ನವದೆಹಲಿ : ಇನ್ನು ನಾಲ್ಕು ತಿಂಗಳು ಅಥವಾ ವರ್ಷಾಂತ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ನಿರ್ಮೂಲನೆಗೆ ಲಸಿಕೆ ಬರಲಿದೆ ಎಂದು ಹಲವು ಕಂಪನಿಗಳು ಭರವಸೆ ನೀಡಿವೆ. ಆದ್ರೆ ಇನ್ನೆರಡು ವರ್ಷ ಕೊರೊನಾ ಲಸಿಕೆ ತಯಾರಾಗುವುದು ಅನುಮಾನ ಎಂದಿದ್ದಾರೆ ವಿಶ್ವಸಂಸ್ಥೆ ಕೋವಿಡ್ ರಾಯಭಾರಿಯಾಗಿರುವ ಡೇವಿಡ್ ನಬಾರ್ರೋ. ಸಂದರ್ಶನವೊಂದರಲ್ಲಿ ಅವರು” ಜನರನ್ನು ಕೊರೊನಾದಿಂದ ರಕ್ಷಿಸಲು ಇನ್ನೆರಡು ವರ್ಷಗಳವರೆಗೆ ಲಸಿಕೆ ತಯಾರಾಗುವುದು ಅನುಮಾನ. ಹೀಗಾಗಿ ದೀರ್ಘಕಾಲದವರೆಗೆ ಈ ವೈರಸ್ ನೊಂದಿಗೆ ಬದುಕುವುದು ಹೇಗೆಂಬುದನ್ನು ಎಲ್ಲ ದೇಶಗಳ 780 ಕೋಟಿ ಜನರು ಕಲಿಯಬೇಕಿದೆ. ಇದೊಂದು ಸಾರ್ವತ್ರಿಕ ಕಲಿಕಾ ಪ್ರಕ್ರಿಯೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಭಾರತದ ಬಗ್ಗೆಯೂ ಮಾತನಾಡಿರುವ ನಬಾರ್ರೋ, ಭಾರತದಲ್ಲಿ ಕೊರೊನಾ ಹರಡುವುದನ್ನು ನಿಯಂತ್ರಿಸಲು ಮೊದಲ ಹಂತದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಎರಡನೇ ಹಂತದಲ್ಲಿ ಅದರಲ್ಲೂ ಸಮುದಾಯಿಕ ಹಂತದಲ್ಲಿ ಕೊರೊನಾ ವ್ಯಾಪಿಸುವುದನ್ನು ತಡೆಗಟ್ಟುವುದು ಸ್ಥಳೀಯಾಡಳಿತಗಳ ಸನ್ನದ್ಧತೆಯನ್ನು ಆಧರಿಸಿದೆ ಎಂದು ಅವರು ಹೇಳಿದ್ದಾರೆ.
ಲಾಕ್ ಡೌನ್ ತೆರವಾದಂತೆ, ಕೆಲ ಪ್ರದೇಶಗಳಿಗೆ ಸೀಮಿತವಾಗಿರುವ ಸೋಂಕು ಇನ್ನಷ್ಟು ಕಡೆಗಳಲ್ಲಿ ಹಬ್ಬುವುದು ಅನಿವಾರ್ಯವೂ ಆಗಿದೆ. ನಮ್ಮ ಸುತ್ತಲಿನ ಪ್ರದೇಶದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು. ಅದನ್ನು ನಿಭಾಯಿಸುವುದು ಹೇಗೆ ಎಂದು ತಿಳಿಸಬೇಕು ಎಂದಿದ್ದಾರೆ.
ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವುದು ಎಷ್ಟು ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಜತೆಗೆ, ಪ್ರತಿ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಗಳು ಕೊರೊನಾ ನಿಗ್ರಹಕ್ಕೆ ಸಜ್ಜಾಗಬೇಕು. ಕೊರೊನಾದಿಂದಾಗಿ ಬಡವರು ಇನ್ನಷ್ಟು ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಇದರಿಂದ ಅವರನ್ನು ರಕ್ಷಿಸುವ ಕಾರ್ಯದಲ್ಲಿ ಇಡೀ ದೇಶ ತೊಡಗಿಕೊಳ್ಳಬೇಕು ಎಂದು ನಬಾರ್ರೋ ಹೇಳಿತ್ತಾರೆ.