ಮೈಸೂರು : ಹುಬ್ಲೋಟ್ ವಾಚ್ ವಿಚಾರದ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಅವರು ನಿನ್ನೆಯ ಸುದ್ದಿಗೋಷ್ಟಿಯಲ್ಲಿ ಪ್ರಸ್ತಾಪಿಸಿ, ಆ ವಾಚ್ ಎಲ್ಲಿದೆ..? ಯಾರು ಕೊಟ್ಟಿದ್ದು ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ತಮ್ಮ ಭ್ರಷ್ಟಾಚಾರ ಬಯಲಾಗುವ ಭಯದಲ್ಲಿ ಬಿಜೆಪಿಯವರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ವಾಚ್ ಎಲ್ಲಿಂದ ಬಂತು? ಹೇಗೆ ಬಂತು? ಅಂತ ಅಪ್ಪ ಹೇಳಿದ್ದಾರೆ. ಆರೋಪ ಬಂದ ಕೂಡಲೇ ಅದನ್ನ ವಾಪಸ್ ಕೊಟ್ಟು, ವಿಧಾನಸಭೆಯಲ್ಲೇ ಇದನ್ನ ಪ್ರೆಸೆಂಟ್ ಮಾಡಿದ್ದಾರೆ. ಹಾಗೂ ಅದನ್ನು ಯಾರು ಮತ್ತು ಏಕೆ ಗಿಫ್ಟ್ ಕೊಟ್ಟರು ಅಂತ ಸಹ ತಿಳಿಸಿದ್ದಾರೆ. ಈ ವಿಚಾರ ವಿಧಾನಸಭೆಯ ರೆಕಾರ್ಡ್ನಲ್ಲಿದೆ ಆರೋಪ ಮಾಡೋರು ಬೇಕಾದರೆ ಹೋಗಿ ತೆಗೆದು ನೋಡಲಿ ಎಂದು ಅಶ್ವಥ್ ನಾರಾಯಣ್ ಗೆ ತಿರುಗೇಟು ನೀಡಿದ್ದಾರೆ.
ನಾವು ರಾಜ್ಯ ಸರ್ಕಾರದ ಲೆಕ್ಕ ಕೇಳುತ್ತಿದ್ದೇವೆ. ಲೆಕ್ಕ ಕೊಟ್ಟರೆ ಎಲ್ಲಿ ತಮ್ಮ ಭ್ರಷ್ಟಾಚಾರ ಬಯಲಾಗುತ್ತೋ ಎಂಬ ಭಯದಿಂದ ಈ ರೀತಿ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಡಿಸಿಎಂಗೆ ಯತೀಂದ್ರ ಟಾಂಗ್ ನೀಡಿದ್ದಾರೆ.