ದೀಪಾವಳಿಯ ಆ ಒಂದು ನೋವಿನ ಘಟನೆಯೇ ರೆಡ್ ಬಸ್ ತಂತ್ರಜ್ಞಾನಕ್ಕೆ ಪ್ರೇರಣೆಯಾಯ್ತು…!
ಬೆಂಗಳೂರು, ಜುಲೈ15: ಮನುಷ್ಯನ ಜೀವನವೇ ಒಂದು ಹೋರಾಟ . ಆ ಹೋರಾಟದಲ್ಲಿ ಕೆಲವರು ಗೆಲ್ತಾರೆ, ಕೆಲವರು ಸೋಲ್ತಾರೆ, ಕೆಲವರು ಪಾಠ ಕಲಿಯುತ್ತಾರೆ. ಜೀವನದಲ್ಲಿ ತಿರುವುಗಳು ಕೆಲವೊಮ್ಮೆ ನಮ್ಮ ಬದುಕಿನ ಗತಿಯನ್ನು ಹೇಗೆ ತಿರುಗಿಸುತ್ತದೆ ಎನ್ನುವುದು ಊಹಿಸಲು ಅಸಾಧ್ಯ.ಇಂದು ನಾವು, ತನ್ನ ಪ್ರಪಂಚ ಇಷ್ಟೇ ಎಂದು ಅಂದುಕೊಂಡಿದ್ದ ಒಬ್ಬ ವ್ಯಕ್ತಿಯ ಬದುಕಲ್ಲಿ ಹೇಗೆ ತಿರುವೊಂದು ಜೀವನದ ದಿಕ್ಕನ್ನು ಬದಲಾಯಿಸಿತು ಎಂಬ ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಆತ ಫಣಿಂದ್ರ ಸಾಮ್, ಆಂಧ್ರ ಪ್ರದೇಶದ ನಿಜಾಮಭಾದ್ ಜಿಲ್ಲೆಯ ನಿವಾಸಿ(ಈಗ ತೆಲಂಗಾಣ ರಾಜ್ಯದಲ್ಲಿದೆ). ಆತ ಬಿಐಟಿಎಸ್ ಪಿಲಾನಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಇಂಡಿಯನ್ ಇನ್ಸ್ಟಿಟ್ಯೂಟ್ ಓಫ್ ಸೈನ್ಸ್ ನಲ್ಲಿ ಸ್ನಾತಕೋತರ ಪದವಿ ಪಡೆದು ಬೆಂಗಳೂರಿನಲ್ಲಿ ತನ್ನ ಉದ್ಯೋಗ ಆರಂಭಿಸಿದ. ಬದುಕಲ್ಲಿ ಆತ ಅನುಭವಿಸಿದ ಒಂದು ಕಹಿ ಘಟನೆಯಿಂದ ಮುಂದೆ ಇನ್ನೊಬ್ಬರಿಗೆ ಆ ರೀತಿ ಆಗದಿರಲಿ ಎಂದು ಕಾಳಜಿಯಿಂದ ತೆಗೆದುಕೊಂಡ ಒಂದು ನಿರ್ಧಾರ ಆತನ ಜೀವನವನ್ನೇ ಬದಲಾಯಿಸಿತು. ಆ ಒಂದು ನಿರ್ಧಾರ ಆತನನ್ನು 600 ಕೋಟಿ ರೂ. ಗಳ ಒಡೆಯನಾಗಿಸಲು ಕಾರಣವಾಯಿತು ಎಂದರೆ ಅದು ನಿಜಕ್ಕೂ ನಂಬಲಿಕ್ಕೆ ಅಸಾಧ್ಯ.

ಹಬ್ಬ ಬಂದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ಹೇಳತೀರದು. ನೆಲಮಂಗಲ, ಯಲಹಂಕ, ಕೆ ಆರ್ ಪುರ, ಸಿಲ್ಕ್ ಬೋರ್ಡ್ , ಕೆಂಗೇರಿ ದಾಟುವುದೇ ಒಂದು ಹರಸಾಹಸ. ಅದು 2005 ಇಸವಿಯ ದೀಪಾವಳಿ ಸಮಯ. ಎಂದಿನಂತೆ ಫಣಿಂದ್ರ ಊರಿಗೆ ಹೋಗಲು ತನ್ನ ಮಾಮೂಲಿ ಟ್ರಾವೆಲ್ ಏಜೆಂಟ್ ಬಳಿ ಟಿಕೆಟ್ ಬುಕ್ ಮಾಡಲು ತಿಳಿಸುತ್ತಾರೆ. ಆದರೆ ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿದ್ದ ಏಜೆಂಟ್ ಸರಿಯಾದ ಸಮಯಕ್ಕೆ ಆಗಮಿಸಲು ಸಾಧ್ಯವಾಗದೇ ಫಣಿಂದ್ರ ತನ್ನ ಬಸ್ ಮಿಸ್ ಮಾಡಿಕೊಳ್ಳುತ್ತಾರೆ. ಆಗ ಇನ್ನು ದೇಶದಲ್ಲಿ ಡಿಜಿಟಲ್ ಕ್ರಾಂತಿ ಶುರುವಾಗಿರಲಿಲ್ಲ.
ಊರಲ್ಲಿ ತನ್ನ ಹೆತ್ತವರೊಂದಿಗೆ ಜೊತೆಗೂಡಿ ಹಬ್ಬವನ್ನು ಆಚರಣೆ ಮಾಡಬೇಕು ಎಂಬ ಅದಮ್ಯ ಬಯಕೆಯಿಂದ
ಫಣಿಂದ್ರ ಮೆಜೆಸ್ಟಿಕ್ ಸುತ್ತ ಒಂದಿಷ್ಟು ಬ್ರೋಕರ್ಸ್ ನವರಲ್ಲಿ ಟಿಕೆಟ್ ಗಾಗಿ ವಿನಂತಿ ಮಾಡಿಕೊಳ್ಳುತ್ತಾರೆ. ಆದರೆ ಅವರಿಗೆ ಬಸ್ ಟಿಕೆಟ್ ಸಿಗದ ಕಾರಣ ಊರಿಗೆ ತೆರಳಲು ಸಾಧ್ಯವಾಗುವುದಿಲ್ಲ.
ಆದರೆ ಆ ಕಹಿ ಅನುಭವ ಮುಂದೊಂದು ದಿನ ತನ್ನ ಜೀವನಕ್ಕೆ ದೀಪಾವಳಿ ಆಗುತ್ತದೆ ಎನ್ನುವ ಯಾವುದೇ ಕಲ್ಪನೆ ಇಲ್ಲದೆ ಫಣಿಂದ್ರ ಏಜೆಂಟ್ ರಿಗೆ ಹಿಡಿ ಶಾಪ ಹಾಕುತ್ತಾ ದೀಪಾವಳಿ ಹಬ್ಬವನ್ನು ಹೆತ್ತವರೊಂದಿಗೆ ಆಚರಣೆ ಮಾಡಲು ಆಗುತ್ತಿಲ್ಲವಲ್ಲ ಎನ್ನುವ ಸಂಕಟದಲ್ಲಿ ಮನೆ ಕಡೆ ಹೆಜ್ಜೆ ಹಾಕುತ್ತಾರೆ.

ತನ್ನ ಫ್ಲ್ಯಾಟ್ ಗೆ ಮರಳಿದ ಫಣಿಂದ್ರ ವಾರಾಂತ್ಯವನ್ನು ದುಃಖಿಸುತ್ತಾ ಕಳೆಯುತ್ತಾರೆ ಮತ್ತು ಇಂತಹ ಸನ್ನಿವೇಶಕ್ಕೆ ಏನು ಪರಿಹಾರವಿಲ್ಲವೇ ಎಂದು ಯೋಚಿಸುತ್ತಾರೆ. ಅವರು ಒಬ್ಬ ಎಂಜಿನಿಯರ್ ಕೂಡ ಆಗಿದ್ದುದರಿಂದ ಇದಕ್ಕೊಂದು ಪರಿಹಾರ ಕಂಡು ಹಿಡಿಯಬೇಕು ಎಂದು ಯೋಚಿಸುತ್ತಾರೆ. ಕಂಪ್ಯೂಟರ್ ವ್ಯವಸ್ಥೆಯ ಮೂಲಕ ಎಷ್ಟು ಬಸ್ ಗಳು ಪ್ರಯಾಣಿಸುತ್ತದೆ, ಆ ಕ್ಷಣದಲ್ಲಿ ಎಷ್ಟು ಟಿಕೆಟ್ ಬಾಕಿ ಇದೆ ಎಂದು ಮಾಹಿತಿ ದೊರಕುವಂತೆ ಮತ್ತು ಟ್ರಾವೆಲ್ ಏಜೆಂಟ್ ಸಿಸ್ಟಮ್ ಗೆ ಲಾಗ್ ಇನ್ ಆಗಿ, ಸೀಟು ಖಾಲಿ ಇರುವ ಬಸ್ ಆಪರೇಟರ್ ಗಳನ್ನು ಸಂಪರ್ಕಿಸುವಂತ ವ್ಯವಸ್ಥೆಯನ್ನು ಅಭಿವೃದಿ ಪಡಿಸಬೇಕು ಎಂದು ಯೋಚಿಸುತ್ತಾರೆ. ಆ ರಾತ್ರಿ ಅವರು ತನ್ನ ಎಲ್ಲಾ ಸ್ನೇಹಿತರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿ ಮೇಲ್ ಬರೆಯುತ್ತಾರೆ. ವಾರಾಂತ್ಯದಲ್ಲಿ ಅವರು ತಮ್ಮ ನಿಯಮಿತ ಟ್ರಾವೆಲ್ ಏಜೆಂಟರನ್ನು ಭೇಟಿ ಮಾಡಿ ಬಸ್ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ ಎಷ್ಟು ಸಾಧ್ಯವೋ ಅಷ್ಟೂ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಅವರ ಸಂಕೀರ್ಣ ಸಮಸ್ಯೆಗಳಿಗೆ ಉತ್ತರ ನೀಡಲು ವಿಫಲನಾದ ಟ್ರಾವೆಲ್ ಏಜೆಂಟ್ ಫಣಿಂದ್ರಗೆ ಈ ಘಟನೆಯನ್ನು ಮರೆತುಬಿಡುವಂತೆ ಸಲಹೆ ನೀಡುತ್ತಾರೆ.
ಫಣಿಂದ್ರಗೆ ಯಾವುದೇ ಪ್ರೋಗ್ರಾಮಿಂಗ್ ಅಥವಾ ಕೋಡಿಂಗ್ ತಿಳಿದಿಲ್ಲದಿದ್ದರೂ ತಂತ್ರಜ್ಞಾನದಲ್ಲಿ ಇದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕೆಂದು ಅವರು ದೃಢಸಂಕಲ್ಪ ಮಾಡುತ್ತಾರೆ. ಆದರೆ ಬಸ್ ಆಪರೇಟರ್ ಗಳೊಂದಿಗೆ ಟ್ರಾವೆಲ್ ಏಜೆಂಟರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಗುವ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರಗಳನ್ನು ಕಂಡುಹಿಡಿಯಬೇಕಾಗಿತ್ತು. ಅವರ ಕುತೂಹಲವನ್ನು ಯಾರು ಕೂಡ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ಅವರನ್ನು ಪ್ರತಿ ಕಚೇರಿಯಿಂದ ದೂರವಿಡಲಾಗುತ್ತದೆ. ಆದರೆ ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಲು ಜಾಸ್ತಿ ದಿನ ಬೇಕಾಗುವುದಿಲ್ಲ. ಕೊನೆಗೊಂದು ದಿನ ಎಂಜಿನಿಯರ್ ಆಗಿದ್ದ ಯುವ ಟ್ರಾವೆಲ್ ಏಜೆಂಟರನ್ನು ಅವರು ಭೇಟಿಯಾದಾಗ ಫಣಿಂದ್ರ ಅವರಿಗೆ ತಾನು ಏನು ಮಾಡಲು ಹೊರಟಿದ್ದಾನೆ ಎಂದು ಅರ್ಥ ಮಾಡಿಸುತ್ತಾರೆ ಮತ್ತು ಇದರೊಂದಿಗೆ ಬಸ್ ಟಿಕೆಟ್ ಬುಕಿಂಗ್ ನಲ್ಲಿ ಹೊಸತೊಂದು ಯುಗ ಪ್ರಾರಂಭವಾಗುತ್ತದೆ.

ಖಾಸಗಿ ಬಸ್ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಂಡ ನಂತರ, ಅವರು ತಮ್ಮ ಸ್ನೇಹಿತರಾದ ಚರಣ್ ಪದ್ಮರಾಜು ಮತ್ತು ಸುಧಾಕರ್ ಪಸುಪುನೂರಿ ಜೊತೆ ಸೇರಿ ಟ್ರಾವೆಲ್ ಏಜೆಂಟರಿಗೆ ಉಚಿತ, ಮುಕ್ತ ಮೂಲದ ವೇದಿಕೆಯನ್ನು ರಚಿಸಲು ನಿರ್ಧರಿಸುತ್ತಾರೆ. ಫಣಿಂದ್ರ ಅವರು ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಎಷ್ಟು ಉತ್ಸುಕರಾಗಿದ್ದರು ಎಂದರೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಆಗಿದ್ದ ಫಣಿಂದ್ರ ಅವರಿಗೆ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಕಲಿಯುವುದು ಕಷ್ಟವೆಂದು ಅನಿಸುವುದಿಲ್ಲ.
ಸತತ ಒಂದು ತಿಂಗಳುಗಳ ಕಾಲ ಸ್ನೇಹಿತರೊಡಗೂಡಿ ಕೆಲಸ ಮಾಡಿ ಸಾಫ್ಟ್ವೇರ್ನ ಮೊದಲ ಆವೃತ್ತಿಯನ್ನು ಫಣಿಂದ್ರ ತಯಾರಿಸುತ್ತಾರೆ. ಆದರೆ ಟ್ರಾವೆಲ್ ಆಪರೇಟರ್ ಗಳು ಅದನ್ನು ಬಳಸಲು ನಿರಾಕರಿಸಿದಾಗ ಮತ್ತೊಂದು ಹಿನ್ನಡೆ ಉಂಟಾಗುತ್ತದೆ. ಅವರು ಅದರಲ್ಲಿ ಯಾವುದೇ ಮೌಲ್ಯವನ್ನು ನೋಡಲಿಲ್ಲ. ಅವರಿಗೆ ಬೇಕಾಗಿರುವುದು ಅವರ ಮಾರಾಟವನ್ನು ಹೆಚ್ಚಿಸುವುದು ಮತ್ತು ಹೆಚ್ಚಿನ ಟಿಕೆಟ್ ಗಳನ್ನು ಮಾರಾಟ ಮಾಡುವುದು ಎಂದು ಫಣಿಂದ್ರರಿಗೆ ಅರಿವಾಗಿ ಅವರು ನೇರವಾಗಿ ಗ್ರಾಹಕರೇ ಟಿಕೆಟ್ ಕಾಯ್ದಿರಿಸಲು ಅನುವು ಮಾಡುವಂತೆ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾಗ ಜನ್ಮ ತಾಳಿದ್ದೇ “ರೆಡ್ ಬಸ್”

ಆರಂಭಿಕ ಮನವೊಲಿಕೆಯ ನಂತರ ಟ್ರಾವೆಲ್ ಏಜೆಂಟರು ರೆಡ್ ಬಸ್ ತಂತ್ರಜ್ಞಾನ ಅಳವಡಿಸಿಕೊಂಡರು ಮತ್ತು ಅವರ ಮಾರಾಟವು ಸುಧಾರಿಸಿತು. ಅನಕ್ಷರಸ್ಥರು ಮತ್ತು ಕಂಪ್ಯೂಟರ್ ಅನ್ನು ಹೇಗೆ ಬಳಸಬೇಕೆಂದು ತಿಳಿಯದ ಜನರು ಸಹ ರೆಡ್ ಬಸ್ ತಂತ್ರಜ್ಞಾನ ಬಳಸುವುದರಲ್ಲಿ ಪರಿಣಿತರಾಗುತ್ತಾರೆ. ಇಂದು ರೆಡ್ ಬಸ್ ತನ್ನ ಸಾಧನೆಯ ಜೊತೆಗೆ ಅನೇಕ ಪ್ರಯಾಣಿಕರಿಗೆ ಅಂಗೈಯಲ್ಲಿ ಪ್ರಯಾಣದ ಪ್ರಯಾಸವನ್ನು ನೀಗಿಸುವಲ್ಲಿ ಯಶಸ್ಸು ಕಂಡಿದೆ. ರೆಡ್ಬಸ್ ಅನ್ನು ಪ್ರಾರಂಭಿಸಿದಾಗ ಮುಂದಿನ ಐದು ವರ್ಷಗಳಲ್ಲಿ 100 ಬಸ್ ಆಪರೇಟರ್ಗಳು ಇದಕ್ಕೆ ಪ್ರವೇಶಿಸಬಹುದೆಂದು ಅವರು ನಿರೀಕ್ಷಿಸಿದ್ದರು ಆದರೆ ತಾಂತ್ರಿಕ ಉತ್ಕರ್ಷವು ಭಾರತವನ್ನು ಅಪ್ಪಳಿಸಿ, ಮೊದಲ ವರ್ಷದಲ್ಲಿಯೇ ಅವರು ಟ್ರಾವೆಲ್ ಆಪರೇಟರ್ಗಳಿಂದ 400 ನೋಂದಣಿಗಳನ್ನು ಹೊಂದಿದ್ದರು.
ಜೂನ್ 2014, ಐಬಿಬೊ ರೆಡ್ ಬಸ್ ಅನ್ನು 600 ಕೋಟಿ ರೂ. ಗೆ ಮಾರಾಟ ಮಾಡಿದರು. ಫಣಿಂದ್ರ ಇದನ್ನು ಹಣ ಸಂಪಾದಿಸುವ ಉದ್ಯಮವಾಗಿ ಪ್ರಾರಂಭಿಸಲಿಲ್ಲ. ಒಂದು ನೋವಿನ ಸಮಯದಿ ಅನುಭವಿಸಿದ ಯಾತನೆಗೆ ಪರಿಹಾರವನ್ನು ಕಂಡುಕೊಳ್ಳಲು ಮತ್ತು ಇಂತಹ ಸ್ಥಿತಿ ಮುಂದೆ ಯಾರಿಗೂ ಬರಬಾರದೆನ್ನುವ ಗುರಿಯನಿಟ್ಟು ಮಾಡಿದ ಸಾಧನೆಯಲ್ಲಿ ಅರಳಿದ ಖಾಸಗಿ ಬಸ್ ಅಪರೇಟರ್ ಗಳ ಬಸ್ ಸೇವೆಯನ್ನು ಅಧಿಕಮಾಡಿದ ಸುಂದರ ತಂತ್ರಜ್ಞಾನವೇ ರೆಡ್ ಬಸ್.

ನಾವು ಪ್ರಪಂಚವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಯಾವುದೇ ರೀತಿಯ ಹಣ ಕೊಡಬೇಕಾಗಿಲ್ಲ. ಮೊದಲಿಗೆ ಅನೇಕ ದಶಕಗಳಿಂದ ಕೆಲಸ ಮಾಡುತ್ತಿದ್ದ ಜನರು, ಫಣಿಂದ್ರ ಮತ್ತು ಅವರ ಗೆಳೆಯರ ಶ್ರಮ ಮತ್ತು ಅವರ ಪ್ರಯತ್ನಗಳನ್ನು ಮೆಚ್ಚಲಿಲ್ಲವಾದರೂ, ಫಣಿಂದ್ರ ತನ್ನ ಕಲ್ಪನೆಯನ್ನು ಬಿಟ್ಟುಕೊಡಲು ಸಿದ್ಧವಿರದ ಕಾರಣ ರೆಡ್ ಬಸ್ ಎನ್ನುವ ಅಂಗೈಯಲ್ಲಿ ಪಯಣ ಸಾಧ್ಯವಾಯಿತು. ಯಾವುದೇ ದುರುದ್ದೇಶವಿಲ್ಲದೇ, ನಾಲ್ಕು ಜನರಿಗೆ ಸಹಾಯವಾಗಲಿ ಎಂದು ಜನ್ಮತಾಳಿದ ತಂತ್ರಜ್ಞಾನವು ಏರುಗತಿಯಲ್ಲಿ ಸಾಗುತ್ತಾ ವಹಿವಾಟು ಮಾಡಿದ್ದು ನಿಜಕ್ಕೂ ಸ್ಪೂರ್ತಿದಾಯಕ.








