ಹಾಸನ: ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾಸನ ನಗರದ ಅದಿದೇವತೆ ಹಾಸನಾಂಬೆ ದೇವಾಲಯಕ್ಕೆ ಕುಟಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ತಮ್ಮ ನೋವು ದೂರ ಮಾಡುವಂತೆ ಹಾಸನಾಂಬೆಗೆ ಪೂಜೆ ಸಲ್ಲಿಸಿದ್ದೇನೆ. ಇದೊಂದು ಪುಣ್ಯಕ್ಷೇತ್ರ. ನಂಬಿಕೆ ಎಂಬ ಪದಕ್ಕೆ ಪವಿತ್ರ ಧರ್ಮಕ್ಷೇತ್ರಗಳೇ ಸಾಕ್ಷಿ ಎಂದರು.
ದೇವಿ ರಾಜ್ಯದ ಜನತೆಯ ಎಲ್ಲ ದುಃಖವನ್ನು ದೂರ ಮಾಡಲಿ. ನಮ್ಮಂಥವರಿಗೆ ರಾಜ್ಯದವರಿಗೆ ಇರುವ ಎಲ್ಲ ನೋವನ್ನು ಪರಿಹಾರ ಮಾಡಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿರುವುದಾಗಿ ಹೇಳಿದರು.
ರಾಜ್ಯ ಎಲ್ಲಾ ಭಾಗಗಳಲ್ಲೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಕೆಲಸ ಮಾಡುತ್ತೇವೆ. ರಾಜ್ಯ ಸರ್ಕಾರದಿಂದ ಅಧಿಕಾರ ದುರುಪಯೋಗ ಆಗುತ್ತಿದೆ. ಆದರೂ ನಮ್ಮ ಹೋರಾಟ ನಾವು ಮಾಡಬೇಕು. ನಮ್ಮ ಜನರ ಮೇಲೆ ನಂಬಿಕೆ ಇದೆ. ಅವರು ತಡ ಆದರೂ ಗೌರವ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಹೈಕೋರ್ಟ್ಗೆ ಹೋಗಿದ್ದೆವು. ಪಂಚಾಯಿತಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದರು.
ರಾಜ್ಯಸಭೆ ಚುನಾವಣೆ ಬಗ್ಗೆ ಕೈ ಮೌನ..!
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದು, ಹೈಕಮಾಂಡ್ ಜೊತೆಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹಾಸನ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆದ ಬಳಿಕ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಕ್ಷೇತ್ರ ಬಿಜೆಪಿಯಿಂದಲೇ ಖಾಲಿಯಾಗಿದೆ. ನಮ್ಮ ಬಳಿ ಬೇಕಾದಷ್ಟು ಸಂಖ್ಯಾಬಲದ ಕೊರತೆ ಇದೆ. ಎಲ್ಲವನ್ನೂ ಪರಿಗಣಿಸಿ ಹೈಕಮಾಂಡ್ ಜತೆ ಚರ್ಚಿಸಲಾಗುವುದು ಎಂದರು.
ಜೆಡಿಎಸ್-ಬಿಜೆಪಿ ದೋಸ್ತಿ ವಿಚಾರವಾಗಿ ನಾನು ಏನು ಮಾತನಾಡುವುದಿಲ್ಲ. ಮುಂದಿನ ಫಲಿತಾಂಶ ನೋಡಿ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ರಾಜ್ಯದಲ್ಲಿರುವ ಮರಾಠಿ ಜನರಿಗೆ ಕೊಡಬಾರದು ಎಂದೇನಿಲ್ಲ. ಆದರೆ, ಮರಾಠರನ್ನು ಏಕೆ ಪ್ರತ್ಯೇಕವಾಗಿ ನೋಡುತ್ತೀರಿ. ಮೊದಲು ನಾವು ಅವರಿಗೆ ಸಹಾಯ ಮಾಡಿಲ್ವಾ ? ಯಾಕೆ ಸಮಾಜ ಒಡೆಯುವ ಕೆಲಸ ಮಾಡಬೇಕು ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಉಪಚುನಾವಣೆಗೆ ಸಮಿತಿ ರಚನೆ
ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ಉಪಚುನಾವಣೆ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ಬೆಳಗಾವಿಗೆ ಎಂ.ಬಿ ಪಾಟೀಲ್, ಬಸವಕಲ್ಯಾಣಕ್ಕೆ ಈಶ್ವರ್ ಖಂಡ್ರೆ ಮತ್ತು ಮಸ್ಕಿಗೆ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ವರದಿ ಬಂದ ನಂತರ ಮುಂದಿನ ನಿರ್ಧಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿವರ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel