ಬೆಂಗಳೂರು, ಮೇ 14: ಕೇಂದ್ರ ಸರ್ಕಾರ ದೇಶದ ಆರ್ಥಿಕ ಸುಭದ್ರತೆ ಮತ್ತು ಆರ್ಥಿಕ ಚೇತರಿಕೆಗಾಗಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ. ಗಳ ವಿಶೇಷ ಪ್ಯಾಕೇಜ್ ನ ಕುರಿತಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ವಾಗ್ದಾಳಿಯನ್ನು ನಡೆಸಿದ್ದಾರೆ.

‘ಭಾರತ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಂಡಿದೆ ಎಂದೂ, ದೇಶ ಆತ್ಮ ನಿರ್ಭರ ಭಾರತ ಆಗಬೇಕು ಎಂದು ಮೋದಿ ನಿನ್ನೆಯ ಭಾಷಣದಲ್ಲಿ ಹೇಳಿದ್ದರು. ಅದರಂತೇ ಬಿಕ್ಕಟ್ಟನ್ನು ಬಿಜೆಪಿ ರಾಜಕೀಯದ ಅವಕಾಶವಾಗಿಸಿಕೊಂಡಿದೆ. ಆತ್ಮ ನಿರ್ಭರ ಭಾರತ ಎಂಬ ಆಕರ್ಷಕ ಪದಗುಚ್ಛದ ಮೂಲಕ ದೇಶದ ಜನ ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಅನಾಥರನ್ನಾಗಿಸಲಾಗಿದೆ’ ಎಂದು ಟ್ವೀಟ್ ಮಾಡಿದ ಕುಮಾರಸ್ವಾಮಿ ತಮ್ಮ ಸರಣಿ ಟ್ವೀಟ್ ಗಳನ್ನು ಮುಂದುವರಿಸಿದ್ದಾರೆ. ಲಾಕ್ ಡೌನ್ ನಿಂದ ತತ್ತರಿಸಿರುವ ಜನರನ್ನು, ರೈತರನ್ನು, ಬಡವರನ್ನು ಪಕ್ಕಕ್ಕಿಟ್ಟು, ಉದ್ಯಮಿಗಳು, ಉದ್ಯಮಗಳ ವ್ಯವಹಾರಕ್ಕೆ ಈ ₹20 ಲಕ್ಷ ಕೋಟಿ ಪ್ಯಾಕೇಜ್ ರೂಪಿಸಿರುವುದು ನಿರ್ಮಲಾ ಸೀತಾರಾಮನ್ ವಿವರಣೆಯಲ್ಲಿ ಸ್ಪಷ್ಟವಾಗಿದೆ. ಪ್ಯಾಕೇಜ್ ನಲ್ಲಿ ತಮಗೂ ಒಂದಿಷ್ಟು ಸಿಗಬಹುದು ಎಂದು ನಿರೀಕ್ಷಿಸಿದ್ದ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಲಾಗಿದೆ. ಕೇವಲ ಘೋಷಣೆಗಳ ಮೂಲಕ, ಕಾಲ್ಪನಿಕ ಲೆಕ್ಕಾಚಾರಗಳ ಮೂಲಕ ₹20 ಲಕ್ಷ ಕೋಟಿ ಪ್ಯಾಕೇಜ್ ಎಂಬ ಅರಗಿನ ಅರಮನೆ ಕಟ್ಟಿರುವ ಕೇಂದ್ರ ಸರ್ಕಾರ ಆ ಮೂಲಕ ಜನರ ದುಸ್ಥಿತಿಯನ್ನು ಗೇಲಿ ಮಾಡಿದೆ. ಈ ಘೋಷಣೆಯ ಮೂಲಕ ಅಪಾರ ಪ್ರಮಾಣದ ಪ್ರಚಾರ ಪಡೆದಿರುವ ಬಿಜೆಪಿ, ದೇಶದ ಬಿಕ್ಕಟ್ಟನ್ನು ರಾಜಕೀಯದ ಅವಕಾಶವಾಗಿ ಪರಿವರ್ತಿಸಿಕೊಂಡಿರುವುದು ಸ್ಪಷ್ಟ. ಕೊರೊನಾ ವೈರಸ್ ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಎದುರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೇಕಿತ್ತು. ಆದರೆ ತನಿಗಿಷ್ಟ ಬಂದ ಘೋಷಣೆಗಳನ್ನು ಕೂಗಿ 20 ಲಕ್ಷ ಕೋಟಿ ಕೊಟ್ಟೆವೆಂದು ಕೇಂದ್ರ ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. ರಾಜ್ಯಗಳನ್ನು ಅಕ್ಷರಶಃ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡಿದೆ. ₹20 ಲಕ್ಷ ಕೋಟಿ ಪ್ಯಾಕೇಜ್ ಎಂಬುದು ಲಿಕ್ವಿಡಿಟಿ(ನಗದು) ಆಧಾರಿತವಲ್ಲ. ಇದರಿಂದ ಜನರಿಗೆ ಕನಿಷ್ಠ ಸಹಾಯವೂ ಆಗದು. ಇದು ಕಾಲ್ಪನಿಕ ಘೋಷಣೆಗಳು ಮಾತ್ರ. ಇದರಲ್ಲಿರುವುದು ಉದ್ಯಮ, ಉದ್ಯಮಿಗಳಷ್ಟೇ.
ಆತ್ಮ ನಿರ್ಭರ ಎಂಬುದು ನಿಮಗೆ ನೀವೇ ಆಗಬೇಕು. ನಮ್ಮಿಂದ ನಿಮಗೆ ಚಿಕ್ಕಾಸೂ ದೊರಕದು, ಎಂದು ಜನರಿಗೆ ಕೇಂದ್ರ ನೀಡಿದ ಸ್ಪಷ್ಟನೆ ಎಂದು ಸರಣಿ ಟ್ವೀಟ್ ಗಳ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.