ನವದೆಹಲಿ: ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರನ್ನು ಬಂಚ್ ಆಫ್ ಜೋಕರ್ಸ್ ಎಂದು ಜರಿದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ ಎಂದು ಪ್ರಶ್ನಿಸಿರುವ ಜೋಶಿ, ದೇಶವನ್ನು ಮುನ್ನಡೆಸಲು ಪ್ರಬುದ್ಧ ನಾಯಕತ್ವದ ಅಗತ್ಯವಿದೆಯೇ ಹೊರತು ಹವ್ಯಾಸಿ ನಾಟಕಗಳಲ್ಲ ಎಂದು ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಗೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಮತ್ತು ನಾಯಕರನ್ನು ಜೋಕರ್ಸ್ ಹಾಗೂ ಕ್ಲೌನ್ಸ್ ಎಂದು ಕರೆಯುವುದು ರಾಹುಲ್ ಗಾಂಧಿಯವರ ಅಪಕ್ವತೆಯನ್ನು ಎತ್ತಿಹಿಡಿಯುತ್ತದೆ. ದೇಶವನ್ನು ಮುನ್ನಡೆಸುವ ಯಾವುದೇ ಸಾಮರ್ಥ್ಯ ಹಾಗೂ ಜವಾಬ್ದಾರಿ ನಿಮ್ಮಲ್ಲಿಲ್ಲ ಎಂಬುದನ್ನು ನಿಮ್ಮ ಈ ಮಾತುಗಳೇ ಸಾಬೀತುಪಡಿಸುತ್ತಿವೆ ಎಂದು ಆಪಾದಿಸಿದ್ದಾರೆ.
ಕೋಟಿ ಕೋಟಿ ಮತದಾರರಿಗೆ ಅಪಮಾನ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಹಾಸ್ಯ ಮಾಡುವ ಮೂಲಕ, ದೇಶದ ಜನತೆ ಐತಿಹಾಸಿಕವಾಗಿ ಅವರನ್ನು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಮಾಡಿದ ಕೋಟ್ಯಂತರ ಮತದಾರರನ್ನು ರಾಹುಲ್ ಗಾಂಧಿ ಅಪಹಾಸ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ವಂಶಾಡಳಿತದ ರಾಜಕಾರಣವನ್ನು ದೇಶದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಈ ಕೋಪದಿಂದ ರಾಹುಲ್ ಗಾಂಧಿ ಮತದಾರರ ವಿವೇಕವನ್ನೇ ಪ್ರಶ್ನಿಸುತ್ತಿದ್ದಾರೆ. ನಕಾರಾತ್ಮಕ ನಿಲುವನ್ನು ತಿರಸ್ಕರಿಸಿದ ದೇಶದ ನಾಗರಿಕರನ್ನು ಜರಿಯುತ್ತಿರುವುದೇ ಕಾಂಗ್ರೆಸ್ ಪಕ್ಷ ಸುಮಾರು ನೂರು ಚುನಾವಣೆಗಳಲ್ಲಿ ಸತತ ಸೋಲು ಕಾಣಲು ಪ್ರಮುಖ ಕಾರಣವಾಗಿದೆ. ರಾಹುಲ್ ಗಾಂಧಿ ಮೊದಲು ತಮ್ಮ ಅಹಂಕಾರವನ್ನು ಬಿಟ್ಟು ಜನರ ತೀರ್ಪನ್ನು ಗೌರವಿಸುವುದನ್ನು ಕಲಿಯಲಿ ಎಂದು ಜೋಶಿ ಚಾಟಿ ಬೀಸಿದ್ದಾರೆ.
ರಾಹುಲ್ ಗಾಂಧಿ ನೀಡಿದ್ದ ವಿವಾದಾತ್ಮಕ ಹೇಳಿಕೆ
ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ನ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರು ಭಾರತದ ಬಗ್ಗೆ ಯಾವುದೇ ಸ್ಪಷ್ಟ ತಿಳುವಳಿಕೆ ಇಲ್ಲದ ಬಂಚ್ ಆಫ್ ಜೋಕರ್ಸ್ ಎಂದು ಟೀಕಿಸಿದ್ದರು. ಆರ್ ಎಸ್ ಎಸ್ ತನ್ನ ಮೂಲ ಶಕ್ತಿಯನ್ನು ಕಳೆದುಕೊಂಡಿದ್ದು, ಬಂಡವಾಳಶಾಹಿಗಳಾದ ಅದಾನಿ ಮತ್ತು ಅಂಬಾನಿ ಅವರ ಸಾಧನವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ್ದರು.
ಇಷ್ಟೇ ಅಲ್ಲದೆ, ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ತೀವ್ರವಾಗಿ ಅಪಹಾಸ್ಯ ಮಾಡಿದ್ದ ರಾಹುಲ್, ವಿದೇಶಿ ನಾಯಕರನ್ನು ತಬ್ಬಿಕೊಳ್ಳುವುದೇ ವಿದೇಶಾಂಗ ನೀತಿ ಎಂದು ಮೋದಿ ಭಾವಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದೇ ವೇಳೆ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ವೇದಿಕೆಯಲ್ಲೇ ಅಪ್ಪಿಕೊಳ್ಳುವ ಮೂಲಕ ಪ್ರಧಾನಿ ಮೋದಿಯವರ ಶೈಲಿಯನ್ನು ಅಣಕಿಸಿ ವಿವಾದ ಸೃಷ್ಟಿಸಿದ್ದರು.








