Bengalore | ಮಾ.10ಕ್ಕೆ ವಸತಿ ಇಲಾಖೆಯ 900 ಮನೆಗಳ ಹಂಚಿಕೆ : ವಿ. ಸೋಮಣ್ಣ
ಬೆಂಗಳೂರು: ಯಲಹಂಕ ವಿಧಾನ ಸಭಾ ಕ್ಷೇತ್ರದಲ್ಲಿ ರಾಜೀವ್ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ 900 ಮನೆಗಳನ್ನು ಮಾ.10 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಇಂದು ಯಲಹಂಕದ ಸಾದೇನಹಳ್ಳಿ, ಅಗ್ರಹಾರಪಾಳ್ಯ ಮತ್ತು ಪಿಲ್ಲಹಳ್ಳಿಗಳಲ್ಲಿ ನಿರ್ಮಿಸಲಾಗುತ್ತಿರುವ ಬಹುಮಹಡಿ ಕಟ್ಟಡಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಸೂರಿಲ್ಲದವರಿಗೆ ಸೂರು’ ಎಂಬ ಧ್ಯೇಯದಡಿ 2016-17 ಮತ್ತು 2017-18 ರಲ್ಲಿ ‘ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಗೆ 600 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದ್ದರು.
ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ನಂತರ ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯಲ್ಲಿ 535 ಎಕರೆ ಪ್ರದೇಶವನ್ನು ಸ್ವಾಧೀನ ಮಾಡಿಕೊಂಡಿದ್ದು, 46 ಸಾವಿರ ಮನೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಯಲಹಂಕದಲ್ಲಿ 900 ಮನೆಗಳನ್ನು ನಿರ್ಮಿಸುವ ಕಾರ್ಯ ಅತಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದರು.
ಮುಖ್ಯಮಂತ್ರಿಗಳು ಯಲಹಂಕ ಕ್ಷೇತ್ರದ ಮೂರು ಸ್ಥಳದಲ್ಲಿ ನಿರ್ಮಿಸಲಾದ 900ಕ್ಕೂ ಅಧಿಕ ಮನೆಗಳನ್ನು ಮಾ.11ರಂದು ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಂಚಿಕೆ ಮಾಡಲಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ 46 ಸಾವಿರ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಅರ್ಹ ಬಡವರಿಗೆ ವಿತರಿಸಲಾಗುತ್ತದೆ ಎಂದರು.
ಯಲಹಂಕ ಕ್ಷೇತ್ರದಲ್ಲಿ 15 ಸಾವಿರಕ್ಕೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಉಳಿದಂತೆ 54 ಸಾವಿರ ಮನೆಗಳ ನಿರ್ಮಾಣ ಕಾರ್ಯಗಳನ್ನು ಶೀಘ್ರ ಕೈಗೊಂಡು ವಸತಿ ಇಲ್ಲದವರಿಗೆ ಸೂರು ಒದಗಿಸಲಾಗುವುದು ಎಂದು ತಿಳಿಸಿದರು.
5 ಲಕ್ಷ ರೂ.ಗೆ ಸ್ವಂತ ಮನೆ:
ವಸತಿ ಇಲಾಖೆ ನಿರ್ಮಿಸುತ್ತಿರುವ ಮನೆಗಳನ್ನು ಕೂಲಿ ಕಾರ್ಮಿಕರು, ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು, ಬೀಡಿ ಕಟ್ಟುವವರು, ಬೀದಿ ಬದಿ ವ್ಯಾಪಾರಿಗಳು ಸೇರಿ ಅರ್ಹ ಬಡವರಿಗೆ ಮನೆಗಳನ್ನು ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಜನರು ರೂ.5.5 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 5 ಲಕ್ಷ ರೂ. ಪಾವತಿಸಬೇಕು. ಈಗಾಗಲೇ ಅರ್ಜಿ ಸಲ್ಲಿಸಿ ಆಯ್ಕೆಯಾದವರು 1 ಲಕ್ಷ ರೂ. ಕಟ್ಟಿದ್ದಾರೆ. ಉಳಿದ ಹಣವನ್ನು ವಸತಿ ಇಲಾಖೆ ಸೂಚಿಸಿದ ಬ್ಯಾಂಕ್ಗಳಿಗೆ ಹಣ ಪಾವತಿಸಬೇಕು. ಬ್ಯಾಂಕ್ನಲ್ಲಿ ಸಾಲ ಸೌಲಭ್ಯ ಒದಗಿಸಲು ಶೇ.6 ರೂ. ಬಡ್ಡಿ ದರದಲ್ಲಿ ಕೆಲವು ಬ್ಯಾಂಕ್ಗಳಲ್ಲಿ ಮನವಿ ಮಾಡಲಾಗಿದೆ. ಸಾಲ ತೀರಿಸುವ ಅವಧಿಯನ್ನು ಕಂತಿನ ಆಧಾರದಲ್ಲಿ 20 ವರ್ಷಗಳ ಅವಧಿಯನ್ನು ನೀಡುವಂತೆ ಬ್ಯಾಂಕ್ನಲ್ಲಿ ಮನವಿ ಮಾಡಲಾಗಿದೆ ಎಂದರು..
5 ಲಕ್ಷ ಮನೆ ಮಾರಾಟ ಬೇಡ:
ಮನೆ ಖರೀದಿಗೆ ವಾರ್ಷಿಕ ಆದಾಯ 87 ಸಾವಿರ ರೂ. ಗಳಿಗೆ ನಿಗದಿ ಮಾಡಲಾಗಿತ್ತು. ಆದರೆ, ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ನಂತರ ವಾರ್ಷಿಕ ಆದಾಯ 3 ಲಕ್ಷ ರೂ ಇದ್ದವರೂ ವಸತಿ ಮನೆ ಪಡೆಯಲು ಅರ್ಜಿ ಸಲ್ಲಿಸಲು ಅರ್ಹರು ಎಂದು ಆದೇಶಿಸಿದ್ದಾರೆ. ಆದ್ದರಿಂದ ನಗರದಲ್ಲಿ 1 ಮನೆಗಳನ್ನು ನಿರ್ಮಿಸುವ ಮೂಲಕ ಬಿಜೆಪಿ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ. ಇನ್ನು ವಸತಿ ಮನೆಗಳನ್ನು ಖರೀದಿ ಮಾಡಿದವರು ಕನಿಷ್ಠ 5 ವರ್ಷ ಯಾರಿಗೂ ಮಾರಾಟ ಮಾಡಬಾರದು. ಒಂದು ಕುಟುಂಬಕ್ಕೆ ಒಂದೇ ಮನೆ ನೀಡಲಾಗುತ್ತದೆ. ಆಧಾರ್ ಕಾರ್ಡ್ ಜೋಡಣೆಯಿಂದ ಎಲ್ಲ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಲಿದೆ. ಒಂದು ವೇಳೆ ಯಾವುದೇ ಕುಟುಂಬದ ಸದಸ್ಯರು ಒಂದಕ್ಕಿಂತ ಹೆಚ್ಚು ಮನೆಗಳನ್ನು ಖರೀದಿಗೆ ಅರ್ಜಿ ಸಲ್ಲಿಸಿದಲ್ಲಿ ಅವರ ಹಣ ಮತ್ತು ಮನೆ ಎರಡನ್ನೂ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್ , ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಡಾ. ಎಸ್.ಬಸವರಾಜು , ಮುಖ್ಯ ಅಭ್ಯಂತರರು ಸಣ್ಣ ಚಿತ್ತಯ್ಯ ಮತ್ತಿತರರು ಉಪಸ್ಥಿತರಿದ್ದರು.









