ಲಕ್ಕಸಂದ್ರ ಕೆರೆಯನ್ನು ಉಳಿಸಿಕೊಡಿ : ಸಿಎಂಗೆ ಜಯ ಕರ್ನಾಟಕ ಜನಪರ ವೇದಿಕೆ ಮನವಿ
ಬೆಂಗಳೂರು : ನಗರದ ಲಕ್ಕಸಂದ್ರ ಕೆರೆಯ ಜಾಗವನ್ನು ಕಲ್ಲು ಬಂಡೆಯನ್ನಾಗಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪರಿವರ್ತಿಸಿದ್ದು ಕೂಡಲೇ ರದ್ದುಪಡಿಸಿ, ಆರ್.ಟಿ.ಸಿ ದಾಖಲೆಯಲ್ಲಿ ಮತ್ತೆ ಕೆರೆಯನ್ನಾಗಿ ಸೇರಿಸಬೇಕೆಂದು ಜಯ ಕರ್ನಾಟಕ ಜನಪರ ವೇದಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಮನವಿ ಮಾಡಿದೆ.
ಲಕ್ಕಸಂದ್ರ ಕೆರೆಯ ವಿಚಾರವಾಗಿ ಇಂದು ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ನೇತೃತ್ವದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು. ಈ ವೇಳೆ ಬೆಂಗಳೂರಿನ ಸರ್ವೇ ನಂಬರ್ 14 ರಲ್ಲಿ 10 ಎಕರೆ 4 ಗುಂಟೆ ವಿಸ್ತೀರ್ಣ ಹೊಂದಿದ್ದ ಲಕ್ಕಸಂದ್ರ ಕೆರೆಯ ಜಾಗವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಾಗಿ ಪರಿವರ್ತಿಸಲಾಗಿದೆ.
ಈ ಕೂಡಲೆ ಇದನ್ನು ರದ್ದುಮಾಡಿ ಆರ್.ಟಿ.ಸಿ ದಾಖಲೆಯಲ್ಲಿ ಮತ್ತೆ ಕೆರೆಯನ್ನಾಗಿ ಸೇರಿಸಬೇಕು. ಹಾಗೂ ಪ್ರಸ್ತುತ ಈ ಸ್ಥಳದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಇದು ಮುಗಿದ ಬಳಿಕ ಕೆರೆಯನ್ನು ಪುನರ್ ಜೀವನಗೊಳಿಸುತ್ತೇವೆ ಎಂದು ತಿಳಿಯುವಳಿಕೆ ಜ್ಞಾಪಕ ಪತ್ರದಲ್ಲಿ ಸಹಿ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.
ಅಲ್ಲದೆ ಘನವೆತ್ತ ನ್ಯಾಯಾಲಯದ ಆದೇಶದಂತೆ ಈ ಕೂಡಲೇ ಕೆರೆಯ ಜಾಗವನ್ನು ಸರ್ವೇಮಾಡಿ ಕಾನೂನು ಬಾಹಿರವಾಗಿ ಅತಿಕ್ರಮಣವಾಗಿರುವುದನ್ನು ತೆರವುಗೊಳಿಸಿ ಕೆರೆಯ ಜಾಗವನ್ನು ಹದ್ದುಬಸ್ತು ಮಾಡಬೇಕೆಂದು ಕೋರಿಕೊಂಡರು.
ಇದಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಸ್ಪಂದಿಸಿದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚಿಸಿ ಶೀಘ್ರದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಐಕೇರ್ ಬ್ರಿಗೇಡ್ ಸಂಸ್ಥೆಯ ಪ್ರಸಾದ್ ಮತ್ತು ಶ್ರೀ ಮತಿ ಪೂರ್ಣಿಮ ರವರು ಶ್ರೀಮತಿ ಶಿಲ್ಪಾ ಹಾಗೂ ಸ್ಪೂರ್ತಿ ಇನ್ನಿತರರು ಉಪಸ್ಥಿತರಿದ್ದರು.