ಯಾವ ಪುಟುಗೋಸಿ ಟಿಪ್ಪು ಬಗ್ಗೆ ಮಾತಾಡ್ತೀರಿ : ಕಾಂಗ್ರೆಸ್ ವಿರುದ್ಧ ಗೋ.ಮಧುಸೂದನ್ ಕಿಡಿ
ಬೆಂಗಳೂರು : ಯಾವ ಪುಟುಗೋಸಿ ಟಿಪ್ಪು ಬಗ್ಗೆ ಮಾತಾಡ್ತೀರಿ? ನಾಚಿಕೆಗೆಟ್ಟ ಕಾಂಗ್ರೆಸ್ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ ಮಧುಸೂದನ್ ಅವರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಅಲ್ಪ ಸಂಖ್ಯಾತ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಗಡಿ ಹೇಳಿಕೆ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಗೋ.ಮಧುಸೂದನ್, ನೀವು ಟಿಪ್ಪು ವಂಶಸ್ಥರಿರಬಹುದು, ಬಾಬರ್ ವಂಶಸ್ಥರಿರಬಹುದು, ಅಲ್ಲಾವುದ್ದೀನ್ ಖಿಲ್ಜಿ ವಂಶಸ್ಥರಿರಬಹುದು.
ದೇಶದ ಮೇಲೆ ದಾಳಿ ಮಾಡಿದ ಯಾವುದೇ ದುರಾಕ್ರಮಣಿಗಳ ವಂಶಸ್ಥರಿರಬಹುದು.
ಆಕ್ರಮಣ ಮಾಡಿದವರೆಲ್ಲ ಪರಾಸ್ತ್ರರಾಗಿದ್ದಾರೆ ವಿನಃ ದೇಶ ಸಾವಿರಾರು ವರ್ಷಗಳಿಂದ ಹಾಗೇ ಉಳಿದಿದೆ.
ಇದು ದೇವಭೂಮಿ ಭಾರತ. ಯಾರು ಏನೇ ಪ್ರಯತ್ನಿಸಿದರು ಭಾರತ ಹಿಂದೂ ಭೂಮಿಯಾಗಿ ಉಳಿಯಲಿದೆ. ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.
ಮುಂದುವರೆದು ಅಬ್ಬರಿಸಿದ ಮಧುಸೂದನ್, ಹಿಂದೂಗಳು ತಾಳ್ಮೆ, ಸಹನೆಯಿಂದ ಇದ್ದಾರೆ.
ಹಿಂದೂಗಳು ಹೇಡಿಗಳು ಅನ್ನೋ ಮನೋಭಾವನೆಯಿಂದ ಇರಬೇಡಿ, ಹಿಂದೂ ಎದ್ದರೆ ಕೇಸರಿ, ಹಿಂದೂ ಎದ್ದರೆ ವ್ಯಾಘ್ರ, ನಮ್ಮನ್ನು ಕೆರಳಿಸಬೇಡಿ, ಈ ದೇಶವನ್ನು ಉಳಿಸಿಕೊಳ್ಳೋದು ಹಿಂದುಗಳಿಗೆ ಗೊತ್ತಿದೆ ಎಂದರು.
ಇಮ್ರಾನ್ ಹೇಳಿದ್ದೇನು..?
ನಿನ್ನೆ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಲ್ಪ ಸಂಖ್ಯಾತ ಘಟಕದ ಆಧ್ಯಕ್ಷ ಇಮ್ರಾನ್ ಪ್ರತಾಪ್ ಘರ್ ಮಾತನಾಡಿ, ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದವರು.
ನಿಮಗೆ ತಲೆ ಕತ್ತರಿಸುವುದು ಗೊತ್ತಿದೆ. ತಲೆ ತಗ್ಗಿಸುವುದು ಗೊತ್ತಿಲ್ಲ ನಿಮಗೆ ತಲೆ ಬಾಗುವುದು ತಿಳಿದಿಲ್ಲ. ತಲೆ ಎತ್ತುವುದು ತಿಳಿದಿದೆ ಎಂದಿದ್ದರು.
ಈ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯಿತು.