ಹಂದಿ ಎಂದು ತಿಳಿದು ಯುವಕನಿಗೆ ಗುಂಡು
ಮಂಡ್ಯ : ಹಂದಿ ಎಂದು ತಿಳಿದು ಯುವಕನ ಮೇಲೆ ಗುಂಡು ಹಾರಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರದಲ್ಲಿ ನಡೆದಿದೆ.
25 ವರ್ಷದ ಮಾದೇಶ್ ಗಾಯಗೊಂಡಿರುವ ಯುವಕನಾಗಿದ್ದಾರೆ. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ.
ಕಾಡುಹಂದಿಗಳ ಬೇಟೆಯಾಡುವ ಗುಂಪೊಂದು ಕಾಡುಹಂದಿಗಾಗಿ ಮಾದೇಶ್ ಅವರ ಕಬ್ಬಿನ ಗದ್ದೆಯಲ್ಲಿ ಶೋಧ ನಡೆಸಿದ್ದಾರೆ.
ಈ ವೇಳೆ ಗದ್ದೆಯಲ್ಲಿ ಕಬ್ಬಿನ ಗರಿಗಳು ಅಲುಗಾಡಿದ್ದು, ಕೂಡಲೇ ಗುಂಡು ಹಾರಿಸಿದ್ದಾರೆ.
ಆದ್ರೆ ಅಲ್ಲಿ ಮಾದೇಶ್ ಹುಲ್ಲು ಕುಯ್ಯುತ್ತಿದ್ದು, ಬೇಟೆಗಾರರು ಹಾರಿಸಿದ ಗುಂಡು ಮದೇಶನನ್ನು ಹೊಕ್ಕಿದೆ.
ಗುಂಡೇಟಿಗೆ ಮಾದೇಶ್ ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಗಾಯಾಳು ಮಾದೇಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.