ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ : ಚರಣ್ ಭಾವುಕ ಮಾತು
ಬೆಂಗಳೂರು : ಪುನೀತ್ ರಾಜ್ ಕುಮಾರ್ ಅವರ ಅಕಾಲಿನ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 46ರ ಹರೆಯದಲ್ಲೇ ಈ ಲೋಕದ ಯಾತ್ರೆಯನ್ನು ಮುಗಿಸಿದ್ದ ಅಪ್ಪು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತಾರೆ.
ಒಬ್ಬ ಕಲಾವಿದನಾಗಿ ಸಾಕಷ್ಟು ಹೆಸರು, ಸಾಧನೆ ಮಾಡಿರುವ ಅಪ್ಪು, ಮಾನವೀಯತೆಯ ಗುಣಗಳ ಮೂಲಕವೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿಯೇ ಪುನೀತ್ ನಿಧನದ ನಂತರ ದಕ್ಷಿಣ ಭಾರತದ ಸಾಕಷ್ಟು ನಟರು ಕಂಬನಿ ಮಿಡಿದಿದ್ದಾರೆ.
ಅಪ್ಪು ನಿವಾಸಕ್ಕೆ ಸಾಕಷ್ಟು ನಟರು ಭೇಟಿ ನೀಡಿ ರಾಜ್ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಅದರಂತೆ ಇಂದು ಟಾಲಿವುಡ್ ನ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಇಂದು ಅಪ್ಪು ನಿವಾಸಕ್ಕೆ ಭೇಟಿ ನೀಡಿ ಶಿವಣ್ಣ ಜೊತೆ ಮಾತನಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚರಣ್, ನನಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಈ ಸತ್ಯವನ್ನ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನಗೆ ತುಂಬಾ ದುಃಖವಾಗುತ್ತಿದೆ. ಯಾರಿಗೆ ಏನಾದರೂ ಆದರೆ ನಮಗೆ ಅರ್ಥವಾಗುತ್ತೆ. ಆದರೆ ಪುನೀತ್ ಅವರಿಗೆ ಈ ರೀತಿಯಾಗಿದ್ದು, ನನಗೆ ನಿಜವಾಗಿಯೂ ತುಂಬಾ ದುಃಖ ತಂದಿದೆ ಎಂದು ಭಾವುಕರಾದರು.
ಇಂತಹ ಹಂಬಲ್ ವ್ಯಕ್ತಿಗೆ ಈ ರೀತಿ ಆಗಿರುವುದನ್ನು ನನಗೆ ತುಂಬಾ ದುಃಖ ತಂದಿದೆ. ಇಂತಹ ಪ್ರೀತಿ ತುಂಬಿದ ವ್ಯಕ್ತಿ ಎಲ್ಲಿಯೂ ಹುಟ್ಟಿಲ್ಲ. ನಮ್ಮ ಮನೆಗೆ ಬಂದು ಅವರು ನಮ್ಮ ಮನೆಯವರಂತೆ ಬೇಗ ಹೊಂದಿಕೊಂಡಿದ್ದರು. ನಮ್ಮ ಮನೆಗೆ ಪುನೀತ್ ಬಂದರೇ ಅತಿಥಿ ಎಂಬ ಭಾವನೆಯೇ ಬಂದಿಲ್ಲ. ನಮ್ಮ ಮನೆಗೆ ಬಂದರೆ ಅವರು ನಮ್ಮವರು ಎಂಬಂತೆ ಎಲ್ಲರ ಜೊತೆ ಬೇಗ ಹೊಂದಿಕೊಳ್ಳುವ ಗುಣ ಇತ್ತು. ಎಲ್ಲರನ್ನು ನಮ್ಮವರು ಎಂದು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಎಂದು ಪುನೀತ್ ಅವರನ್ನ ನೆನೆದು ಭಾವುಕರಾದರು.









