ಮೈಸೂರು : ಕೊರೊನಾ ಆತಂಕದ ಹಿನ್ನೆಲೆ ಆಷಾಢ ಶುಕ್ರವಾರದಂದು ಮೈಸೂರು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಪ್ರವೇಶ ನಿಷೇಧ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದರ ಮಧ್ಯೆ ಇಂದು ಸಚಿವ ಕೆ.ಎಸ್ ಈಶ್ವರಪ್ಪ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಈಶ್ವರಪ್ಪ, ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆಷಾಢ ಶುಕ್ರವಾರ ಆದ್ದರಿಂದ ಚಾಮುಂಡೇಶ್ವರಿ ದರ್ಶನ ಪಡೆದು, ತಾಯಿಯ ಆಶೀರ್ವಾದ ಪಡೆದು ಬಂದಿದ್ದೇನೆ. ರಾಜ್ಯಕ್ಕೆ, ದೇಶಕ್ಕೆ, ಪ್ರಪಂಚಕ್ಕೆ ಈ ಕೊರೊನಾ ಒಂದು ಶಾಪವಾಗಿ ಪರಿಣಮಿಸಿದ್ದು, ಜನರಿಗೆ ಬಹಳ ತೊಂದರೆ ಕೊಡುತ್ತಿದೆ. ಈ ಕೊರೊನಾದಿಂದ ಮುಕ್ತಗೊಳಿಸು ಎಂದು ಚಾಮುಂಡಿ ತಾಯಿಯನ್ನು ಪ್ರಾರ್ಥಿಸಿದ್ದೇನೆ ಎಂದರು.
ಇನ್ನು ಕಳೆದ ವರ್ಷ ವಿಪರೀತ ಮಳೆಯಿಂದ ರಾಜ್ಯವೇ ಪ್ರವಾಹಕ್ಕೆ ತುತ್ತಾಗಿತ್ತು. ಅದನ್ನು ಸುಧಾರಿಸುವ ಶಕ್ತಿ ಕೊಟ್ಟವಳು ಚಾಮುಂಡಿ ತಾಯಿ, ಈ ಬಾರಿ ಕೊರೊನಾದಿಂದ ಮುಕ್ತಿಗೊಳಿಸಿ ಜನರಿಗೆ ನೆಮ್ಮದಿ ಕೊಡು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಈಶ್ವರಪ್ಪ ತಿಳಿಸಿದರು.