ರಾಜ್ಯ ರಾಜಕಾರಣದಲ್ಲಿ ಬಿಡದಿ ಟೌನ್ ಶಿಪ್ ವಿವಾದ ಈಗ ತಾರಕಕ್ಕೇರಿದೆ. ರಾಜಕೀಯ ಕೆಸರೆರಚಾಟದ ನಡುವೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಎಂಟ್ರಿ ದೊಡ್ಡ ಸಂಚಲನ ಮೂಡಿಸಿದೆ. ರಾಜಕೀಯ ಲಾಭಕ್ಕಾಗಿ ವೈಯಕ್ತಿಕ ವಿಚಾರ ಹಾಗೂ ಕುಟುಂಬದವರ ಹೆಸರನ್ನು ಎಳೆದು ತರುತ್ತಿರುವ ನಾಯಕರ ವಿರುದ್ಧ ಅನಿತಾ ಕುಮಾರಸ್ವಾಮಿ ಅವರು ಸಿಡಿದೆದ್ದಿದ್ದು, ಸಚಿವ ಎಂಬಿ ಪಾಟೀಲ್ ಅವರಿಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ವಿವಾದದ ಹಿನ್ನೆಲೆ
ಬಿಡದಿ ಭಾಗದಲ್ಲಿ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ ನೂರು ಎಕರೆ ಜಮೀನು ಇದೆ ಎಂಬ ಪೋಸ್ಟರ್ ಗಳು ಕಾಣಿಸಿಕೊಂಡಿದ್ದವು. ಇದನ್ನೇ ಅಸ್ತ್ರವಾಗಿಸಿಕೊಂಡಿದ್ದ ಸಚಿವ ಎಂಬಿ ಪಾಟೀಲ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಇದು ಅನಿತಾ ಕುಮಾರಸ್ವಾಮಿ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವರ ಹೇಳಿಕೆಗೆ ಅತ್ಯಂತ ಕಠಿಣ ಶಬ್ದಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಸುಳ್ಳು ಆರೋಪಗಳ ಮೂಲಕ ಚಾರಿತ್ರ್ಯ ವಧೆ ಮಾಡಬೇಡಿ ಎಂದು ಗುಡುಗಿದ್ದಾರೆ.
ಎಂಬಿ ಪಾಟೀಲ್ ಹೇಳಿದಂತೆ ನನ್ನ ಹೆಸರಿನಲ್ಲಿ ನೂರು ಎಕರೆ ಜಮೀನು ಇಲ್ಲ. ಇರುವುದು ಕೇವಲ 32 ಎಕರೆ ಮಾತ್ರ. ರಾಜಕೀಯ ಕಾರಣಗಳಿಗಾಗಿ ಮನೆಯವರ ಹೆಸರನ್ನು ಎಳೆದು ತರುವುದು ಯಾರಿಗೂ ಶೋಭೆ ತರುವುದಿಲ್ಲ. ಇಂತಹ ಅನಗತ್ಯ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದರೆ ಸುಮ್ಮನೆ ಕೂರುವುದಿಲ್ಲ. ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅನಿತಾ ಕುಮಾರಸ್ವಾಮಿ ಅವರು ಖಡಕ್ ಆಗಿ ಎಚ್ಚರಿಸಿದ್ದಾರೆ.
ತಕ್ಷಣವೇ ಕ್ಷಮೆಯಾಚಿಸಿದ ಸಚಿವ ಎಂಬಿ ಪಾಟೀಲ್
ಅನಿತಾ ಕುಮಾರಸ್ವಾಮಿ ಅವರ ಈ ಆಕ್ರೋಶಭರಿತ ಪ್ರತಿಕ್ರಿಯೆ ಹೊರಬೀಳುತ್ತಿದ್ದಂತೆಯೇ ಎಚ್ಚೆತ್ತ ಸಚಿವ ಎಂಬಿ ಪಾಟೀಲ್ ಅವರು ಕೂಡಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು ನನ್ನ ಸಹೋದರಿಯಿದ್ದಂತೆ. ಅವರು ಸಭ್ಯ ರಾಜಕಾರಣಿ ಎನ್ನುವ ಗೌರವ ನನಗಿದೆ. ರಾಜಕೀಯ ಚರ್ಚೆಯ ನಡುವೆ ಬಂದ ಈ ಮಾತಿನಿಂದ ಅವರಿಗೆ ಅಥವಾ ಅವರ ಕುಟುಂಬಕ್ಕೆ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಹೇಳುವ ಮೂಲಕ ವಿವಾದಕ್ಕೆ ತಣ್ಣೀರು ಎರಚುವ ಪ್ರಯತ್ನ ಮಾಡಿದ್ದಾರೆ.
ಬಿಡದಿ ಟೌನ್ ಶಿಪ್ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನಡೆಯುತ್ತಿರುವ ಸಮರ ಈಗ ವೈಯಕ್ತಿಕ ಮಟ್ಟಕ್ಕೆ ತಲುಪಿದ್ದು, ನಾಯಕರ ನಡುವಿನ ವಾಗ್ಯುದ್ಧ ಮಾತ್ರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.








