ಕೊನೆಗೂ ಈಡೇರದ ಭಾರತೀಯರ ಕನಸು.. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲು
ಕೊನೆಗೂ ಈಡೇರಲಿಲ್ಲ ಕೋಟ್ಯಂತರ ಭಾರತೀಯರ ಕನಸು. ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಆಸೆ ಈ ಬಾರಿಯೂ ಈಡೇರಲಿಲ್ಲ. 29 ವರ್ಷಗಳ ಕಾಯುವಿಕೆ ಮತ್ತೆ ಮುಂದುವರೆದಿದೆ.
ಹೌದು..! ಈ ಬಾರಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ಚರಿತ್ರೆ ಸೃಷ್ಠಿಸುತ್ತೆ ಅಂತಾ ಎಲ್ಲರು ಅಂದುಕೊಂಡಿದ್ದರು.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದೆ ಗೆಲ್ಲುತ್ತೆ ಎಂಬ ವಿಶ್ವಾಸ ಭಾರತೀಯರಲ್ಲಿತ್ತು.
ಆದ್ರೆ ಕೇಟ್ ಟೌನ್ ನಲ್ಲಿ ನಡೆದ ಅಂತಿಮ ಮತ್ತು ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲುಂಡಿದೆ.
ಮೊದಲೆರಡು ಪಂದ್ಯಗಳನ್ನು ತಲಾ ಒಂದು ತಂಡ ಗೆದ್ದಿದ್ದರಿಂದ ಸರಣಿ ಡ್ರಾ ಆಗಿತ್ತು. ಸರಣಿ ವಶಪಡಿಸಿಕೊಳ್ಳಲು ಕೇಪ್ ಟೌನ್ ನಲ್ಲಿ ನಡೆಯುವ ಪಂದ್ಯ ಗೆಲ್ಲಲೇ ಬೇಕಿತ್ತು.
ಇದಕ್ಕಾಗಿ ಉಭಯ ತಂಡಗಳು ಭಾರಿ ಕಸರತ್ತು ನಡೆಸಿದ್ದವು. ಆದ್ರೆ ಕೊನೆಗೆ ವಿಜಯ ಲಕ್ಷ್ಮಿ ದಕ್ಷಿಣ ಆಫ್ರಿಕಾ ಕಡೆ ನಿಂತಿದೆ.
ಪಂದ್ಯ ಗೆಲ್ಲಲು 212 ರನ್ ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತ್ತು.
ಆ ಮೂಲಕ ಮೂರು ಮ್ಯಾಚ್ ಗಳ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 223 ರನ್ ಗಳಿಗೆ ಆಲೌಟ್ ಆಯಿತು. ಈ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ 79 ರನ್ , ಪೂಜಾರ 43 ರನ್ ಗಳಿಸಿದ್ದರು.
ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 210ಕ್ಕೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಪರ ಕೀಗನ್ ಪಿಟರ್ಸನ್ 72 ರನ್ ಗಳಿಸಿದರು. ಭಾರತದ ಪದ ಬುಮ್ರಾ 5 ವಿಕೆಟ್ ಪಡೆದು ಮಿಂಚಿದ್ದರು.
12 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ರಿಷಬ್ ಪಂತ್ ರ ಶತಕದ ನೆರವಿನಿಂದ ಭಾರತ 198 ರನ್ ಗಳಿಸಿತು. ಆ ಮೂಲಕ ದಕ್ಷಿಣ ಆಫ್ರಿಕಾಗೆ ಸರಣಿ ಗೆಲ್ಲಲು 212 ರನ್ ಗಳ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮೂರು ವಿಕೆಟ್ ಕಳೆದುಕೊಂಡು 212 ರನ್ ಗಳಿಸಿ ಗೆಲುವಿನ ಕೇಕೆ ಹಾಕಿದೆ.
ಎರಡೂ ಇನ್ನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾದ ಬ್ಯಾಟರ್ ಕೀಗನ್ ಪಿಟರ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಬಾಜನರಾಗಿದ್ದಾರೆ.