ಟಿಪ್ಪು ಇಸ್ ಸೆಕ್ಯುಲರ್ ಕಿಂಗ್.. ಯಾರೇ ಬಂದ್ರೂ ವಾದ ಮಾಡಲು ಸಿದ್ಧ : ಸಿದ್ದರಾಮಯ್ಯ
ಬೆಂಗಳೂರು : ಟಿಪ್ಪು ಇಸ್ ಸೆಕ್ಯುಲರ್ ಕಿಂಗ್. ಯಾರೇ ಬಂದ್ರೂ ನಾನು ವಾದ ಮಾಡಲು ಸಿದ್ಧ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಸಿದ್ದರಾಮಯ್ಯ ಅವರು ಶಿವಾನಂದ ವೃತ್ತದ ಸಮೀಪವಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಟಿಪ್ಪು ಜಯಂತಿ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ಇ.ತುಕಾರಾಂ, ಜಮೀರ್ ಅಹ್ಮದ್ ಖಾನ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಭಾಗವಹಿಸಿದ್ದರು.
ಜಯಂತಿ ಆಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಎಲ್ಲರಿಗೂ ಟಿಪ್ಪು ಜಯಂತಿಯ ಶುಭಾಶಯಗಳನ್ನು ಕೋರಿದರು. ಆನಂತರ ಟಿಪ್ಪು ಸಾಧನೆಗಳನ್ನು ಕೊಂಡಾಡಿದರು.
ಬಿಜೆಪಿಯವರು ಟಿಪ್ಪುವನ್ನು ಮತಾಂಧ ಅಂತ ಹೇಳಿದರು. ಅವರು ಯಾವತ್ತೂ ಮತಾಂಧ ಆಗಿರಲಿಲ್ಲ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರು.
ನಮ್ಮ ಸರ್ಕಾರ ಟಿಪ್ಪು ಜಯಂತಿ ಮಾಡಿದ್ದಕ್ಕೆ ಹೆಮ್ಮೆ ಪಡುತ್ತೇವೆ. ಯುದ್ದ ಮಾಡುತ್ತಿರುವಾಗಲೇ ಟಿಪ್ಪು ಸಾವನ್ನಪ್ಪಿದರು. ಅವರ ತ್ಯಾಗಕ್ಕೆ ಜಯಂತಿ ಮಾಡಿದರೆ ಏನು ತಪ್ಪು ಎಂದು ಪ್ರಶ್ನಿಸಿದರು.
ಇದೇ ವೇಳೆ ಬಿಜೆಪಿ ನಾಯಕ ವಿರುದ್ಧ ಕಿಡಿಕಾರಿದ ಅವರು, ಆರ್ ಎಸ್ ಎಸ್ನವರಿಗೆ ಕಾಮಾಲೆ ಕಣ್ಣು. ಅವರು ವಿರೋಧ ಮಾಡುತ್ತಾರೆ.
ಕೆಜೆಪಿ ಮಾಡಿದಾಗ ಬಿಎಸ್ವೈ, ಜಗದೀಶ್ ಶೆಟ್ಟರ್, ಅಶೋಕ್ ಟಿಪ್ಪು ಖಡ್ಗ ಹಿಡಿದಿದ್ದರು. ಬಿಜೆಪಿಗರಿಗೆ ಒಂದೇ ನಾಲಿಗೆ ಇಲ್ಲ. ಎರಡೆರಡು ನಾಲಿಗೆ ಬಿಜೆಪಿಗರಿಗಿದೆ.
ನಮಗೆ ಒಂದೇ ನಾಲಿಗೆ ಇದೆ. ಹಾಗಾಗಿ ಒಂದೇ ಮಾತನಾಡುತ್ತೇವೆ. ಕನ್ನಂಬಾಡಿ ಕಟ್ಟೆಗೆ ಅಡಿಪಾಯ ಹಾಕಿದ್ದೇ ಟಿಪ್ಪು. ವಿದೇಶಿ ವ್ಯಾಪಾರ ಕುದುರಿಸಿದ್ದೇ ಟಿಪ್ಪು.
ಟಿಪ್ಪು ಇಸ್ ಸೆಕ್ಯುಲರ್ ಕಿಂಗ್. ಯಾರೇ ಬಂದ್ರೂ ನಾನು ವಾದ ಮಾಡಲು ಸಿದ್ದ ಎಂದು ಸಿದ್ದರಾಮಯ್ಯ ಹೇಳಿದ್ದಾರೆ