ಮಂಗಳೂರು: ಬರೋಬ್ಬರಿ 42 ಸಿಮ್ ಗಳೊಂದಿಗೆ ಬೆಂಗಳೂರಿಗೆ ಹೊರಟ ವೇಳೆ ಯುವಕರು ಅರೆಸ್ಟ್ ಆಗಿದ್ದಾರೆ.
ಈತ ಅಕ್ರಮ ಸಿಮ್ ಗಳೊಂದಿಗೆ ನಿಗೂಢ ಕೆಲಸಕ್ಕಾಗಿ ಬೆಂಗಳೂರಿಗೆ (Bengaluru) ಹೊರಟಿದ್ದರು ಎನ್ನಲಾಗಿದ್ದು, ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರು (Dharmasthala Police) ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ರಮೀಝ್(20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ(22) ಮೊಹಮ್ಮದ್ ಸಾಧಿಕ್ (27) ಅಲ್ಲದೇ, ಓರ್ವ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಅಕ್ಬರ್ ಅಲಿ ಎರಡು ವರ್ಷ ದುಬೈನಲ್ಲಿ ಕೆಲಸ ಮಾಡಿ, ಇತ್ತೀಚೆಗಷ್ಟೇ ಬಂದಿದ್ದ. ಆತ ದುಬೈನಲ್ಲಿ ಇದ್ದುಕೊಂಡೇ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ನೀಡಿ ಅಕ್ರಮ ಸಿಮ್ ಖರೀದಿ ಮಾಡಿಸಿದ್ದ. ಆತನಿಗೆ ವಿದೇಶದ ನಂಟು ಇರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಅಕ್ಬರ್ ಆಲಿ ಸ್ನೇಹಿತ ಮೊಹಮ್ಮದ್ ಮುಸ್ತಫಾನಿಗೆ ಸಿಮ್ ಖರೀದಿಸಲು ಸೂಚಿಸಿದ್ದ. ಮುಸ್ತಫಾ ತನ್ನ ಸ್ನೇಹಿತ ರಮೀಝ್, ಮೊಹಮ್ಮದ್ ಸಾಧಿಕ್ ಗೆಸಿಮ್ ಸಂಗ್ರಹಿಸುವಂತೆ ಹೇಳಿದ್ದ. ಹೀಗಾಗಿ ಇವರಿಬ್ಬರು ಕಮಿಷನ್ ಕೊಡಿಸಿ ಆತ್ಮೀಯರಿಂದ ಸಿಮ್ ಖರೀದಿಸಿ ಮುಸ್ತಫಾನಿಗೆ ಸಿಮ್ ಕೊಡುತ್ತಿದ್ದರು ಎನ್ನಲಾಗಿದೆ. ಆನಂತರ ಅಕ್ಬರ್ ಅಲಿ ಸೂಚಿಸಿದಂತೆ ಬೆಂಗಳೂರು ಮೂಲದವರಿಗೆ ಸಿಮ್ ಕಳುಹಿಸಿಕೊಡಲಾಗುತ್ತಿತ್ತು ಎಂಬುವುದು ಸದ್ಯಕ್ಕೆ ತಿಳಿದು ಬಂದ ಮಾಹಿತಿಯಾಗಿದೆ.