ರಹಾನೆ ನಾಯಕತ್ವದ ಬಗ್ಗೆ ಗವಾಸ್ಕರ್ ಹೇಳಿದ್ದೇನು…?
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಮುನ್ನಡೆಸಿದ್ದು ಅಜ್ಯಂಕ್ಯಾ ರಹಾನೆ.
ಅಂದ ಹಾಗೇ ರಹಾನೆ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ಇದು ಮೂರನೇ ಬಾರಿ. ಕೂಲ್ ಆಗಿಯೇ ತಂಡವನ್ನು ಮುನ್ನಡೆಸುವ ರಹಾನೆ ಸ್ಟೈಲ್ ಬಗ್ಗೆ ಕ್ರಿಕೆಟ್ ಪಂಡಿತರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಆಕ್ರಮಣಕಾರಿ ಪ್ರವೃತ್ತಿಯಿಂದ ತಂಡವನ್ನು ಮುನ್ನಡೆಸುತ್ತಾರೆ. ಆದ್ರೆ ರಹಾನೆ ಸಂಯಮದಿಂದಲೇ ತಂಡವನ್ನು ಮುನ್ನಡೆಸುತ್ತಾರೆ. ಆಟಗಾರರು ಎಷ್ಟೇ ಆಕ್ರಮಣಕಾರಿಯಾಗಿದ್ದರೂ ಕೂಡ ರಹಾನೆ ತಾಳ್ಮೆಯಿಂದಲೇ ನೋಡಿಕೊಂಡು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.
ರಹಾನೆ ಶೈಲಿಯಲ್ಲಿ ಯಾವುದೇ ಅರಚಾಟವಿಲ್ಲ. ಒತ್ತಡಗಳು ಇಲ್ಲ. ಫಿಲ್ಡಿಂಗ್ ಸೆಟ್ ಮಾಡುವುದು ಇರಲಿ, ಬೌಲಿಂಗ್ ಬದಲಾವಣೆ ಮಾಡುವುದೇ ಇರಲಿ.. ಪಂದ್ಯದ ಗತಿಯನ್ನು ಅರಿತುಕೊಂಡು ತಂಡವನ್ನು ಮುನ್ನಡೆಸುತ್ತಾರೆ.
ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ಅಷ್ಟೇ. ಆಸಿಸ್ ರನ್ ದಾಹಕ್ಕೆ ಟೀಮ್ ಇಂಡಿಯಾ ಬೌಲರ್ ಗಳು ಕಡಿವಾಣ ಹಾಕಿದ್ದಾರೆ. ಇದರ ಹಿಂದೆ ಇರೋದು ರಹಾನೆ ತಂತ್ರಗಾರಿಕೆ ಎಂಬುದರಲ್ಲಿ ಎರಡು ಮಾತಿಲ್ಲ.
ರಹಾನೆ ಮುಖ್ಯವಾಗಿ ಎದುರಾಳಿ ಬ್ಯಾಟ್ಸ್ ಮೆನ್ ಗಳ ಆಟದ ಶೈಲಿಗೆ ಅನುಗುಣವಾಗಿ ಫೀಲ್ಡಿಂಗ್ ಸೆಟ್ ಮಾಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಮಾರ್ನಸ್ ಲಾಬುಸ್ಚೆಂಚ್, ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಅವರು ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿರೋದು.
ಇನ್ನು ಬೌಲಿಂಗ್ ಬದಲಾವನೆ ಕೂಡ. ಆರಂಭದಲ್ಲಿ ಬೂಮ್ರಾ ಮತ್ತು ಉಮೇಶ್ ಯಾದವ್ ಅವರನ್ನು ಕಣಕ್ಕಿಳಿಸಿದ್ರು. ಆನಂತರ ಅಶ್ವಿನ್ ಅವರನ್ನು ದಾಳಿಗೆ ಇಳಿಸಿದ್ರು. ಅಶ್ವಿನ್ ಯಶ ಸಾಧಿಸುತ್ತಿದ್ದಂತೆ ರವೀಂದ್ರ ಜಡೇಜಾ ಕೈಗೂ ಚೆಂಡನ್ನು ನೀಡಿದ್ರು.
ಆದ್ರೆ ಲಂಚ್ ಬ್ರೇಕ್ ತನಕ ವೇಗಿ ಮಹಮ್ಮದ್ ಸಿರಾಜ್ಗೆ ಬೌಲಿಂಗ್ ಮಾಡಲು ಅವಕಾಶ ನೀಡಲಿಲ್ಲ. ಯಾಕಂದ್ರೆ ಸಿರಾಜ್ ಸಾಮಥ್ರ್ಯ ಏನು ಎಂಬುದು ರಹಾನೆಗೆ ತಿಳಿದಿತ್ತು. ಚೆಂಡು ಹೊಳಪು ಕಮ್ಮಿಯಾಗುತ್ತಿದ್ದಂತೆ ಸಿರಾಜ್ ಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ್ರು. ಅಲ್ಲದೆ ಸಿರಾಜ್ ಯಶಸ್ಸು ಕೂಡ ಸಾಧಿಸಿದ್ದರು.
ಇಲ್ಲಿ ಮುಖ್ಯವಾಗಿ ರಹಾನೆ ಅಂದುಕೊಂಡಂತೆ ಟೀಮ್ ಇಂಡಿಯಾ ಬೌಲರ್ ಗಳು ಕೂಡ ಲಯಬದ್ಧವಾಗಿ ದಾಳಿ ಸಂಘಟಿಸಿದ್ರು. ಅದಕ್ಕೆ ಸರಿಯಾಗಿ ಫೀಲ್ಡಿಂಗ್ ಸೆಟ್ ಕೂಡ ಮಾಡಿದ್ದರು. ಆಸ್ಟ್ರೇಲಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡಾಗ ಒತ್ತಡಕ್ಕೆ ಸಿಲುಕಿತ್ತು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಮೇಲುಗೈ ಸಾಧಿಸಿತ್ತು.
ಆದ್ರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಗೆ ರಹಾನೆ ನಾಯಕತ್ವ ಇಷ್ಟವಾಗಿತ್ತು. ಆದ್ರೆ ಅವರು ನೇರವಾಗಿ ಪ್ರತಿಕ್ರಿಯಿಸಿಲ್ಲ. ಅದಕ್ಕೆ ಕಾರಣವನ್ನು ಗವಾಸ್ಕರ್ ನೀಡಿದ್ದಾರೆ.
ನಾನು ರಹಾನೆ ನಾಯಕತ್ವ ಅದ್ಭುತವಾಗಿತ್ತು ಅಂತ ಹೇಳಿದ್ರೆ ಅದಕ್ಕೆ ನಾನಾ ಬಣ್ಣಗಳು ಅಂಟಿಕೊಳ್ಳುತ್ತವೆ. ಮುಂಬೈನವನಾಗಿ ಮುಂಬೈ ಹುಡುಗ ರಹಾನೆ ಪರ ಇದ್ದಾರೆ ಅಂತ ಹೇಳ್ತಾರೆ. ಅದಕ್ಕಾಗಿ ಏನನ್ನು ಹೇಳುವುದಿಲ್ಲ. ರಹಾನೆ ಈ ಹಿಂದೆಯೂ ತಂಡವನ್ನು ಮುನ್ನಡೆಸಿದ್ದಾರೆ. ಅದನ್ನು ನೋಡಿದಾಗ ರಹಾನೆಗೆ ಪಂದ್ಯದ ಗತಿಯನ್ನು ಅರಿತುಕೊಳ್ಳುವ ಚಾಣಕ್ಷತನ ಇದೆ ಎಂದು ಹೇಳಿದ್ರು.
ಆದರೆ ರಹಾನೆ ನಾಯಕತ್ವದ ಬಗ್ಗೆ ಸ್ಪಷ್ಟವಾಗಿ ಹೇಳಲು ಈಗ ಸಾಧ್ಯವಿಲ್ಲ. ಮುಂದೆ ನೋಡೋಣ ಎಂದಷ್ಟೇ ಹೇಳಿದ್ರು.
ಆದ್ರೆ ಸೆಹ್ವಾಗ್ ಮತ್ತು ಶೇನ್ ವಾರ್ನ್ ಅವರು ರಹಾನೆ ಚಾಣಕ್ಷ ನಾಯಕ ಅಂತ ಹೇಳಿದ್ದಾರೆ.
ಒಟ್ಟಿನಲ್ಲಿ ರಹಾನೆ ನಾಯಕತ್ವ ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿಗೆ ಕಂಟಕವಾದ್ರೂ ಅಚ್ಚರಿ ಏನಿಲ್ಲ.
ಈ ನಡುವೆ ರೋಹಿತ್ ಶರ್ಮಾ ಅವರಿಗೂ ನಾಯಕತ್ವ ನೀಡಬೇಕು ಅನ್ನೋ ಕೂಗು ಕೇಳಿಬರುತ್ತಿದೆ. ಹಾಗೇ ಒಂದು ವೇಳೆ ಅದ್ರೆ ವಿರಾಟ್ ಏಕದಿನ ಪಂದ್ಯಕ್ಕೆ, ರೋಹಿತ್ ಟಿ-ಟ್ವೆಂಟಿ ಪಂದ್ಯಕ್ಕೆ ಹಾಗೂ ರಹಾನೆ ಟೆಸ್ಟ್ ಪಂದ್ಯಕ್ಕೆ ನಾಯಕತ್ವ ವಹಿಸಿದ್ರೂ ಅಚ್ಚರಿ ಏನಿಲ್ಲ.