ಪುನೀತ್ ಮನೆಗೆ ಆಗಮಿಸುತ್ತಿದ್ದ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ – VIDEO
ಬೆಂಗಳೂರು : ಕೋಟ್ಯಾಂತರ ಹೃದಯಗಳನ್ನ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆಗೆ ಆಗಮಿಸುತ್ತಿದ್ದ ವೇಳೆ ಏರ್ಪೋರ್ಟ್ ನಲ್ಲಿ ವ್ಯಕ್ತಿಯೋರ್ವ ವಿಜಯ್ ಸೇತುಪತಿ ಮೇಲೆ ಹಲ್ಲೆ ನಡೆಸಿದ್ದಾನೆ. ಕೆಂಪೇಗೌಡ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ವಿಮಾನದಲ್ಲಿ ಸಹ ಪ್ರಯಾಣಿಕನೊಬ್ಬ ಕುಡಿದ ಮತ್ತಿನಲ್ಲಿ ವಿಜಯ್ ಸೇತುಪತಿ ಜೊತೆ ಜಗಳ ಮಾಡಿದ್ದಾನೆ.
ನವೆಂಬರ್ 02 ರಾತ್ರಿ 11 ಗಂಟೆ ಸುಮಾರಿಗೆ ವಿಮಾನವು ಬೆಂಗಳೂರಿಗೆ ಬಂದಿಳಿದ ನಂತರ ವಿಜಯ್ ವಿಮಾನ ನಿಲ್ದಾಣದಿಂದ ಹೊರಗೆ ಬರಬೇಕಾದರೆ ಯುವಕ ಓಡಿ ಬಂದು ವಿಜಯ್ ಸೇತುಪತಿ ಬೆನ್ನಿಗೆ ಕಾಲಿನಿಂದ ಒದ್ದಿದ್ದಾನೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಕೂಡಲೇ ಅಲ್ಲಿದ್ದವರು ಯುವಕನನ್ನು ಹಿಡಿದುಕೊಂಡಿದ್ದಾರೆ. ಯುವಕನ ಮೇಲೂ ಪ್ರತಿ ದಾಳಿ ಮಾಡಲಾಗಿದೆ. ಹಲ್ಲೆ ಮಾಡಿರುವ ವ್ಯಕ್ತಿ ತಮಿಳುನಾಡು ಮೂಲದವನು ಎನ್ನಲಾಗಿದ್ದು, ಘಟನೆ ಬಗ್ಗೆ ಏರ್ಪೋರ್ಟ್ ಪೊಲೀಸರಿಗೆ ವಿಜಯ್ ಸೇತುಪತಿ ಮ್ಯಾನೇಜರ್ ಮೌಖಿಕ ದೂರು ನೀಡಿದ್ದಾರೆ. ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಜಯ್ ಸೇತುಪತಿ ರಾಮನಗರ ಬಳಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಮಾಸ್ಟರ್ ಶೆಫ್ ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಭಾಗವಹಿಸಲು ಬರುತ್ತಿದ್ದರು. ಚಿತ್ರೀಕರಣದ ಬಳಿಕ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ಮಾಡಲು ಪ್ಲಾನ್ ಮಾಡಿದ್ದರು. ಈ ನಡುವೆ ಇಂತಹದೊಂದು ಘಟನೆ ನಡೆದಿದೆ.
ಬಳಿಕ ಸಂಜೆ ವೇಳೆಗೆ ಕಂಠೀರವ ಸ್ಟುಡಿಯೋಕ್ಕೆ ತೆರಳಿದ ನಟ ವಿಜಯ್ ಸೇತುಪತಿ ಪುನೀತ್ ರಾಜ್ಕುಮಾರ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ರು. ಬಳಿಕ ಈ ಬಗ್ಗೆ ಮಾತನಾಡಿದ ಅವರು “ನಾನು ಈವರೆಗೆ ಅವರನ್ನು ಭೇಟಿಯೇ ಆಗಿಲ್ಲ, ಅವರನ್ನ ಭೇಟಿ ಮಾಡುವ ಸೌಭಾಗ್ಯ ನನಗೆ ಸಿಗಲಿಲ್ಲ. ಆದರೆ ನನಗೇ ಇಷ್ಟು ನೋವಾಗುತ್ತಿದೆ ಎಂದರೆ ಅವರ ಅಭಿಮಾನಿಗಳಿಗೆ, ಅವರ ಕುಟುಂಬಕ್ಕೆ, ಕನ್ನಡಿಗರಿಗೆ ಎಷ್ಟು ನೋವಾಗಿದೆ ಎಂದು ನಾನು ಊಹಿಸಬಲ್ಲೆ.
ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ಗೊತ್ತಾಯಿತು, ಅವರು ಫಿಟ್ ಆಗಿರುವ ವ್ಯಕ್ತಿ ಮರಳಿ ಬರುತ್ತಾರೆ ಎಂದು ಅಂದುಕೊಂಡಿದ್ದೆ. ಆದರೆ ಹೀಗೆ ಆಗುತ್ತದೆಯೆಂದು ನಾನು ಊಹಿಸಿರಲಿಲ್ಲ. ಇದನ್ನ ನೆನೆಪಿಸಿಕೊಳ್ಳುವುದಕ್ಕೂ ಭಯವಾಗುತ್ತದೆ. ಹೀಗೆ ಆಗಬಾರದಿತ್ತು ಎಂದಿದ್ದಾರೆ.
https://twitter.com/i/status/1455858068172914697








