Bangalore | ಹಂತ ಹಂತವಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಬೇಕಿತ್ತು : ಎಮ್. ಮದನ್ ಗೋಪಾಲ್
ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಸಂವಾದ ಕಾರ್ಯಕ್ರಮ
ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತವಾಗಿದೆ : ಪ್ರೊ. ಗೌರೀಶ್ ಜೋಷಿ
ಬೆಂಗಳೂರು : ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಂತ ಹಂತವಾಗಿ ಜಾರಿಗೆ ತರಬಹುದಿತ್ತು. ಉನ್ನತ ಶಿಕ್ಷಣ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವುದಕ್ಕೂ ಮೊದಲು ಸ್ವಲ್ಪ ಯೋಚನೆ ಮಾಡಬೇಕಿತ್ತು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯ ಕರ್ನಾಟಕ ಟಾಸ್ಕ್ ಫೋರ್ಸ್ ನ ಚೇರ್ ಮೆನ್ ಹಾಗೂ ನಿವೃತ್ತ ಐಎಸ್ ಅಧಿಕಾರಿ ಎಮ್. ಮದನ್ ಗೋಪಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಸವಾಲುಗಳು ಮತ್ತು ಅವಕಾಶಗಳು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಘೋಷಣೆ ಮಾಡಿದ ಕೂಡಲೇ ಕಾಲೇಜಿಗಳಲ್ಲಿ ಅನುಷ್ಠಾನ ಬರುತ್ತೆ ಅಂತಾ ನನಗೆ ಅನಿಸುತ್ತಿಲ್ಲ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ನಿಯಮಾವಳಿಯ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಹೆಚ್ಚಿನ ಚರ್ಚೆಯಾಗಬೇಕಿದೆ. ಮುಂದಿನ ವರ್ಷ ಮೊದಲ ಹಂತವಾಗಿ ನರ್ಸರಿ ಮಟ್ಟದಲ್ಲಿ ಈ ನೀತಿ ಜಾರಿ ಮಾಡಬೇಕು. ತರಗತಿ ಮೂರರಿಂದ ಹೊಸ ಶಿಕ್ಷಣ ನೀತಿ ಜಾರಿ ಮಾಡುವಾಗ ನಾವು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಶಾಲಾ ಮಟ್ಟದ ಶೈಕ್ಷಣಿಕ ಸುಧಾರಣೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದ್ರೆ ಉನ್ನತ ಶಿಕ್ಷಣ ಮಟ್ಟದಲ್ಲಿ ಸರ್ಕಾರ ಇನ್ನಷ್ಟು ಗಮನಹರಿಸಬೇಕಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಮತ್ತು ಸಮಗ್ರವಾಗಿ ಅರ್ಥಮಾಡಿಕೊಂಡು ಕಾರ್ಯರೂಪಕ್ಕೆ ತರುವಲ್ಲಿ ನಾವು ಎಡವುತ್ತಿದ್ದೇವೆ ಎಂದು ಹೇಳಿದ್ರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಮತ್ತು ಜವಾಬ್ದಾರಿಯನ್ನು ಅತ್ಯಂತ ವಿವರವಾಗಿ ಚರ್ಚಿಸಲಾಗಿದೆ. ತರಗತಿ-3, ತರಗತಿ -6 ಮತ್ತು ತರಗತಿ-9ರ ಹಂತಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಅಭಿಮತ ವ್ಯಕ್ತಪಡಿಸಿದ್ರು.
ಇನ್ನು ಸಿಇಎಸ್ಎಸ್ ನಿರ್ದೇಶಕರಾದ ಪ್ರೊ. ಗೌರೀಶ್ ಜೋಷಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತವಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಒಟ್ಟಾರೆ ಸೂತ್ರಗಳನ್ನು ಅತ್ಯಂತ ನಿಖರವಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದರು.
ಸಮಾಜದ ವಿವಿಧ ವರ್ಗಗಳಾದ ಸಾಮಾಜಿಕ ಆರ್ಥಿಕ ವರ್ಗದ ಜೊತೆ ಬೇರೆ ಬೇರೆ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಶೈಕ್ಷಣಿಕ ವಲಯ ಸೃಷ್ಟಿಸಬೇಕಿದೆ. ಕೇವಲ ತಯಾರಿ ಹಂತವನ್ನೇ ಮುಂದುವರೆಸಿಕೊಂಡು ಹೋದರೆ ಅದು ತಯಾರಿ ಹಂತದಲ್ಲಿಯೇ ಇರುತ್ತದೆ. ನಾವೀಗ ರಾಷ್ಟ್ರೀಯ ಶೈಕ್ಷಣಿಕ ನೀತಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕಿರುವ ಹಂತದಲ್ಲಿದ್ದೇವೆ. ಕೇಂದ್ರ ರೂಪಿಸಿರುವ ಉನ್ನತ ಶಿಕ್ಷಣದ ನೀತಿಯನ್ನು ಸಹ ಕೂಲಂಕೂಷವಾಗಿ ಅಧ್ಯಯನ ನಡೆಸಬೇಕಿದೆ. ಹಾಗೇ ಮಾರ್ಪಾಡುಗಳಿದ್ದರೆ ಬದಲಾವಣೆ ಮಾಡಿಕೊಂಡು ಶೀಘ್ರದಲ್ಲಿಯೇ ಜಾರಿಗೊಳಿಸಬೇಕಾಗಿದೆ ಎಂದು ಅವರು ಹೇಳಿದ್ರು.
ಈ ಸಂವಾದ ಕಾರ್ಯಕ್ರಮದಲ್ಲಿ ಯೂನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಆರ್. ಉಪೇಂದ್ರ ಶೆಟ್ಟಿಯವರು ಹಾಗೂ ದಕ್ಷಿಣ ಭಾರತದ ವಿವಿಧ ಕಾಲೇಜಿನ ಪ್ರಿನ್ಸಿಪಾಲ್ ಗಳು ಸೇರಿದಂತೆ ಶಿಕ್ಷಣ ಸಂಸ್ಥೆಯ ಭೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. NEP Conversation Program by Universal Group Education









