ಭಾರತದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೊರೋನಾ ರೋಗದ ಪರಿಣಾಮ ಎಲ್ಲರಲ್ಲೂ ಸಂಚಲನ ಉಂಟು ಮಾಡುತ್ತಿದೆ. ವ್ಯತಿರಿಕ್ತ ವಾಗಿರುವ ಈ ವೈರಸ್ ಜಗತ್ತಿನ ತಜ್ಞ ವೈದ್ಯರ ರಾಮಬಾಣಕ್ಕೂ ಸಿಗದೇ ಕಣ್ಣ ಮುಚ್ಚಾಲೆಯಾಡುತ್ತಲೇ ನಿಷ್ಕರುಣಿಯಾಗಿ ಕೆಲವು ದೇಶಗಳ ಜನರ ಬದುಕನ್ನೇ ಹಂತ ಹಂತವಾಗಿ ಬಲಿಪಡೆದುಕೊಳ್ಳುತ್ತಿದೆ. ಆದರೆ ವಿಶ್ವದ ಇತರ ದೇಶಗಳಿಗೆ ಹೋಲಿಸುವುದಾದರೆ ಜನಸಾಂದ್ರತೆಯಿಂದ ಎರಡನೇ ಸ್ಥಾನ ಪಡೆದ ನಮ್ಮ ಭಾರತ ದೇಶ ಹಳ್ಳಿಯಿಂದ ಹಿಡಿದು ದಿಲ್ಲಿಯತನಕ ಪ್ರತೀ ಮನೆಮನೆಗಳು ಸ್ವಯಂಚಿತ್ತದ ಜಾಗರೂಕತೆಯಿಂದ ಕೊರೋನಾಕ್ಕೆ ಅಷ್ಟು ಸುಲಭವಾಗಿ ಬಲಿಬೀಳುತ್ತಿಲ್ಲ. ಆದರೆ ಅಲ್ಲಿ ಇಲ್ಲಿ ಅಲ್ಪಸ್ವಲ್ಪ ಎಂಬಂತೆ ತಿಳಿದು ತಿಳಿಯದೆಯೋ ಸೋಂಕಿಗೊಳಗಾದವರಿಂದ ಮತ್ತಷ್ಟು ನಮ್ಮ ಮಟ್ಟಿಗೆ ಸೋಂಕಿತರು ಶಂಕಿತರು ಹೆಚ್ಚಾದದ್ದು ವಿಪರ್ಯಾಸ.
ಆದರೆ ನಾವೆಲ್ಲರೂ ಗಮನಿಸುತ್ತಲೇ ಸುದ್ದಿ ಕೇಳುತ್ತಲೇ ಖುಷಿ ಪಟ್ಟುಕೊಳ್ಳುವ ಹಾಗೂ ಬಹಳಷ್ಟು ವಿನೀತ ಭಾವದಿಂದ ಗೌರವಿಸುವ ನಮ್ಮ ಕೊರೋನಾ ವಾರಿಯರ್ಸ್ ಹಾಗೂ ಪರೋಪಕಾರಿ ಆಪತ್ಬಾಂಧುಗಳೆನಿಸಿದ ನಾಡಿನ ಸಮಾಜ ಸೇವಕರು ಉದಾರ ದಾನಿಗಳು ಪ್ರತೀ ಊರಿನಲ್ಲಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಂಘ ಸಂಸ್ಥೆಗಳು ಹಾಗೂ ನಮ್ಮ ನೆರೆಹೊರೆಯ ಬಾಂಧವರು ಈಗಾಗಲೇ ಕಷ್ಟದಲ್ಲಿರುವವರಿಗೆ ಮಾನವೀಯತೆಯಿಂದ ನೆರವಾಗುತ್ತಿದ್ದಾರೆ. ಇದು ನಮ್ಮ ಪುಣ್ಯ ಮಣ್ಣಿನ ಸಂಸ್ಕೃತಿ.
ನಾವೆಲ್ಲರೂ ನಮ್ಮ ದೇಶದ ಹಾಗೂ ರಾಜ್ಯ ದ ಜನಸಂಖ್ಯೆ ಎಷ್ಟೆಂಬುದನ್ನು ಅರಿತುಕೊಂಡಿದ್ದೇವೆ. ಪ್ರತಿಯೊಂದು ಜೀವವೂ ಬೆಲೆಕಟ್ಟಲಾಗದಂತಹದು.
ಆದರೆ ಈ ಕೊರೋನಾ ಸಂಕಟಕ್ಕೆ ಮತ್ತಷ್ಟು ಒಳಗಾಗಬಾರದೆಂಬ ಉದ್ದೇಶದಿಂದ ಹಗಲಿರುಳೆನ್ನದೇ ದುಡಿಯುತ್ತಿರುವ ಕೊರೋನಾ ವಾರಿಯರ್ಸ್ ಜೊತೆ ನಾವೆಲ್ಲರೂ ಸಹಕರಿಸುವುದು ನಮ್ಮ ಕರ್ತವ್ಯ ಹಾಗೂ ಅನಿವಾರ್ಯತೆ ಯೂ ಹೌದು. ಆದರೆ ಇದೀಗ ಕೊರೋನಾ ಆತಂಕದ ಸಮೀಕ್ಷೆ ಯನ್ನು ಗಮನಿಸಿದಾಗ ಎಲ್ಲವೂ ನಿಯಂತ್ರಣಕ್ಕೆ ಬರುತ್ತಿರುವುದು ಕೊಂಚ ಸಮಾಧಾನವನ್ನು ತಂದಿದೆ. ಆದರೆ ಇದರ ಮೂಲೋತ್ಪಟನೆ ಮಾಡುವವರೆಗೆ ನಾವೂ ಯಾರು ವಿರಮಿಸುವಂತಿಲ್ಲ. ಹಾಗಾಗಿ ನಮ್ಮ ಸಹಕಾರ ಕೊರೋನಾ ವಾರಿಯರ್ಸ್ ಗಳಿಗೆ ಇನ್ನಷ್ಟು ಆತ್ಮಸ್ಥೈರ್ಯವನ್ನು ತರುವಲ್ಲಿ ಇರಲೇ ಬೇಕು.ಅವರ ಸೂಚನೆಯನ್ನು ಪಾಲಿಸಬೇಕು. ನಾವೆಲ್ಲರೂ ಮನೆಯೊಳಗಿದ್ದು ಕ್ಷೇಮವಾಗಿದ್ದರೆ ಅವರಿಗೂ ಕೂಡ ಮನೆಯೊಳಿಗಿದ್ದೂ ಕ್ಷೇಮವಾಗಿರಬಹುದು, ಆದರೆ ಪರಿಸ್ಥಿತಿ ಕೈಮೀರಿ ಹೋಗಿ ಅಮೆರಿಕಾ ಇಟೆಲಿಯಂತಾಗಬಾರದೆಂಬ ಎಚ್ಚರ ಸದಾ ಇರಬೇಕು. ಆ ದೇಶಗಳಲೆಲ್ಲಾ ಮರಣಿಸಿದ ಸಾವಿನಸಂಖ್ಯೆಯನ್ನು ನೀವೇ ಯೋಚಿಸಿ . ಇನ್ನೊಂದು ಜೀವ ಉಳಿಸುವ ಪ್ರಾಮಾಣಿಕ ಕರ್ತವ್ಯದಲ್ಲಿ ತನಗೂ ಸೋಂಕು ಬಂದು ಪ್ರಾಣವನ್ನು ಕಳೆದುಕೊಂಡ ಘಟನೆ ಅಲ್ಲೊಂದು ಇಲ್ಲೊಂದು ಕೇಳಿದಾಗ ನಾವು ನಮ್ಮ ಕೊರೋನಾ ವಾರಿಯರ್ಸ್ ಗಳಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ಈ ಸೋಂಕು ಬಂದಾಗಿನಿಂದಲೂ ಎಲ್ಲರೂ ನಾನು ಬಚಾವಾದರೆ ಸಾಕು ಎಂದು ಓಡಿಹೋಗುವವರೇ ಇರುವಾಗ ಒಂದಿಷ್ಟು ಮೈಮರೆತರೂ ಆಪತ್ತು ತಪ್ಪಿದ್ದಲ್ಲ. ತಿಳಿದೂ ಮುಂಜಾಗ್ರತಾ ವಾಗಿ ನಮ್ಮ ಕರ್ತವ್ಯ ನಮ್ಮ ಜೀವಕ್ಕಿಂತಲೂ ಮಿಗಿಲು ಎಂದು ಪ್ರಾಣ ಉಳಿಸುವ ಈ ದೇವರುಗಳಿಗೆ ನಾವೂ ಪ್ರತಿನಿತ್ಯ ವೂ ಒಳ್ಳೆ ಯದಾಗಲಿ ಎಂದು ಪ್ರಾರ್ಥಿಸಬೇಕು.
ಹಾಗೆಯೇ ಪ್ರಾಮಾಣಿಕ ದುಡಿಮೆ ಯಿಂದ ಉಳಿತಾಯ ಮಾಡಿದ್ದರಲ್ಲಿ ಒಂದಿಷ್ಟು ಈ ಕಷ್ಟ ದಲ್ಲಿ ಇರುವವರಿಗೆ ನೀಡೋಣ ಎಂದು ಸಹಾಯಮಾಡುವವರ ಬಗ್ಗೆ ಯೂ ನಾವು ಧನ್ಯತೆಯನ್ನು ತೋರಲೇಬೇಕು ಹಾಗೆಯೇ ಆಹಾರ ಕಿಟ್ ಗಳನ್ನು ಇನ್ನಿತರ ಅವಶ್ಯಕ ವಸ್ತುಗಳನ್ನು ಪೂರೈಸುತ್ತಿರುವ ಸಂಘ ಸಂಸ್ಥೆ ಗಳ ಸಾಮಾಜಿಕ ಕಾಳಜಿ ಪ್ರಶಂಸನೀಯ. ಆದರೆ ಇವರೆಲ್ಲರಿಗೆ ಹೆಸರಿನ ಹಪಾಹಪಿಯಲ್ಲ ಬದಲಾಗಿ ಸಂಘ ಸಂಸ್ಥೆ ಗಳ ನಿಜವಾದ ಉದ್ದೇಶ ವನ್ನು ಇತರರಿಗೆ ಮಾದರಿಯಾಗಿ ತಿಳಿಸುವ ಅರ್ಥ ಪೂರ್ಣ ಸದುದ್ದೇಶದ ಕಾರ್ಯಕ್ರಮ ವಾಗಿದೆ.
ಅಂದು ರಾಷ್ಟ್ರ ನಿರ್ಮಾಣದಲ್ಲಿ ಯುವಶಕ್ತಿ ಪಾತ್ರ ಮಹತ್ತರವಾದದ್ದು ಎಂದು ಹೇಳಿದ ಇತಿಹಾಸ ನೆನಪಿಸುವುದಾದರೆ ಯುವ ತರುಣರನ್ನು ಉದ್ದೇಶಿಸಿ ಸಮಾಜಮುಖಿ ಕಾರ್ಯಗಳಿಗಾಗಿ ಸ್ವಾಮಿ ವಿವೇಕಾನಂದ , ಮಹಾತ್ಮ ಗಾಂಧೀಜಿ, ಸುಭಾಸ್ ಚಂದ್ರ ಬೋಸ್, ಬಾಲಾ ಗಂಗಾಧರ್ ತಿಲಕ್, ಭಗತ್ ಸಿಂಗ್, ಚಂದ್ರ ಶೇಖರ್ ಆಜಾದ್ ಮೊದಲಾದವರು ಕರೆದ ಕರೆಯ ಮರ್ಮ ಈಗ ಅರ್ಥವಾಗುತ್ತಿದೆ. ಎಲ್ಲೆಡೆಯೂ ಇದೀಗ ಅವಶ್ಯಕತೆ ಇರುವಲ್ಲಿ ಸ್ವಯಂಸೇವೆಯಲ್ಲಿ ತೊಡಗಿರುವ ನಮ್ಮ ಯುವಶಕ್ತಿ ಗಳು ಸದೃಢ ಭಾರತದ ಶಕ್ತಿ ಯುತ ಸ್ತಂಭಗಳೆಂಬ ಮಾತು ಅರ್ಥಪೂರ್ಣವಾಗಿದೆ.
ಹಾಗಾಗಿ ದೇಶದಲ್ಲಿರಬಹುದು ರಾಜ್ಯದಲ್ಲಿರಬಹುದು ಜಾರಿಗೆ ತಂದ ಲಾಕ್ ಡೌನ್ ಒಂದು ಮತ್ತು ಎರಡು ಹಂತವನ್ನು ಮುಗಿಸಿ ಮೂರನೇ ಹಂತ ಜಾರಿಯಾದರೂ ನಮ್ಮಷ್ಟಕ್ಕೆ ನಾವೂ ಯೋಚಿಸಿದಾಗ ನಮ್ಮ ಒಳ್ಳೆಯದಕ್ಕೆ ಎಂದು ತುಟಿಕಚ್ಚಿ ನಾವೂ ಸುಮ್ಮನಿರಲೇಬೇಕು. ಈ ಸಂದರ್ಭದಲ್ಲಿ ನಮ್ಮ ನಾಯಕರುಗಳು ಅಧಿಕಾರಿಗಳು ತರುವ ಕಟ್ಟುನಿಟ್ಟಿನ ಕೆಲವು ನಿಯಮಗಳು ಇನ್ನೊಂದು ಜೀವವನ್ನು ಅಪಾಯದಿಂದ ಪಾರುಮಾಡುವ ಜವಾಬ್ದಾರಿಯುತ ಕರ್ತವ್ಯ ಪಾಲನೆ ಎಂದು ತಿಳಿದು ನಾವೆಲ್ಲರೂ ಬೆಂಬಲವನ್ನು ಸೂಚಿಸಬೇಕು. ಎಲ್ಲದಕ್ಕೂ ಒಂದು ಕೊನೆ ಇದ್ದೆ ಇದೆ ಆದರೆ ಅದರ ಪ್ರಭಾವ ಮತ್ತು ಪರಿಣಾಮ ಒಂದಿಷ್ಟು ಸುದೀರ್ಘ ತೆ ಇರಬಹುದು. ಆದರೆ ಅದು ಮತ್ತಷ್ಟು ಮಾರಕವಾಗದಂತೆ ಅದರ ಅಂತ್ಯ ಹಾಡಲು ಪ್ರತಿಯೊಬ್ಬ ರ ಮನದ ಸಂಕಲ್ಪ ಬೇಕೇಬೇಕು. ಹಾಗಾಗಿ ಬಂದಿರುವ ಈ ಕೊರೋನಾ ವಿರುದ್ಧ ಹೋರಾಡುವ ನಮ್ಮ ಕೊರೋನಾ ವಾರಿಯರ್ಸ್ ನಮ್ಮ ಹೆಮ್ಮೆ. ನಮ್ಮ ಮಹಾದಾನಿಗಳು ನಮ್ಮ ರಕ್ಷಕರು ನಮ್ಮ ಸಂಘ ಸಂಸ್ಥೆ ಗಳು ನಮ್ಮ ಸಮಾಜದ ಅಭಿಮಾನವೆಂದು ಅವರೆಲ್ಲರಿಗೂ ಮನದಾಳದಿಂದ ಕೃತಜ್ಞತೆ ಯನ್ನು ಸಲ್ಲಿಸೋಣ. ತನ್ನಂತೆಯೇ ಪರರು ಎಂದು ಬಗೆದು ಎಲ್ಲವೂ ಸಂಭ್ರಮ ಎಲ್ಲರಲ್ಲಿಯೂ ಸಂತಸ ಎಂದು ತಿಳಿಯೋಣ
- ಗಣೇಶ್ ಜಾಲ್ಸೂರು








