ಸರ್ವರಿಗೂ ಸೂರು ಒದಗಿಸಲು ವಸತಿ ಇಲಾಖೆ ಬದ್ಧವಾಗಿದೆ: ಸಚಿವ ವಿ.ಸೋಮಣ್ಣ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಅನೇಕಲ್ ಮುಖ್ಯರಸ್ತೆಯಲ್ಲಿ ನಿರ್ಮಿಸಲಾದ ಸೂರ್ಯನಗರ ಒಂದನೇ ಹಂತದ ಸೂರ್ಯ ಎಲಿಗೆನ್ಸ್ ಬಹುಮಹಡಿ ವಸತಿ ಸಮುಚ್ಛಯ ಇಂದು ಲೋಕಾರ್ಪಣೆಯಾಗಿದೆ.
ಬೆಂಗಳೂರಿನಲ್ಲಿ ತಮ್ಮದೊಂದು ಸ್ವಂತ ಮನೆ ಹೊಂದಬೇಕು ಎನ್ನುವ ಜನರ ಮಹದಾಸೆಗೆ ಸೂರ್ಯನಗರ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಸೂರ್ಯ ನಗರ ಒಂದನೇ ಹಂತದ ಸೂರ್ಯ ಎಲಿಗೆನ್ಸಿ ಬಹುಮಹಡಿ ವಸತಿ ಸಮುಚ್ಛಯ ಇಂದು ಲೋಕಾರ್ಪಣೆಯಾಗಿದೆ. 6 ಎಕರೆ 14 ಗುಂಟೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಸೂರ್ಯನಗರ ಹಲವು ವಿಶೇಷತೆಗಳನ್ನು ಹೊಂದಿದೆ.
ಈ ವಸತಿ ಯೋಜನೆಯ ಲೋಕಾರ್ಪಣೆಗೆ ನಾನು ಕಾತುರದಿಂದ ಕಾಯುತ್ತಿದ್ದೆ. ವಸತಿ ಇಲಾಖೆಯ ಸಚಿವನಾಗಿ ಬಡವರ್ಗ ಮತ್ತು ಮಧ್ಯಮ ವರ್ಗದ ಜನರಿಗೆ ಸೂರು ಕಲ್ಪಿಸುವ ಸಂಕಲ್ಪಕ್ಕೆ ಈ ಮೂಲಕ ಬಲ ಬಂದಿದೆ.
ಕರ್ನಾಟಕ ಗೃಹ ಮಂಡಳಿಯ ಎಲ್ಲ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕು. ಅದರಲ್ಲೂ ಬೆಂಗಳೂರಿನಲ್ಲಿ ತಮ್ಮದೊಂದು ಸೂರು ಹೊಂದಬೇಕು ಎಂಬ ಕನಸನ್ನಿಟ್ಟುಕೊಂಡವರಿಗಾಗಿಯೇ ಸೂರ್ಯ ನಗರ ಯೋಜನೆಯನ್ನು ಆರಂಭಿಸಲಾಗಿದೆ.
ಸೂರ್ಯ ನಗರ ಟೌನ್ಶಿಪ್ ಒಟ್ಟು ನಾಲ್ಕು ಹಂತದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ಕರ್ನಾಟಕ ಗೃಹಮಂಡಳಿ ವತಿಯಿಂದ ಸುಸಜ್ಜಿತ ಬಡಾವಣೆ ಸಿದ್ಧವಾಗಿದೆ. ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಸೂರು ಒದಗಿಸುವ ಸೂರ್ಯ ಎಲಿಗೆನ್ಸಿ ಉತ್ತಮ ಯೋಜನಯಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಇನ್ನು, ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಸೂರ್ಯ ಎಲಿಗೆನ್ಸಿ ಫ್ಲಾಟ್ಗಳ ಹಕ್ಕುಪತ್ರವನ್ನು ಸಾಂಕೇತಿಕವಾಗಿ ಸಚಿವ ವಿ.ಸೋಮಣ್ಣ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಶಿವಣ್ಣ, ಎಂ.ನಾರಾಯಣಸ್ವಾಮಿ, ಪುಟ್ಟಣ್ಣ, ಅ.ದೇವೇಗೌಡ, ಸಂಸದ ಡಿ.ಕೆ.ಸುರೇಶ್, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.