“ಡಾ.ಕೆ.ಎಸ್ ನಾರಾಯಾಣಾಚಾರ್ಯರೆಂಬ ನಡೆದಾಡುತ್ತಿದ್ದ ವಿಶ್ವಕೋಶಕ್ಕೊಂದು ನುಡಿನಮನ”
ಡಾ. ಕೆ.ಎಸ್ ನಾರಾಯಣಾಚಾರ್ಯರು ಕನ್ನಡದ ಆರ್ಷ ಸಾಹಿತ್ಯ, ಧಾರ್ಮಿಕ ಸಾಹಿತ್ಯ ಮತ್ತು ಪ್ರಚಲಿತ ಅಂಕಣ ಕ್ಷೇತ್ರದ ಬಹುದೊಡ್ಡ ವಿದ್ವಾಂಸರು ಮತ್ತು ಅಷ್ಟೇ ಉತ್ತಮ ವಾಗ್ಮಿಗಳಾಗಿದ್ದರು ಅನ್ನುವುದು ನಿರ್ವಿವಾಧಿತ ಸತ್ಯ. ಕನ್ನಡ ಭಾಷೆಯಲ್ಲಿ ಬರೆಯುತ್ತಿದ್ದ ಅಗ್ರಗಣ್ಯ ಭಾರತೀಯ ಸಂಸ್ಕೃತಿಯ ಲೇಖಕರು, ಪ್ರಚಾರಕರು ಮತ್ತು ಪ್ರವಚನಕಾರರು ಎಂದೇ ಇವರನ್ನು ಗುರುತಿಸಲಾಗುತ್ತದೆ. ಅವರನ್ನು ಓದಿಕೊಂಡವರ ಪಾಲಿಗೆ ಅವರೊಂದು ವಿಸ್ಮಯ, ಮಹಾ ಜ್ಞಾನಿ, ಇತಿಹಾಸಕಾರ, ಪ್ರಖರ ವಾಗ್ಮಿ, ಅಂಕಣಕಾರ ಜೊತೆಗೆ ಮಾರ್ಗದರ್ಶಕರು ಎಂದು ಭಾವಿಸಿದ ದೊಡ್ಡ ಅಭಿಮಾನಿ ಸಮೂಹವೇ ಇದೆ. ಕೇವಲ ಕರ್ನಾಟಕ ಮಾತ್ರವಲ್ಲ, ಭಾರತದ ಅತ್ಯಂತ ಶ್ರೇಷ್ಠ ವಿದ್ವಾಂಸ, ಭಾರತೀಯ ತತ್ವ ಶಾಸ್ತ್ರಗಳ ನಿಷ್ಣಾತ, ವೇದ ವಾರಿಧಿ, ವೇದಾಂತದ ಅನುಪಮ ಸಾಧಕ, ಅನುಷ್ಠಾನಪರ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ಆಚಾರ್ಯರು ಶುಕ್ರವಾರ ಬೆಳಗಿನ ಜಾವ 2.06 ಗಂಟೆಗೆ ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಜಲದರ್ಶಿನಿ ಲೇಔಟ್ನಲ್ಲಿರುವ ತಮ್ಮ ನಿವಾಸದಲ್ಲಿ ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ. ನಿಜಕ್ಕೂ ಇದು ಕನ್ನಡ ಆರ್ಷೇಯ ಸಾಹಿತ್ಯಕ್ಕೆ ಅತಿ ದೊಡ್ಡ ನಷ್ಟವೆಂದೇ ಭಾವಿಸಲಾಗುತ್ತಿದೆ.
ಕೆ.ಎಸ್ ನಾರಾಯಣಾಚಾರ್ಯರು ನಿರ್ಭೀತಿಯಿಂದ ತಮ್ಮ ನಿಲುವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದ ಸಾಹಿತಿ. ನೇರ ನಿಷ್ಟುರಿ ಆಚಾರ್ಯರು ತಮ್ಮ ಬರಹಗಳಿಂದ ಅಭಿಮಾನಿಗಳ ಜೊತೆ ವಿರೋಧಿಗಳನ್ನು ಸಂಪಾದಿಸಿಕೊಂಡಿದ್ದರು. ಅವರ ಪುಸ್ತಕಗಳು ಮತ್ತು ಹೇಳಿಕೆಗಳು ಜನಪ್ರಿಯತೆ ಗಳಿಸಿಕೊಳ್ಳುವ ಜೊತೆಗೆ ವಿವಾದವನ್ನೂ ಹುಟ್ಟುಹಾಕುತ್ತಿತ್ತು. ಅವರ ವಾಲ್ಮೀಕಿ ಯಾರು? ಪುಸ್ತಕ ಹುಟ್ಟಿಸಿದ ವಿವಾದ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಒಂದು ಹಂತದಲ್ಲಿ ಪುಸ್ತಕವನ್ನು ಬ್ಯಾನ್ ಮಾಡುವ ಹಂತವನ್ನೂ ತಲುಪಿತ್ತು. ಅವರ ಬರವಣಿಗೆ ಕತ್ತಿನ ಅಲುಗಿನಷ್ಟೇ ಹರಿತ, ಆದರೆ ಆಚಾರ್ಯರ ಬರಹದ ಶೈಲಿಯನ್ನು ಮೆಚ್ಚದ ಓದುಗನಿಲ್ಲ. ವೇದಾಂಗ ಪರಂಪರೆಯಿಂದ ಗಣಿತ, ಭೌತಶಾಸ್ತ್ರದವರೆಗೂ ಸಮರ್ಥವಾಗಿ ವಿವರ ಮಂಡಿಸುತ್ತಿದ್ದ ಆಚಾರ್ಯರು ಇಂಗ್ಲೀಷ್ ಎಂಎ ಕಲಿತು ಬೋಧಿಸಿದವರು.
೩೦ ಅಕ್ಟೋಬರ್ ೧೯೩೩ರಂದು ಕನಕಪುರದ ವೈದಿಕ ಶ್ರೀವೈಷ್ಣವ ಕುಟುಂಬದಲ್ಲಿ ಜನಿಸಿದ ಕನಕನಹಳ್ಳಿ ಶ್ರೀನಿವಾಸ ದೇಶಿಕಾಚಾರ್ಯ ನಾರಾಯಣಾಚಾರ್ಯರು (ಕೆ.ಎಸ್.ನಾ) ಧಾರವಾಡದಲ್ಲಿ ಅಧ್ಯಾಪಕರಾಗಿದ್ದಾಗಲಿಂದ ಬೇಂದ್ರೆಯವರ ಪ್ರಭಾವಕ್ಕೊಳಗಾದವರು. ಅವರ ಆ ದಿನಗಳ ಕುರಿತಾದ ಒಂದು ಕಥೆಯಿದೆ. ವಿಪರೀತ ಮಡಿವಂತಿಕೆಯ ಆಚಾರ್ಯರು ಧಾರವಾಡದಲ್ಲಿ ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುತ್ತಿದ್ದರಂತೆ. ಆಗ ಮನೆಯನ್ನು ಕಾಯುವ ಕೆಳವರ್ಗದ ಕೆಲಸಗಾರನಿಗೂ ಒಂದು ತುತ್ತು ಸೇರಿಸಿಯೇ ಅಡುಗೆ ಮಾಡುತ್ತಿದ್ದರಂತೆ. ಆಗ ಇವರ ಕೆಲವು ಸಹುದ್ಯೋಗಿಗಳು ನಾರಾಯಾಣಾಚಾರ್ಯರು ಔಟ್ಹೌಸ್ ಸಬ್ಲೆಟ್ (ಹೊರಮನೆಯ ಹೋಟೆಲ್) ಮಾಡಿದ್ದಾರೆ ಎಂದು ವ್ಯಂಗ್ಯವಾಡಿದಾಗ, ಆಚಾರ್ಯರು ಧೃತಿಗೆಡದೇ “ಅವನೊಬ್ಬ ಹಿಂದು, ಹೀಗಾಗಿ ಅವನು ನನ್ನ ಬಂಧು” ಎಂದಿದ್ದರಂತೆ. ಎಲ್ಲಿ ಪ್ರೀತಿ ಇರುತ್ತದೆ ಅಲ್ಲಿ ಜಾತಿ ಇರುವುದಿಲ್ಲ ಅನ್ನುವುದು ಡಾ ಕೆ.ಎಸ್. ನಾರಾಯಣಾಚಾರ್ಯರ ಬಹುಪ್ರಸಿದ್ಧ ಸ್ಟೇಟ್ಮೆಂಟ್.
ನಾರಾಯಣಾಚಾರ್ಯರಿಗೆ ರಾಮಾಯಣಾಚಾರ್ಯ ಎಂದೆ ಹೆಸರು. ವಾಲ್ಮೀಕಿ ರಾಮಾಯಣದ ಸರ್ವಸ್ವ ಇವರ ಕಣ ಕಣದಲ್ಲಿತ್ತು. ಮಹಾಭಾರತ, ಭಗವದ್ಗೀತೆ, ಪಾದುಕಾ ಸಹಸ್ರ, ಶ್ರೀರಾಮಾನುಜರ ನವಗ್ರಂಥಗಳು, ಪುರಾಣಗಳು, ಇತರ ದಾರ್ಶನಿಕರ ಗ್ರಂಥಗಳು ಇವರ ಅಧ್ಯಯನದ ಮತ್ತು ಪ್ರವಚನದ ಪ್ರಮುಖ ಆಕರಗಳಾಗಿದ್ದವು. ಶ್ರೀವೈಷ್ಣವ ಧರ್ಮದ ಸಕಲ ಆಚಾರ್ಯರ ಎಲ್ಲ ಗ್ರಂಥಗಳು ಇವರಿಗೆ ಕರತಲಾಮಲಕವಾಗಿದ್ದವು. ಆಂಗ್ಲಭಾಷೆಯಲ್ಲಿ ಅಪೂರ್ವ ಪ್ರೌಢಿಮೆ ಹೊಂದಿದ್ದ ಆಚಾರ್ಯರು ಎಲ್ಲ ತರಹದ ಆಂಗ್ಲ ಸಾಹಿತ್ಯ ಓದಿಕೊಂಡಿದ್ದರು. ಭಾರತದ ಆತ್ಮವನ್ನು ಅದರ ಮೂಲ ಸಿದ್ಧಾಂತಗಳನ್ನು ಋಷಿಗಳ ವಾಣಿಯೊಂದಿಗೆ ಉದ್ಧರಿಸಿ ಪ್ರತಿಪಾದಿಸುತ್ತಿದ್ದರು.
ಆಚಾರ್ಯರು ಪ್ರಚನದಿಂದ ಲೇಖನದ ಕಡೆಗೆ ಮುಖಮಾಡಲು ದ.ರಾ ಬೇಂದ್ರೆಯವರ ಪ್ರೇರಣೆಯೇ ಕಾರಣ ಎನ್ನುವ ಮಾತಿದೆ. ೧೯೫೪ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್.ಸಿ ಪದವಿ, ೧೯೫೭ರಲ್ಲಿ ಬಿ.ಎ(ಆನರ್ಸ್), ೧೯೫೮ರಲ್ಲಿ ಎಂ.ಎ(ಇಂಗ್ಲಿಷ್) ಪದವಿ ಪಡೆದ ನಾರಾಯಣಾಚಾರ್ಯರು, ೧೯೫೯ರಿಂದ ೧೯೬೧ರವರೆಗೆ “ಡಬ್ಲು. ಬಿ. ಯೇಟ್ಸ್ ಮತ್ತು ಟಿ. ಎಸ್. ಎಲಿಯೇಟ್ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರ ಪ್ರಭಾವ” ವಿಚಾರದ ಮೇಲೆ ಪಿಹೆಚ್ಡಿ ಸಂಶೋಧನಾ ಪ್ರಬಂಧ ರಚಿಸಿದ್ದರು. ೧೯೬೧ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೇಮಕರಾದರು. ನಂತರ ೧೯೬೭ರಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಪ್ರವಾಚಕರಾಗಿ, ೧೯೭೩ರಲ್ಲಿ ಪ್ರಾಧ್ಯಾಪಕರಾಗಿ, ೧೯೯೧ರಲ್ಲಿ ಅದೇ ಕಾಲೇಜಿನ ಕಾಲೇಜಿನ ಪ್ರಾಚಾರ್ಯರೂ ಆಗಿ ೧೯೯೩ರಲ್ಲಿ ನಿವೃತ್ತಿ ಹೊಂದಿದ್ದರು.
ಆಚಾರ್ಯರ ಸಾಹಿತ್ಯ ಕೃಷಿ ಅಪಾರ, ಸಮಗ್ರ ರಾಮಾಯಣ, ಮಹಾಭಾರತ, ಭಾಗವತಗಳ ಕಾದಂಬರೀಕರಣ. ದೇಶಾದ್ಯಂತ ರಾಮಾಯಣ, ಭಾರತ, ಗೀತೆ, ಭಾಗವತ, ಆಳ್ವಾರುಗಳ ಮೊದಲಾದ ಸಾಹಿತ್ಯ ಕುರಿತು ಕನ್ನಡ, ತಮಿಳು, ಆಂಗ್ಲಗಳಲ್ಲಿ ಪ್ರವಚನ. ಭಾರತೀಯ ಸಂಸ್ಕೃತಿ ಪ್ರಸಾರ, ಸಂಶೋಧನೆ ಹೀಗೆ ಅವರು ಆಯ್ಕೆ ಮಾಡಿಕೊಂಡ ವಿಧಾನಗಳು ಅನೇಕ. ವೇದ ಸಂಸ್ಕೃತಿಯ ಪರಿಚಯದ ೧೦ ಸಂಪುಟಗಳು, ಶ್ರೀ ರಾಮಾವತಾರ ಸಂಪೂರ್ಣವಾದಾಗ, ಶ್ರೀ ರಾಮಾಯಣ ಪಾತ್ರ ಪ್ರಪಂಚ, ಶ್ರೀ ಮಹಾಭಾರತ ಪಾತ್ರ ಪ್ರಪಂಚ, ಆ ಹದಿನೆಂಟು ದಿನಗಳು, ರಾಜಸೂಯದ ರಾಜಕೀಯ, ರಾಜಸೂಯ ತಂದ ಅನರ್ಥ, ಶ್ರೀ ಕೃಷ್ಣಾವತಾರ ೨ ಸಂಪುಟಗಳು, ಅಗಸ್ತ್ಯ, ದಶಾವತಾರ, ಮಹಾಮಾತೆ ಕುಂತಿ ಕಣ್ತೆರೆದಾಗ, ನಳ ದಮಯಂತಿ, ಆಚಾರ್ಯ ಚಾಣಕ್ಯ, ರಾಮಾಯಣ ಸಂಪೂರ್ಣವಾದಾಗ, ಶ್ರೀ ರಾಮಾಯಣ ಸಾಹಸ್ರೀ ೫ ಭಾಗಗಳು, ಶ್ರೀ ರಾಮಾಯಣದ ಮಹಾ ಪ್ರಸಂಗಗಳು, ಶ್ರೀ ಕೃಷ್ಣ ಮತ್ತು ಮಹಾಭಾರತ ಯುದ್ದ, ಭಾರತೀಯ ಇತಿಹಾಸ ಪುರಾಣಗಳು, ಭಾರತ, ಇಸ್ಲಾಂ ಮತ್ತು ಗಾಂಧಿ, ಸಮಾಜ ಮತ್ತು ಆಧ್ಯಾತ್ಮೀಕರಣ, ಶ್ರೀ ಮಹಾಭಾರತ ಕಾಲ ನಿರ್ಣಯ, ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು ಭಾಗ-೧, ೨ ಮತ್ತು ೩, ರಾಷ್ಟ್ರಾವಲೋಕನ, ವನದಲ್ಲಿ ಪಾಂಡವರು, ವಾಲ್ಮೀಕಿ ಯಾರು?, ಸುಭಾಷರ ಕಣ್ಮರೆ, ಶ್ರೀಕೃಷ್ಣನ ಕೊನೆಯ ದಿನಗಳು ಜೊತೆಗೆ who killed Gandhi , Hindu society and dynamics of spiritual evaluation ಎಂಬ ಇಂಗ್ಲೀಷ್ ಕೃತಿಯನ್ನು ರಚಿಸಿದ್ದಾರೆ.
ಗಮಕ ಸಮ್ಮೇಳನಾಧ್ಯಕ್ಷರಾಗಿ, ಸರಕಾರದಿಂದ ಗಮಕರತ್ನಾಕರ ಎನ್ನುವ ವಿಶೇಷ ಬಿರುದಿಗೆ ಅವರು ಪಾತ್ರರಾಗಿದ್ದರು. ವೇದ ಸಂಸ್ಕೃತಿ ಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ೧೯೭೩ರಲ್ಲಿ ಬಹುಮಾನ, ೨೦೦೮ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿದ್ದವು. ನಾರಾಯಣಾಚಾರ್ಯರಿಗೆ ವಿವಿಧ ಮಠಾಧೀಶರಿಂದ ವಿದ್ವನ್ಮಣಿ, ವೇದಭೂಷಣ, ವಾಲ್ಮೀಕಿ ಹೃದಯಜ್ಞ, ರಾಮಾಯಣಾಚಾರ್ಯ, ಮಹಾಭಾರತಾಚಾರ್ಯ ಮೊದಲಾದ ಬಿರುದುಗಳು ಸಂದಿದ್ದವು.
ಕನ್ನಡದ ಸಾಹಿತ್ಯ ಲೋಕದಲ್ಲಿ ಪೌರಾಣಿಕ, ಧಾರ್ಮಿಕ, ಐತಿಹಾಸಿಕ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ ಮತ್ತು ಮಾತನಾಡಬಲ್ಲ ಅಪರೂಪದ ಬರಹಗಾರರಾಗಿದ್ದ ನಾರಾಯಣಾಚಾರ್ಯರು ಯಾವತ್ತೂ ತಮ್ಮ ನಿಲುವಿನಿಂದ, ತಾವು ನಂಬಿದ ಸಿದ್ಧಾಂತದಿಂದ, ತಮ್ಮ ನಂಬಿಕೆಗಳಿಂದ ಅಥವಾ ತಮ್ಮ ಹೇಳಿಕೆಗಳಿಂದ ಹಿಂದೆ ಸರಿದವರಲ್ಲ. ಅವರ ಬದುಕಿನಿದ್ದಕ್ಕೂ ಕಾಂಗ್ರೆಸ್ ಅನ್ನು ವಿರೋಧಿಸಿಕೊಂಡೇ ಬಂದರು. ವಿಜಯ್ ಸಂಕೇಶ್ವರ ಪತ್ರಿಕೆ ಮಾರಲು ಹೊರಟಾಗ ಪತ್ರ ಬರೆದು ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಆಗ ಅವರದ್ದೇ ಪತ್ರಿಕೆಯಲ್ಲಿ ಆಚಾರ್ಯರು ಅಂಕಣ ಬರೆಯುತ್ತಿದ್ದರು.
ಆಚಾರ್ಯರು ಕನ್ನಡದ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು. ತಮ್ಮ ಪ್ರವಚನಗಳು ಮತ್ತು ವಿವಿಧ ಮಾಧ್ಯಮಗಳ ಚರ್ಚೆಗಳಲ್ಲಿ ನಿರಂತರವಾಗಿ ನಾಡು, ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ನಿರ್ಭೀಡೆಯಿಂದ ತಮ್ಮ ಅಭಿಪ್ರಾಯ ದಾಖಲಿಸುತ್ತಿದ್ದರು. ಕನ್ನಡ, ಸಂಸ್ಕೃತ, ತಮಿಳು, ಇಂಗ್ಲೀಷ್ ಭಾಷಾ ಪರಿಣಿತರಾಗಿದ್ದ ನಾರಾಯಣಚಾರ್ಯರನ್ನು ನಡೆದಾಡುವ ವಿಶ್ವಕೋಶ ಎಂದೇ ಕರೆಯಲಾಗುತ್ತಿತ್ತು. ನಿಜಕ್ಕೂ ಅವರ ನಿಧನ ಕನ್ನಡದ ಸಾರಸ್ವತ ಜಗತ್ತಿಗೆ ತುಂಬಿಕೊಡಲಾಗದ ನಷ್ಟ ಅನ್ನುವುದು ಖಂಡಿತಾ ಅತಿಶಯೋಕ್ತಿಯ ಮಾತಲ್ಲ.
-ವಿಭಾ








