ಮಂಡ್ಯ: ನೊಣಗಳ ಹಾವಳಿಯಿಂದ ಮಂಡ್ಯ ತಾಲೂಕಿನ ಗ್ರಾಮೀಣ ಪ್ರದೇಶದ ಹಲವು ಹಳ್ಳಿಗಳ ಜನರು ಪರದಾಟ ನಡೆಸುತ್ತಿದ್ದಾರೆ. ಹಗಲು ರಾತ್ರಿಯೆನ್ನದೆ ಊರ ತುಂಬೆಲ್ಲಾ ನೊಣಗಳ ಕಾಟದಿಂದ ಜನರು ಬೇಸತ್ತು ಹೋಗಿದ್ದಾರೆ.
ಮಂಡ್ಯ ತಾಲೂಕಿನ ತಿರುಮಲಾಪುರ ಗ್ರಾಮದ ಹೊರ ವಲಯದಲ್ಲಿರುವ ಮಂಜುಶ್ರೀ ಕೋಳಿ ಫಾರಂನಿಂದ ತಿರುಮಲಾಪುರ, ಮಾಡವೀರನಹಳ್ಳಿ, ಬಿದರಕಟ್ಟೆ, ಮಾಯಣ್ಣನ ಕೊಪ್ಪಲು, ಬಸರಾಳು ಗ್ರಾಮಗಳಲ್ಲಿ ನೊಣಗಳ ಕಾಟ ಹೆಚ್ಚಾಗಿದೆ.
ಮನೆಗಳ ಗೋಡೆಗಳು, ಪಾತ್ರೆಗಳು, ಅನ್ನ-ಆಹಾರ, ಹಾಸಿಗೆ, ದಿಂಬುಗಳ ಮೇಲೆಲ್ಲ ನೊಣಗಳು ಕೂರುತ್ತಿದ್ದು, ನೆಮ್ಮದಿಯಿಂದ ಊಟ ಹಾಗೂ ನಿದ್ದೆ ಮಾಡಲೂ ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಸಂಬಧ ಹಲವಾರು ಸಲ ಮನವಿ ಸಲ್ಲಿಸಿದರೂ ಬಸರಾಳು ಗ್ರಾಮ ಪಂಚಾಯಿತಿ ಪಿಡಿಒ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಳಿ ಫಾರಂ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದ್ದಾರೆ.