ಬೆಂಗಳೂರು : ರಾಜ್ಯ ಸರ್ಕಾರ ಕೊರೊನಾ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಬಳಿ ದುಡ್ಡಿದೆ. ಬಜೆಟ್ ಪುನರ್ ಪರಿಶೀಲಿಸಿ ಅನುದಾನವನ್ನು ನೀಡಲು ಹೆಚ್ಚು ಸಮಸ್ಯೆ ಇಲ್ಲ. ಇದಕ್ಕಾಗಿ ಆಡಳಿತ ಪಕ್ಷದ ನಾಯಕರು ತಮ್ಮ ಜೇಬಿನಿಂದ ದುಡ್ಡು ಹಾಕುವ ಅಗತ್ಯವಿಲ್ಲ. ಆದ್ರೆ ಈ ಪರಿಸ್ಥಿತಿಯಲ್ಲಿ ಯಾವ ವರ್ಗಕ್ಕೆ ಎಷ್ಟು ಕೊಡಬೇಕು ಎಂಬುದನ್ನಷ್ಟೇ ತೀರ್ಮಾನಿಸಬೇಕಿದೆ. ಕೇಂದ್ರ ಸರ್ಕಾರ ಈಗಾಗಲೇ 1.70 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಿಸಿದೆ. ಆದರೆ, ಇವತ್ತಿನವರೆಗೂ ಇದರ ಪ್ರಯೋಜನ ಯಾರಿಗೆ ತಲುಪಿದೆ ಎಂಬುದು ಸರಿಯಾಗಿ ತಿಳಿದಿಲ್ಲ. ನಿಜವಾದ ಶ್ರಮಿಕರ ನೆರವಿಗೆ ಸರ್ಕಾರ ಧಾವಿಸಲೇ ಇಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬೇರೆ ರಾಜ್ಯಕ್ಕೆ ವಲಸೆ ಹೋದವರು ರಾಜ್ಯಕ್ಕೆ ಆಗಮಿಸಲು ಅರ್ಜಿ ಹಾಕಿರುವವರ ಮಾಹಿತಿ ನಮ್ಮ ಬಳಿ ಇದೆ. ಇವರಲ್ಲಿ ಕೆಲವರಿಗೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಈ ವಿಚಾರದಲ್ಲಿ ಸರ್ಕಾರ ಜನರಲ್ಲಿ ಆತಂಕ ಮೂಡಿಸಬಾರದು. ಹೊರ ರಾಜ್ಯಗಳಲ್ಲಿ ಇರುವವರು ಕುಟುಂಬವನ್ನು ಭೇಟಿ ಮಾಡಿ ಮತ್ತೆ ವಾಪಸ್ ಹೋಗುತ್ತಾರೆ. ಅದೇ ರೀತಿ, ಇಲ್ಲಿಂದ ತಮ್ಮ ಊರಿಗೆ ಹೋದವರು ಕೆಲ ದಿನಗಳ ನಂತರ ವಾಪಸ್ ಬರುತ್ತಾರೆ. ಇಲ್ಲಿ ಅವರು ಉದ್ಯೋಗ, ವ್ಯವಹಾರ, ಮನೆ, ಬದುಕು ಎಲ್ಲವನ್ನೂ ಕಟ್ಟಿಕೊಂಡಿದ್ದಾರೆ. ಆದರೂ ಆತಂಕದಿಂದ ತಮ್ಮ ಊರಿಗೆ ಹೋಗಲು ಮನಸ್ಸು ಮಾಡಿದ್ದಾರೆ. ಅವರ ಇಚ್ಛೆಗೆ ಸ್ಪಂದಿಸಿ ಗೌರವಯುತವಾಗಿ ನಡೆಸಿಕೊಳ್ಳಬೇಕು ಅಂತ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.








