟಾದಾಗ ಸಚಿನ್ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ಹುಡುಗಾಟದ ಆಟವನ್ನು ಆಡಲಿಲ್ಲ. ಢಾಕಾದಲ್ಲಿ ನಡೆದಿದ್ದು ವಿರಾಟನ ವಿಶ್ವರೂಪ. ಸಚಿನ್ ಜೊತೆ ಎರಡನೇ ವಿಕೆಟ್ಗೆ 133 ರನ್ಗಳ ಜೊತೆಯಾಟವಾಡಿದ್ದ ವಿರಾಟ್ ಕೊಹ್ಲಿ ಆ ಇನಿಂಗ್ಸ್ ನಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ಗಳಿದ್ದವು.
ಆ ಒಂದು ಶತಕ ನನ್ನ ಮನದಲ್ಲಿ ಯಾವಾಗಲೂ ನೆನಪಿನಲ್ಲಿರುತ್ತೆ. ಸಚಿನ್ ಮತ್ತು ಸೆಹ್ವಾಗ್ ಅದ್ಭುತವಾಗಿರುವಂತಹ ಜೊತೆಯಾಟವನ್ನು ಆಡಿದ್ದಾರೆ. ಅದೇ ರೀತಿ ಗೌತಮ್ ಗಂಭೀರ್. ಇದಕ್ಕೆ ಆ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ನಾನು ಸೇರ್ಪಡೆಗೊಂಡೆ. ಹೀಗಾಗಿಯೇ ಈ ಶತಕ, ಈ ಇನಿಂಗ್ಸ್ ನನಗೆ ಯಾವಾಗಲೂ ವಿಶೇಷವಾಗಿರುತ್ತದೆ ಅಂತಾರೆ ಕೊಹ್ಲಿ.
ಬಳಿಕ ನಾನು ಮತ್ತು ಸುರೇಶ್ ರೈನಾ ಅಮೋಘವಾದ ಜೊತೆಯಾಟವನ್ನು ಆಡಿದ್ದೇವು. ರೈನಾ ಬಂದ ಮೇಲೆ ಪಂದ್ಯದ ಗತಿಯೇ ಬದಲಾಗಿ ಹೋಯ್ತು. ಆದ್ರೂ ಗೆಲುವಿಗೆ ಸೂಕ್ತವಾದ ವಾತಾವರಣ ಇರಲಿಲ್ಲ. ಆದ್ರೆ ಪಿಚ್ ನಮಗೆ ಪೂರಕವಾಗಿತ್ತು. ಇದೇ ವೇಳೆ ನಾನು ನನ್ನ ಆಟವನ್ನು ಅರ್ಥಮಾಡಿಕೊಂಡಿದ್ದೆ. ನಾನು ಇನ್ನೂ ಆಡಬೇಕು ಎಂಬುದು ಕೂಡ ನನಗೆ ಮನವರಿಕೆಯಾಗಿತ್ತು. ಸವಾಲುಗಳಿದ್ರೂ ನಾನು ಕ್ರೀಸ್ನಲ್ಲಿ ನಿಂತು ಆಡಲೇಬೇಕು ಅನ್ನೋ ವಿಶ್ವಾಸದಲ್ಲೇ ಆಡಿದ್ದೆ ಎಂದು ವಿರಾಟ್ ಕೊಹ್ಲಿ ಎಂಟು ವರ್ಷಗಳ ಹಿಂದಿನ ಪಂದ್ಯದ ಗೇಮ್ ಪ್ಲಾನ್ ಅನ್ನು ಬಹಿರಂಗಗೊಳಿಸಿದ್ದರು.
ಅದೇ ರೀತಿ ಆ ಪಂದ್ಯದಲ್ಲಿ ನಮ್ಮ ಫೀಲ್ಡಿಂಗ್ ಕೂಡ ಚೆನ್ನಾಗಿರಲಿಲ್ಲ. ಕೆಟ್ಟ ಫೀಲ್ಡಿಂಗ್ನಿಂದಾಗಿ ಮೂರು ಅವಕಾಶಗಳನ್ನು ಕೈಚೆಲ್ಲಿಕೊಂಡಿದ್ದೇವು. ಅದ್ರಲ್ಲೂ ಒಂದು ಕ್ಯಾಚ್ ಹಿಡಿಯುವಾಗ ನಾನು ಮತ್ತು ರೋಹಿತ್ ಶರ್ಮಾ ಪರಸ್ಪರ ಡಿಕ್ಕಿ ಹೊಡೆದುಕೊಂಡೆವು. ಕ್ಯಾಚ್ ಹಿಡಿಯುವ ಆತುರದಲ್ಲಿ ನನ್ನ ತಲೆ ರೋಹಿತ್ ಅವರ ಭುಜಕ್ಕೆ ಡಿಕ್ಕಿ ಹೊಡೆದಿತ್ತು. ಹೀಗಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಸಮಾಧಾನಗೊಂಡಿದ್ದರು. ಇನ್ನೊಂದು ಅಚ್ಚರಿ ಅಂದ್ರೆ ಬೌಲಿಂಗ್ ಮಾಡುತ್ತಿದ್ದದ್ದು ಆರ್. ಅಶ್ವಿನ್ ಅಂತ ಕೊಹ್ಲಿ ನಗ್ತಾ ಹೇಳಿದ್ದಾರೆ.
ಇನ್ನು ತನ್ನ ಮಹೋನ್ನತ ಇನಿಂಗ್ಸ್ ಬಗ್ಗೆ ಮಾತು ಮುಂದುವರಿಸಿದ್ದ ಕೊಹ್ಲಿ, ಪಾಕ್ ಬೌಲಿಂಗ್ ದಾಳಿಯೂ ಉತ್ತಮವಾಗಿತ್ತು. ಶಾಹಿದ್ ಆಫ್ರಿದಿ, ಉಮ್ಮರ್ ಗುಲ್, ಸಯಿದ್ ಅಜ್ಮಲ್, ಅಝೀಜ್ ಚೀಮಾ, ವಾಹಾಬ್ ರಿಯಾಜ್, ಮಹಮ್ಮದ್ ಹಫೀಝ್, ಅದ್ರಲ್ಲೂ ಸಯಿದ್ ಅಜ್ಮಲ್ ಅವರು ತುಂಬಾನೇ ಅಪಾಯಕಾರಿಯಾಗಿದ್ದರು. ಆಗ ಅವರು ಯಶಸ್ಸಿನ ಉತ್ತುಂಗದಲ್ಲಿದ್ದರು ಎಂಬುದನ್ನು ಇದೇ ವೇಳೆ ವಿರಾಟ್ ನೆನಪು ಮಾಡಿಕೊಂಡ್ರು.
ಮತ್ತೆ ಮಾತು ಮುಂದುವರಿಸಿದ್ದ ಕೊಹ್ಲಿ, ಏಷ್ಯಾಕಪ್ ಟೂರ್ನಿಗೆ ಮುನ್ನ ನಾವು ಶ್ರೀಲಂಕಾದಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಆಡಿದ್ದೇವು. ಆಗ ಅಭ್ಯಾಸ ಪಂದ್ಯವೊಂದರಲ್ಲಿ ನಾನು ಪಾಕ್ ವಿರುದ್ಧ 75 ರನ್ ದಾಖಲಿಸಿದ್ದೆ. ಆ ಪಂದ್ಯದಲ್ಲಿ ನಾನು ನನ್ನಲ್ಲಿ ಅಂದುಕೊಂಡಿದ್ದೆ. ನಾನು ಆತನನ್ನು ಒಬ್ಬ ಲೆಗ್ ಸ್ಪಿನ್ನರ್ ಅಂತ ಅಂದುಕೊಂಡು ಆಡಬೇಕು ಎಂದು. ಯಾಕಂದ್ರೆ ಆತನ ದೂಸ್ರ ಎಸೆತಗಳಿಗೆ ಆಡುವುದು ಕಷ್ಟ. ಹೀಗಾಗಿ ನಾನು ಆತನ ಎಸೆತಗಳಿಗೆ ಹೊಡಿಯಲೇಬೇಕು ಅಂತ ನಿರ್ಧಾರ ಮಾಡಿಕೊಂಡೇ ಬ್ಯಾಸ್ ಬೀಸಿದ್ದೆ. ಅದು ವರ್ಕ್ಔಟ್ ಆಯ್ತು ಇದೇ ತಂತ್ರವನ್ನು ಈ ಇನಿಂಗ್ಸ್ ನಲ್ಲೂ ಅಳವಡಿಸಿಕೊಂಡೆ. ಹೀಗಾಗಿ ನಾನು ಆತನ ಓವರ್ಗಳಲ್ಲಿ ಸರಾಗವಾಗಿ ರನ್ ಗಳಿಸಿದ್ದೆ. ನನ್ನ ಮುಖ್ಯ ಗುರಿಯಾಗಿದ್ದದ್ದು ಆತನ ದೂಸ್ರಾ ಎಸೆತಗಳ ಲೆಕ್ಕಚಾರಗಳನ್ನು ತಪ್ಪಿಸಿ ಆತನನ್ನು ತಳಮಳಗೊಳಿಸುವುದು ಆಗಿತ್ತು. ಆದ್ರಿಂದಲೇ ನಾನು ಮೇಲುಗೈ ಸಾಧಿಸಿದ್ದೆ ಎಂದು ಆ ಪಂದ್ಯಕ್ಕೆ ಮಾಡಿಕೊಂಡಿದ್ದ ತಂತ್ರಗಳನ್ನು ಹೇಳಿಕೊಂಡ್ರು ವಿರಾಟ್ ಕೊಹ್ಲಿ,








