ಉತ್ತರ ಪ್ರದೇಶ ಚುನಾವಣೆ | ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ Saaksha Tv
ಲಖನೌ: ಉತ್ತರ ಪ್ರದೇಶದಲ್ಲಿ ಬುಧವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ.
ಉತ್ತರ ಪ್ರದೇಶದ ಪಶ್ಚಿಮ ಭಾಗದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದ್ದು, ಮತದಾನದ ಒಂದು ದಿನ ಮುಂಚಿತವಾಗಿ, ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡಡೆ ಮಾಡಿ ಇದರಲ್ಲಿ ಉನ್ನತಿ ವಿಧಾನ ಯೋಜನೆ ಅಡಿ ರೈತರಿಗೆ, ಕೊರೊನಾ ವಾರಿಯರ್ಸ್ಗ, ಯೋಧರು, ಶಿಕ್ಷಕರು ಮತ್ತು ಮದ್ಯಮ ಪ್ರಮಾಣ ಉದ್ಯಮಿಗಳಗೆ ಹೆಚ್ಚ ಮಹತ್ವ ನೀಡಲಾಗಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪತ್ರಕರ್ತರ ಮೇಲಿನ ಸುಳ್ಳು ಪ್ರಕರಣಗಳನ್ನು ಸಹ ಹಿಂಪಡೆಯಲಾಗುವುದು. ಅಲ್ಲದೇ ಛತ್ತೀಸ್ಗಢದಂತೆ ನಮ್ಮ ಸರ್ಕಾರ ರಚನೆಯಾದ ಕೂಡಲೇ ರೈತರ ಸಾಲ ಮನ್ನಾ ಮಾಡಲಾಗುವುದು, ಭತ್ತ ಮತ್ತು ಗೋಧಿಯನ್ನು ಕ್ವಿಂಟಲ್ಗೆ 2,500 ರೂ.ಗೆ ಮತ್ತು ಕಬ್ಬನ್ನು 400 ದರದಲ್ಲಿ ಖರೀದಿಸಲಾಗುವುದು. ವಿದ್ಯುತ್ ಬಿಲ್ ಅರ್ಧದಷ್ಟು ಮತ್ತು ಸಾಂಕ್ರಾಮಿಕ ಅವಧಿಯಲ್ಲಿ ಬಾಕಿ ಉಳಿದ ಬಿಲ್ ನ್ನು ಮನ್ನಾ ಮಾಡಲಾಗುವುದು. ಬೆಳೆ ಕಳೆದುಕೊಂಡ ರೈತರಿಗೆ 3,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಿಯಾಂಕಾ ತಮ್ಮ ಪಕ್ಷದ ಪ್ರಣಾಳಿಕೆಯ ಅಂಶಗಳನ್ನು ವಿವರಿಸಿದರು.
ಮಹಿಳೆಯರಿಗಾಗಿ ಪಿಂಕ್ ಪ್ರಣಾಳಿಕೆ
ಕಾಂಗ್ರೆಸ್ ಪಕ್ಷವು ಮಹಿಳೆಯರಿಗಾಗಿ ಪಿಂಕ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ, ಉದ್ಯೋಗದಲ್ಲಿ ಮಹಿಳೆಯರಿಗೆ 40 ಪ್ರತಿಶತದಷ್ಟು ಮೀಸಲಾತಿ ಮತ್ತು ಕಾಲೇಜು ಹೋಗುವ ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ ಯುವ ಪ್ರಣಾಳಿಕೆಯಲ್ಲಿ 20 ಲಕ್ಷ ಉದ್ಯೋಗ ಸೃಷ್ಠಿಸುವುದಾಗಿ ಭರವಸೆ ನೀಡಲಾಗಿದೆ.
ಹಾಗೇ ಕೊರೊನಾದಿಂದ ಹೆಚ್ಚು ಹಾನಿಗೊಳಗಾದ ಕುಟುಂಬಗಳಿಗೆ 25,000 ರೂ ಪರಿಹಾರ ನೀಡಲಾಗುವುದು. ಅಲ್ಲದೇ ಉದ್ಯೋಗ ಕ್ಷೇತ್ರದಲ್ಲಿ, ಪೊಲೀಸ್, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಸಾರ್ವಜನಿಕ ವಲಯದಲ್ಲಿ 12 ಲಕ್ಷ ಹುದ್ದೆಗಳ ಬ್ಯಾಕ್ಲಾಗ್ ಅನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಂಟು ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.
ಕಾಂಗ್ರೆಸ್ ಪ್ರಣಾಳಿಕೆಯ ಇತರ ಭರವಸೆಗಳೆಂದರೆ ಗೋಧನ್ ನ್ಯಾಯ್ ಯೋಜನೆ, ಶಾಲಾ ಅಡುಗೆಯವರಿಗೆ 5,000 ರೂಪಾಯಿ ಸಂಬಳ, ಮಹಿಳಾ ಪೊಲೀಸರಿಗೆ ಹತ್ತಿರದ ಪೋಸ್ಟಿಂಗ್, ಕೊರೊನಾ ವಾರಿಯರ್ಸ್ ಗೆ 50 ಲಕ್ಷ ರೂಪಾಯಿ ಪರಿಹಾರ, ಅನುಭವ ಮತ್ತು ನಿಯಮಗಳ ಆಧಾರದ ಮೇಲೆ ಅಡ್ಹಾಕ್ ಶಿಕ್ಷಕರು ಮತ್ತು ಶಿಕ್ಷಾ ಮಿತ್ರರನ್ನು ಕಾಯಂಗೊಳಿಸುವುದು, ರೂ 10 ಲಕ್ಷ ವರೆಗೆ ಉಚಿತ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನೂ ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.









