ಸಾಲು ಸಾಲು ಹೀನಾಯ ಸೋಲುಂಡುತ್ತಿರುವ ಕಾಂಗ್ರೆಸ್ ಸದ್ಯಕ್ಕೆ ಚೇತರಿಸಿಕೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಳಂಬ, ಮಧ್ಯ ಪ್ರದೇಶ ಕಾಂಗ್ರೆಸ್ ಭಿನ್ನಮತ ಮಾತ್ರವಲ್ಲದೇ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಇತರೆ ನಾಯಕರ ಅಸಮಾಧಾನ ಪಕ್ಷದಲ್ಲಿ ಎಲ್ಲವೂ ಗೊಂದಲಮಯವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಕರ್ನಾಟಕ ಕಾಂಗ್ರೆಸ್ ಸಾರಥಿಯ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿ ಎರಡೂವರೆ ತಿಂಗಳಾಗುತ್ತಿದ್ದು, ರಾಜೀನಾಮೆ ಅಂಗೀಕರಿಸದೇ ನೂತನ ಅಧ್ಯಕ್ಷರನ್ನು ಪ್ರಕಟಿಸದೇ ವಿಳಂಬ ನೀತಿ ಅನುಸರಿಸುತ್ತಿವುದು ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ನಮ್ಮ ರಾಜ್ಯ ಸಂಗತಿಯಾದ್ರೆ, ಅತ್ತ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಹಾಗೂ ಜ್ಯೋತಿರಾದಿತ್ಯ ಶಿಂದ್ಯಾ ನಡುವಣ ತಿಕ್ಕಾಟ ಜೋರಾಗಿದೆ. ಆದ್ರೆ ಇದನ್ನು ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗುತ್ತಲೇ ಇಲ್ಲ. ಇದು ನಾನಾ ಅನುಮಾನಗಳಿಗೆ ಕಾರಣವಾಗಿದೆ.
ಕಾರಣ ಏನಾಗಿರಬಹುದು ?
ರಾಜ್ಯಮಟ್ಟದ ಕಾಂಗ್ರೆಸ್ ಪಕ್ಷದ ಒಳಗೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಆದ್ರೆ ಇದರ ಬಗ್ಗೆ ಮಾತ್ರ ಕೈ ಹೈಕಮಾಂಡ್ ತಲೆಕೆಡಿಸಿಕೊಳ್ಳುತ್ತಿಲ್ಲ. ಇದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರಲ್ಲಿರುವ ಅಸಮಾಧಾನವೇ ಕಾರಣ. ವಾಸ್ತವಾಂಶ ಏನೆಂದರೆ ಸದ್ಯ ಕಾಂಗ್ರೆಸ್ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿ ನಂತರ ಸೋನಿಯಾ ಗಾಂಧಿ ಅವರೇ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೆ ಈಗ ನೂತನ ಅಧ್ಯಕ್ಷರ ಆಯ್ಕೆ ಮಾಡುವ ಕುರಿತು ಚರ್ಚೆ ಶುರುವಾಗಿದ್ದು, ರಾಹುಲ್ ಗಾಂಧಿ ಮೌನ ಇತರೆ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೈಕಮಾಂಡ್ ನಲ್ಲೇ ಒಗ್ಗಟ್ಟಿಲ್ಲ, ಹೀಗಾಗಿಯೇ ರಾಜ್ಯದ ನಾಯಕರನ್ನು ಯಾರು ಕಂಟ್ರೋಲ್ ಮಾಡಿ ಪಕ್ಷ ಕಟ್ಟುವತ್ತ ಹೆಜ್ಜೆ ಹಾಕುತ್ತಿಲ್ಲ.
ಈ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿರುವ ಶಶಿ ತರೂರ್, ಸದ್ಯ ಖಾಲಿ ಇರುವ ಪಕ್ಷದ ಸಾರಥ್ಯಕ್ಕೆ ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಸೋಲಿನ ನಂತರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮತ್ತೆ ಈ ಹುದ್ದೆ ಅಲಂಕರಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಪಕ್ಷದ ಮುಂದಾಳತ್ವದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಇತ್ತೀಚಿನ ದೆಹಲಿ ಚುನಾವಣೆಯಲ್ಲಿ ಪಕ್ಷ ಶೂನ್ಯ ಸಾಧನೆ ಮಾಡುವಂತಾಯಿತು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.
ಮಹೇಶ್ ಎಂ ದಂಡು