ಬೆಂಗಳೂರು : ಶುಕ್ರವಾರ, ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದರು. ಈ ವೇಳೆ, ಸಿಎಂ ಕಾರ್ಯಶೈಲಿಯನ್ನು ವಿರೋಧ ಪಕ್ಷಗಳು ಮುಕ್ತಕಂಠದಿಂದ ಹೊಗಳಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಸಚಿವರ ಪೋಸ್ಟ್ ನಲ್ಲಿ ಏನಿದೆ? ಕೆಳಗೆ ಪೋಸ್ಟ್ ಮಾಡಿರುವ ಎರಡು ಫೋಟೋಗಳು ಎರಡು ಬೇರೆ ಸಂದರ್ಭಕ್ಕೆ ಸಂಬಂಧಿಸಿದ್ದು. ಆದರೆ ಎರಡೂ ನಮ್ಮ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ್ದು.
ಮೊದಲು ಎರಡನೆಯ ಸಂದರ್ಭ ದ ಬಗ್ಗೆ.
ನಿನ್ನೆ ಮುಖ್ಯಮಂತ್ರಿಗಳನ್ನು ಸರ್ವಪಕ್ಷದ ಭಾರೀ ದೊಡ್ಡ ಸಂಖ್ಯೆಯ ನಾಯಕರುಗಳ ನಿಯೋಗ ಭೇಟಿ ಮಾಡಿತ್ತು. ಕಾಂಗ್ರೆಸ್, ಜೆಡಿಎಸ್, ಜೆಡಿಯು, ಸಿಪಿಎಂ, ಸಿಪಿಐ, ರೈತಸಂಘ….ಗಳ ಪ್ರತಿನಿಧಿಗಳು ಈ ನಿಯೋಗದಲ್ಲಿದ್ದರು. ರಾಜ್ಯದಲ್ಲಿ ಇನ್ನೂ ಏನು ಆಗಬೇಕು ಎಂಬುದರ ಬಗ್ಗೆ ದೊಡ್ಡ ಬೇಡಿಕೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿದರು.
ಬೇಡಿಕೆಗಳ ಕುರಿತು ಈ ನಾಯಕರೆಲ್ಲರೂ ಮಾತನಾಡುವಾಗ ಒಂದು ಸಂಗತಿಯನ್ನು ಗಮನಿಸಿದೆ. ಎಲ್ಲರೂ ನಮ್ಮ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಮುಕ್ತ ಕಂಠದಿಂದ ಶ್ಲಾಘಿಸಿದರು. ಓರ್ವ ನಾಯಕರಂತೂ ಯಡಿಯೂರಪ್ಪನವರು 12 ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ್ದ ಕಾಯಕ ತತ್ವವನ್ನು ಹೇಗೆ ಅನುಸರಿಸುತ್ತಿದ್ದಾರೆ ಎಂದು ಬಣ್ಣಿಸಿದರು. ಇರುವ ಆರ್ಥಿಕ ಇತಿಮಿತಿಯಲ್ಲಿ ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರ ಕ್ರಮಗಳನ್ನು ಮೆಚ್ಚಿ ಮಾತಾನಾಡಿದರು. ಆದರೆ….ಇನ್ನೂ ಬೇಕು ಎಂದೂ ಹೇಳಿದರು. ಅದು ಸಹಜ ಕೂಡ.
ಈಗ ಮೊದಲ ಫೋಟೋ ಸಂದರ್ಭ. (ನಾನು ಮು.ಮಂತ್ರಿಗಳ ಜೊತೆ ಮಾತನಾಡುತ್ತಿರುವ ಈ ಫೋಟೋ ಆ ಸಭಾಂಗಣದಲ್ಲಿದ್ದ ಗೆಳೆಯರೊಬ್ಬರು ಸೆರೆ ಹಿಡಿದು ನನಗೆ ಕಳಿಸಿದ್ದು)
ಈಗ್ಗೆ ಮೂರು ದಿನಗಳ ಹಿಂದೆ ಕೆಲ ಸಚಿವರು ಮತ್ತು ಪ್ರಮುಖ ಅಧಿಕಾರಿಗಳನ್ನೊಳಗೊಂಡ ಮೆರಾಥಾನ್ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಯಾವ್ಯಾವ ವರ್ಗಕ್ಕೆ ಯಾವ ರೀತಿ ನೆರವು ಘೋಷಿಸಬೇಕೆಂಬುದರ ಕುರಿತು ನಡೆದಿತ್ತು ಆ ಸಭೆ. ಎಲ್ಲರೂ ಹೇಳಿದ್ದನ್ನು ಮುಖ್ಯಮಂತ್ರಿಗಳು ಬರೆದುಕೊಳ್ಳುತ್ತಿದ್ದರು. ಎಲ್ಲರ ಅಭಿಪ್ರಾಯಗಳನ್ನು ಆಲಿಸಿದರು. ಕೆಲ ಸಲ ನಡೆದ ಪರ-ವಿರೋಧ ಅಭಿಪ್ರಾಯಗಳಿಗೂ ಅವಕಾಶ ನೀಡಿದರು. ಕೊನೆಗೆ ಅಂದಿನ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ “ಈ ರೀತಿ ಪರಿಹಾರ ಘೋಷಿಸೋಣವೇ” ಎಂದು ಸಭೆಯನ್ನು ಕೇಳಿ ಇನ್ನೂ ನಾವು ಸಹಾಯ ಮಾಡಬೇಕಾದ ವರ್ಗಗಳು ಅನೇಕ ಇವೆ, ಸಧ್ಯಕ್ಕೆ ಇದನ್ನು ಘೋಷಿಸೋಣ ಎಂದು ಹೇಳಿದರು.
ಸಭೆ ಮುಗಿಯಿತು. ಎಲ್ಲರೂ ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ಮುಖ್ಯಮಂತ್ರಿಗಳು ಒಬ್ಬರೇ ಏನೋ ಕಾಗದ ನೋಡುತ್ತಿದ್ದರು. ಆಗ ತಡೆಯಲಾಗದೆ ನಾನು ಹೋಗಿ “ಸರ್. ಒಂದು ನಿಮಿಷ ಮಾತನಾಡಬಹುದೇ” ಎಂದೆ. ಅವರು “ಹೇಳಿ ಸುರೇಶ್ ಕುಮಾರ್” ಎಂದರು.
ನಾನು “ಸರ್. ನೀವು ಈಗಿನ ಸಂದರ್ಭದಲ್ಲಿ ಹೇಗೆ ಇದನ್ನೆಲ್ಲಾ ಹೇಗೆ ಮ್ಯಾನೇಜ್ ಮಾಡುತ್ತಿದ್ದೀರ. ನಮಗಿಂತ ನಿಮಗೆ ರಾಜ್ಯದ ಪರಿಸ್ಥಿತಿ ಅರಿವಿದೆ. ನಿಮಗೆ ಎಲ್ಲಾ ಸಂಗತಿಗಳ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ. ಸಹಜವಾಗಿ ಒತ್ತಡ ಜಾಸ್ತಿಯೇ ಇರುತ್ತದೆ. ಒಂದೆರಡು ಖಾತೆ ನೋಡಿಕೊಳ್ಳುವ ನಮ್ಮಂಥವರಿಗೇ ಟೆನ್ಷನ್ ತರುವ ಸಂದರ್ಭವಿದು. ನೀವು ಹೇಗೆ ಎದುರಿಸುತ್ತಿದ್ದೀರಿ? ಯಾವುದೇ ನಿಯೋಗ ಬಂದರೂ ನಿರಾಕರಿಸದೇ ಭೇಟಿ ಮಾಡುತ್ತಿದ್ದೀರಿ. ಒಂದು ಲಕ್ಷದಷ್ಟು ಮೊತ್ತದ ಚೆಕ್ ಕೊಡಲು ಬಂದವರೂ ಫೋಟೋ ಬಯಸಿದಾಗ ನಿಂತು ಸಹಕರಿಸುತ್ತಿದ್ದೀರಿ? ಇಷ್ಟೆಲ್ಲಾ ಒತ್ತಡ-ದುಗಡದ ನಡುವೆ ಹೇಗೆ ಸಾಧ್ಯ?” ಎಂದು ಕೇಳಿದೆ.
ಅದಕ್ಕವರು ” ಇಲ್ಲ ಸುರೇಶ್ ಕುಮಾರ್.ಇದೊಂದು (ಕೊರೋನಾ) ಸವಾಲು. ಈ ಸವಾಲನ್ನು ಎದುರಿಸಲೇಬೇಕೆಂಬ ತೀರ್ಮಾನ ಮೊದಲ ದಿನದಿಂದ ನನ್ನದು. ರಾಜ್ಯದ ಜನತೆಯ ಒಟ್ಟು ಹಿತಕ್ಕಾಗಿ ಈ ಎಲ್ಲಾ ಸವಾಲು ಎದುರಿಸಲೇಬೇಕಲ್ಲವೇ? ಆದ್ದರಿಂದ ಗಟ್ಟಿಯಾಗಿ ಎದುರಿಸುತ್ತಿದ್ದೇನೆ” ಎಂದರು.
ಆಗ ನಾನು “ಹ್ಯಾಟ್ಸ್ ಆಫ್ ಸರ್. ನಿಮ್ಮ Energy ಗೆ ಮತ್ತು ದೃಢತೆ ಯಿಂದ ಕೂಡಿರುವ ಕಾರ್ಯಕ್ಕೆ.” ಎಂದು ಹೇಳಿದ್ದಕ್ಕೆ ಅವರು Thank You ಎಂದರು. ನಾನು ಅಲ್ಲಿಂದ ಹೊರಟೆ.
ರಾಜ್ಯದಲ್ಲಿ ಕಳೆದ ಸುಮಾರು 50 ದಿನಗಳಿಂದ ನಡೆದಿರುವ ಕಾರ್ಯವನ್ನು ಹತ್ತಿರದಿಂದ ನೋಡಿರುವ ನನ್ನ ಪ್ರಾಮಾಣಿಕ ಅನಿಸಿಕೆ ಇದು. ಬಹಳ ಉತ್ತಮ ನಿರ್ಧಾರಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡಿರುವ ರಾಜ್ಯಗಳಲ್ಲಿ ನಮ್ಮದೂ ಒಂದು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯಕ್ಕೆ ತಕ್ಕಂತೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
ನಮ್ಮ ಸರ್ಕಾರ ತೆಗೆದುಕೊಂಡ ಕೆಲ ನಿರ್ಧಾರಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಂಡು ಬಂದಿರುವ ಭಿನ್ನಾಭಿಪ್ರಾಯಗಳ ಗಮನಿಸಿದ್ದೇನೆ. ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಸಮಾಜದಲ್ಲಿ ಬೇರೆ ಬೇರೆ ಅಭಿಪ್ರಾಯ ಇರಲಿಕ್ಕೂ ಸಾಧ್ಯ.
ಅದು ಅವರವರ ಹಕ್ಕು. ಆದರೆ ಸರ್ಕಾರದ ಸದುದ್ದೇಶ ಮಾತ್ರ ಯಾರೂ ಪ್ರಶ್ನಿಸಿಲ್ಲ.
ಒಂದು ಮಾತನ್ನು ವಿಶ್ವಾಸದಿಂದ ಹೇಳಬಲ್ಲೆ.
ಒಟ್ಟಾರೆ ನೋಡಿದಾಗ ಈ ನಾಯಕನ ನೇತೃತ್ವ, Workaholic ಕಾರ್ಯಶೈಲಿ ನಮ್ಮ ರಾಜ್ಯವನ್ನು ಬಹುತೇಕ ರಾಜ್ಯಗಳಿಗೆ ಹೋಲಿಸಿದರೆ ಸಮಾಧಾನಕರ ಸ್ಥಿತಿಯಲ್ಲಿಡುವಂತೆ ಮಾಡಿದೆ.
ಮತ್ತೊಮ್ಮೆ ನನ್ನ Hats off. ಎಂದು ಅಭಿನಂದಿಸಿದ್ದಾರೆ.








