ಕನ್ನಡಿಗರತ್ತ ದಾದಾ ಒಲವು | ರವಿ ಶಾಸ್ತ್ರಿ ಬಳಿಕ ಯಾರಾಗ್ತಾರೆ ಟೀಂ ಇಂಡಿಯಾದ ಕೋಚ್..?
ಮುಂಬೈ : ಐಸಿಸಿ ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ ತಮ್ಮ ಸ್ಥಾನ ಹುದ್ದೆಯಿಂದ ಕೆಳಗಿಳಿಯುತ್ತಾರೆ. ಹೀಗಾಗಿ ಟೀಂ ಇಂಡಿಯಾ ಮುಂದಿನ ದ್ರೋಣಾಚಾರ್ಯ ಯಾರಾಗ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ.
ಈ ಮಧ್ಯೆ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಮಾತ್ರ ಕೋಚ್ ಹುದ್ದೆಗಾಗಿ ಕನ್ನಡಿಗರತ್ತ ಮುಖ ಮಾಡಿದ್ದಾರೆ. ಮುಖ್ಯ ಕೋಚ್ ಸ್ಥಾನ ತುಂಬಲು ಕನ್ನಡಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ ಸಂಪರ್ಕಿಸಲು ಮುಂದಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಈಗಾಗಲೇ ಟೀಂ ಇಂಡಿಯಾದ ಕೋಚ್ ಹುದ್ದೆಯನ್ನು ನಿಭಾಯಿಸಿರುವ ಈ ಇಬ್ಬರು ದಿಗ್ಗಜರು ಮತ್ತೆ ಭಾರತ ಕ್ರಿಕೆಟ್ ತಂಡದ ಗುರುವಾದರೇ ತಂಡ ಇನ್ನಷ್ಟು ಎತ್ತರಕ್ಕೆ ಹೋಗುತ್ತದೆ ಅನ್ನೋದು ದಾದಾ ಅನಿಸಿಕೆ.
ಅದರಲ್ಲೂ ಸೌರವ್ ಗಂಗೂಲಿ, 2017ರಲ್ಲಿ ಭಾರತ ತಂಡದ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರನ್ನ ಮತ್ತೆ ಕೋಚ್ ಪಟ್ಟದಲ್ಲಿ ಕೂರಿಸಲು ಒಲವು ತೋರಿಸುತ್ತಿದ್ದಾರಂತೆ.
ಈ ಹಿಂದೆ ನಾಯಕ ಕೊಹ್ಲಿ ಜೊತೆಗೆ ಮನಸ್ತಾಪ ಉಂಟಾಗಿ ಮುಖ್ಯ ಕೋಚ್ ಸ್ಥಾನದಿಂದ ಕುಂಬ್ಳೆ ಕೆಳಗಿಳಿದಿದ್ದರು. ಇದೀಗ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಮತ್ತೆ ಅನಿಲ್ ಕುಂಬ್ಳೆಯವರನ್ನು ತರಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇದಲ್ಲದೇ ರಾಹುಲ್ ದ್ರಾವಿಡ್ ಅವರನ್ನೂ ಕೂಡ ಕೋಚ್ ಹುದ್ದೆಗಾಗಿ ಸಂಪರ್ಕಿಸಲಾಗಿದೆ ಎಂದು ತಿಳಿದುಬಂದಿದೆ. ದ್ರಾವಿಡ್ ಅವರನ್ನು ಟೀಂ ಇಂಡಿಯಾದ ಪೂರ್ಣ ಪ್ರಮಾಣದ ಕೋಚ್ ಆಗಿ ಮಾಡುವ ನಿಟ್ಟಿನಲ್ಲಿ ಸಾಕಷ್ಟು ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಆದ್ರೆ ಇದಕ್ಕೆ ದ್ರಾವಿಡ್ ಒಪ್ಪುತ್ತಿಲ್ಲ.
ಒಟ್ಟಾರೆ ರವಿಶಾಸ್ತ್ರಿ ಐಸಿಸಿ ಟಿ-20 ವಿಶ್ವಕಪ್ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದು, ಮುಂದಿನ ಕೋಚ್ ಯಾರಾಗ್ತಾರೆ ಅನ್ನೋದಕ್ಕೆ ಇನ್ನಷ್ಟೆ ಉತ್ತರ ಸಿಗಬೇಕಿದೆ.








