ನಾವು ಕೋವಿಡ್ ನಿಯಮ ಪಾಲಿಸಿಕೊಂಡು ಪಾದಯಾತ್ರೆ ಮಾಡ್ತೀವಿ : ಸಿದ್ದರಾಮಯ್ಯ siddaramaiah reaction on karnataka covid guidelines saaksha tv
ಬೆಂಗಳೂರು : ನಾವು ಸರ್ಕಾರದ ನಿಯಮಗಳನ್ನು ಗೌರವಿಸಿ, ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಪಾದಯಾತ್ರೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೊರೊನಾ ತಡೆಗೆ ರಾಜ್ಯ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಹಾಫ್ ಲಾಕ್ ಡೌನ್ ಜಾರಿ ಮಾಡಿದ್ದು, ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನಾವು ಪಾದಯಾತ್ರೆ ಮಾಡಿದರೆ ಬಿಜೆಪಿ ಸರ್ಕಾರ ಜನರೆದುರು ಬೆತ್ತಲಾಗಲಿದೆ. ಹೀಗಾಗಿಯೇ ನಾವು ಪಾದಯಾತ್ರೆ ಮಾಡಬಾರದು ಎಂದು ಕೊವಿಡ್ ನಿರ್ಬಂಧಗಳೆಂಬ ಷಡ್ಯಂತ್ರ ರೂಪಿಸಿದ್ದಾರೆ. ಆದರೂ ನಾವು ಸರ್ಕಾರದ ನಿಯಮಗಳನ್ನು ಗೌರವಿಸಿ, ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಪಾದಯಾತ್ರೆ ಮಾಡುತ್ತೇವೆ.
ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕನಿಷ್ಠ ಅಂತರ ಕಾಪಾಡಿಕೊಳ್ಳುವುದು, ಗ್ಲೌಸ್, ಸ್ಯಾನಿಟೈಸರ್ ಬಳಕೆ ಹೀಗೆ ಎಲ್ಲಾ ರೀತಿಯ ಕೊವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕು ತಡೆಗಟ್ಟುವುದೇ ರಾಜ್ಯ ಬಿಜೆಪಿ ಸರ್ಕಾರದ ನಿಜವಾದ ಉದ್ದೇಶವಾಗಿದ್ದರೆ ಮುಖ್ಯಮಂತ್ರಿಗಳು ನಿನ್ನೆ ರಾಮನಗರದಲ್ಲಿ, ಇಂದು ನಾಗಮಂಗಲದಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರೇ?ತಮ್ಮದೇ ಸರ್ಕಾರದ ನಿಯಮಗಳನ್ನು ಗೌರವಿಸದ ಮುಖ್ಯಮಂತ್ರಿಯನ್ನು ಬೇರೆ ಎಲ್ಲಾದರೂ ನೋಡಿದ್ದೀರ?
ರಾಜ್ಯದ ಯಾವೊಬ್ಬ ವ್ಯಕ್ತಿಗೂ ಕೊರೊನಾ ಬರಬಾರದು ಎಂಬುದು ನಮ್ಮ ಆಶಯವೂ ಹೌದು. ಆದರೆ ಬಿಜೆಪಿ ಸರ್ಕಾರ ನಿಬಂಧನೆಗಳನ್ನು ಹೇರಿರುವ ಹಿಂದೆ ಬೇರೆಯೇ ಉದ್ದೇಶ ಇದೆ. ಅವರ ಈ ಷಡ್ಯಂತ್ರವನ್ನು ಬಯಲು ಮಾಡುತ್ತೇವೆ.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿಮಾಡಬಾರದು ಎಂದು ಪ್ರತಿಭಟನೆಗೆ ಕೂತಿರುವುದೇ ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರ ಬೆಂಬಲದ ಮೇರೆಗೆ. ಬಿಜೆಪಿ ನಾಯಕರು ತಮಿಳುನಾಡಿನಲ್ಲಿ ತಮ್ಮ ಪಕ್ಷದ ಬಲವರ್ಧನೆಗೆ ರಾಜ್ಯದ ಹಿತಾಸಕ್ತಿ ಬಲಿಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಒಮ್ಮೆ ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದು ಬಿಟ್ಟರೆ ಬಿಜೆಪಿಯವರು ಈವರೆಗೆ ಎಲ್ಲಿಯೂ ಮೇಕೆದಾಟು ಬಗ್ಗೆ ಮಾತನಾಡಿಲ್ಲ, ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿಸಿಲ್ಲ. ಬಿಜೆಪಿ ಈ ಯೋಜನೆಯ ಬಗ್ಗೆ ತನ್ನ ನಿಲುವು ಏನೆಂದು ಮೊದಲು ಸ್ಪಷ್ಟಪಡಿಸಲಿ.
ಬೆಂಗಳೂರು ನಗರದ 30% ಜನರಿಗೆ ಈಗಲೂ ಕಾವೇರಿ ನೀರು ಸಿಗುತ್ತಿಲ್ಲ. ಸುಮಾರು ಎರಡೂವರೆ ಕೋಟಿ ಜನರಿಗೆ ಅನುಕೂಲವಾಗುವಂತ ಇಂತಹ ಮಹತ್ವದ ಯೋಜನೆ ಜಾರಿ ಮಾಡದೆ ಬಿಜೆಪಿ ಸರ್ಕಾರ ಕಾಲಾಹರಣ ಮಾಡುತ್ತಿದೆ. ಇದನ್ನು ವಿರೋಧಿಸುವುದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯ.
ಕೊರೊನಾ ಮೂರನೇ ಅಲೆಯ ನಿರೀಕ್ಷೆ ಇದ್ದರೂ ಸರಿಯಾದ ತಪಾಸಣೆ ನಡೆಸದೆ, ಅಂತರರಾಷ್ಟ್ರೀಯ ವಿಮಾನ ಸಂಚಾರ ತಡೆಯದೆ, ಮಾಸ್ಕ್ ಬಳಕೆ ಕಟ್ಟುನಿಟ್ಟು ಮಾಡದೆ ಈಗ ವಿರೋಧ ಪಕ್ಷವೊಂದು ತನ್ನ ಜವಾಬ್ದಾರಿ ನಿರ್ವಹಿಸಲು ಹೊರಟಾಗ ದುರುದ್ದೇಶದಿಂದ ನಿರ್ಬಂಧಗಳನ್ನು ಹೇರಿರುವುದು ಖಂಡನೀಯ.
ನಾವು ಪಾದಯಾತ್ರೆ ಘೋಷಣೆ ಮಾಡಿದ್ದು ಸರ್ಕಾರ ಕೊವಿಡ್ ನಿರ್ಬಂಧಗಳನ್ನು ಹೇರಿದ ಮೇಲಲ್ಲ. ತಿಂಗಳ ಮೊದಲೇ ದಿನಾಂಕ ನಿಗದಿ ಮಾಡಿ, ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ. ನಮ್ಮನ್ನೇ ಗುರಿಮಾಡಿ ನಿಯಮ ಹೇರಿದರೆ ನಾವು ಹೆದರಿ ಪಾದಯಾತ್ರೆ ಕೈಬಿಡೋಕಾಗುತ್ತಾ?
144 ಸೆಕ್ಷನ್ ಹೇರಿದರೆ ಐದಕ್ಕಿಂತ ಹೆಚ್ಚು ಮಂದಿ ಸೇರಬಾರದು ಎಂದಿದೆಯಲ್ವಾ? ನಾನು, ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ ಸೇರಿ ನಾಲ್ಕೇ ಮಂದಿ ನಡೆದುಕೊಂಡು ಹೋಗ್ತೇವೆ. ಆಗಲೂ ನಮ್ಮನ್ನು ತಡೆಯುತ್ತಾರಾ? ಬಲಪ್ರಯೋಗ ಮಾಡಿದರೆ ನಮ್ಮ ಸಂವಿಧಾನದತ್ತ ಹಕ್ಕುಗಳನ್ನು ಉಲ್ಲಂಘನೆ ಮಾಡಿದ ಹಾಗಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.









