ರೈತರು ಬಿಜೆಪಿಯವರಂತೆ ಅಜ್ಞಾನಿ, ಅವಿದ್ಯಾವಂತರಲ್ಲ : ಕಾಂಗ್ರೆಸ್
ಬೆಂಗಳೂರು : ರೈತರು ಕೃಷಿ ಕಾಯ್ದೆಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂಬ ಸುಳ್ಳನ್ನು ಬಿಜೆಪಿ ಬಿತ್ತುತ್ತಿದೆ.
ರೈತರು ಬಿಜೆಪಿಯವರಂತೆ ಅಜ್ಞಾನಿ, ಅವಿದ್ಯಾವಂತರಲ್ಲ, ಕಾಯ್ದೆಗಳ ಹುನ್ನಾರ ಅರಿತೇ ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆಕೊಟ್ಟಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಗೆ ಪ್ರಶ್ನೆಗಳ ಸುರಿಮಳೆಗೈದಿದೆ.
ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ…
ಕರಾಳ ಕೃಷಿ ಕಾಯ್ದೆಗಳು, ಭೂಸುಧಾರಣಾ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ವಿರೋಧಿಸಿ ಅನ್ನದಾತರ ಪ್ರತಿಭಟನೆಗೆ ಅನುಮತಿ ನೀಡದೆ ಬಿಜೆಪಿ ಸರ್ಕಾರ ತನ್ನ ರೈತ ವಿರೋಧಿ ನಿಲುವನ್ನು ಸಾಭೀತು ಮಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಪ್ರತಿ ಪ್ರಜೆಯ ಹಕ್ಕು, ರೈತರಿಂದ ಆ ಹಕ್ಕನ್ನು ಕಸಿದಿದೆ ಬಿಜೆಪಿ.
ರೈತರಿಗೆ ಬೇಡವಾದ ಕೃಷಿ ಕಾಯ್ದೆಗಳ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಹಠಮಾರಿ ಧೋರಣೆ ಏಕೆ? ಸಂಸತ್ತು ಹಾಗೂ ರೈತರಲ್ಲಿ ಕಾಯ್ದೆಗಳ ಚರ್ಚೆಗೆ ಸರ್ಕಾರದ ಹಿಂದೇಟೇಕೆ? ರೈತರ ಪ್ರತಿಭಟನೆಗೆ ವರ್ಷ ಕಳೆಯುತ್ತಾ ಬಂದರೂ ಪ್ರಧಾನಿ ಕಣ್ಣು ಕಿವಿ ಮುಚ್ಚಿಕೊಂಡಿರುವುದೇಕೆ? ಏಕೆಂದರೆ ಪ್ರಧಾನಿ ತಮ್ಮ ಧಣಿಗಳ ಆದೇಶ ಪಾಲಿಸುತ್ತಿದ್ದಾರೆ!
ರೈತರು ಕೃಷಿ ಕಾಯ್ದೆಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂಬ ಸುಳ್ಳನ್ನು ಬಿಜೆಪಿ ಬಿತ್ತುತ್ತಿದೆ. ರೈತರು ಬಿಜೆಪಿಯವರಂತೆ ಅಜ್ಞಾನಿ, ಅವಿದ್ಯಾವಂತರಲ್ಲ, ಕಾಯ್ದೆಗಳ ಹುನ್ನಾರ ಅರಿತೇ ವಿರೋಧಿಸುತ್ತಿದ್ದಾರೆ. ಕಾಯ್ದೆಗಳು ಅನುಕೂಲಕರವೇ ಆಗಿದ್ದರೆ 10 ತಿಂಗಳಿಂದ ರೈತರಿಗೆ ಮನವರಿಕೆ ಮಾಡಲು ಏಕೆ ಸಾಧ್ಯವಾಗಿಲ್ಲ ಸರ್ಕಾರಕ್ಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.