ಅಮೀರ್ ಸೊಹೈಲ್ ವರ್ತನೆ ನೋಡಿ ಶಾಕ್ ಆಗಿತ್ತು… 1996ರ ಘಟನೆ ಬಗ್ಗೆ ವಕಾರ್ ಯೂನಿಸ್ ಹೇಳಿದ್ದು ಹೀಗೆ..!
ಮಾರ್ಚ್ 9, 1996.. ಬೆಂಗಳೂರಿನ ಚಿನ್ನಸ್ವಾಮಿ ಮೈದಾನ. ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯ. ಅದು ಬದ್ಧವೈರಿಗಳ ನಡುವಿನ ನಡೆದಿದ್ದ ಕದನ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಂದ್ರೆ ಹೇಳೋದೇ ಬೇಡ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಪಾಕ್ಗೆ 288 ರನ್ಗಳ ಸವಾಲನ್ನು ನೀಡಿತ್ತು. ಕೊನೆ ಗಳಿಗೆಯಲ್ಲಿ ಅಜೇಯ್ ಜಡೇಜಾ ಪಾಕ್ ಬೌಲಿಂಗ್ ದಾಳಿಯನ್ನು ಧೂಳಿಪಟ್ಟ ಮಾಡಿದ್ದರು.
ಆದ್ರೆ ಅಲ್ಲಿ ಅಜೇಯ್ ಜಡೇಜಾ ಬ್ಯಾಟಿಂಗ್ಗಿಂತ ಹೆಚ್ಚು ಸುದ್ದಿಯಾಗಿದ್ದು ಅಮೀರ್ ಸೊಹೈಲ್ ಮತ್ತು ವೆಂಕಟೇಶ್ ಪ್ರಸಾದ್ ನಡುವಿನ ಬ್ಯಾಟ್ ಮತ್ತು ಚೆಂಡಿನ ಕಾದಾಟ. ಅಷ್ಟೇ ಅಲ್ಲ, ಮಾತಿನ ಸಮರ.
ಭಾರತ ಮತ್ತು ಪಾಕಿಸ್ತಾನ ಅಂದಾಗ ಈ ಪಂದ್ಯದ ಈ ಕ್ಷಣವಂತೂ ನೆನಪಾಗಿಯೇ ನೆನಪಾಗುತ್ತೆ. ಯಾಕಂದ್ರೆ ಅಮೀರ್ ಸೊಹೈಲ್ ಪ್ರಸಾದ್ ಅವರನ್ನು ಕೆಣಕಿದಾಗ ವೆಂಕಿ ಕೊಟ್ಟ ಉತ್ತರ ಹಾಗಿತ್ತು. ಅಮೀರ್ ಸೊಹೈಲ್ ಬೌಂಡರಿ ಬಾರಿಸಿ ವೆಂಕಿಯವರನ್ನು ಬ್ಯಾಟ್ ನಿಂದ ಬೊಟ್ಟು ಮಾಡಿ ಚೆಂಡು ಬೌಂಡರಿಯತ್ತ ಹೋಗುತ್ತಿರುವುದನ್ನು ತೋರಿಸಿದ್ದರು. ಆಗ ಇವರಿಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಆದ್ರೆ ಮರು ಎಸೆತದಲ್ಲೇ ಅಮೀರ್ ಸೊಹೈಲ್ ಅವರನ್ನು ಔಟ್ ಮಾಡಿದ್ದ ವೆಂಕಟೇಶ್ ಪ್ರಸಾದ್ ಪೆವಿಲಿಯನ್ಗೆ ಹಿಂತಿರುಗುವಂತೆ ಸನ್ನೆ ಮಾಡಿದ್ದರು.
ಈ ಬಗ್ಗೆ ಅಮೀರ್ ಸೊಹೈಲ್ ಮತ್ತು ವೆಂಕಟೇಶ್ ಪ್ರಸಾದ್ ಇಬ್ಬರೂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅದು ಮುಗಿದು ಹೋದ ಘಟನೆ. ಆದ್ರೂ ಈ ಘಟನೆ ಮಾತ್ರ ಪದೇ ಪದೇ ಸುದ್ದಿಯಾಗುತ್ತಿದೆ. ಅಂದ ಹಾಗೇ ಈ ಘಟನೆಯನ್ನು ಈಗ ಸುದ್ದಿ ಮಾಡಿದ್ದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ, ಕೋಚ್ ಹಾಗೂ ಮಾಜಿ ವೇಗಿ ವಕಾರ್ ಯೂನಿಸ್. ಆ ಘಟನೆ ಬಗ್ಗೆ ವಕಾರ್ ಯೂನಿಸ್ ಹೇಳುವುದು ಹೀಗೆ.
ನಿಜ ಹೇಳಬೇಕಂದ್ರೆ ಅಮೀರ್ ಸೊಹೈಲ್ ಅವರ ವರ್ತನೆಯನ್ನು ನೋಡಿದಾಗ ನಮಗೆ ಶಾಕ್ ಆಗಿತ್ತು. ಯಾಕಂದ್ರೆ ಆ ಕ್ಷಣದಲ್ಲಿ ಅಮೀರ್ ಸೊಹೈಲ್ ಚೆನ್ನಾಗಿಯೇ ಆಡುತ್ತಿದ್ದರು. ಲೀಲಾಜಾಲವಾಗಿ ರನ್ ಕೂಡ ದಾಖಲಿಸುತ್ತಿದ್ದರು. ಆ ಹಂತದಲ್ಲಿ ಅಮೀರ್ ಸೊಹೈಲ್ ಯಾಕೆ ಆ ರೀತಿ ವರ್ತಿಸಿದ್ದರು ? ಬಹುಶಃ ಅವರು ಒತ್ತಡಕ್ಕೆ ಸಿಲುಕಿದ್ದರು ಅಂತ ಕಾಣುತ್ತೆ ಅಂತ ವಕಾರ್ ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ.
ಅಮೀರ್ ಸೊಹೈಲ್ ತುಂಬಾ ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. ನನ್ನ ಪ್ರಕಾರ ಅವರು 55 ರನ್ ಗಳಿಸಿದ್ದರು. (55 ರನ್, 46 ಎಸೆತ) ಹಾಗೇ ಸಯ್ಯದ್ ಅನ್ವರ್ ಕೂಡ. ಮೊದಲ ಹತ್ತು ಓವರ್ಗಳಲ್ಲಿ 84 ರನ್ ಗಳಿಸಿದ್ದಾಗ ಅನ್ವರ್ ಔಟಾಗಿದ್ದರು. ಆದ್ರೂ ನಾವು ಉತ್ತಮ ಸ್ಥಿತಿಯಲ್ಲಿದ್ದೇವು. ಆದ್ರೆ ಅಮೀರ್ ಸೊಹೈಲ್ ಔಟಾಗುತ್ತಿದ್ದಂತೆ ಪಂದ್ಯದ ಗತಿಯೇ ಬದಲಾಗಿ ಹೋಯ್ತು ಅಂತ ಅನ್ವರ್ ಆ ಪಂದ್ಯ ಸೋಲಿನ ಬಗ್ಗೆ ಕಾರಣಗಳನ್ನು ಹೇಳಿದ್ರು.
ಆ ನಂತರ ಅನಿಲ್ ಕುಂಬ್ಳೆ ಮತ್ತು ಪ್ರಸಾದ್ ಪಾಕ್ ತಂಡಕ್ಕೆ ಕಂಟಕವಾದ್ರು. ಇಜಾಜ್ ಅಹಮ್ಮದ್ ಮತ್ತು ಇಂಜಮಮ್ ಉಲ್ ಹಕ್ ವಿಕೆಟ್ ಪತನಗೊಂಡಾಗ ಪಾಕ್ನ ಗೆಲುವು ಕೂಡ ಕಷ್ಟವಾಗಿತ್ತು ಎಂದು ವಕಾರ್ ಹೇಳಿದ್ರು. ಇನ್ನು ಈ ಪಂದ್ಯದಲ್ಲಿ ನಾವು ಕೆಲವೊಂದು ತಪ್ಪುಗಳನ್ನು ಮಾಡಿದ್ದೇವು. ತಂಡದಲ್ಲಿ ಜಾವೇದ್ ಮಿಯಾಂದಾದ್ ಕೂಡ ಇದ್ರು. ಸಹಜವಾಗಿ ಮಿಯಾಂದಾದ್ ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದ್ರೆ ಈ ಪಂದ್ಯದಲ್ಲಿ ಜಾವೇದ್ ಮಿಯಾಂದಾದ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದರು. ಇದು ಕೂಡ ತಪ್ಪು ನಿರ್ಧಾರವಾಗಿತ್ತು. ಒಟ್ಟಾರೆ, ಭಾರತ ಈ ಪಂದ್ಯದಲ್ಲಿ ಅರ್ಹವಾಗಿಯೇ ಜಯ ಸಾಧಿಸಿತ್ತು ಎಂಬುದು ವಕಾರ್ ಯೂನಿಸ್ ಅಭಿಪ್ರಾಯವಾಗಿದೆ.