01. ರಾಜ್ಯದಲ್ಲಿ ಕೊರೊನಾ ಅಬ್ಬರ..!
ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ಮತ್ತೆ ಶುರುವಾಗಿದೆ. ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಕೊರೊನಾ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ಫೆಬ್ರವರಿ ವೇಳೆಗೆ ರಾಜ್ಯದಲ್ಲಿ ದಿನ ಒಂದಕ್ಕೆ ಎಂಬತ್ತು ಸಾವಿರದಿಂದ ಒಂದು ಲಕ್ಷ ಕೊರೊನಾ ಕೇಸ್ ಗಳು ಪತ್ತೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
02. ವೀಕೆಂಡ್ ಕರ್ಫ್ಯೂನಲ್ಲಿ ಬಸ್ ಗಳು ರಸ್ತೆಗಿಳಿಯಲ್ಲ..!
ವೀಕೆಂಡ್ ಕರ್ಫ್ಯೂ ವೇಳೆ ಶನಿವಾರ ಮತ್ತು ಭಾನುವಾರ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್ ರಸ್ತೆಗಳಿಯಲ್ಲ. ಜೊತೆಗೆ ರಾತ್ರಿ ನಿಷೇಧಾಜ್ಞೆ ವೇಳೆಯೂ ಬಸ್ ಓಡಾಡುವುದಿಲ್ಲ. ಅಗತ್ಯ ಸೇವೆಯಡಿ ಮಾತ್ರ ಬಸ್ ಓಡಾಟ ನಡೆಸಲಿದೆ. ಆದ್ರೆ ಸಾರ್ವಜನಿಕ ಸಂಚಾರ ಸೇವೆ ಇರುವುದಿಲ್ಲ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
03. ವೀಕೆಂಡ್ ಕರ್ಫ್ಯೂ ಇದ್ರೂ ಮೆಟ್ರೋ ಇರುತ್ತೆ…!
ವೀಕೆಂಡ್ ಕರ್ಫ್ಯೂ ವೇಳೆ ಸಾರಿಗೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಲಾಗಿದ್ದು, ವಾರಾಂತ್ಯದ ಕರ್ಫ್ಯೂ ವೇಳೆ ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಶನಿವಾರ – ಭಾನುವಾರ ಎಂದಿನಂತೆ ಹಸಿರು ಮತ್ತು ನೇರಳೆ ಎರಡು ಮಾರ್ಗದಲ್ಲೂ ಮೆಟ್ರೋ ಕಾರ್ಯಾಚರಣೆ ನಡೆಸಲಿದೆ. ಆದ್ರೆ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅಂದರೇ ಸದ್ಯ ಮೆಟ್ರೋದಲ್ಲಿ ನಿತ್ಯ 1,800 ರಿಂದ 1,900 ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ವೀಕೆಂಡ್ ಕರ್ಫ್ಯೂ ವೇಳೆ ಕೇವಲ 800 ರಿಂದ 900 ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
0.4 ‘ಇದು ಕೋವಿಡ್ ಕರ್ಫ್ಯೂ ಅಲ್ಲ ಬಿಜೆಪಿ ಕರ್ಫ್ಯೂ’
ಇದು ಕೋವಿಡ್ ಕರ್ಫ್ಯೂ ಅಲ್ಲ, ಬಿಜೆಪಿ ಕರ್ಫ್ಯೂ. ಯಾವ ಟಫ್ ರೂಲ್ಸ್ ಅಲ್ಲಾ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ರ್ಯಾವಲಿ ಮಾಡಲ್ಲ ಸಮಾವೇಶ ಮಾಡಲ್ಲ. ನೀರಿಗಾಗಿ ನಾವು ನಡೆಯುತ್ತೇವೆ. ತಾಯಿ ಕಾವೇರಿ ನೀರು ಕುಡಿಯಬೇಕು ಅಂತ ನಡೆಯುತ್ತಿದ್ದೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
0.5 ಹಾಫ್ ಲಾಕ್ ಡೌನ್ ಬಗ್ಗೆ ಈಶ್ವರಪ್ಪ ಅಪಸ್ವರ..
ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಹಾಫ್ ಲಾಕ್ ಡೌನ್ ಜಾರಿ ಮಾಡಿದೆ. ಆದ್ರೆ ಇದಕ್ಕೆ ಆಡಳಿತ ಪಕ್ಷದಲ್ಲಿಯೇ ಅಪಸ್ವರ ಉಂಟಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಲಾಕ್ ಡೌನ್ ಬಗ್ಗೆ ಮಾತನಾಡಿದ್ದು, ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಿರುವ ಬೆಂಗಳೂರಿನ ಕಠಿಣ ನಿಯಮಗಳು ಕೋವಿಡ್ ಕಡಿಮೆ ಇರುವ ಇತರೆ ಜಿಲ್ಲೆಗಳಿಗೆ ಬೇಡ ಎಂದಿದ್ದಾರೆ.
06. ಕರೊನಾ ಮಹಾಸ್ಪೋಟ
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 58,097 ಹೊಸ ಕೇಸ್ ಗಳು ದಾಖಲಾಗಿರೋದು ದೇಶದ ಜನರ ಆತಂಕ ಹೆಚ್ಚಿಸಿದೆ.. ಕೊರೊನಾ ಸೋಂಕಿನಿಂದಾಗಿ ಒಟ್ಟು 534 ಸಾವುಗಳು ಸಂಭವಿಸಿದೆ.. ಇದೇ ಅವಧಿಯಲ್ಲಿ ದೇಶದಲ್ಲಿ ಒಟ್ಟು 15,389 ಜನ ಚೇರಿಸಿಕೊಂಡಿದ್ದು ಡಿಸ್ಚಾರ್ಜ್ ಆಗಿದ್ದಾರೆ… ಒಟ್ಟು ಚೇತರಿಕೆ ದರ ಸುಮಾರು 98.01 ಪ್ರತಿಶತಕ್ಕೆ ಏರಿದೆ.. ಒಟ್ಟಾರೆ ಈವರೆಗೂ ಚೇತರಿಸಿಕೊಂಡಿರುವವರ ಸಂಖ್ಯೆ 3,43,21,803ಕ್ಕೆ ತಲುಪಿದೆ.
07. ಪೊಲೀಸರಿಂದ ಸಿನಿಮೀಯ ರೀತಿಯಲ್ಲಿ ಕಾರ್ ಚೇಸ್
ಹಾಸನ: ಸಿನಿಮೀಯ ರೀತಿಯಲ್ಲಿ ಪೋಲಿಸರು ಕಾರು ಚೇಸ್ ಮಾಡಿ ಆರೋಪಿಗಳನ್ನು ಟ್ಯಾಕಲ್ ಮಾಡಿರುವ ಘಟನೆಯು ಹಾಸನದ ಬಿ.ಎಂ ರಸ್ತೆಯ ಡಿಸಿ ಕಚೇರಿ ಎದುರು ನಡೆದಿದೆ. ತಮಿಳುನಾಡಿನ ಪೋಲಿಸರು ಹಾಸನ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಸೆರೆ ಹಿಡಿದ್ದಿದ್ದಾರೆ. ಕಾರನ್ನು ಸುತ್ತುವರಿದು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
08. ‘ವಲಿಮೈ’ ಪೋಸ್ಟ್ ಪೋನ್…?
ತಮಿಳಿನ ಸ್ಟಾರ್ ನಟ ಅಜಿತ್ ನಟನೆಯ ಬಹುನಿರೀಕ್ಷೆಯ ‘ವಲಿಮೈ’ ಸಿನಿಮಾ ಜನವರಿ 13 ಕ್ಕೆ ರಿಲೀಸ್ ಆಗಬೇಕಿತ್ತು.. ಆದ್ರೆ ದೇಶದಲ್ಲಿ ಕೋವಿಡ್ ನಿಂದಾಗಿ ನಡೆಯುತ್ತಿರುವ ಬೆಳವಣಿಗೆಗಳನ್ನ ಗಮನಿಸಿದ್ರೆ ಈ ಸಿನಿಮಾ ಕೂಡ RRR ಸಿನಿಮಾದ ಮಾದರಿಯಲ್ಲೇ ಪೋಸ್ಟ್ ಪೋನ್ ಆಗಲಿದೆ ಎನ್ನಲಾಗ್ತಿದೆ..
ಇತ್ತೀಚೆಗೆ ಸಿನಿಮಾದ ನಿರ್ಮಾಪಕ ಬೋನಿ ಕಪೂರ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿ ಸಿನಿಮಾ ಜ.13ಕ್ಕೆ ತಮಿಳು , ತೆಲುಗು , ಹಿಂದಿಯಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದರು.. ಆದ್ರೂ ಕೂಡ ಕೋವಿಡ್ ಹಾವಳಿ ಹೆಚ್ಚಾಗ್ತಲೇ ಇರೋ ಕಾರಣ ಸಿನಿಮಾ ಈಗ್ಲೇ ರಿಲೀಸ್ ಆಗಲ್ಲ ಎನ್ನಲಾಗ್ತಿದೆ.
09. ಮದುವೆಯಾದ ಶುಭಾ..!
ಶುಭಾ ಪುಂಜಾ ತಮ್ಮ ಗೆಳೆಯನ ಜೊತೆಗೆ ದಾಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿರುವ ಶುಭಾ ಪುಂಜಾ , ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ. ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡು ಮದುವೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
10. ಗೆಲುವಿನತ್ತ ಮರಳಲು ಪುಣೇರಿ ಪ್ಲಾನ್
ಹ್ಯಾಟ್ರಿಕ್ ಸೋಲಿನ ಕಹಿ ಅನುಭವಿಸಿರುವ ಪುಣೇರಿ ಪಲ್ಟನ್ ಎಂಟನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 34ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಲು ಪುಣೇರಿ ಪ್ಲಾನ್ ಮಾಡಿಕೊಂಡಿದೆ.
ಆಡಿರುವ 5 ಪಂದ್ಯಗಳಲ್ಲಿ 1 ಗೆಲುವು, 4 ಸೋಲು ಕಂಡಿರುವ ಪುಣೇರಿ 5 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನು ಗುಜರಾತ್ ಇಷ್ಟೇ ಪಂದ್ಯದಲ್ಲಿ 1 ಜಯ, 2 ಡ್ರಾ, 2 ಸೋಲು ಕಂಡಿದ್ದು 13 ಅಂಕದೊಂದಿಗೆ ಏಳನೇ ಸ್ಥಾನದಲ್ಲಿದೆ. ಉಭಯ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು ತಂಡದ ಗೆಲುವಿನಲ್ಲಿ ಮಿಂಚಬೇಕಿದೆ.








