ಅಂದು..!
ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ ಕಾಣಿಸುತ್ತಿತ್ತು. ದೇಹದ ಗಾಯ, ಹರಿದ ರಕ್ತ, ಸುರಿಸಿದ ಬೆವರ ಹನಿಗಳು ಹಣತೆಯ ದೀಪದಂತೆ ಉರಿಯುತ್ತಿದ್ದವು. ಆದ್ರೆ ಮಹಾರಾಜ ಮಾತ್ರ ಚರಿತ್ರೆಯ ಪುಟಗಳಲ್ಲಿ ನಂದಾದೀಪವಾಗಿ ಬೆಳಗುತ್ತಿದ್ದ.
ಇದು ಅಂದಿನ ರಾಜವಂಶದ ಇತಿಹಾಸ. ಇದನ್ನು ಭಾರತೀಯ ಕ್ರಿಕೆಟ್ಗೆ ಹೋಲಿಕೆ ಮಾಡಿದಾಗ…! ಹಾಗೇ ಸುಮ್ಮನೆ ಊಹಿಸಿಕೊಳ್ಳಿ..!
ಇಂದು…
ಕಾಲಮಾನ ಬದಲಾಗಿದೆ. ಇತಿಹಾಸ ಪುನರಾವರ್ತನೆಗೊಳ್ಳುತ್ತಿದೆ. ಆದ್ರೆ ಇದು ಸಾಮ್ರಾಜ್ಯಶಾಹಿ ಸಾಮ್ರಾಟರ ಗತವೈಭವ ಅಲ್ಲ. ಕ್ರಿಕೆಟ್ ಅಂಗಣದ ಮಹಾರಾಜ, ದಂಡನಾಯಕರ ಮತ್ತು ಸೈನಿಕರ ವಿರೋಚಿತ ಹೋರಾಟದ ವಾಸ್ತವ ಚಿತ್ರಣ
ಅಂದಿನವರು ಖಡ್ಗ, ಬಿಲ್ಲು ಬಾಣ ಹಿಡಿದುಕೊಂಡು ರಣಭೂಮಿಯಲ್ಲಿ ಹೋರಾಡುತ್ತಿದ್ದರು. ಇಂದು ಕ್ರಿಕೆಟಿಗರು ಬ್ಯಾಟ್ ಚೆಂಡು ಹಿಡಿದುಕೊಂಡು ಅಂಗಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂದು- ಇಂದು… ವ್ಯತ್ಯಾಸ ಏನಿಲ್ಲ. ಬದಲಾಗಿದ್ದು ಕೈಯಲ್ಲಿರುವ ಆಯುಧ ಮಾತ್ರ. ಅದನ್ನು ಬಿಟ್ರೆ, ಅದೇ ರಕ್ತ, ಅದೇ ಗಾಯ, ಅದೇ ಬೆವರಿನ ಹನಿಗಳು ದೇಹದಿಂದ ಭೂಮಿಗೆ ಬೀಳುತ್ತಲೇ ಇರುತ್ತವೆ.
ಹೌದು, ತಂಡದ ಗೆಲುವಿನಲ್ಲಿ ಎಲ್ಲಾ ಆಟಗಾರರು ಭಾಗಿಯಾಗುತ್ತಾರೆ. ಎಲ್ಲರೂ ಅದ್ಭುತ ಪ್ರದರ್ಶನ ನೀಡುತ್ತಾರೆ. ಕಠಿಣ ಸನ್ನಿವೇಶಗಳಲ್ಲೂ ನೆಲಕಚ್ಚಿ ನಿಂತು ಆಡ್ತಾರೆ. ಆ ಪೈಕಿ ಒಬ್ಬ ಆಟಗಾರ ಮಾತ್ರ ಮಹಾರಾಜನಾಗಿ ಮೆರೆಯುತ್ತಾನೆ.
ಇನ್ನುಳಿದವರು ಸೇನಾಧಿಪತಿಗಳಾಗಿ, ಸೈನಿಕರಾಗಿಯೇ ಉಳಿದಿರುತ್ತಾರೆ. ಆದ್ರೂ ಕ್ರಿಕೆಟ್ ಇತಿಹಾಸ ಪುಟಗಳಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿದುಕೊಂಡಿರುತ್ತದೆ. ಆದರೆ ಅವರ ಹೆಮ್ಮೆ – ಬಿರ್ಮೆಯ ಹೆಸರು, ಚಕ್ರವರ್ತಿಯಂತೆ ಹೊಳೆಯುವ ಆಟಗಾರನ ನೆರಳಿನಲ್ಲೇ ಅಡಗಿಕೊಂಡಿರುತ್ತದೆ.
ಹಾಗೇ ನೋಡಿದ್ರೆ ಭಾರತೀಯ ಕ್ರಿಕೆಟ್ನ ಪರಂಪರೆಯೇ ಒಂದು ಅದ್ಭುತ ಪಯಣ. ಒಂದೊಂದು ಕಾಲಘಟ್ಟದಲ್ಲಿ ಒಬ್ಬೊಬ್ಬ ಕ್ರಿಕೆಟ್ ಮಹಾರಾಜನಿಗೆ ಟೀಮ್ ಇಂಡಿಯಾ ಗರ್ಭಗುಡಿಯಲ್ಲಿ ಪಟ್ಟಾಭಿಷೇಕವಾಗಿದೆ. ಅದರಲ್ಲೂ ಸುನೀಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯಂತಹ ಮಹಾನ್ ಆಟಗಾರರು ರಾಜಾಧಿರಾಜರಂತೆ ವಿಶ್ವ ಕ್ರಿಕೆಟ್ನಲ್ಲಿ ದರ್ಬಾರು ನಡೆಸಿದ್ದಾರೆ.
ಸೂರ್ಯನ ಕಾಂತಿಯ ಸನ್ನಿ ಮತ್ತು ಬೆಳಂದಿಗಳ ಚಂದಿರನಂತಹ ಜಿ.ಆರ್.ವಿ..!
ನಿಜ, 70-80ರ ದಶಕಗಳಲ್ಲಿ ಸುನೀಲ್ ಗವಾಸ್ಕರ್ ವಿಶ್ವ ಕ್ರಿಕೆಟ್ನ ರನ್ ಮೇಷಿನ್. ಟೆಸ್ಟ್ ಕ್ರಿಕೆಟ್ನಲ್ಲಿ 10,122 ರನ್ ಹಾಗೂ 34 ಶತಕ ಸಿಡಿಸಿ ದಾಖಲೆ ಬರೆದಿದ್ದರು. ಇದೇ ವೇಳೆ ನಮ್ಮ ಕರ್ನಾಟಕದ ಜಿ.ಆರ್.ವಿಶ್ವನಾಥ್ ತನ್ನ ಕಲಾತ್ಮಕ ಬ್ಯಾಟಿಂಗ್ ಶೈಲಿಯಿಂದಲೇ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದ್ದರು. 6080 ರನ್ ಹಾಗೂ 14 ಶತಕ ಸಿಡಿಸಿದ್ದ ಜಿಆರ್ವಿಗೆ ಖ್ಯಾತಿ ಮಾತ್ರ ಇದೆ. ಆದ್ರೆ ಸೂರ್ಯನಂತೆ ಹೊಳೆಯುತ್ತಿದ್ದ ಸನ್ನಿಯ ಎದುರು ಜಿಎರ್ವಿ ಬೆಳಂದಿಗಳ ಚಂದಿರನಂತೆ ಹಿತವಾಗಿ ಕಂಗೊಳಿಸಿದ್ರು.
ವೆಂಗ್ ಸರ್ಕಾರ್ ಗೆ ಛಾಯೆಯಾದ ತ್ರಿಮೂರ್ತಿಗಳು..!
ಟೆಸ್ಟ್ ಕ್ರಿಕೆಟ್ನಲ್ಲಿ 6868 ರನ್ ಹಾಗೂ 17 ಶತಕಗಳು ಸರ್ಕಾರ್ ಹೆಸರಿನಲ್ಲಿವೆ. ಲಾಡ್ಸ್ ನಲ್ಲಿ ಸತತ ಮೂರು ಶತಕ ಗಳಿಸಿದ ದಾಖಲೆಯೂ ಇದೆ. ಗವಾಸ್ಕರ್ ಜೊತೆಗೆ ಸರ್ಕಾರ್ ಭಾರತ ಕ್ರಿಕೆಟ್ನ ಸೇತುವೆಯಾಗಿದ್ದರು. ಆದ್ರೆ ಗವಾಸ್ಕರ್ ದಾಖಲೆ, ವಿಶ್ವಕಪ್ ವಿಜೇತ ನಾಯಕ ಕಪಿಲ್ ವರ್ಚಸ್ಸು ಹಾಗೂ ಸಚಿನ್ ಆಗಮನದಿಂದ ವೆಂಗ್ಸರ್ಕಾರ್ ಹೆಸರು ನಕ್ಷತ್ರದಂತೆ ಕಾಣಿಸಿಕೊಂಡಿತ್ತು.
ಕಪಿಲ್ ಹೀರೋಯಿಸಂಗೆ ಜಿಮ್ಮಿಯೇ ಪೋಷಕ ಪಾತ್ರಧಾರಿ..!
ಮೋಹಿಂದರ್ ಅಮರನಾಥ್. 1983ರ ವಿಶ್ವಕಪ್ ಟೂರ್ನಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಪಿಲ್ ನಾಯಕತ್ವಕ್ಕೂ ಜಿಮ್ಮಿ ಸಾರಥಿಯಾಗಿದ್ದರು. ಆದ್ರೆ ಅಮರನಾಥ್ ಕೇವಲ ಪೋಷಕ ಪಾತ್ರದ ಭಾಗವಾದ್ರು. ಕ್ರಿಕೆಟ್ ಇತಿಹಾಸ ಕಪಿಲ್ ನಾಯಕತ್ವವನ್ನೇ ಹೆಚ್ಚು ನೆನಪಿಸಿಕೊಂಡಿತ್ತು.
ವಿಶ್ವ ಕ್ರಿಕೆಟ್ನಲ್ಲಿ ಕ್ರಿಕೆಟ್ ದೇವ್ರ ಅವತಾರ..!
ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ನ ಮುಕುಟ ಮಣಿ. ಭಾರತೀಯ ಕ್ರಿಕೆಟ್ ಅನ್ನು ಶ್ರೀಮಂತಗೊಳಿಸಿದ್ದ ಮಾಸ್ಟರ್ ಬ್ಲಾಸ್ಟರ್. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ದಾಖಲೆಗಳ ಸರದಾರ. ಜೊತೆಗೆ ವಿಶ್ವ ಕ್ರಿಕೆಟ್ನ ಸಾರ್ವಭೌಮನಾಗಿ ಮೆರೆದಾಡಿದ್ದು ಈಗ ಇತಿಹಾಸ. ಕ್ರಿಕೆಟ್ ದೇವ್ರರಾಗಿ ಟೀಮ್ ಇಂಡಿಯಾದ ಗರ್ಭಗುಡಿಯನ್ನು ಅಲಂಕರಿಸಿದ್ದ ಸಚಿನ್ಗೆ ಅಷ್ಪದಿಕ್ಪಾಲಕಾರಂತಹ ಆಟಗಾರರ ಬೆಂಬಲವಿತ್ತು. ಹಾಗಾಗಿಯೇ ಸಚಿನ್ ಕ್ರಿಕೆಟ್ ಜಗತ್ತಿನಲ್ಲಿ ಮೇರು ಪರ್ವತವಾಗಿ ಬೆಳೆಯಲು ಸಾಧ್ಯವಾಯ್ತು.
ಸಚಿನ್ ಪ್ರಭೆಯ ಮಧ್ಯೆ ಮೂಡಿದ ಗ್ರೇಟ್ ವಾಲ್..!
ರಾಹುಲ್ ದ್ರಾವಿಡ್ ಅಂದ್ರೆ ಗ್ರೇಟ್ ವಾಲ್. ಟೆಸ್ಟ್ ನಲ್ಲಿ 13,288 ಹಾಗೂ ಏಕದಿನ ಕ್ರಿಕೆಟ್ನಲ್ಲಿ 10889 ರನ್ ದಾಖಲಿಸಿದ್ದಾರೆ. ತಂಡದ ಹಿತಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಆದ್ರೆ ಕ್ರಿಕೆಟ್ ದೇವ್ರ ಪ್ರಖರತೆಯ ಮುಂದೆ ರಾಹುಲ್ ಕುಸಿಯದ ಗೋಡೆಯಾಗಿಯೇ ಉಳಿದ್ರು. ಅಂದು ತಂಡದ ಗೋಡೆಯಾಗಿದ್ದ ಜಾಮಿ, ಇಂದು ಕೂಡ ಗೊಡೆ ಕಟ್ಟುವ ಕಾಯಕದಲ್ಲೇ ಇದ್ದಾರೆ.
ತಂಡದ “4 -ಬಿ”ಗಳಲ್ಲಿ ಒಬ್ಬರಾದ ವಿವಿಎಸ್..!
ವಿವಿಎಸ್ ಲಕ್ಷ್ಮಣ್. ಈ ಹೆಸರು ಕೇಳಿದಾಗ ನೆನಪಾಗೋದು 2001ರ ಈಡನ್ ಟೆಸ್ಟ್ನ 281 ರನ್ಗಳ ಮಹೋನ್ನತ ಇನಿಂಗ್ಸ್. ಟೆಸ್ಟ್ ನಲ್ಲಿ 8781 ರನ್ ದಾಖಲಿಸಿದ್ದಾರೆ. ತಂಡದ ಹಲವು ಗೆಲುವುಗಳಿಗೆ ಕಾರಣೀಕರ್ತರಾಗಿದ್ದಾರೆ. ಆದ್ರೆ ತೆಂಡುಲ್ಕರ್ ಗಂಗೂಲಿ, ದ್ರಾವಿಡ್À, ಸೆಹ್ವಾಗ್À ಆಟದ ಮುಂದೆ ವಿವಿಎಸ್,ವೇರಿ ವೇರಿ ಸ್ಪೇಷಲ್ ಆಗಿಯೇ ಕಾಣಿಸಿದ್ರು.
ಬ್ಯಾಟರ್ಗಳ ಅಬ್ಬರದ ನಡುವೆಯೂ ಗ್ರೇಟ್ ಬೌಲರ್..!
ಅನಿಲ್ ಕುಂಬ್ಳೆ. ಟೆಸ್ಟ್ ನಲ್ಲಿ 619 ವಿಕೆಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ 337 ವಿಕೆಟ್ ಉರುಳಿಸಿದ್ದಾರೆ. ಪಾಕ್ ವಿರುದ್ದ ಇನಿಂಗ್ಸ್ನ 10 ವಿಕೆಟ್ ಪಡೆದು ದಾಖಲೆ ಬರೆದಿದ್ದರು. ಟೀಮ್ ಇಂಡಿಯಾದ ವಿಕೆಟ್ ಟೇಕಿಂಗ್ ಬೌಲರ್. ಬ್ಯಾಟರ್ಗಳ ಪ್ರಾಬಲ್ಯದ ನಡುವೆಯೂ ವಿಕೆಟ್ ಸಾಮ್ರಾಜ್ಯ ಕಟ್ಟಿದ ಅಪ್ರತಿಮ ದಂಡನಾಯಕ.
ಮಹಾರಾಜನಾದ್ರೂ ಭಾರತೀಯ ಕ್ರಿಕೆಟ್ಗೆ ದಾದಾ..!
ಸೌರವ್ ಗಂಗೂಲಿ. ಆಧುನಿಕ ಟೀಮ್ ಇಂಡಿಯಾಗೆ ಅಡಿಪಾಯ ಹಾಕಿಕೊಟ್ಟ ಕ್ಯಾಪ್ಟನ್. ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ತಂಡವನ್ನು ಮುಕ್ತಿಗೊಳಿಸಿದ್ದ ನಾಯಕ. ಆದ್ರೂ ಸಚಿನ್, ದ್ರಾವಿಡ್ ನೇಮ್, ಫೇಮ್ ಹಾಗೂ ಧೋನಿಯ ಯಶಸ್ವಿ ನಾಯಕತ್ವದಿಂದ ಗಂಗೂಲಿ ದಾದಾ ಬಿರುದಿನಲ್ಲೇ ಗುರುತಿಸಿಕೊಂಡ್ರು.
ಯುವರಾಜ, ಸುಲ್ತಾನನೂ ಮಹಾರಾಜನಾಗಲಿಲ್ಲ..!
ಇನ್ನು, ಯುವರಾಜ್ ಸಿಂಗ್, ಸೆಹ್ವಾಗ್, ಗಂಭೀರ್ ಕೂಡ ಇತಿಹಾಸದ ನೆನಪಿನ ಪುಟ ಸೇರಿಕೊಂಡ್ರು. ಜೀವ ಪಣಕ್ಕಿಟ್ಟು ಆಡಿದ್ದ ಯುವಿ, ಯುವರಾಜನಾಗಿಯೇ ಉಳಿದು ಬಿಟ್ರು. ವೀರೂ ಡೆಲ್ಲಿ ಸುಲ್ತಾನ ಬಿರುದುಗೆ ಸೀಮಿತವಾದ್ರು. ಯಾಕಂದ್ರೆ, ಮೂರು ಐಸಿಸಿ ಟ್ರೋಫಿ ಗೆದ್ದ ಧೋನಿ ಜನಮನ ಗೆದ್ದಿದ್ದರು.
ಧೋನಿಯ ಸಾಮ್ರಾಜ್ಯದಲ್ಲಿ ಉದಯಿಸಿದ ಆಧುನಿಕ ಮಹಾರಾಜ..!
ಎಂ.ಎಸ್. ಧೋನಿ ಟೀಮ್ ಇಂಡಿಯಾದ ಕಿಂಗ್ಮೇಕರ್. ಸಮಯಪ್ರಜ್ಞೆಯಿಂದ ಗೆಲುವು ಸಾಧಿಸುವ ನಿಪುಣ ಮಂತ್ರಿ. ಅನುಭವಿ ಹಾಗೂ ಬಿಸಿರಕ್ತದ ಹುಡುಗರೇ ಧೋನಿಯ ಗೆಲುವಿನ ಸೈನ್ಯ. ಈ ನಡುವೆ ಕೊಹ್ಲಿಯ ಅಧಿಪತ್ಯ ಧೋನಿಯನ್ನು ತೆರೆಮರೆಗೆ ಸರಿಯುವಂತೆ ಮಾಡಿತ್ತು. ಹಾಗಾಗಿ ಧೋನಿ ಗ್ರೇಟ್ ಲೀಡರ್, ಕೂಲ್ ಕ್ಯಾಪ್ಟನ್ ಆಗಿಯೇ ಪ್ರಖ್ಯಾತಿ ಪಡೆದ್ರು.
ಕೊಹ್ಲಿಯ ಮಹಾಜ್ವಾಲೆಯಿಂದ “ಇವರು” ಹೆಚ್ಚು ಪ್ರಕಾಶಿಸಲಿಲ್ಲ..!
ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯಾ ರಹಾನೆ, ಜಸ್ಪ್ರಿತ್ ಬೂಮ್ರಾ, ರವೀಂದ್ರ ಜಡೇಜಾ ಕೊಹ್ಲಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊಹ್ಲಿ ಹಂತ ಹಂತವಾಗಿ ಸಾಧನೆಯ ಮೆಟ್ಟಲೇರಿದ್ರು. ಸಚಿನ್ ಅವರ ಕೆಲವೊಂದು ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡ್ರು. ಏತನ್ಮಧ್ಯೆ, ನಾಯಕನಾಗಿ ರೋಹಿತ್ 2 ಐಸಿಸಿ ಟ್ರೋಫಿ ಗೆದ್ದುಕೊಂಡ್ರು. ಆದ್ರೂ ರೋಹಿತ್ ಅಬ್ಬರ, ಪೂಜಾರ, ರಹಾನೆಯ ತಾಳ್ಮೆ ಕೊಹ್ಲಿಯ ನೆರಳಿನಲ್ಲಿ ಬಚ್ಚಿಟ್ಟುಕೊಂಡಿತ್ತು.
ಒಂದಂತೂ ಸತ್ಯ, ಭಾರತೀಯ ಕ್ರಿಕೆಟ್, ರಾಜಪರಂಪರೆಯಂತೆ ಒಂದೊಂದು ಪರ್ವದಲ್ಲಿ ಒಬ್ಬ ಆಟಗಾರ, ಮಹಾರಾಜನ ಪಟ್ಟವನ್ನು ಅಲಂಕರಿಸಿದ್ದಾರೆ. ಆದ್ರೆ ಸಾಮಾಜ್ಯ ಕಟ್ಟಲು ಶ್ರಮಿಸಿದ್ದ ದಂಡನಾಯಕರನ್ನು ಕೆಲವೊಮ್ಮೆ ಇತಿಹಾಸ ಮರೆತುಬಿಡುತ್ತದೆ. ಆದ್ರೆ ಭಾರತೀಯ ಕ್ರಿಕೆಟ್ ಚರಿತ್ರೆ ಈ ದಂಡನಾಯಕರು ಮತ್ತು ಸೈನಿಕರಂತಹ ಆಟಗಾರರನ್ನು ಎಂದಿಗೂ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ.
ಬಿಸಿಸಿಐನ ಇಬ್ಬಗೆಯ ನೀತಿ ಎಷ್ಟು ಸರಿ..?
ಭಾರತೀಯ ಕ್ರಿಕೆಟ್ಗೆ ಬಿಸಿಸಿಐ ರಾಜಮಾತೆ. ಕ್ರಿಕೆಟ್ ರಾಜ್ಯಭಾರದ ಸೂತ್ರಗಳನ್ನು ಕೈ ಬೆರಳಿನಲ್ಲಿ ಆಡಿಸುತ್ತಿರುವ ಪಾಲಕಿ. ಆದ್ರೆ ಎಲ್ಲಾ ಆಟಗಾರರನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳುತ್ತಿಲ್ಲ ಎಂಬ ಆರೋಪ ಸುಳ್ಳಲ್ಲ. ಇದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದಾಗ ಯುವ ಆಟಗಾರರಿಗೆ ಅದ್ದೂರಿ ಸ್ವಾಗತ. ಆದ್ರೆ ಸೇವೆ ಮುಗಿಸಿ ವಿದಾಯ ಹೇಳುವಾಗ ಹಿರಿಯ ಆಟಗಾರರಿಗೆ ಗೌರವದ ಬೀಳ್ಕೊಡುಗೆ ಮಾಡುತ್ತಿಲ್ಲ.
ಯಾಕಂದ್ರೆ ಬಿಸಿಸಿಐ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಅದ್ದೂರಿಯಾದ ವಿದಾಯ ನೀಡಿದೆ. ಸಚಿನ್ ತೆಂಡುಲ್ಕರ್ ಒಲ್ಲದ ಮನಸ್ಸಿನಿಂದ ಹೇಳಿರುವ ವಿದಾಯವನ್ನು ತನ್ನ ಇಚ್ಛೆಯಂತೆ ಅರ್ಥಪೂರ್ಣಗೊಳಿಸಿದ್ರು. ಇನ್ನುಳಿದಂತೆ ಯಾವೊಬ್ಬ ಕ್ರಿಕೆಟಿಗನಿಗೂ ಬಿಸಿಸಿಐ ಅವರಿಚ್ಚೆಯಂತೆ ಗೌರವಯುತವಾದ ವಿದಾಯವನ್ನು ನೀಡಲಿಲ್ಲ.
ಹಾಗಾಗಿ, ಬಿಸಿಸಿಐನ ತಾರತಮ್ಯದ ಸಂಸ್ಕøತಿಯ ಬಗ್ಗೆ ಹಲವರಿಗೆ ಬೇಸರವಿದೆ. ಆದ್ರೂ ಒಂದು ಸಮಾಧಾನ. ಅಂದು ಕಾಸಿಲ್ಲದೆ ಒದ್ದಾಡುತ್ತಿದ್ದ ಬಿಸಿಸಿಐ ಇಂದು, ಕ್ರಿಕೆಟ್ ಆಟವನ್ನು ಶ್ರೀಮಂತಗೊಳಿಸಿದೆ. ಕ್ರಿಕೆಟಿಗರ ಬದುಕನ್ನು ಹಸನಾಗಿಸಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿದೆ. ತನ್ನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಯುವರಾಜನಂತಹ ಆಟಗಾರರನ್ನು ಬೆಳೆಸುತ್ತಿದೆ.
ಮುಂದಿನ ಮಹಾರಾಜ ಯಾರು..?
ಒಟ್ಟಿನಲ್ಲಿ ಗವಾಸ್ಕರ್, ತೆಂಡುಲ್ಕರ್, ಕೊಹ್ಲಿ ಈಗಾಗಲೇ ಭಾರತೀಯ ಕ್ರಿಕೆಟ್ನ ಅಧಿಪತಿಯ ಪಟ್ಟವನ್ನು ಅಲಂಕರಿಸಿದ್ದಾರೆ. ಹಾಗಿದ್ರೆ ಮುಂದಿನ ಸಾಮ್ರಾಟ ಯಾರು..? ಈ ಪ್ರಶ್ನೆಗೆ ಉತ್ತರ ಇನ್ನೊಂದು ಪರ್ವದವರೆಗೆ ಕಾಯಲೇಬೇಕು. ಅದೇ ಭಾರತೀಯ ಕ್ರಿಕೆಟ್ನ ಸಂಸ್ಕøತಿ, ಪರಂಪರೆ..ಮುಂದಿನ ಇತಿಹಾಸ.
#ಸನತ್ ರೈ
@saakshatv.com








