ಕೃಪೆ – ಹಿಂಡವಿ
ವನ್ಯ ಅನ್ವೇಷಿ:
ನೀಲಗಿರಿ ಕಾಡಿನ ವೃದ್ಧ ವ್ಯಾಘ್ರದ ಸೆರೆ ಕಾರ್ಯಾಚರಣೆ ಪೂರ್ಣಗೊಳಿಸಿದ್ದು ನಮ್ಮ ಬಂಡೀಪುರದ ಡಾನ್ ರಾಣಾ!:
ತಮಿಳುನಾಡಿನ ನೀಲಗಿರಿ ಜಿಲ್ಲೆಯ ನರಹಂತಕ ಹುಲಿ ಕೊನೆಗೂ ಸೆರೆಯಾಗಿದೆ. ಅರಣ್ಯ ಇಲಾಖೆ ಮತ್ತು ಎಸ್.ಟಿ.ಎಫ್ ಜಂಟಿಯಾಗಿ 22 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿವೆ. ನಾಲ್ವರನ್ನು ಹತ್ಯೆ ಮಾಡಿದ್ದ MDT-23 ಎಂಬ ಹೆಸರಿನ ವೃದ್ಧ ವ್ಯಾಘ್ರವನ್ನು ಅರಣ್ಯ ಇಲಾಖೆ ಸೆಕ್ಷನ್ 11 (1)(ಎ) ಅಡಿಯಲ್ಲಿ ಕಂಡಲ್ಲಿ ಕೊಲ್ಲಲು ಆದೇಶ ನೀಡಿತ್ತು. ಆದರೆ ಯಾವುದೇ ಕಾರಣಕ್ಕೂ ಹುಲಿಯನ್ನು ಕೊಲ್ಲಬಾರದು ಸೆರೆಹಿಡಿಯಬೇಕು ಎಂದು ಕೋರ್ಟ್ ಹೇಳಿದ್ದ ಕಾರಣ ದೊಡ್ಡ ತಂತ್ರಗಾರಿಕೆಯ ಟೈಗರ್ ಕ್ಯಾಚ್ ಆಪರೇಷನ್ ಅರಣ್ಯ ಇಲಾಖೆ ಕೈ ಹಾಕಿತ್ತು. 75 ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಒಳಗೊಂಡ ಐದು ತಂಡ ವ್ಯಾಘ್ರಸೆರೆಗೆ ಹೊಂಚುಹಾಕಿ ರಂಗಕ್ಕಿಳಿದಿತ್ತು. ಈ ನರಭಕ್ಷಕ ಹುಲಿಯ ಕಾರ್ಯಾಚರಣೆ ಇದ್ದ ಪ್ರದೇಶ ಗುಡ್ಲೂರು ಊಟಿಯಿಂದ 50 ಕಿಲೋ ಮೀಟರ್ ದೂರದಲ್ಲಿ, ಕೇರಳ ಗಡಿಗೆ ಹೊಂದಿಕೊಂಡಿದೆ.

20 ಜಾನುವಾರುಗಳನ್ನು ಮತ್ತು ನಾಲ್ವರು ಕುರಿಗಾಹಿಗಳನ್ನು ಕೊಂದು ತಿಂದು ತೇಗಿದ್ದ ಹುಲಿಯನ್ನು ಶತಾಯಗತಾಯ ಕೊಲ್ಲದೇ ಹಿಡಿಯಬೇಕು ಅನ್ನುವುದು ನಿಜಕ್ಕೂ ಅರಣ್ಯ ಇಲಾಖೆಗೆ ದೊಡ್ಡ ಮಟ್ಟದ ಸವಾಲಾಗಿತ್ತು. ತಮಿಳುನಾಡಿನ ಈರೋಡ್ ಜಿಲ್ಲೆಯ ಅರಣ್ಯಾಧಿಕಾರಿಗಳು ಹಾಗೂ ಕೇರಳ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ವ್ಯಾಘ್ರ ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಹುಲಿ ಹಿಡಿಯುವ ಸಂಪೂರ್ಣ ಆಪರೇಷನ್ ವಿಡಿಯೋ ರೆಕಾರ್ಡ್ ಮತ್ತು ಪೋಟೋಗ್ರಾಫ್ ರೆಕಾರ್ಡ್ ಮಾಡಬೇಕಿತ್ತು. ಆಪರೇಷನ್ ನಂತರ ವಿಸ್ತೃತ ವರದಿ ಸಲ್ಲಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ, ವನ್ಯಜೀವಿ ಸಂರಕ್ಷಣೆಯ ವಾರ್ಡನ್ ಶೇಖರ್ ಕುಮಾರ್ ನೀರಜ್ ಆದೇಶ ಹೊರಡಿಸಿದ್ದರು. ಅನಸ್ತೇಶಿಯಾ ಬಳಸಿ ಮಯಾರ್ ರಸ್ತೆಯ ಬಳಿ ಟಿ23 ಹುಲಿ ಜೀವಂತವಾಗಿ ಸೆರೆಹಿಡಿಯಲಾಯಿತು ಎಂದು ಮಾಧ್ಯಮಗಳಿಗೆ ವಿವರ ನೀಡಲಾಯಿತು. ಹೇಗಿತ್ತು ಗೊತ್ತೇ ವೃದ್ಧ ವ್ಯಾಘ್ರದ ಸೆರೆ ಕಾರ್ಯಾಚರಣೆ?
***
ಸಾಮಾನ್ಯವಾಗಿ ಯಾವುದೇ ಹುಲಿಯ ಆಯಸ್ಸು 14. ಮೃಗಾಲಯದಲ್ಲಿಟ್ಟು, ತಕ್ಕ ಆರೈಕೆ ಮಾಡಿದ್ರೆ, ಹದಿನೈದು ವರ್ಷ ಬದುಕಬಹುದಷ್ಟೇ. ಆದ್ರೆ, ಮಧುಮಲೈ ಕಾಡಿನ ಈ ಹುಲಿಯ ಕಥೆ ಕೇಳಿದರೆ, ಅಬ್ಬಬ್ಬಾ ಎನಿಸುತ್ತೆ. ಇದೂ ಕೂಡಾ, ಎಲ್ಲಾ ಹುಲಿಗಳಂತೆ ಇದ್ದಿದ್ದರೆ, ಇಷ್ಟೊಂದು ದೊಡ್ಡ ಸುದ್ದಿ ಆಗುತ್ತಿರಲಿಲ್ಲ. ಆದ್ರೆ, ಯಾವಾಗ, ಮನುಷ್ಯರ ರಕ್ತದ ರುಚಿ ಕಂಡಿತೋ, ಹುಲಿರಾಯನ ಗ್ರಹಚಾರ ಕೆಟ್ಟಿತು, ನಮ್ಮ ಬಂಡೀಪುರದಿಂದ ಹತ್ತು ನಿಮಿಷ ದಕ್ಷಿಣಕ್ಕೆ ಹೋದರೆ, ತಮಿಳುನಾಡಿನ ಮಧುಮಲೈ. ಕರ್ನಾಟಕ, ಕೇರಳದಿಂದ ಸುತ್ತುವರೆದಿರುವ ದಟ್ಟ ಕಾಡು. ಬಂಡೀಪುರದಂತೆಯೇ, ಹುಲಿಗಳ ಸ್ವರ್ಗವಿದು. ನೀಲಗಿರಿ (ಊಟಿ) ಜಿಲ್ಲೆಯ ಗುಡ್ಲೂರು, ಮಸಿನಗುಡಿಯಲ್ಲಿ ಎರಡು ತಿಂಗಳೀಚೆಗೆ, ಮೇಯಲು ಬಿಟ್ಟ ಹಸುಗಳು ಮನೆ ಸೇರುತ್ತಲೇ ಇರಲಿಲ್ಲ. ಇದು ಸ್ಥಳೀಯರಿಗೇನೂ ವಿಶೇಷ ಎನಿಸಲಿಲ್ಲ. ಹುಲಿಯೋ, ಚಿರತೆಯೋ ಹೊಡೆದುಹಾಕಿರಬಹುದು ಎಂದುಕೊಂಡರು. ಒಮ್ಮೆ ಮಸಿನಗುಡಿ ಬಳಿ, ಇನ್ನೆರಡು ದಿನ, ಗುಡ್ಲೂರಿನಲ್ಲಿ ಒಂದೊಂದೇ ಹಸುಗಳು ಬಲಿಯಾಗತೊಡಗಿವು.
ಸುಮಾರು ಹದಿನೈದು ಹಸುಗಳ ಬಲಿಯಾದೊಡನೇ, ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಕಷ್ಟ ಹೇಳಿಕೊಂಡರು. ನಿಮ್ಮ ಹಸುಗಳನ್ನು ಕಾಡಿಗೆ ಮೇಯೋಕೆ ಏಕೆ ಬಿಟ್ರೀ ಎಂದು ಅರಣ್ಯಾಧಿಕಾರಿಗಳು ಬೈದು ಕಳಿಸಿದರು. ಮರುದಿನದಿಂದಲೇ ಕಾಡಂಚಿನ ಗ್ರಾಮಸ್ಥರು, ಹಸುಗಳನ್ನು ಕಾಡಿಗೆ ಬಿಡುವ ಸಾಹಸಕ್ಕೆ ಕೈ ಹಾಕಲಿಲ್ಲ. ಪಾಪ, ಆ ಹುಲಿರಾಯನಿಗೆ ಹಸಿವೋ ಹಸಿವು. ಊರುಗಳಿಗೇ ನುಗ್ಗಿತು ನೋಡಿ. ಸಿಕ್ಕ ಸಿಕ್ಕ ಮೇಕೆಗಳನ್ನು ಎಳೆದೊಯ್ದಿತು. ಗ್ರಾಮಸ್ಥರು ಬೆಚ್ಚಿಬಿದ್ದರು. ಕಾಡೊಳಗೇನೋ ಸರಿ. ಊರಿನ ದಿಡ್ಡಿ ಬಾಗಿಲಿಗೇ ಬಂದು ಘರ್ಜಿಸಿದರೆ ಗತಿ ಏನಪ್ಪಾ ಗತಿ? ಮತ್ತೆ ಅರಣ್ಯ ಇಲಾಖೆಗೆ ದೂರುಗಳು ಹೋದವು. ಇಂತಹ ಪ್ರಕರಣಗಳು, ಗ್ರಾಮಸ್ಥರಿಗೆ ಹೋಸದೇನಲ್ಲ ಹಾಗೇ ಅರಣ್ಯ ಇಲಾಖೆಗೂ ಕೂಡಾ.

ಕೊನೆಗೆ ಗುಡ್ಲೂರಿನ ಟೀ ಎಸ್ಟೇಟಿನಲ್ಲಿ ಹಸುವಿನ ಮೇಲೆ ಬಿದ್ದ ಹುಲಿಯನ್ನು ಓಡಿಸಲು ಹೋದ ದನ ಕಾಯುವವನ ಮೇಲೇ ಬಿದ್ದ ಹುಲಿರಾಯ. ಹಸುವನ್ನು ಬಿಟ್ಟು, ಆತನನ್ನೇ ಎಳೆದುಕೊಂಡು ಹೋಗಿಬಿಟ್ಟ. ಗುಡ್ಲೂರಿಗೆ ಗುಡ್ಲೂರೇ ನಡುಗಿಬಿಟ್ಟಿತು. ಕಾರ್ಮಿಕರು ಟೀ ಎಸ್ಟೇಟ್ ಒಳಗೆ ಕಾಲಿಡಲೇ ಇಲ್ಲ. ಕೆಲವು ದಿನಗಳಷ್ಟೇ ಕಳೆದಿತ್ತು ಮಸಿನಗುಡಿಯಲ್ಲಿ ಮತ್ತೊಬ್ಬನ ರಕ್ತ ಹೀರಿತು ನರಭಕ್ಷಕ. ಪರಿಸ್ಥಿತಿ ತೀರಾ ಬಿಗಡಾಯಿಸಿತು ಎಂದಾಗ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಹಿಡಿದು, ಇಲಿ ಹಿಡಿಯುವವರಂತೆ ಕಾಡು ನುಗ್ಗಿತು. ಹುಲಿಗಳಷ್ಟು ಸಿಕ್ಕಾಪಟ್ಟೆ ಬುದ್ದಿವಂತ ಮತ್ತೊಂದು ಪ್ರಾಣಿ ಇಲ್ಲ. ಬೋನಿಟ್ಟು, ಕಾಯಿರಿ ಎಂದು ಮತ್ತೊಂದೆಡೆ, ಇನ್ನೊಬ್ಬನನ್ನು ಎಳೆದೊಯ್ದೇಬಿಟ್ಟಿತು. ಆ ಕಡೆ ಹೋದರೆ ಆಕಡೆಗೆ. ಈ ಕಡೆ ಬಂದರೆ, ಈ ಕಡೆಯೇ. ಅಲ್ಲಿಂದಿಲ್ಲಿಗೆ ಓಡಾಡಿಸಿ, ಸುಸ್ತು ಮಾಡಿಸಿತು. ಗುಡ್ಲೂರು, ಮಸಿನಗುಡಿ, ಸಿಂಗಾರ, ಬೋಪಾರದಲ್ಲಿ ಜನರು ರೊಚ್ಚಿಗೆದ್ದರು. ಮನೆಯಿಂದ ಹೇಗಪ್ಪಾ ಹೊರಗೆ ಬರೋದು ಎಂದು ಹೆದರಿಬಿಟ್ಟರು.
ಯಾವಾಗ, ಮಸಿನಗುಡಿಯಲ್ಲಿ ನರಹಂತಕ ನಾಲ್ಕನೇ ಬಲಿ ಪಡೆಯಿತೋ. ಅರಣ್ಯಇಲಾಖೆಯೂ ಹೆದರಿಬಿಟ್ಟಿತು. ಕುರಿ ಮೇಯಿಸೋಕೆ ಹೋಗಿದ್ದ 85 ವರ್ಷದ ಬಸವನ್’ನನ್ನು ಉಳಿದ ಕುರಿಗಾಹಿಗಳು ನೋಡ ನೋಡುತ್ತಿದ್ದಂತೆಯೇ, ಎದೆ ಬಗೆದು ರಕ್ತ ಹೀರಿ ಅಬ್ಬರಿಸಿಬಿಟ್ಟಿತು ವ್ಯಾಘ್ರ. ಆಗ ಹೊರಬಿತ್ತು ಶೂಟಿಂಗ್ ಆರ್ಡರ್. ಕಂಡಲ್ಲಿ ಗುಂಡಿಕ್ಕಿ ಕೊಲ್ಲಿ ಎಂದು ಹಿರಿಯ ಅರಣ್ಯಾಧಿಕಾರಿಗಳು ಫರ್ಮಾನು ಹೊರಡಿಸಿದರು. ಪ್ರಾಣಿ ಹಿತಾಸಕ್ತಿ ಸಂಘಟನೆಯೊಂದು ಮದ್ರಾಸ್ ಹೈಕೋರ್ಟ್ ಮೊರೆ ಹೋಯ್ತು. ಹೈಕೋರ್ಟ್ ಕೂಡಾ, ಹುಲಿಯನ್ನು ಸಾಯಿಸಬೇಡಿ, ಜೀವಂತವಾಗಿಯೇ ಸೆರೆ ಹಿಡಿಯಿರಿ ಎಂದು ಆದೇಶಿಸಿದ ನಂತರ, ವಿಧಿಯಿಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿ, ಊಟ, ನಿದ್ದೆ ಬಿಟ್ಟು ಮಧುಮಲೈನಲ್ಲಿ ಗುಡಾರ ಹಾಕಿ ಕೂತರು.

ಈ ಹುಲಿ ಅದೆಷ್ಟು ಬುದ್ದಿವಂತ ಅಂದ್ರೆ, ವಿಸ್ತಾರವಾದ ಆ ದಟ್ಟ ಕಾಡಿನಲ್ಲಿ ಅರಣ್ಯ ಸಿಬ್ಬಂದಿಯನ್ನು ಕಣ್ಣಾ ಮುಚ್ಚಾಲೆ ಆಡಿಸಿಬಿಟ್ಟಿತು. ಒಂದು ವಾರವಾಯ್ತು, ಎರಡು ವಾರವಾಯ್ತು. ಊಹೂಂ, ಬಡ್ಡೀಮಗಂದು, ಕೈಗೆ ಸಿಗೋದಿರಲಿ, ಕಣ್ಣಿಗೇ ಬೀಳದಂತೆ, ಆಡವಾಡತೊಡಗಿತು. ಎಲ್ಲರೂ ತನ್ನಿಂದೆ ಬಿದ್ದದ್ದರಿಂದ ಮತ್ತೊಂದು ನರಬೇಟೆಗೆ ಹುಲಿ ಮುಂದಾಗಲಿಲ್ಲ ಸರಿ, ಆದರೆ ಅಲ್ಲೊಂದು, ಇಲ್ಲೊಂದು ಹಸು, ಮೇಕೆ ಬೇಟೆಯಾಡಿ ದಟ್ಟ ಕಾಡಿನಲ್ಲಿ ಗೊರಕೆ ಹೊಡೆಯುತ್ತಿತ್ತು. ಹೀಗೇ ಮುಂದುವರೆದ್ರೆ, ಮಾನ ಮರ್ಯಾದೆ ಮೂರಾಬಟ್ಟೆಯಾಗುತ್ತದೆ ಎಂದುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು, ನಮ್ಮ ಬಂಡೀಪುರದ ಸಿ,ಎಫ್. ನಟೀಶ್ ಅವರಿಗೆ ಫೋನಾಯಿಸಿ, ಸಹಾಯ ಕೋರಿದರು. ಆಗಲೇ, ನಮ್ಮ ಡಾನ್ ರಾಣಾ (ಅರಣ್ಯ ಇಲಾಖೆಯ ತರಬೇತಿ ಪಡೆದ ಚಾಣಾಕ್ಷ ಜರ್ಮನ್ ಶೆಫರ್ಡ್ ನಾಯಿ) ಮಧುಮಲೈಗೆ ಹೋಗಿದ್ದು. ಅಲ್ಲಿ ರಾಣಾನಿಗೆ ಜಾಕಿ (ತಮಿಳುನಾಡು ಅರಣ್ಯ ಇಲಾಖೆಯ ಮುಧೋಳ ತಳಿಯ ನಾಯಿ) ಜೊತೆಯಾಯಿತು. ಹೇಳಿಕೇಳಿ ರಾಣಾ, ಹುಲಿಗಳ ಇರುವಿಕೆಯನ್ನು ಪತ್ತೆ ಹಚ್ಚುವಲ್ಲಿ ಎಕ್ಸ್’ಪರ್ಟ್. ಮಧುಮಲೈ, ಮಸಿನಗುಡಿ, ಸಿಂಗಾರ, ಬೋಪಾರ ಕಾಡಿನಲ್ಲಿ ಗರ ಗರ ಸುತ್ತಿತು. ಹುಲಿಯ ಮಲದ ವಾಸನೆ ಹಿಡಿದು ಮಸಿನಗುಡಿಯ ಹಳ್ಳಿಯೊಂದರ ಬಳಿ ಬಂದು ನಿಂತುಬಿಟ್ಟಿತು. ಇಷ್ಟರಲ್ಲಾಗಲೇ 21 ದಿನಗಳೇ ಕಳೆದುಹೋಗಿದ್ದವು. ಅರಣ್ಯ ಇಲಾಖೆಗೆ ವಿಪರೀತ ಒತ್ತಡ. ಬಂಡೀಪುರದಿಂದ ಹೋಗಿದ್ದ ಕೆಲವು ಅರಣ್ಯ ಸಿಬ್ಬಂದಿ ಜೊತೆ ಕೇರಳದ ಅರಣ್ಯ ಇಲಾಖೆ ಅಧಿಕಾರಿಗಳೂ, ತಮಿಳುನಾಡಿನ ಅಧಿಕಾರಿಗಳೊಂದಿಗೆ ಸೇರಿದ್ದರು. ಅಸಲಿಗೆ ಎಲ್ಲರೂ ರಾಣಾನ ಮೇಲೆಯೇ ಡಿಪೆಂಡ್ ಆಗಿದ್ದರು. 22ನೇ ದಿನ. ಅಂದರೆ, ಅಕ್ಟೋಬರ್ 15ರಂದು ರಾಣಾ, ಮಸಿನಗುಡಿ, ತೆಪ್ಪಕಾಡು ಅರಣ್ಯದ ಗುಹೆಯೊಂದರ ಬಳಿ ಹೋಗಿ ನಿಂತಿತು. ಆಶ್ಚರ್ಯವೆಂದರೆ, ಹುಲಿ ಬಳಿಯೇ ಹೋದ ರಾಣಾ ಬೊಗಳಲಿಲ್ಲ. ಜೊತೆಗಿದ್ದ ಜಾಕಿ ಕೂಡಾ, ರಾಣಾನ ಸೂಚನೆಯನ್ನು ಪಾಲಿಸಿತು. ರಾಣಾ, ತನ್ನ ಟ್ರೈನರ್ ಕಾಳನಿಗೆ ಹಿಂಟ್ ಕೊಟ್ಟಿತು.

ಹುಲಿಯಂತಾ ಹುಲಿಗೇ ರಾಣಾ ಚಳ್ಳೆಹಣ್ಣು ತಿನ್ನಿಸಿತ್ತು. ಅಲರ್ಟ್ ಆದ ಅರಣ್ಯಾಧಿಕಾರಿಗಳು ಸಾಕಾನೆಗಳ ನೆರವಿನಿಂದ ಹುಲಿಯ ಗುಹೆಯತ್ತ ಹೋಗುತ್ತಿದ್ದಂತೇಯೇ, ನರಹಂತಕನಿಗೆ ಸುಳಿವು ಸಿಕ್ಕೇಬಿಟ್ಟಿತು. ಒಮ್ಮೆ ಎದೆ ನಡುಗುವಂತೆ ಘರ್ಜಿಸಿ, ತಪ್ಪಿಸಿಕೊಳ್ಳೋಕೆ ನೋಡಿತು. ಆಗ ಬಿತ್ತು ನೋಡಿ, ಮೊದಲ ಏಟು. ಪ್ರಜ್ಞೆ ತಪ್ಪಿಸುವ ನಳಿಕೆ, ಬಂದೂಕಿನಿಂದ ಹಾರಿ, ಹುಲಿಗೆ ಬಿತ್ತು. ಸ್ವಲ್ಪ ದೂರಕ್ಕೆ ಓಡಿದ ಹುಲಿ, ದೊಪ್ಪನೇ ಉರುಳಿಬಿತ್ತು. 22ನೇ ದಿನಕ್ಕೆ ನರಹಂತಕ ಸಿಕ್ಕಿಬಿದ್ದಿದ್ದ. ಮಧುಮಲೈಗೆ ಕರೆತಂದು ನೋಡಿದರೆ, ನರಹಂತಕನ ನಾಲ್ಕೂ ಕೋರೆ ಹಲ್ಲೂಗಳೂ ಮುರಿದುಬಿದ್ದಿದ್ದವು. ಬಾಯಲೆಲ್ಲಾ ಗಾಯ. ಅದಕ್ಕೆ ವಯಸ್ಸು ಅದಾಗಲೇ 14 ವಸಂತ ದಾಟಿತ್ತು. ಆಶ್ಚರ್ಯವಿರುವುದು ಇಲ್ಲಿಯೇ. ಕಾಡಿನಲ್ಲಿ ಬಹಳ ಪರಮ ಬಲಿಷ್ಠ, ಚತುರ ಹುಲಿ ಮಾತ್ರವೇ ಇಷ್ಟು ದೀರ್ಘ ಕಾಲ ಬದುಕಲು ಸಾಧ್ಯ. ಬಹುತೇಕ ಹುಲಿಗಳು, ಎಂಟು ಹತ್ತು ವರ್ಷಕ್ಕೇ ಸಾವನ್ನಪ್ಪುತ್ತವೆ. ತಮ್ಮ ತಮ್ಮ ಸಾಮ್ರಾಜ್ಯ ಕಾಪಾಡಿಕೊಳ್ಳಲು ಬೇರೆ ಹುಲಿಗಳೊಡನೇ ಕಾದಾಡಿ, ಭೀಕರವಾಗಿ ಗಾಯಗೊಂಡು, ಬೇಟೆಯಾಡಲು ಸಾಧ್ಯವಾಗದೇ, ಗಾಯವನ್ನು ನೆಕ್ಕಿಕೊಂಡೇ ಸಾವನ್ನಪ್ಪುವ ಹುಲಿಗಳೇ ಹೆಚ್ಚು. ಅದರಲ್ಲಿ, ಭಂಡ ಧೈರ್ಯ ಮಾಡಿ, ಊರಿಗೆ ನುಗ್ಗಿ, ಹಸುಗಳನ್ನು ಬೇಟಿಯಾಡುವ ಹಾಗೇ ತಡೆಯೋಕೆ ಬಂದ ಮನುಷ್ಯನ ಮೇಲೂ ಬೀಳುವ ಹುಲಿಗಳು ಬಹಳ ಬಹಳ ಕಡಿಮೆ. ನಮ್ಮ ಬಂಡೀಪುರ, ಕಬಿನಿಯ ಡಿ.ಬಿ.ಕುಪ್ಪೆ, ನಾಗರಹೊಳೆಯಲ್ಲೂ ಇಂತಹ ನಿದರ್ಶನಗಳಿವೆ. ಇದೀಗ ತಮಿಳುನಾಡಿನ ಟಿ23 ವೃದ್ಧ ಹುಲಿ, ಮೈಸೂರಿಗೆ ಬಂದಿದೆ. ಕೂರ್ಗಳ್ಳಿಯ ಅರಣ್ಯ ಇಲಾಖೆಯ ಬೋನಿನಲ್ಲಿ ಈಗ ಮುದಿ ಹುಲಿಯ ಘರ್ಜನೆ ಮೊಳಗುತ್ತಿದೆ. ಹೀಗಾಗಿ ಮಹಾರಾಷ್ಟ್ರದ ಎಲ್ಲಿ ಹೆಣ್ಣು ಹುಲಿ ಅವನಿಯಂತೆ ಇದನ್ನೂ ಕೊಂದುಬಿಡುತ್ತಾರೇನೋ ಎಂದು ಆತಂಕಗೊಂಡಿದ್ದ ವನ್ಯಜೀವಿ ಪ್ರಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
-ಸಿದ್ದು ಪಿನಾಕಿ, ಪತ್ರಕರ್ತ ಮತ್ತು ವನ್ಯಜೀವಿ-ಪರಿಸರವಾದಿ, ಬೆಂಗಳೂರು








